ಅಳೆದು ತೂಗಿ ಅನ್ನ ಮಾಡಬೇಡಿ,ತುಸು ಮಿಕ್ಕಲಿ: ಇದರ ಹಿಂದಿದೆ ಧಾರ್ಮಿಕ ಕಾರಣ
ಆಹಾರ ಎಂದರೆ ಮೂರು ಹೊತ್ತು ಹೊಟ್ಟೆ ತುಂಬಿಸುವ ಸಲುವಾಗಿ ಬೇಯಿಸಿ ಹಾಕುವ ಪದಾರ್ಥಗಳಲ್ಲ. ಹಿಂದೂ ಧರ್ಮದಲ್ಲಿ ಆಹಾರಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ನಾವು ತಿನ್ನುವ ಅನ್ನವನ್ನು ಸಾಕ್ಷಾತ್ ಅನ್ನಪೂರ್ಣೇಶ್ವರಿ ಎಂದೇ ಹೇಳಲಾಗುತ್ತದೆ.ಆಹಾರ ಎಂದರೆ ಅದು ಪವಿತ್ರ ಮಾತ್ರವಲ್ಲ ಸಮೃದ್ಧಿಯ ಪ್ರತೀಕ. ಸಾಮಾನ್ಯವಾಗಿ ಮನೆಯಲ್ಲಿ ಅಗತ್ಯಕ್ಕಿಂತ ತುಸು ಹೆಚ್ಚೇ ಅನ್ನ ಆಹಾರ ಬೇಯಿಸುವಂತೆ ಹಿರಿಯರು ಹೇಳುತ್ತಿರುತ್ತಾರೆ. ಹಿರಿಯರ ಈ ಹೇಲಿಕೆ ಹಿಂದೆ ಅರ್ಥವೂ ಇದೆ ಪ್ರಮುಖ ಕಾರಣವೂ ಇದೆ.
ಅನ್ನವನ್ನು ಗೌರವಿಸಿದರೆ ಮನೆಯಲ್ಲಿ ಲಕ್ಷ್ಮೀ ವಾಸ:
ಯಾವ ಮನೆಯಲ್ಲಿ ಅನ್ನಕ್ಕೆ ಕೊರತೆ ಇರುವುದಿಲ್ಲವೋ ಆ ಮನೆಯಲ್ಲಿ ಲಕ್ಷ್ಮೀ ಮತ್ತು ಅನ್ನಪೂರ್ಣೇಶ್ವರಿ ನೆಲೆಸಿರುತ್ತಾರೆ ಎಂದೇ ಹೇಳಲಾಗುತ್ತದೆ.
ಅಗತ್ಯಕ್ಕಿಂತ ಸ್ವಲ್ಪ ಹೆಚ್ಚು ಅನ್ನ ಬೇಯಿಸಿ ಇಡುವ ಹಿಂದಿನ ಉದ್ದೇಶವೂ ಮನೆ ಸದಾ ಸಮೃದ್ಧಿಯಾಗಿರಲಿ ಎನ್ನುವುದಾಗಿದೆ.ಯಾವ ಮನೆಯ ಅಡುಗೆ ಮನೆಯಲ್ಲಿ ಆಹಾರದ ಕೊರತೆ ಕಾಣುವುದಿಲ್ಲವೋ ಆ ಮನೆ ಸದಾ ಸಮೃದ್ಧಿಯಾಗಿಯೇ ಉಳಿಯುವುದು. ಇನ್ನು ನಮ್ಮ ಮನೆಯಲ್ಲಿ ಇಷ್ಟೇ ಜನ ಇರುವುದು, ಇಷ್ಟು ಜನಕ್ಕೆ ಇಷ್ಟೇ ಅನ್ನ ಆಹಾರ ಸಾಕು ಎಂದು ಅಳೆದು ತೂಗಿ ಬೇಯಿಸಿಟ್ಟು, ಮನೆಯಲ್ಲಿ ಆಹಾರದ ಕೊರತೆಯಾದರೆ ಅದು ಮನೆ ಮಂದಿಯ ಸುಖ ಶಾಂತಿ ಮೇಲೆ ಪ್ರಭಾವ ಬೀರುತ್ತದೆ.

ಅತಿಥಿ ದೇವೋಭವದ ಪರಂಪರೆ:
ಹಿಂದೂ ಸಂಸ್ಕೃತಿಯಲ್ಲಿ ಅತಿಥಿಗಳಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಮನೆಗೆ ಬಂದ ಯಾವುದೇ ಅತಿಥಿ ಹಸಿವಿನಿಂದ ನಮ್ಮ ಮನೆಯಿಂದ ಹೊರ ನಡೆಯಬಾರದು ಅಥವಾ ಖಾಲಿ ಕೈಯ್ಯಲ್ಲಿ ತೆರಳಬಾರದು ಎನ್ನುವುದೇ ಅತಿಥಿ ದೇವೋಭವ ಎನ್ನುವ ಮಾತಿನ ತಾತ್ಪರ್ಯವಾಗಿದೆ. ನಾವು ಮನೆಯವರಿಗಷ್ಟೇ ಎನ್ನು ಲೆಕ್ಕಾಚಾರದಲ್ಲಿ ಅಡುಗೆ ಮಾಡಿಟ್ಟಾಗ ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅನ್ನ ಇಲ್ಲ ಎನ್ನು ಕಾರಣಕ್ಕೆ ಮುಜುಗರಕ್ಕೆ ಕೂಡಾ ಒಳಗಾಗಬಹುದು. ಹೀಗಿರುವಾಗ ಸ್ವಲ್ಪ ಜಾಸ್ತಿಯೇ ಅನ್ನ ಮಾಡಿದರೆ ಈ ಸಮಸ್ಯೆ ಎದುರಾಗುವುದಿಲ್ಲ.
