ನಾಸ್ತಿಕರನ್ನೂ ಆಸ್ತಿಕರನ್ನಾಗಿಸುವ ಶನಿದೇವ
ಸತತ ದೈವಾರಾಧನೆ ಮತ್ತು ಉತ್ತಮ ನಡವಳಿಕೆ ಅಳವಡಿಸಿಕೊಂಡರೆ ಶನಿದೇವನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಜೀವನದಲ್ಲಿ ಬಂದಿರುವ ಎಲ್ಲ ಸಂಕಷ್ಟಗಳನ್ನು ಸಹಿಸಿಕೊಂಡು ಪಾರಾಗಬಹುದು. ಇಲ್ಲವಾದರೆ ಹಠ ಮಾಡಿ ಶನಿದೇವನಿಗೆ ತಿರುಗಿ ಬಿದ್ದರೆ, ಹೆಗಲೇರಿದ ಶನಿದೇವ ಇಳಿಯುತ್ತ ಇಳಿಯುತ್ತ ಬರೋಬ್ಬರಿ "ಸಾಕಪ್ಪಾ ಜೀವನ" ಎನ್ನುವಂತೆ ಮಾಡುತ್ತಾನೆ.
ಪ್ರತಿನಿತ್ಯ ಮುಂಜಾನೆ, ಸಂಜೆ ಈ ಕೆಳಗಿನ ಮೃತ್ಯುಂಜಯ ಮಂತ್ರವನ್ನು ಜಪಿಸುವುದು ಸಾಡೇಸಾತಿಯಲ್ಲಿನ ರಾಶಿಗಳವರು ರೂಢಿಸಿಕೊಳ್ಳಲೇಬೇಕು.
"ತ್ರಯಂಬಕಂ
ಯಜಾಮಹೆ
ಸುಗಂಧಿಂ
ಪುಷ್ಟಿ
ವರ್ಧನಮ್
ಉವಾರುಕಮಿವ
ಬಂಧನಾತ್
ಮೃತ್ಯೋಮೃಕ್ಷೀಯಮಾಮೃತಾತ್"
ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಬರುವ ಯೋಗ, ಫಲ, ಗುಣ ವಿಶೇಷ, ಅಲ್ಪದೋಷಗಳು ಹಾಗೂ ಜೀವನದ ಮಹತ್ತರ ಸಾಧನೆಯ ವರ್ಷ, ಅದೃಷ್ಟ ಸಂಖ್ಯೆ, ಅದೃಷ್ಟ ಬಣ್ಣ ಮತ್ತು ಬರುವ ಸಾಡೇಸಾತಿಯ ಸಮಯಗಳನ್ನು ಮೊದಲೇ ಜಾತಕದ ಮೂಲಕ ತಿಳಿದುಕೊಳ್ಳಬಹುದು. ಅಲ್ಲದೇ ತಮ್ಮ ರಾಶಿಗೆ ನಡೆಯುತ್ತಿರುವ ದಶಾ ಮತ್ತು ಭುಕ್ತಿಗಳನ್ನು ತಿಳಿದುಕೊಂಡು ಜೀವನವನ್ನು ಇನ್ನೂ ಸುಂದರವಾಗಿಸಿಕೊಳ್ಳಬಹುದು.
ಇನ್ನು ಜಾತಕದ ಮೂಲಕ ಚಿಕ್ಕಮಕ್ಕಳಿದ್ದಾಗಲೇ ಆ ಮಗು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡುತ್ತದೆ ಎಂಬುದನ್ನೂ ಸಹ ಮೊದಲೇ ಗುರ್ತಿಸಿಕೊಳ್ಳಬಹುದಾಗಿದೆ. ಜಾತಕದಿಂದ ಆ ಮಗುವಿನ ಉತ್ತಮ ಕ್ಷೇತ್ರ ಮೊದಲೇ ನಮಗೆ ಗೊತ್ತಾಗುವುದರಿಂದ ಆ ಕ್ಷೇತ್ರದಲ್ಲೇ ಆ ಮಗುವನ್ನು ಪರಿಪೂರ್ಣವಾಗಿ ತರಬೇತಿ ನೀಡಿ ಬೆಳೆಸಬಹುದಾಗಿದೆ. ಎಷ್ಟೋ ಜನ ತಮ್ಮ ಜಾತಕವನ್ನು ನಿರ್ಲಕ್ಷ್ಯ ಮಾಡಿ, ಹಣೆಬರಹವಿದ್ದಂಗೆ ಆಗುತ್ತದೆ ಬಿಡಿ ಎನ್ನುತ್ತಾರೆ. ಆದರೆ ಆ ಜಾತಕವೇ ಅವರ ಹಣೆಬರಹ ಎಂಬುದನ್ನು ಅರಿಯದೇ ದಡ್ಡತನ ಮಾಡಿ ಜೀವನದಲ್ಲಿ ಅಪಯಶಸ್ಸು ಕಾಣುತ್ತಾರೆ.
