ಕೃತಕತೆ ಕಂಡರಾಗದ ಕೃತ್ತಿಕಾ ನಕ್ಷತ್ರದವರು
ಜನ್ಮನಕ್ಷತ್ರ ಕೃತ್ತಿಕಾ ಆಗಿದ್ದರೆ ಮೇಷ ರಾಶಿ ಮತ್ತು ವೃಷಭ ಎರಡೂ ರಾಶಿಯವರಾಗುತ್ತಾರೆ. ಈ ನಕ್ಷತ್ರದ ಒಂದನೇ ಪಾದಕ್ಕೆ ಜನ್ಮನಾಮ "ಆ", 2ನೇ ಪಾದಕ್ಕೆ ಇ, 3ನೇ ಪಾದಕ್ಕೆ ಉ, 4ನೇ ಪಾದಕ್ಕೆ ಎ ಎಂದು ಬರುತ್ತದೆ. ಈ ನಕ್ಷತ್ರದ ಒಂದನೇ ಪಾದ ಮಾತ್ರ ಮೇಷ ರಾಶಿಯಾದರೆ ಉಳಿದ ಮೂರು ಪಾದಗಳು ವೃಷಭ ರಾಶಿಯದಾಗುತ್ತವೆ. ಇದೇ ಈ ನಕ್ಷತ್ರದ ವಿಶೇಷ. ಈ ವಿಷಯ ಎಷ್ಟೋ ಜನಕ್ಕೆ ಇಂದಿಗೂ ಗೊತ್ತೇ ಇಲ್ಲ. ಆದ್ದರಿಂದ ಜನ್ಮಜಾತಕದ ಮೂಲಕ ನಕ್ಷತ್ರದ ಎಷ್ಟನೇ ಪಾದ ನನ್ನದು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.
ಈ ನಕ್ಷತ್ರದವರಿಗೆ "ರಿಯಾಲಿಟಿ" ಎಂದರೆ ತುಂಬಾ ಇಷ್ಟ. ಕೃತಕತೆ, ಆರ್ಟಿಫಿಶಿಯಲ್ ಇಂತಹುದು ಯಾವುದೂ ಇವರಿಗೆ ಹಿಡಿಸಲ್ಲ. ರಾಕ್ಷಸಗಣವಾಗಿರುವುದರಿಂದ ಇವರಿಗೆ ದೇವರೆಂದರೆ ಅಷ್ಟಕಷ್ಟೆ. ದೇವರ ಬಗ್ಗೆ ಹೆಚ್ಚೇನಾದರೂ ಹೇಳಲು ಹೋದರೆ ಏಟು ಹಾಕುವಷ್ಟು ಮಹಾನ್ ಶೂರರು ಇವರು. ಆದರೆ ದೇವರ ಬಗ್ಗೆ ಕೆಟ್ಟದ್ದೇನನ್ನೂ ಹೇಳುವುದಿಲ್ಲ ಮತ್ತು ಮಾಡುವುದಿಲ್ಲ. ಬೇರೆಯವರ ಭಕ್ತಿಗೆ ತೊಂದರೆ ನೀಡುವುದಿಲ್ಲ. ಆದರೆ ನಮ್ಮ ಸ್ವಸಾಮರ್ಥ್ಯವೇ ದೇವರಿಗಿಂತ ಹೆಚ್ಚು ಶಕ್ತಿಶಾಲಿ ಎನ್ನುವಂತಹ ಧೀರರಿವರು. [ವೃಷಭ ರಾಶಿ ಪುರುಷರು ಮಹಾ ಧೈರ್ಯಸ್ಥರು]
ಸಂಬಂಧಿಕರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉತ್ಸುಕತೆ ತೋರುವ ಇವರು, ಅಲ್ಲಿ ಬಂದ ಚಿಕ್ಕಮಕ್ಕಳ ಮುಖಚರ್ಯೆ ನೋಡಿ, ನೀನು ಅವರ ಮಗನಲ್ಲವೇ, ನೀನು ಅವಳ ಮಗಳಲ್ಲವೇ ಎಂದು ಎಲ್ಲರನ್ನೂ ಗುರ್ತಿಸುತ್ತ ತಮ್ಮ ಬುದ್ಧಿವಂತಿಕೆಯ ಬಗ್ಗೆ ತಾವೇ ಪ್ರಶಂಸೆ ಪಟ್ಟುಕೊಳ್ಳುತ್ತಿರುತ್ತಾರೆ. ಸಾಮಾನ್ಯವಾಗಿ ತಂದೆ-ತಾಯಿಯಂತೆಯೇ ಮಕ್ಕಳ ಮುಖಚರ್ಯೆ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇರುತ್ತದೆ!
