ಖಂಡಗ್ರಾಸ ಚಂದ್ರಗ್ರಹಣದ ವೇಳೆ ಧಾರ್ಮಿಕ ಆಚರಣೆ ಹೇಗೆ?
ಜನವರಿ 31ಕ್ಕೆ ಖಂಡಗ್ರಾಸ ಚಂದ್ರಗ್ರಹಣ ಇದೆ. ಆ ದಿನದ ಧಾರ್ಮಿಕ ಆಚರಣೆ ಮತ್ತಿತರ ವಿಚಾರದ ಬಗ್ಗೆ ಹಲವರು ಪ್ರಶ್ನೆಗಳನ್ನು ಕೇಳುತ್ತಾರೆ. ಆ ದಿನ ಹೇಗಿರಬೇಕು ಎಂಬುದರ ವಿವರವನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡಲಾಗಿದೆ. ಗ್ರಹಣ ಅಂದರೆ ಅದೊಂದು ಕೌತುಕ, ಪ್ರಕೃತಿಯಲ್ಲಿನ ಸಹಜ ಕ್ರಿಯೆ ಅನ್ನುವವರ ನಂಬಿಕೆ ಅವರಿಗೆ. ಆಚರಣೆ ಮಾಡುವ ಆಸ್ತಿಕರ ಸಲುವಾಗಿಯೇ ಈ ಲೇಖನ ಇದೆ.
ಗ್ರಹಣದ ಸಮಯದಲ್ಲಿ ನಿಮ್ಮ ಹೊಟ್ಟೆ ಖಾಲಿಯಿರಬೇಕು. ಆಗ ಆಹಾರ ಇದ್ದರೆ ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಬೆಳಗ್ಗೆ ಆಹಾರ ಸೇವನೆ ಮಾಡಿ. ಆ ನಂತರ ಉಪವಾಸ ಇರುವುದು ಉತ್ತಮ. ಗ್ರಹಣ ಸಮಯದಲ್ಲಿ ಮಲ- ಮೂತ್ರ ವಿಸರ್ಜನೆ ಮಾಡಬಾರದು. ನಿದ್ದೆ ಮಾಡಬಾರದು.
ಗ್ರಹಣ ಅಂದರೆ ಪರ್ವಕಾಲ. ಆದ್ದರಿಂದ ಧ್ಯಾನ, ಜಪ, ದಾನ, ಪೂಜೆಯಲ್ಲಿ ತೊಡಗಿಸಿಕೊಳ್ಳಬೇಕು. ಗ್ರಹಣ ಕಾಲದಲ್ಲಿ ಮಾಡಿದ ಇಂಥ ಕಾರ್ಯಗಳಿಗೆ ಅತಿ ಹೆಚ್ಚಿನ ಫಲ. ಗ್ರಹಣ ಸ್ಪರ್ಶ ಹಾಗೂ ಮೋಕ್ಷ ಕಾಲದಲ್ಲಿ ಸ್ನಾನ ಮಾಡಬೇಕು. ಅದೂ ಉಟ್ಟ ಬಟ್ಟೆಯಲ್ಲೇ ಸ್ನಾನ ಮಾಡಬೇಕು.

ದರ್ಭೆಯನ್ನು ಹಾಕಿಡಬೇಕು
ಇನ್ನು ಅಕ್ಕಿ, ಬೇಳೆಯಂಥ ಪದಾರ್ಥಗಳು ಹಾಗೂ ನೀರು, ಹಾಲು ಇಂಥವುಗಳಲ್ಲಿ ದರ್ಭೆಯನ್ನು ಹಾಕಿಡಬೇಕು. ಮನೆಯ ನೀರಿನ ಟ್ಯಾಂಕ್ ಅಥವಾ ಸಂಪ್ ನೊಳಗೆ ದರ್ಭೆಯನ್ನು ಹಾಕಿದರೆ ಉತ್ತಮ. ಆದರೆ ಕಡ್ಡಾಯವಾಗಿ ಇದನ್ನು ಮಾಡಿ.

ಯಾವ ರಾಶಿಗೆ ಶುಭ, ಮಿಶ್ರ ಹಾಗೂ ಅಶುಭ ಫಲಗಳು?
ಶುಭ ಫಲ ಪಡೆಯುವ ರಾಶಿಗಳು: ವೃಷಭ, ತುಲಾ, ಕುಂಭ, ಕನ್ಯಾ
ಮಿಶ್ರ ಫಲ ಪಡೆಯುವ ರಾಶಿಗಳು: ಮೀನ, ಮಿಥುನ, ಮಕರ, ವೃಶ್ಚಿಕ
ಅಶುಭ ಫಲ: ಮೇಷ, ಸಿಂಹ, ಕರ್ಕಾಟಕ, ಧನು