ಸಾಡೇಸಾತಿಯು ಯಾವಾಗ ಬರುತ್ತದೆ ಎಂಬುದನ್ನೂ ಸಹ ಜಾತಕದಿಂದಲೇ ಮೊದಲೇ ತಿಳಿದುಕೊಳ್ಳಬಹುದಾಗಿದೆ. ಆದ್ದರಿಂದ ಸಾಡೇಸಾತಿಯ ಸಮಯ ಬರುವುದಕ್ಕೂ ಮೊದಲು ಮುಂಜಾಗೃತೆ ವಹಿಸಿಕೊಳ್ಳುವುದು ಒಳ್ಳೆಯದು. ಇಲ್ಲವಾದರೆ ಒಮ್ಮೆಲೆ ಶನಿದೇವ ಸಾಡೇಸಾತಿಯಾಗಿ ಬಂದು ಕಷ್ಟಗಳ ಸರಮಾಲೆ ನೀಡಲಾರಂಭಿಸಿದ ಮೇಲೆ "ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದರಂತೆ" ಎಂಬ ಮಾತಿನಂತೆ ಆವಾಗ ದೈವದೆಡೆ ಎಷ್ಟೋ ಜನ ಮನಸ್ಸು ಮಾಡುತ್ತಾರೆ.
ವ್ಯಕ್ತಿಯ ಕರಾರುವಾಕ್ಕಾದ ಜನ್ಮಸಮಯ, ಸ್ಥಳ ಮತ್ತು ದಿನಾಂಕಗಳಿಂದ ಜಾತಕ ರೂಪಿಸಲಾಗುತ್ತದೆ. ಜೀವನದ ಬಯೋಡಾಟಾವೇ ಅದರಲ್ಲಿರುವುದರಿಂದ ಎಲ್ಲರೂ ತಮ್ಮ ಜಾತಕವನ್ನು ಕಾಯ್ದಿರಿಸಿಕೊಂಡಿರುವುದು ಒಳ್ಳೆಯದು.
ಶ್ರದ್ಧೆ, ಶ್ರಮ, ಧರ್ಮ, ನ್ಯಾಯಯುತವಾಗಿ ಜೀವನ ನಡೆಸುವವರು ಸಾಡೇಸಾತಿಯ ಶನಿದೇವನಿಗೆ ಹೆದರಬೇಕಾಗಿಲ್ಲ. ಇದ್ಯಾವುದನ್ನೂ ಪಾಲಿಸದವರು ಸಾಡೇಸಾತಿಯಲ್ಲಿ ಶನಿದೇವ ನೀಡುವ ಕರ್ಮಫಲ ಅನುಭವಿಸಬೇಕು. ಆ ಕರ್ಮಫಲ ಅನುಭವಿಸುತ್ತ ಮಾಡಿದ್ದ ತಪ್ಪು ನೆನಪಿಸಿಕೊಳ್ಳುತ್ತ ಪಶ್ಚಾತ್ತಾಪ ಪಡುತ್ತ ಜೀವನದಲ್ಲಿ ಮತ್ತೊಬ್ಬರಿಗೆ ತೊಂದರೆ ನೀಡಿದರೆ ಅದಕ್ಕಿಂತ ದೊಡ್ಡ ದೊಡ್ಡ ತೊಂದರೆಗಳು ದುಪ್ಪಟ್ಟಾಗಿ ನಮಗೇ ಮರಳಿ ಬರುತ್ತವೆ ಎಂಬುದನ್ನು ಶನಿದೇವ ಮನಗಾಣಿಸುತ್ತಾನೆ ನೆನಪಿರಲಿ.
ಶನಿಕೃಪೆಗೆ : ಕುಟುಂಬದ ಇತರ ಸದಸ್ಯರೊಂದಿಗೆ ಸಾಮರಸ್ಯದಿಂದಲೇ ಇರಬೇಕು. ನಿರಾಶರಾಗದೇ ಹಿಡಿದ ಕೆಲಸ ಮುಗಿಸದೇ ಬಿಡಬೇಡಿ. ಪರಸ್ತ್ರೀ/ಪುರುಷರ ಸಹವಾಸ ಬೇಡ. ಪರರ ಧನವನ್ನಂತೂ ಮುಟ್ಟಲೇಬೇಡಿ.
ವಾಸ್ತು ಟಿಪ್ಸ್ : ಕಸಬರಿಗೆಯು ಶನಿದೇವನ ಆಯುಧ. ಮನೆಯಲ್ಲಿ ಅದರ ಹಿಡಿಕೆಯನ್ನು ಮೇಲ್ಮುಖವಾಗಿರುವಂತೆ ಈಶಾನ್ಯ ದಿಕ್ಕಿನಲ್ಲಿಡದೇ ಬೇರೆ ದಿಕ್ಕಿನಲ್ಲಿಡಿ. [ಲೇಖಕರ ಮೊಬೈಲ್ : 9481522011]