ಪಂಚ ಯಜ್ಞದ ಮಹತ್ವ:
ಸನಾತನ ಧರ್ಮದಲ್ಲಿ ಪಂಚ ಯಜ್ಞಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಪಂಚ ಯಜ್ಞಗಳಲ್ಲಿ ಭೂತ ಯಜ್ಞ ಪ್ರಮುಖವಾದದ್ದು.ಅಂದರೆ ಪ್ರಾಣಿ ಪಕ್ಷಿ ಮತ್ತು ಇತರ ಜೀವ ಜಂತುಗಳಿಗೆ ಆಹಾರ ಉಣಿಸುವುದು. ನಾವು ಸ್ವಲ್ಪ ಆಹಾರ ಜಾಸ್ತಿ ಮಾಡಿದರೆ ಅದರಲ್ಲಿ ಒಂದು ಭಾಗ ಹಸು, ನಾಯಿ, ಪಕ್ಷಿಗಳಿಗೆ ಮತ್ತು ಇರುವೆಗಳಿಗೆ ನೀಡಬಹುದು. ಹಿಂದೂ ಧರ್ಮದ ಪ್ರಕಾರ ನಾವು ಊಟ ಮಾಡುವ ಮುನ್ನ ಹಸುವಿಗೆ ಆಹಾರ ನೀಡಬೇಕು, ಕೊನೆಗೆ ಉಳಿದ ಆಹಾರವನ್ನು ನಾಯಿಗೆ ನೀಡಬೇಕು ಎಂದು ಹೇಳಲಾಗುತ್ತದೆ. ಮನೆಯಲ್ಲಿ ಸ್ವಲ್ಪ ಆಹಾರ ಹೆಚ್ಚು ಮಾಡುವ ಮೂಲಕ ನಾವು ನಮ್ಮ ಹೊಟ್ಟೆ ತುಂಬಿಸುವ ಜೊತೆಗೆ ಇತರ ಜೀವಿಗಳ ಹಸಿವು ನೀಗಿಸಿದ ಯೋಗ ಭಾಗ್ಯವೂ ನಮಗೆ ಒದಗಿ ಬರುವುದು.
ವಾಸ್ತು ಮತ್ತು ಆರ್ಥಿಕ ಸಮೃದ್ಧಿ ನಡುವಿನ ಸಂಬಂಧ:
ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆ ಮತ್ತು ಮನೆಯ ಆರ್ಥಿಕ ಅಭಿವೃದ್ಧಿ ಮಧ್ಯೆ ವಿಶೇಷ ಸಂಬಂಧವಿದೆ. ಅಡುಗೆ ಮನೆಯಲ್ಲಿರುವ ಖಾಲಿ ಪಾತ್ರೆ ಅಥವಾ ಸಂಪೂರ್ಣ ಖಾಲಿಯಾಗಿರುವ ಆಹಾರದ ಪಾತ್ರೆ ದರಿದ್ರವನ್ನು ಸಂಕೇತಿಸುತ್ತದೆ. ಅಡುಗೆ ಮನೆಯಲ್ಲಿ ಸ್ವಲ್ಪ ಅನ್ನ ಹೆಚ್ಚುವರಿಯಾಗಿ ಉಳಿದರೆ ಅದು ಸಮೃದ್ದಿಯನ್ನು ಆಕರ್ಷಿಸುತ್ತದೆ. ರಾತ್ರಿ ಹೊತ್ತು ಅನ್ನ ಸಂಪೂರ್ಣ ಖಾಲಿಯಾದರೆ ಅದನ್ನು ಅಶುಭ ಎಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ಸ್ವಲ್ಪ ಹೆಚ್ಚೇ ಅನ್ನವನ್ನು ತಯಾರಿಸಿಕೊಳ್ಳುವುದು ವಾಸ್ತು ಪ್ರಕಾರ ಶುಭ ಎಂದೇ ಹೇಳಲಾಗುತ್ತದೆ.
ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಅನ್ನ ಬೇಯಿಸಿ ಇಟ್ಟುಕೊಳ್ಳುವುದು ಕೇವಲ ಅಭ್ಯಾಸ ಮಾತ್ರವಲ್ಲ ಅದೊಂದು ಸಂಸ್ಕಾರ. ಜೀವನದಲ್ಲಿ ಸಮರ್ಪಣೆ, ಉದಾರತೆ, ಮತ್ತು ಕೃತಜ್ಞತಾ ಭಾವ ಎಷ್ಟು ಮುಖ್ಯ ಎನ್ನುವುದನ್ನು ಈ ಹವ್ಯಾಸ ತೋರಿಸಿಕೊಡುತ್ತದೆ. ನಾವು ಅನ್ನವನನು ಗೌರವಿಸಿದರೆ ಅನ್ನಪೂರ್ಣೇಶ್ವರಿ ದೇವಿ ಮತ್ತು ಮಹಾಲಕ್ಷ್ಮೀ ನಮ್ಮ ಮನೆಯಲ್ಲಿ ನೆಲೆಯಾಗುತ್ತಾರೆ ಎನ್ನುವುದು ನಂಬಿಕೆ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications