Garuda Purana: ಮನುಷ್ಯ ಸತ್ತೋದ ಕೂಡ್ಲೇ ಸ್ವರ್ಗಕ್ಕೋ, ನರಕಕ್ಕೋ ಹೋಗಲ್ಲ, ಮೇನಕೆ, ಊರ್ವಶಿ ಸಿಗೋಲ್ಲ
ಕ್ಷಣವೊಂದರೊಳೆ ಪೂರ್ತಿ ಕೊಲ್ಲುವುದು ಯಮಶೂಲ |ಕ್ಷಣವನುಕ್ಷಣ ಕೊಲ್ಲುವುವು ಮೋಹಮಮತೆ ||ಕುಣಿಕೆಯನು ನಿನ್ನ ಕೊರಳಿಗೆ ಹೂಡಿ ಚಿರಕಾಲ |ವಣುವಣುವೆ ಬಿಗಿಯುವುವೊ - ಮಂಕುತಿಮ್ಮ ||
ಕಗ್ಗದಲ್ಲಿ ಡಿವಿಜಿಯವರು ಸಾವಿನ ಕುರಿತು ಬರೆದ ಸಾಲಿದು. ಮನುಷ್ಯ ಉಸಿರು ನಿಲ್ಲಿಸಿ ಒಮ್ಮೆ ಪ್ರಾಣ ಬಿಟ್ಟರೆ, ವ್ಯಾಮೋಹ ಮನುಷ್ಯನನ್ನು ಸದಾ ಕೊಲ್ಲುತ್ತಿರುತ್ತದೆ, ಎನ್ನುವುದು ಈ ಪದ್ಯದ ಭಾವಾರ್ಥ. ಪ್ರತಿಯೊಬ್ಬ ಮನುಷ್ಯನಿಗೆ ಸಾವಿನ ನಂತರ ಮುಂದೇನು ಎಂಬ ಪ್ರಶ್ನೆ ಕಾಡೋದು ಸಹಜ. ಆದರೆ, ಗರುಡ ಪುರಾಣದಲ್ಲಿ ಸಾವಿನ ನಂತರದ ಪಯಣವನ್ನು ಸವಿವರವಾಗಿ ವರ್ಣಿಸಲಾಗಿದೆ. ಅದಕ್ಕೆ ಸತ್ತ ಮನೆಯಲ್ಲಿ ಈ ಪುರಾಣವನ್ನು ಓದಿಸುತ್ತಾರೆ. ವ್ಯಾಮೋಹ ಇರೋ ಮನುಷ್ಯ ಸತ್ತರಂತೂ ಅವನ ಆತ್ಮ ಬಹುಶಃ ಪ್ರೇತಾತ್ಮವಾಗಿಯೇ ಓಡುತ್ತಿರುತ್ತದೆ. ಮನುಷ್ಯನ ಪ್ರಾಣ ಪಕ್ಷಿ ಹಾರಿ ಹೋದ ತಕ್ಷಣವೇ ಆತ್ಮ ಆ ಸ್ಥಳವನ್ನು ಬಿಟ್ಟು ಹೋಗೋಲ್ಲ. ಅಲ್ಲಿಯೇ ತಮ್ಮವರ ಜೊತೆಯಲ್ಲೇ ಕೆಲವು ದಿನಗಳು ಕಾಲ ಕಳೆದು, ತನ್ನ ಮುಂದಿನ ಪಯಣ ಬೆಳೆಸುತ್ತದೆಯಂತೆ. ಅಲ್ಲಿ ನಡೆಯುವ ಪ್ರತಿಯೊಂದೂ ಘಟನೆಯನ್ನೂ ಆತ್ಮ ಕೂಲಂಕುಷವಾಗಿ ಪರಿಶೀಲಿಸುತ್ತಿರುತ್ತದೆಯಂತೆ.

ಮೊದಲ 24 ಗಂಟೆಯಲ್ಲಿ ಆತ್ಮದ ಪಯಣ
ಸಾವು ಸಂಭವಿಸಿದ ತಕ್ಷಣ, ಯಮ ಧರ್ಮನ ದೂತರು ಆತ್ಮವನ್ನು ಯಮಲೋಕಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಚಿತ್ರಗುಪ್ತ ಆ ಆತ್ಮದ ಪುಣ್ಯ-ಪಾಪ ಕರ್ಮಗಳ ಲೆಕ್ಕಾಚಾರ ಪರಿಶೀಲಿಸುತ್ತಾನೆ. ಈ ಪ್ರಕ್ರಿಯೆ ಮೊದಲ 24 ಗಂಟೆಗಳ ಒಳಗೆ ಮುಗಿಯುತ್ತದೆ. ಇಷ್ಟಾದ ಕೂಡಲೇ ಅಸು ನೀಗಿದ ಮನುಷ್ಯ ಸ್ವರ್ಗಕ್ಕೋ, ನರಕಕ್ಕೋ ಹೋಗುವುದಿಲ್ಲ. ಕುದಿಯುವತ್ತಿರುವ ಎಣ್ಣೆಯ ಕೊಪ್ಪರಿಗೆಯಲ್ಲಿ ಮನುಷ್ಯನನ್ನು ತಳ್ಳುವುದೂ ಇಲ್ಲ, ಸ್ವರ್ಗಕ್ಕೆ ಹೋದರೆ ರಂಬೆ, ಊರ್ವಶಿಯರೊಂದಿಗೆ ಡ್ಯಾನ್ಸ್ ಮಾಡುವುದೂ ಇಲ್ಲ. ಯಮದೂತರು ಆತ್ಮವನ್ನು ಮತ್ತೆ ಅದರ ಸತ್ತು ಹೋದೆಡೆಗೇ ಕರೆತರುತ್ತಾರಂತೆ.