ಹುಡುಗಿಯರಿಗೆ ಬಣ್ಣ ಬಣ್ಣದ ಮಾತು ಮಾತನಾಡಿ "ಹೊಟ್ಟೆ ತುಂಬಿ"ಸೋರನ್ನು ಕಂಡರೆ ಇವರಿಗಾಗಲ್ಲ. ಹೀಗಾಗಿ ಅವರಿಗೆ ಪಾಠ ಮಾಡುವ ಗುರುಗಳ ತರಹ ಕಟುವಾಗಿ ಬುದ್ಧಿಮಾತು ಹೇಳುತ್ತಿರುತ್ತಾರೆ. ಪಾಠ ಮಾಡುವುದು ಎಂದರೆ ಇವರಿಗಿಷ್ಟ. ಇವರು ಒಂಥರಾ ಸಮಾಜೋಪಕಾರಿ ಜೀವಿಗಳು ಎನ್ನಬಹುದು. [ಶನಿಬಲ ಹೊಂದಿರುವವರ ಗುಣಗಳು]
ಇವರು ಏನಾದರೂ ಮಾಡಬೇಕೆಂದರೆ, ಹುಲಿ ಬೇಟೆಯಾಡುವಾಗ ಮಾಡುವ ಪ್ಲಾನ್ ತರಹ ಇವರ ಪ್ಲಾನ್ ಇರುತ್ತದೆ. ಬಸ್ಸಿನಲ್ಲಿ ಹತ್ತುವಾಗ ಎಲ್ಲರಿಗಿಂತ ಮೊದಲೇ ಇವರೇ ಇರಬೇಕು ಅಷ್ಟೊಂದು ಆತುರ. ಎಷ್ಟೇ ಗದ್ದಲವಿರಲಿ ಜಗಳವಾಡಿ, ಗುದ್ದಾಡಿ ಬಸ್ ಹತ್ತಿ ಸೀಟ್ ಹಿಡಿಯುವಷ್ಟು ತಾಕತ್ತಿರುತ್ತದೆ. ತಾನು ಸೀಟ್ ಹಿಡಿದಿರುವುದನ್ನೇ ದೊಡ್ಡ ಸಾಹಸವೆಂಬಂತೆ ತಮ್ಮಷ್ಟಕ್ಕೆ ತಮ್ಮನ್ನೇ ಹೀರೋ ಅಂದುಕೊಳ್ಳುತ್ತಾರೆ.
ಅಂದಂಗೆ, ಇವರಿಗೆ ಗಂಡಿರಲಿ, ಹೆಣ್ಣಿರಲಿ ಬೇರೆಯವರ ಬಗ್ಗೆ ಕುತೂಹಲ ಮತ್ತು ಆಸಕ್ತಿ ತುಂಬಾ ಇರುತ್ತದೆ. ಕೆಲವೊಂದು ಬಾರಿ ಬೇರೆಯವರ ಮನಸ್ಸು ಗೆಲ್ಲಲು ಪರದಾಡುತ್ತಾರೆ. ಅವಸರದಿಂದ ಕೆಲಸ ಮಾಡಿದರೂ ಅಚ್ಚುಕಟ್ಟಾಗಿ ಮಾಡುತ್ತಾರೆ. ಯಾವುದೇ ರೀತಿಯಲ್ಲಿ ಏನೇ ತಪ್ಪಾಗಿರಲಿ ಸಿಕ್ಕಿಹಾಕಿಕೊಳ್ಳದಂತೆ ಮ್ಯಾನೇಜ್ ಮಾಡುವುದೇ ಇವರ ಟ್ಯಾಲೆಂಟ್ ಎನ್ನಬಹುದು.
