ಜ್ಯೋತಿಷಿಗಳಿಗೆ ನೋಂದಣಿ ಬೇಕಾ, ಬೇಡವಾ?

***
ಸುವರ್ಣ ವಾರ್ತಾ ವಾಹಿನಿಯ "ರಿಜಿಸ್ಟರ್ಡ್ ಜ್ಯೋತಿಷಿ" ಎಂಬ ಶೀರ್ಷಿಕೆಯ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಲ್ಲಿ ನಾನೂ ಒಬ್ಬ. ಉಡುಪಿಯ ಒಂದು ಶೈಕ್ಷಣಿಕ ಸಂಸ್ಥೆಯಿಂದ ಜ್ಯೋತಿಷ್ಯ ಶಿಕ್ಷಣ ಪಡೆದ ದಾಖಲೆಯೊಂದಿಗೆ ಹಾಜರಿದ್ದ ಖ್ಯಾತ, ಪ್ರಖ್ಯಾತ, ಪ್ರಕಾಂಡ ಜ್ಯೋತಿಷಿಯೊಬ್ಬರು ಇಂತಹ ಸಂಸ್ಥೆಯಿಂದ ಶಿಕ್ಷಣ ಪಡೆದುಕೊಂಡವರು ಮಾತ್ರ ಜ್ಯೋತಿಷಿ ಎಂದು ನೋಂದಣಿ ಮಾಡಿಕೊಳ್ಳಲು ಅರ್ಹರು ಎನ್ನುವ ರೀತಿಯಲ್ಲಿ ತಮ್ಮ ವಾದ ಮಂಡಿಸಿದರು.
ಅದು ಅವರ ಅಭಿಪ್ರಾಯ. ನಿಜವಾಗಿ ಚರ್ಚೆಯ ವಸ್ತು ಆಗಬೇಕಾಗಿದ್ದು ಈ ಜ್ಯೋತಿಷಿಗಳಿಗೆ ನೋಂದಣಿ ಬೇಕು ಅಥವಾ ಬೇಡ ಎನ್ನುವುದಕ್ಕಿಂತ, ಇವರು ಸಾಮಾನ್ಯ ಜನರನ್ನು ಜ್ಯೋತಿಷ್ಯದ ಹೆಸರಿನಲ್ಲಿ ಭಯಪಡಿಸಿ ಪೂಜೆ ಪುನಸ್ಕಾರಗಳ ಹೆಸರಿನಲ್ಲಿ ಸುಲಿಗೆ ಮಾಡುತ್ತಿರುವುದರ ಬಗ್ಗೆ. ಇಂತಹ ಜ್ಯೋತಿಷಿಗಳಿಗೆ ನೋಂದಣಿಯನ್ನೂ ಕೊಟ್ಟುಬಿಟ್ಟರೆ ಲೂಟಿ ಮಾಡಲಿಕ್ಕೆ ಲೈಸೆನ್ಸ್ ಕೊಟ್ಟಂತೆ ಆಗುತ್ತದೆಯಲ್ಲದೆ ಬೇರೇನೂ ಆಗುವುದಿಲ್ಲ.
ಜ್ಯೋತಿಷ್ಯವನ್ನು ವೃತ್ತಿಯಾಗಿ ತೆಗೆದುಕೊಳ್ಳದೆ ಅಧ್ಯಯನದ ಆಸಕ್ತಿಯಿಂದ ಪ್ರವೃತ್ತಿಯಾಗಿಸಿಕೊಂಡು ಸಾಮಾನ್ಯ ಜನರ ನೋವು ನಲಿವುಗಳಿಗೆ ಸ್ಪಂದಿಸುತ್ತಿರುವ ಒಂದು ವರ್ಗ ನಮ್ಮ ಸಮಾಜದಲ್ಲಿ ಹಿಂದೆಯೂ ಇತ್ತು ಈಗಲೂ ಇದೆ ಎನ್ನುವುದನ್ನು ಯಾರೂ ಮರೆಯುವಂತಿಲ್ಲ.
ಮುಂದೆ ಭವಿಷ್ಯತ್ತಿನಲ್ಲಿ ಹೀಗೇ ಆಗುತ್ತದೆ ಎಂದು ಹೇಳಲು ಯಾವ ಅಧ್ಯಯನದಿಂದಲೂ ಸಾಧ್ಯವಿಲ್ಲ ಎನ್ನುವದನ್ನು ವಿಶ್ವ ವಿಖ್ಯಾತ ಜ್ಯೋತಿಷಿ ಡಾ ಬಿವಿ ರಾಮನ್ ರವರು ತಮ್ಮ ಮಾಸಿಕದಲ್ಲಿ ಒಂದು ಶ್ಲೋಕದ ಮೂಲಕ ಹೇಳುತ್ತಿದ್ದರು ಇಂದಿಗೂ ಈ ಜ್ಯೋತಿಷ್ಯ ಮಾಸಿಕದಲ್ಲಿ ಈ ಶ್ಲೋಕ ಉಳಿದುಕೊಂಡಿದೆ.
ಜ್ಯೋತಿಷಿಗಳು ಒಂದು ರೀತಿಯ ಮಾನಸಿಕ ತಜ್ಞರ ರೀತಿಯಾಗಿ ಕಾರ್ಯ ನಿರ್ವಹಿಸಿ ತಮ್ಮಲ್ಲಿಗೆ ಬರುವವರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡಬೇಕೆ ಹೊರತು, ಅವರನ್ನು ಭಯಭೀತರನ್ನಾಗಿಸಿ ಹಣ ದೋಚುವುದಲ್ಲಾ. ಈಗ ಕಡಿವಾಣ ಹಾಕಬೇಕಾದ್ದು ಈ ಹಣ ದೋಚುವ ಪ್ರವೃತ್ತಿಗೆ. ಈ ಬಗ್ಗೆ ಸನ್ಮಾನ್ಯ ಮುಜರಾಯಿ ಮಂತ್ರಿವರ್ಯರು ಗಮನ ಹರಿಸಲಿ.
ಬುದ್ಧಿವಂತರ ತಾಣ ಎಂದೇ ಗುರುತಿಸಿಕೊಂಡಿರುವ ಫೇಸ್ ಬುಕ್ ನಲ್ಲಿ ಇದರ ಬಗ್ಗೆ ಚರ್ಚೆ ಈ ಮೂಲಕ ಪ್ರಾರಂಭವಾಗಲಿ. ಜ್ಯೋತಿಷ್ಯ ವೃತ್ತಿಯಿಂದಲೇ ಸಂಪತ್ತನ್ನು ಗಳಿಸಿರುವ ವರ್ಗವೂ ಈ ಚರ್ಚೆಯಲ್ಲಿ ಪಾಲ್ಗೊಳ್ಳಲಿ.












Click it and Unblock the Notifications