ಅಕಾಲಿಕ ಮಳೆ: ಕೋಡಿಮಠದ ಶ್ರೀಗಳು ನುಡಿದಿದ್ದ ಕರಾರುವಾಕ್ ಭವಿಷ್ಯ
ಧಾರವಾಡ, ನ 20: ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ, ಕಳೆದ ಸುಮಾರು ಇಪ್ಪತ್ತು ದಿನಗಳಿಂದ ಸೂರ್ಯನ ಮುಖ ನೋಡದಂತಾಗಿದೆ. ಯಾವಾಗಲೂ ಮೋಡ ಕವಿದ ವಾತಾವರಣ, ಜಡಿ ಮಳೆ, ಜೋರು ಮಳೆ.
ವಾಟ್ಸಾಪ್ ನಲ್ಲಿ ಒಂದು ಮೀಮ್ಸ್ ಹರಿದಾಡುತ್ತಿತ್ತು. ಸೂರ್ಯನಾರಾಯಣ ಸರ್ ರಜೆಯ ಮೇಲಿದ್ದಾರೆ, ವರ್ಷಾ ಮೇಡಂ ಸಿಲಬಸ್ ಮುಗಿದರೂ ರಿವಿಜನ್ ಮಾಡಿದ್ದೂ ಮಾಡಿದ್ದೇ ಎಂದು. ಈ ಅಕಾಲಿಕ ಮಳೆಯಿಂದಾಗಿ ಎಲ್ಲವೂ ಹಳಿ ತಪ್ಪುತ್ತಿದೆ.
ಆತ್ಮ ಅತೃಪ್ತಿಗೊಂಡು ಭಂಗ, ಸಾವು ಹೆಚ್ಚು: ಕೋಡಿ ಶ್ರೀಗಳ ಭವಿಷ್ಯ
ಹವಾಮಾನ ಇಲಾಖೆಯ ಪ್ರಕಾರ, ರಾಜ್ಯದಲ್ಲಿ ಈ ಪರಿಸ್ಥಿತಿ ಇನ್ನೂ ಒಂದು ವಾರ ಇರಲಿದೆ. ದಕ್ಷಿಣದ ರಾಜ್ಯಗಳಲ್ಲಿ ಎಡಬಿಡದೆ ವರ್ಷಧಾರೆಯಾಗತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬೆಳೆಗಳು ಹಾನಿಗೊಂಡಿದ್ದರಿಂದ ಅನ್ನದಾತರೂ ಹೈರಾಣವಾಗಿದ್ದಾರೆ.
ತಿರುಪತಿ, ಶಬರಿಮಲೆ ದೇವಾಲಯಗಳಿಗೂ ಮಳೆಯ ಎಫೆಕ್ಟ್ ಕಾಡಿದ್ದು, ದೇವಸ್ಥಾನಗಳೂ ಬಂದ್ ಆಗಿವೆ. ಈ ಅಕಾಲಿಕ ಮಳೆಯ ಬಗ್ಗೆ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಮೂರು ತಿಂಗಳ ಹಿಂದೆಯೆ ಭವಿಷ್ಯ ನುಡಿದಿದ್ದರು. ಈಗ, ಅದನ್ನು ಮತ್ತೆ ಪುನರುಚ್ಚಿಸಿದ್ದಾರೆ.
ಭಾರೀ ಮಳೆ ಹಿನ್ನೆಲೆ: ಒಂದು ದಿನದ ಮಟ್ಟಿಗೆ ಶಬರಿಮಲೆ ದೇವಸ್ಥಾನ ಯಾತ್ರೆ ಸ್ಥಗಿತ
ಅಕಾಲಿಕ ಮಳೆಯ ಬಗ್ಗೆ ಕೋಡಿಶ್ರೀಗಳು ಭವಿಷ್ಯ ನುಡಿದಿದ್ದರು
ಕಳೆದ ಸೆಪ್ಟಂಬರ್ ತಿಂಗಳ ಆದಿಯಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕೋಡಿಮಠದ ಶ್ರೀಗಳು ಭಾಗವಹಿಸಿದ್ದರು. ಇದಾದ ನಂತರ ಶಿವಮೊಗ್ಗ ಜಿಲ್ಲೆಯ ಕಾರ್ಯಕ್ರಮದಲ್ಲೂ ಅಕಾಲಿಕ ಮಳೆಯ ಬಗ್ಗೆ ಶ್ರೀಗಳು ನುಡಿದಿದ್ದರು. ಆ ವೇಳೆ, ಮುಂದಿನ ದಿನಗಳಲ್ಲಿ ಸಾವು ಹೆಚ್ಚಾಗಲಿದೆ, ಯಡಿಯೂರಪ್ಪನವರನ್ನು ಕೆಳಗಿಳಿಸಿದ್ದಕ್ಕೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಕೋಡಿಶ್ರೀಗಳು ಹೇಳಿದ್ದರು.
ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತವೆ, ಸಾವು ಹೆಚ್ಚಾಗಲಿದೆ
"ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತವೆ, ಸಾವು ಹೆಚ್ಚಾಗಲಿದೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದಕ್ಕೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ರೋಗ ಕಾಯಿಲೆಗಳು ಹೆಚ್ಚಾಗಲಿದೆ, ಕಾರ್ತಿಕದವರೆಗೆ ಮಳೆ ಇರುತ್ತದೆ. ರಾಜ್ಯ ರಾಜಕಾರಣದ ಬಗ್ಗೆ ನಿಧಾನವಾಗಿ ಉತ್ತರಿಸುತ್ತೇನೆ, ಒಂದೇ ಬಾರಿ ಎಲ್ಲವನ್ನೂ ಹೇಳುವುದು ಬೇಡ" ಎಂದು ಕೋಡಿಮಠದ ಶ್ರೀಗಳು ಭವಿಷ್ಯವನ್ನು ನುಡಿದಿದ್ದರು.
ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲೋದಿಲ್ಲ. ಸದ್ಯ ಪ್ರಕೃತಿ ವಿಕೋಪ ಆಗಿದೆ
ಹಿಂದೆ ನುಡಿದಿದ್ದ ಭವಿಷ್ಯವನ್ನು ಕೋಡಿಶ್ರೀಗಳು ಮತ್ತೆ ಪುನರುಚ್ಚಿಸಿದ್ದಾರೆ. "ರಾಜ್ಯದಲ್ಲಿ ಇನ್ನೂ ಇದೆ ಮಳೆ ಕಾಟ. ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲೋದಿಲ್ಲ. ಸದ್ಯ ಪ್ರಕೃತಿ ವಿಕೋಪ ಆಗಿದೆ, ಏನೂ ಮಾಡಲು ಆಗುವುದಿಲ್ಲ. ಅನಾಹುತಗಳು ಹೆಚ್ಚಾಗುವ ಸಾಧ್ಯತೆ ಇದೆ. ಸಂಕ್ರಾಂತಿವರೆಗೂ ಮಳೆ ಇರುತ್ತೆ. ಆದಾಗ್ಯೂ ದೈವ ಕೃಪೆಯಿಂದ ಒಳ್ಳೆಯ ದಿನಗಳು ಬರಲಿವೆ"ಎಂದು ಧಾರವಾಡದಲ್ಲಿ ಕೋಡಿಶ್ರೀಗಳು ನುಡಿದಿದ್ದಾರೆ.
ರಾಜಕೀಯದ ಬಗ್ಗೆ ಪೂರ್ಣ ಮಂತ್ರಿ ಮಂಡಲ ರಚನೆಯಾದ ನಂತರ ಹೇಳುತ್ತೇನೆ
"ರಾಜ್ಯ ರಾಜಕೀಯದ ಬಗ್ಗೆ ಪೂರ್ಣ ಮಂತ್ರಿ ಮಂಡಲ ರಚನೆಯಾದ ನಂತರ ಹೇಳುತ್ತೇನೆ. ದೈವಕೃಪೆ ಇದ್ದರೆ ಬೊಮ್ಮಾಯಿಯವರಿಗೆ ಒಳ್ಳೆಯದಾಗುತ್ತದೆ. ಈಗತಾನೇ ಅವರು ಮುಖ್ಯಮಂತ್ರಿಯಾಗಿದ್ದಾರೆ, ಹಾಗಾಗಿ ಈಗಲೇ ಅಶುಭವನ್ನು ನುಡಿಯಲಾರೆ. ಕುಂಭ ರಾಶಿಯಲ್ಲಿ ಗುರು ಪ್ರವೇಶಿಸುವುದರಿಂದ ಮಳೆ ಹೆಚ್ಚು ಬೀಳಲಿದೆ. ಕಾರ್ತಿಕ ಮಾಸದವರೆಗೂ ನೆರೆ, ಮತ್ತಿತರ ವಿಕೋಪಗಳಿಂದ ಜನ ತತ್ತರಿಸಲಿದ್ದಾರೆ. ಅಕಾಲಿಕ ಮಳೆ, ನೆರೆ, ಬರದಿಂದ ಜನ ತತ್ತರಿಸಲಿದ್ದು, ಪ್ರಕೃತಿ ವಿಕೋಪಕ್ಕೆ ಸಿದ್ಧರಾಗಬೇಕಿದೆ"ಎಂದು ಕೋಡಿಶ್ರೀಗಳು ಈ ಹಿಂದೆ ಭವಿಷ್ಯ ನುಡಿದಿದ್ದರು.