ಹಠ, ಸಿಟ್ಟನ್ನು ಓದಿನಲ್ಲಿ ತೋರಿಸಿ ಯಶಸ್ಸು ಪಡೆಯಿರಿ!
ಜ್ಯೋತಿಷ್ಯದ ಪ್ರಶ್ನೋತ್ತರ ವಿಭಾಗದಲ್ಲಿ ಓದುಗರಿಂದ ಅತ್ಯುತ್ತಮ ಸ್ಪಂದನೆ ಬರುತ್ತಿದೆ. ಹಲವಾರು ಜನರು ತಮ್ಮ ಜಾತಕ ಮತ್ತು ಸಮಸ್ಯೆಗಳನ್ನು ಹಿಡಿದುಕೊಂಡು ಜ್ಯೋತಿಷಿ ವಿಠ್ಠಲ್ ಭಟ್ ಅವರ ನೆರವಿಗೆ ಪತ್ರ ಬರೆಯುತ್ತಿದ್ದಾರೆ.
ಈಗಾಗಲೆ ಹಲವಾರು ಪತ್ರಗಳಿಗೆ ಬರೆದ ಉತ್ತರವನ್ನು ನಾವು ಇತರ ಓದುಗರಿಗೂ ಅನುಕೂಲವಾಗಲೆಂದು ಮತ್ತು ತಿಳಿಯಲೆಂದು ಪ್ರಕಟಿಸಿದ್ದೇವೆ. ಈಗಲೂ ಕೂಡ ಕೆಲ ಆಯ್ದ ಪತ್ರಗಳನ್ನು ಉತ್ತರ ಸಮೇತವಾಗಿ ಪ್ರಕಟಿಸುತ್ತೇವೆ.

ಹೆಸರು : ಸೌಜನ್ಯ
ಹುಟ್ಟಿದ ದಿನ : 16/03/1996
ಹುಟ್ಟಿದ ಸಮಯ : ಬೆಳಿಗ್ಗೆ 8:57
ಊರು : ಸಾತನೂರು, ಮಂಡ್ಯ ತಾಲೂಕು, ಜಿಲ್ಲೆ
ಪ್ರಶ್ನೆ : ನಮಸ್ಕಾರ ಜ್ಯೋತಿಷಿಗಳೆ, ನನಗೀಗ 21 ವರ್ಷ. ನನ್ನ ಭವಿಷ್ಯದ ಬಗ್ಗೆ ತಿಳಿಯಬೇಕಾಗಿದೆ. ನನ್ನ ಜಾತಕದಲ್ಲಿ ಒಳ್ಳೆಯದೇನಿದೆ ಮತ್ತು ಕೆಟ್ಟದೇನಿದೆ? ಕೆಟ್ಟದೇನಾದರೂ ಇದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳಲು ಏನು ಮಾಡಬೇಕು ದಯವಿಟ್ಟು ತಿಳಿಸಿಕೊಡಿ.
ವಿಠ್ಠಲ್ ಭಟ್ ಅವರ ಉತ್ತರ...
ನಮಸ್ಕಾರ ಸೌಜನ್ಯ ಅವರೆ
ನೀವು ಕೊಟ್ಟ ಮಾಹಿತಿ ಪ್ರಕಾರ ನಿಮ್ಮ ನಕ್ಷತ್ರ ಶ್ರವಣ 3ನೇ ಪಾದ, ಮಕರ ರಾಶಿ ಹಾಗೂ ಮೇಷ ಲಗ್ನ ಆಗುತ್ತದೆ. ಗುರು ಹಾಗೂ ರಾಹು ಸ್ಥಾನದಿಂದ ನೋಡಿದಾಗ ನಿಮ್ಮ ಜಾತಕ ಚೆನ್ನಾಗಿಯೇ ಇದೆ. ಹಾಗೆಯೇ ಶನಿ ಹಾಗೂ ರವಿ ಗ್ರಹದ ಸ್ಥಿತಿ ನೋಡಿದಾಗ ಅಷ್ಟೊಂದು ಚೆನ್ನಾಗಿ ಇಲ್ಲ. ಒಟ್ಟಿನಲ್ಲಿ ಶುಭಾಶುಭ ಫಲಗಳ ಸಂಮಿಶ್ರಣದಿಂದ ನಿಮ್ಮ ಜಾತಕ ಕೂಡಿದೆ ಎನ್ನಬಹುದು.
ಪ್ರಸಕ್ತ 06/05/2025ನೇ ಇಸವಿಯ ತನಕ ನಿಮಗೆ ರಾಹು ದೆಸೆ ನಡೆಯುತ್ತದೆ. ಕಾರಣ ನಿಮ್ಮ ನಿತ್ಯ ಜೀವನ ಹಾಯಾಗಿ ಇರುತ್ತದೆ. ಚೆನ್ನಾಗಿ ಕುರುಕುಲು ತಿಂಡಿಗಳನ್ನು ತಿನ್ನುವುದು, ಜಾಸ್ತಿ ಓಡಾಡುವುದು ನಿಮಗೆ ಇಷ್ಟವಾಗಬಹುದು. ಆದರೆ ಆರೋಗ್ಯ ರೀತ್ಯ ಅದು ದುಷ್ಪರಿಣಾಮ ಬೀರುವುದು ಖಚಿತ.
ನಿಮಗೆ ಇನ್ನೂ ಹಣದ ಬೆಲೆ ಗೊತ್ತಾಗಬೇಕಿದೆ. ಹಣವನ್ನು ಹಿತವಾಗಿ ಮಿತವಾಗಿ ಬಳಸಿ. ಲಗ್ನ ಸಪ್ತಮಾಧಿಪತಿ ಶುಕ್ರನಾಗಿದ್ದು ಲಗ್ನದಲ್ಲಿಯೇ ಇದ್ದು, ಸಪ್ತಮ ನೋಡುತ್ತಿರುವುದರಿಂದ ಪ್ರೀತಿ ಪ್ರೇಮ ಇತ್ಯಾದಿಗಳಲ್ಲಿ ಸುಲಭವಾಗಿ ಬೀಳುತ್ತೀರಿ.
ನಿಮ್ಮ ಜಾತಕದಲ್ಲಿ ಬುಧ ಹಾಗೂ ಗುರು ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ಹೆಚ್ಚಿನ ವಿದ್ಯೆ ಅಥವಾ ಉನ್ನತ ವ್ಯಾಸಂಗ ಮಾಡುವತ್ತ ಚಿಂತಿಸಿದರೆ ಉತ್ತಮ. ಎಲ್ಲದಕ್ಕೂ ಮುಂಚೆ ಹಠದ ಸ್ವಭಾವ ಸಿಟ್ಟು ಸ್ವಲ್ಪ ಕಡಿಮೆ ಮಾಡಿಕೊಳ್ಳಿ ಅಥವಾ ಅದೇ ಹಠವನ್ನು ಓದಿನಲ್ಲಿ ತೋರಿಸಿ ಯಶಸ್ಸು ಪಡೆಯಿರಿ.
ಪ್ರಶ್ನೆ ಕೇಳಿ : ನಿಮಗೂ ಸಮಸ್ಯೆಗಳಿದ್ದರೆ, ನಮ್ಮ ಜ್ಯೋತಿಷಿಗಳಿಂದ ಪರಿಹಾರ ಕಂಡುಕೊಳ್ಳಬೇಕಿದ್ದರೆ, ಈ ವಿಳಾಸಕ್ಕೆ ಪತ್ರ ಬರೆಯಿರಿ : [email protected]












Click it and Unblock the Notifications