ಆವಾಗಾವಾಗ ತಲೆನೋವೆಂದು ತಲೆಗೆ ಕೈ ಹಚ್ಚಿ ಕುಳಿತುಕೊಳ್ಳುವ ಇವರು, ಎಲ್ಲರಿಗಿಂತ ಹೆಚ್ಚು ವಿದ್ಯಾವಂತನಾಗಬೇಕು ಎನ್ನುವುದು ಇವರಿಗೆ ಗುರಿಯಾಗಿರುತ್ತದೆ. ಈ ಗುರಿ ಸಾಧನೆಗಾಗಿ ಸ್ನೇಹಿತರ ಬಳಗ ಬೆಳೆಸಿಕೊಳ್ಳುತ್ತಾರೆ. ತನಗೆ ಹೆಲ್ಪ್ ಮಾಡಿದವರಿಗೆ ಟ್ರೀಟ್ ಮಾಡುವುದರಲ್ಲಿ ಖುಷಿಯಾಗುತ್ತದೆ. ಒಳಗೊಂದು ಹೊರಗೊಂದು ಇಲ್ಲ. ಏನಿದ್ದರೂ ಎಲ್ಲರಿಗೂ ಗೊತ್ತಾಗಬೇಕೆನ್ನುವುದು ಇವರ ಉತ್ತಮ ಗುಣಕ್ಕೆ ಸಾಕ್ಷಿ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆಳೆತನವಿರಬೇಕು. ಪಾವರಫುಲ್ ಕಾಂಟ್ಯಾಕ್ಟ್ಗಳು ಇರಬೇಕು ಎಂದು ಹಂಬಲಿಸುತ್ತಾರೆ. ಆದರೆ, ಅಂದಗಾಣಬೇಕೆಂದು ಮುಖಕ್ಕೆ ಏನೇನೋ ಹಚ್ಚಿಕೊಂಡು ಮುಖದಲ್ಲಿ ಕಲೆಗಳನ್ನಾಗಿಸಿಕೊಂಡಿರುತ್ತಾರೆ. ಆದಷ್ಟು ಬೇಗ ಸಾಕಷ್ಟು ಹಣ ಗಳಿಸಬೇಕು, ಯಾರೂ ಮಾಡದಿರೋದನ್ನ ನಾನು ಮಾಡಬೇಕು ಎನ್ನುವ ಹಠ ಇವರಿಗಿರುತ್ತದೆ.
ಕೃತ್ತಿಕಾ ನಕ್ಷತ್ರ 2, 3, 4ನೇ ಪಾದ : ಈ ನಕ್ಷತ್ರದ 2, 3, 4ನೇ ಚರಣದಲ್ಲಿ ಜನಿಸಿದವರು ವೃಷಭ ರಾಶಿಯವರಾಗುತ್ತಾರೆ. ಈ ಬಗ್ಗೆ ಈ ರಾಶಿಯವರು ಕೂಡ ಗಮನಿಸಿಕೊಳ್ಳಬೇಕು. ಇವರ ಗುಣವೂ ಮೇಲಿನಂತೆಯೇ ಇದ್ದರೂ, ಸ್ವಲ್ಪ ವೃಷಭ ರಾಶಿ ಗುಣ ಹೋಲುತ್ತಾರೆ.
ಈ ನಕ್ಷತ್ರದ 2ನೇ ಪಾದದಲ್ಲಿ ಜನಿಸಿದವರು ಮಾತು ಕಮ್ಮಿ ಇದ್ದರೆ, ದೇಹದಲ್ಲಿ ಭಾರಿ ಶಕ್ತಿವಂತರು. 3ನೇ ಪಾದದಲ್ಲಿ ಜನಿಸಿದವರು ಕೇಡುಬುದ್ಧಿ ಇಟ್ಟುಕೊಂಡಿದ್ದರೂ ಯಾರಿಗೂ ತೋರ್ಪಡಿಸಲ್ಲ. ಹೊಟ್ಟೆಕಿಚ್ಚು ಪಡುತ್ತ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡು ಇದ್ದಬದ್ದ ಕೆಲಸ ಬಿಟ್ಟು ಸೋಮಾರಿಯಾಗಿರುತ್ತಾರೆ. 4ನೇ ಪಾದದಲ್ಲಿ ಜನಿಸಿದವರು ಸಾಕಷ್ಟು ವಿದ್ಯೆ ಕಲಿತು ಬುದ್ಧಿಯಿಂದ ಶ್ರೀಮಂತಿಕೆ ಪಡೆದು ಐಷಾರಾಮಿ ಜೀವನ ಸಾಗಿಸಲು ಮುಂದಾಗುತ್ತಾರೆ. ಅಲ್ಲದೆ, ಇವರು "ಶಕ್ತಿಗಿಂತ ಯುಕ್ತಿ ಮೇಲು" ಎನ್ನುವಂತೆ ಭಾರಿ ತೀಕ್ಷ್ಣ ಬುದ್ಧಿ ಹೊಂದಿ ಕುಯುಕ್ತಿ ಮಾಡಲೂ ಕೂಡ ಒಮೊಮ್ಮೆ ಹಿಂಜರಿಯುವುದಿಲ್ಲ.
