ಬೆಂಗಳೂರಿಗೆ ಅಣ್ಣಮ್ಮ, ಜಲಕಂಠೇಶ್ವರನ ಶಾಪ: ಪರಿಹಾರ ಆಗದಿದ್ದರೆ ಕಷ್ಟ
Recommended Video

ಯಾವುದೇ ಊರಿಗೆ ಅಲ್ಲಿನ ದೇವತೆಗಳು ಕಾವಲಿರುತ್ತಾರೆ. ಗ್ರಾಮಗಳಿಗಾದರೆ ಗ್ರಾಮ ದೇವತೆ ಎಂದು ಕರೆಯುತ್ತಾರೆ. ಅದೇ ರೀತಿ ಯಾವುದೇ ರಾಜ್ಯದ ಆತ್ಮದಂತಿರುವ ರಾಜಧಾನಿಗೆ ಅಲ್ಲಿನ ಸ್ಥಳೀಯ ದೇವತೆಗಳನ್ನು ಗೌರವದಿಂದ ನೋಡಿಕೊಳ್ಳಬೇಕು ಹಾಗೂ ಭಕ್ತಿಯಿಂದ ಆರಾಧಿಸಬೇಕು. ಅದು ಗಂಡು ದೇವರಿರಲಿ, ಹೆಣ್ಣು ದೇವರಿರಲಿ ಆ ದೇವರಿಗೆ ಗೌರವ ನೀಡಬೇಕಾದ್ದು ಅತ್ಯಗತ್ಯ.
ಬೆಂಗಳೂರಿನ ಇಂದಿನ ಸ್ಥಿತಿಗೆ ಅಂದರೆ ಗೊಂದಲ, ಬಿಬಿಎಂಪಿಯ ಅಸ್ಥಿರತೆ, ಆಕಸ್ಮಿಕ ಅವಘಡಗಳು ಹಾಗೂ ಕನ್ನಡ ಚಿತ್ರರಂಗದ ಆರಕ್ಕೇರದ ಮೂರಕ್ಕಿಳಿಯದ ತ್ರಿಶಂಕು ಸ್ಥಿತಿ, ಯಾವುದೇ ಸರಕಾರ ಅಸ್ತಿತ್ವಕ್ಕೆ ಬಂದರೂ ನಿರಂತರವಾಗಿ ಕಾಡುವ ಗೊಂದಲ...ಇವೆಲ್ಲಕ್ಕೂ ಕಾರಣ ಆಗಿರುವುದು ಬೆಂಗಳೂರಿನಲ್ಲಿ ಆ ದೇವತೆಗಳ ನಿರ್ಲಕ್ಷ್ಯ.
ಅಣ್ಣಮ್ಮ ದೇವಿ ಹಾಗೂ ಗಾಂಧೀನಗರದಲ್ಲಿರುವ ಜಲಕಂಠೇಶ್ವರ ದೇಗುಲಗಳು ಇರಬೇಕಾದ ಸ್ಥಿತಿಯಲ್ಲಿ ಇಲ್ಲ. ಅಂದರೆ ಆ ದೇವಸ್ಥಾನ ಎಷ್ಟು ವೈಭವದಿಂದ ಇರಬೇಕಿತ್ತೋ ಆ ರೀತಿ ಇಂದಿಗೆ ಇಲ್ಲ. ಆ ದೇವಸ್ಥಾನಗಳಲ್ಲಿನ ದೇವತೆಗಳ ಸ್ಥಿತಿ ಬಹಳ ಚಿಂತಾಜನಕವಾಗಿದೆ. ಆದ್ದರಿಂದಲೇ ಸಮಸ್ಯೆಗಳೇ ಮೇಲುಗೈ ಪಡೆದಿವೆ. ಏನೀ ಸಮಸ್ಯೆ? ಪರಿಹಾರ ಏನು? ತಿಳಿದುಕೊಳ್ಳುವುದಕ್ಕೆ ಮುಂದೆ ಓದಿ.

ಜಮೀನು ಹೊಡೆದುಕೊಂಡವರು ವಾಪಸ್ ಏನನ್ನೂ ನೀಡಿಲ್ಲ
ಬೆಂಗಳೂರಿನ ದೇವತೆ ಅಣ್ಣಮ್ಮದೇವಿ ದೇವಾಲಯಕ್ಕೆ ಇದ್ದ ಜಮೀನು ಪಡೆದುಕೊಂಡವರು ಅಥವಾ ಹೊಡೆದುಕೊಂಡವರು ಅದಕ್ಕೆ ಪ್ರತಿಯಾಗಿ ದೇವಾಲಯಕ್ಕೆ ಕೊಡಬೇಕಾದ್ದನ್ನು ಕೊಟ್ಟಿಲ್ಲ. ಆದ್ದರಿಂದ ದೇವಿಯ ಸ್ಥಿತಿ ಇಂದು ಕೈ-ಕಾಲು ಕಳೆದುಕೊಂಡು, ಬಟ್ಟೆಯಿಲ್ಲದೆ ನಗ್ನ ಆಗುವಂತೆ ಆಗಿದೆ. ಆಕೆ ಸಂಚಾರಕ್ಕೆ ಹೊರಗೆ ಬರಲು ಆಗುತ್ತಲೇ ಇಲ್ಲ.