ಗ್ರಹಣ ಕಾಲ
ಸ್ಪರ್ಶ ಕಾಲ- ಸಂಜೆ 5.22 (ಭಾರತೀಯ ಕಾಲ ಮಾನ)
ಮಧ್ಯ ಕಾಲ- ರಾತ್ರಿ 7.04
ಅಂತ್ಯ ಕಾಲ- ರಾತ್ರಿ 8.46

ದೋಷ ಇರುವವರಿಗೆ ಪರಿಹಾರ ಏನು?
ಕರ್ಕಾಟಕ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿದೆ. ಯಾರಿಗೆ ಅಶುಭ ಫಲ ಇದೆಯೋ ಅಂಥವರು ಗ್ರಹಣ ಸಮಯದಲ್ಲಿ ಒಂದು ಪಾತ್ರೆಯಲ್ಲಿ ಅಕ್ಕಿ, ಇನ್ನೊಂದು ಪಾತ್ರೆಯಲ್ಲಿ ಉದ್ದು ತೆಗೆದುಕೊಳ್ಳಬೇಕು. ಜತೆಗೆ ಚಂದ್ರ ಬಿಂಬ ಅಂತ ಸಿಗುತ್ತದೆ. ಈ ಮೂರನ್ನೂ ದೇವರ ಮುಂದೆ ಇಟ್ಟು, ಚಂದ್ರ, ರಾಹು ಹಾಗೂ ರವಿಯ ಸ್ತೋತ್ರವನ್ನು ಮಾಡಬೇಕು.
ರವಿ ಶ್ಲೋಕ
ಜಪಾಕುಸುಮ ಸಂಕಾಶಂ ಕಾಶಪೇಯಂ ಮಹಾದ್ಯುತಿಂ ತಮೋರಿಂ ಸರ್ವಪಾಪಜ್ಞಂ ಪ್ರಣತೋಸ್ಮಿ ದಿವಾಕರಂ
ಚಂದ್ರ ಶ್ಲೋಕ
ದಧಿಶಂಖ ತುಷಾರಾಭಂ ಕ್ಷೀರೋದಾರ್ಣವ ಸಂಭವಂ ನಮಾಮಿ ಶಶಿನಂ ಸೋಮಂ ಶಂಭೋರ್ಮಕುಟ ಭೂಷಣಂ
ರಾಹು ಶ್ಲೋಕ
ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯ ವಿಮರ್ಧನಂ ಸಿಂಹಿಕಾ ಗರ್ಭ ಸಂಭೂತಂ ತಂ ರಾಹುಂ ಪ್ರಣಮಾಮ್ಯಹಂ

ಈ ಮೂರನ್ನೂ ದಾನ ಮಾಡಬೇಕು
ಈ ಮೂರನ್ನೂ ಮಾರನೇ ದಿನ ಸಮೀಪದ ದೇವಸ್ಥಾನದಲ್ಲಿ ಪುರೋಹಿತರಿಗೆ ನೀಡಬೇಕು. ಒಂದು ವೇಳೆ ಪುರೋಹಿತರು ಪಡೆದುಕೊಳ್ಳದಿದ್ದಲ್ಲಿ ದೇವರಿಗೆ ಸಮರ್ಪಣೆ ಮಾಡಬಹುದು. ಇನ್ನು ಗರ್ಭಿಣಿಯರು ಹೆಚ್ಚು ಓಡಾಟ ಮಾಡಬಾರದು. ಆಸ್ಪತ್ರೆಗೆ ಹೋಗುವ ಅನಿವಾರ್ಯ ಇದ್ದಲ್ಲಿ ಏನೂ ಮಾಡಲು ಆಗುವುದಿಲ್ಲ. ಮನೆಯಲ್ಲೇ ಇರಬಹುದಾದಲ್ಲಿ ಆರಾಮವಾಗಿ ಇದ್ದುಬಿಡಿ.

ಧರ್ಮ ಶಾಸ್ತ್ರದಲ್ಲಿ ವಿನಾಯಿತಿ
ಆಹಾರ ಸೇವನೆ ವಿಚಾರದಲ್ಲಿ ಮಕ್ಕಳಿಗೆ, ಅಶಕ್ತರಿಗೆ, ವೃದ್ಧರಿಗೆ, ಅನಾರೋಗ್ಯದವರಿಗೆ ಧರ್ಮ ಶಾಸ್ತ್ರದಲ್ಲಿ ವಿನಾಯಿತಿ ಇದೆ. ಆದ್ದರಿಂದ ಪರಿಸ್ಥಿತಿ ನೋಡಿಕೊಂಡು ಉಪವಾಸ ಆಚರಣೆ ಮಾಡಬಹುದು.












Click it and Unblock the Notifications