ಆದರೆ ಇವರಿಗೊಂದಿಷ್ಟು ನ್ಯೂನ್ಯತೆಗಳು ಕೂಡ ಇವೆ. ಅವುಗಳು ಹೀಗಿವೆ.
ಏನು ಮಾಡಲಿ, ಏನು ಬಿಡಲಿ ಎನ್ನಬಾರದು. ಯಾವುದಾದರೂ ಒಂದನ್ನು ಮಾಡಬೇಕು. ಚಂಚಲ ಮನಸ್ಸನ್ನು ಬಿಡಬೇಕು. ಪಾಲಿಗೆ ಬಂದದ್ದು ಪಂಚಾಮೃತ ಎಂದುಕೊಂಡು ತೃಪ್ತಿಪಟ್ಟುಕೊಳ್ಳಬೇಕು. ಸಿಕ್ಕ ಸಿಕ್ಕವರೊಂದಿಗೆ ಕೈ ಕೈ ಮಿಲಾಯಿಸಬಾರದು. ದೊಡ್ಡ ದೊಡ್ಡ ಆಸೆಗಳನ್ನಿಟ್ಟುಕೊಳ್ಳದೆ, ಹಾಸಿಗೆ ಇದ್ದಷ್ಟೇ ಕಾಲು ಚಾಚುವುದನ್ನು ಕಲಿತುಕೊಳ್ಳಬೇಕು. ಆರೋಗ್ಯದ ಬಗ್ಗೆ ಕೇರ್ ತೆಗೆದುಕೊಳ್ಳುತ್ತಿರಬೇಕು. ಏಕೆಂದರೆ ವಯಸ್ಸಾದಂತೆ ದೇಹ ಉದುರುವ ಹಣ್ಣಿನಂತೆ ಹಣ್ಣಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆಹಾರದಲ್ಲಿ ಕಟ್ಟುನಿಟ್ಟು ಪಾಲಿಸಬೇಕು. "ಕಸ ತಿನ್ನೋದಕ್ಕಿಂತ ತುಸು ತಿನ್ನಬೇಕು" ಎಂಬ ಮಾತು ಅರಿತುಕೊಳ್ಳಬೇಕು. ಚಿಕ್ಕ ಮಕ್ಕಳ ತರಹದ ಸ್ವಭಾವ, ಹುಡುಗಾಟಿಕೆ ಬಿಡಬೇಕು. ಎಷ್ಟೇ ಬಲಶಾಲಿಯಾಗಿದ್ದರೂ ಇಂತಹ ಗುಣ ಮತ್ತೊಬ್ಬರಿಗೆ ಇಷ್ಟವಾಗಲ್ಲ ಎಂಬುದನ್ನು ತಿಳಿದುಕೊಂಡು ದೊಡ್ಡವರೆನಿಸಿಕೊಳ್ಳಬೇಕು. ಇವರಿಗೆ ನೀರೆಂದರೆ ಭಯ ಹೀಗಾಗಿ ಈಜು ಕಲಿಯಬೇಕು.
ಇನ್ನು, ಬೇರೆಲ್ಲ ನಕ್ಷತ್ರದವರು ಪ್ರತಿ ಹದಿನೈದು ದಿನಕ್ಕೊಮ್ಮೆಯಾದರೂ ಮನೆಯಲ್ಲಿ ತಮ್ಮ ದೃಷ್ಟಿ ತೆಗೆಸಿಕೊಳ್ಳಬೇಕು ತಪ್ಪಿಸದೇ. ಇದನ್ನು ಕುಟುಂಬದ ಪದ್ಧತಿ ಎಂಬಂತೆ ರೂಢಿಸಿಕೊಳ್ಳಬೇಕು. "ಸಾಮಿ ಇದೆಲ್ಲಾ ಮೂಢನಂಬಿಕೆ ಅಲ್ವಾ" ಎಂದು ದಶಕಂಠನಂತೆ ಮಾತನಾಡಿದರೆ, ವಿಷಕಂಠನ ಬಳಿ ಬೇಗ ಹೋಗೋಕೆ ಇಷ್ಟವಿದೆಯಾ ಎನ್ನಬೇಕಾಗುತ್ತದೆ. ಏಕೆಂದರೆ, "ಕೋತಿ ತಾನು ಕೆಡುವುದಲ್ಲದೆ ವನವನ್ನೆಲ್ಲಾ ಹಾಳು ಮಾಡಿತಂತೆ" ಎಂದೆನ್ನಬೇಕಾಗುತ್ತದೆ.