ಚಿತ್ರರಂಗಕ್ಕೆ ಒಳಿತಾಗುತ್ತಿಲ್ಲ
ಗಾಂಧೀನಗರದಲ್ಲಿರುವ ಜಲಕಂಠೇಶ್ವರ ತುಂಬ ಶಕ್ತಿಶಾಲಿಯಾದ ದೇವರು. ಆತನ ಸ್ಥಿತಿಯೂ ಹೀಗೆ ಆಗಿದೆ. ಜಗತ್ತಿಗೇ ತಂದೆ- ತಾಯಿ ಆದ ಜಲಕಂಠೇಶ್ವರ ಹಾಗೂ ಅಣ್ಣಮ್ಮ ದೇವಿಯ ಸ್ಥಿತಿಯು ಹೀಗಾಗಿರುವುದರಿಂದಲೇ ಬೆಂಗಳೂರಿಗೆ ಪೂರ್ಣ ಶ್ರೇಯಸ್ಸು ದೊರೆಯುತ್ತಿಲ್ಲ. ಅದರಲ್ಲೂ ಸಿನಿಮಾ ರಂಗಕ್ಕೆ ಒಳಿತಾಗುತ್ತಿಲ್ಲ.

ಪರಿಣಾಮಕಾರಿ ಕೆಲಸ ಸಾಧ್ಯವಿಲ್ಲ
ಈ ದೇವಾಲಯಗಳಿಗೆ ಗೌರವದಿಂದ ನಡೆದುಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಬಿಬಿಎಂಪಿಯಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ, ರಾಜ್ಯ ಸರಕಾರಕ್ಕೂ ಇದೇ ಸಮಸ್ಯೆ ಎದುರಾಗುತ್ತದೆ. ಪರಿಣಾಮಕಾರಿಯಾದ ಆಡಳಿತ ನೀಡಲು ಸಾಧ್ಯವಾಗುವುದಿಲ್ಲ.

ಅಷ್ಟಮಂಗಲ ಪ್ರಶ್ನೆ ಆಗಬೇಕು
ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತಿರುವುದಕ್ಕೂ ಈ ದೇವತೆಗಳನ್ನು ನಿರ್ಲಕ್ಷ್ಯ ಮಾಡುತ್ತಿರುವುದಕ್ಕೂ ನೇರ ಸಂಬಂಧ ಇದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಮತ್ತಷ್ಟು ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತಿದೆ. ಈ ಎರಡೂ ದೇವಾಲಯಗಳಿಗೆ ಗೌರವದಿಂದ ನಡೆದುಕೊಳ್ಳಬೇಕು. ಪುನರ್ ಪ್ರತಿಷ್ಠಾಪನೆ ಆಗಬೇಕು. ಅದಕ್ಕೂ ಮೊದಲು ಅಷ್ಟಮಂಗಲ ಪ್ರಶ್ನೆ ಆಗಬೇಕು. ಈ ವರೆಗೆ ಎರಡೂ ದೇವಾಲಯಗಳಿಗೆ ಆಗಿರುವ ಲೋಪ- ದೋಷಗಳನ್ನು ನಿವಾರಣೆ ಮಾಡಿಕೊಳ್ಳಬೇಕು.

ದ್ರೇಕ್ಕಾಣ ರೂಪದಲ್ಲಿ ಕಂಡುಬಂದ ದೇವತೆಗಳು
ಈ ವಿಚಾರವಾಗಿ ಹಿಂದೊಮ್ಮೆ ಪ್ರಶ್ನೆ ಮಾಡಿದಾಗ ಈ ದೇವತೆಗಳು ದ್ರೇಕ್ಕಾಣ ರೂಪದಲ್ಲಿ ಕಂಡುಬಂದಿದ್ದವು. ಇದಕ್ಕೆ ಪರಿಹಾರ ಏನು ಎಂದಾಗ ಈ ಮೇಲಿನ ಮಾರ್ಗಗಳು ಗೋಚರಿಸಿದವು. ಇವುಗಳನ್ನು ಮಾಡಿಸದ ಹೊರತು ರಾಜ್ಯದ ಸಂಸದರ ಮಧ್ಯೆಯೂ ಒಗ್ಗಟ್ಟು ಸುಲಭವಿಲ್ಲ. ಆಡಳಿತದಲ್ಲಿರುವ ಸರಕಾರವು ಮುಜರಾಯಿ ಇಲಾಖೆ ಮೂಲಕ ಒಂದು ಪ್ರಯತ್ನ ಮಾಡಿ ನೋಡಲಿ. ರಾಜ್ಯದ ಹಲವು ಸಮಸ್ಯೆಗಳು ಪರಿಹಾರ ಆಗುತ್ತವೆ.












Click it and Unblock the Notifications