ಮೊದಲ 10 ದಿನ ಸೂಕ್ಷ್ಮ ರೂಪದಲ್ಲಿ ಆತ್ಮ:
ಸಾವಿನ ನಂತರ ಆತ್ಮ ಅತ್ಯಂತ ಸೂಕ್ಷ್ಮ ರೂಪದಲ್ಲಿ ಮರಳುತ್ತದೆ ಎಂದು ಗರುಡ ಪುರಾಣ ಹೇಳುತ್ತದೆ. ಇದು ತಾನು ವಾಸಿಸುತ್ತಿದ್ದ ಮನೆಯ ಸುತ್ತಮುತ್ತ ಹಾಗೂ ದೇಹ ದಹಿಸಿದ ಸ್ಥಳದ ಬಳಿಯೇ ಪಹರೆ ತಿರುಗುತ್ತಿರುತ್ತದೆ. ಈ ಹತ್ತು ದಿನಗಳಲ್ಲಿ ಕುಟುಂಬದವರು ಮಾಡುವ ಪಿಂಡ ಪ್ರದಾನ ಹಾಗೂ ಶ್ರಾದ್ಧ ವಿಧಿಗಳೇ ಆತ್ಮಕ್ಕೆ ಆಹಾರವಾಗಿ, ಮುಂದಿನ ಪಯಣಕ್ಕೆ ಶಕ್ತಿ ನೀಡುತ್ತವೆ.
11 ಮತ್ತು 12ನೇ ದಿನದ ವಿಶೇಷ ಕರ್ಮ:
ಈ ಎರಡು ದಿನಗಳಲ್ಲಿ ಕುಟುಂಬದವರು ವಿಶೇಷ ಆಚರಣೆ ಮತ್ತು ದಾನ-ಧರ್ಮ ಮಾಡುತ್ತಾರೆ. ಇದು ಆತ್ಮದ ಹಸಿವನ್ನು ನೀಗಿಸಿ, ಪ್ರಾಪಂಚಿಕ ಮೋಹಗಳಿಂದ ಬಿಡುಗಡೆ ಹೊಂದಿ ಯಮಲೋಕದ ಪಯಣಕ್ಕೆ ಸಿದ್ಧವಾಗಲು ನೆರವಾಗುತ್ತದೆ ಎಂದೇ ಹೇಳುತ್ತದೆ ಪುರಾಣ.
13ನೇ ದಿನ ಆತ್ಮದ ನೈಜ ಪಯಣ
ವೈಕುಂಠ ಸಮಾರಾಧಾನೆ ಅಂತ ಮಾಡುವ 13ನೇ ದಿನದ ಕರ್ಮ ಕಾರ್ಯದಂದು ಆತ್ಮ ನಿಜವಾದ ಪಯಣ ಬೆಳೆಸುತ್ತದೆ ಎಂಬುದು ಹಿಂದೂ ಧರ್ಮದಲ್ಲಿ ಇರುವ ನಂಬಿಕೆ. ಈ ದಿನದ ವಿಧಿಗಳ ನಂತರ ಯಮದೂತರು ಆತ್ಮವನ್ನು ಯಮಲೋಕದೆಡೆಗೆ ಕರೆದೊಯ್ಯುತ್ತಾರೆ. ಕರ್ಮಫಲಕ್ಕೆ ಅನುಗುಣವಾಗಿ ಈ ಪಯಣ 47 ದಿನಗಳಿಂದ ಒಂದು ವರ್ಷದವರೆಗೂ ಸಾಗಬಹುದು. ಅದಕ್ಕೆ ಹೇಳುವುದು ಸತ್ಕಾರ್ಯಗಳು ಸತ್ತ ನಂತರವೂ ಮನುಷ್ಯನ ಸಾವಿನ ನಂತರವೂ ಕಾಪಾಡುತ್ತದೆ ಎಂದು.
13 ದಿನಗಳಲ್ಲಿ ಪಾಲಿಸಬೇಕಾದ ನಿಯಮಗಳು
ಮೃತಪಟ್ಟ ವ್ಯಕ್ತಿಯ ಹೆಸರನ್ನು ಪದೇ ಪದೇ ಕರೆಯುವುದು, ಜೋರಾಗಿ ಅಳುವುದನ್ನು ಗರುಡ ಪುರಾಣ ನಿಷೇಧಿಸುತ್ತದೆ. ಇದು ಆತ್ಮಕ್ಕೆ ಸಂಕಟ, ಗೊಂದಲ ಉಂಟುಮಾಡಿ ಮುಂದಿನ ಪಯಣಕ್ಕೆ ಅಡ್ಡಿಯಾಗಬಹುದು ಎಂಬುದು ಎಚ್ಚರಿಕೆ. ಒಟ್ಟಿನಲ್ಲಿ ಮನುಷ್ಯನ ವ್ಯಾಮೋಹ ಸತ್ತ ಮೇಲೂ ಬಿಡೋಲ್ಲ. ನಿರ್ಮೋಹಿ ಆಗಿದ್ದರೆ ಬೇಗ ಪಯಣಿಸುತ್ತಾನೆ. ಇಲ್ಲವೇ ಗಮ್ಯ ಸೇರಲು ಸಮಯ ತೆಗೆದುಕೊಳ್ಳುತ್ತದೆ ಆತ್ಮ.












Click it and Unblock the Notifications