ಇನ್ನು ಮುಂದಿನ ದಿನಗಳಲ್ಲಿ ಮೇಷ ರಾಶಿಯವರಿಗೆ ಅಷ್ಟಮಶನಿ ಕಾಟ ಶುರುವಾಗುತ್ತದೆ. ಆ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರು ಸಂಭವವಿರುವುದರಿಂದ ಈಗಿನಿಂದಲೇ ಸೂಕ್ತವಾದ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. "ಅದೆಲ್ಲಾ ಈಗ್ಲೇ ಯಾಕೇ ಸಾಮೀ ಬಂದಾಗ ನೋಡಕೊಂಡರಾಯ್ತು ಬುಡಿ" ಎಂದರೆ "ಆಸ್ಪತ್ರೆಗೆ ನೋಡೋಕೆ ಜನಾ ಬರ್ತಾರೆ ನಿಮ್ನಾ" ಎನ್ನಬೇಕಾಗುತ್ತದೆ. ಅಲ್ಲದೇ "ತಂದೆ ಕಲಿಸಿದ್ದು ಬುದ್ಧಿ, ತಾಯಿ ಕಲಿಸಿದ್ದು ಊಟ" ಎಂಬ ಮಾತಿನಂತೆ ಈ ಬಗ್ಗೆ ಮನೆ ಹಿರಿಯರ ಅಭಿಪ್ರಾಯ ಪಡೆದುಕೊಳ್ಳಬೇಕು. ದುಡ್ಡು ಮಾಡಿಕೊಂಡು, ದೊಡ್ಡವರಾಗಿದ್ದೇವೆಂದು ಹಿರಿಯರ ಮಾತಿಗೆ ಮರುಮಾತನಾಡಬೇಡಿ. [ಆರೋಗ್ಯದ ಬಗ್ಗೆ ಗಮನವಿರಲಿ]
ಇಲ್ಲಿರುವ ಗುಣಗಳಷ್ಟೇ ಇರುತ್ತವೆ ಎಂದುಕೊಂಡು ನೊಂದುಕೊಳ್ಳಬಾರದು ಈ ನಕ್ಷತ್ರದವರು. ಅಲ್ಲದೇ ಜಾತಕದಲ್ಲಿ ಇರುವ ವಿವಿಧ ಭಾವಗಳ ಮೂಲಕ ಗುಣಾವಶೇಷಗಳು ಇನ್ನೂ ಬದಲಾಗುವುದರಿಂದ ಯಾವುದಕ್ಕೂ ಜಾತಕದ ಮೂಲಕ ಇನ್ನಷ್ಟು ಗುಣಗಳನ್ನು ತಿಳಿದುಕೊಳ್ಳಬೇಕು.
"ರೋಹಿಣಿ ನಕ್ಷತ್ರ" ವಿಶೇಷ ಎಂಬುದು ಮುಂದಿನ ಲೇಖನದಲ್ಲಿ. (ಒನ್ಇಂಡಿಯಾ ಕನ್ನಡ)
ನಕ್ಷತ್ರ ಟಿಪ್ಸ್ : ಕೃತ್ತಿಕಾ ನಕ್ಷತ್ರದವರು ಧೈರ್ಯ, ತಾಕತ್ತಿದೆ ಎಂದು ಗೂಂಡಾಗಿರಿಗೆ ಇಳಿಯಬಾರದು.
ದೈವಕೃಪೆಗೆ : ಡಿಸೆಂಬರ್ 31 ಮಂಗಳವಾರ ರಾತ್ರಿ ಅಮವಾಸ್ಯೆ. ಅಂದು ಹೊಸ ವರ್ಷಾಚರಣೆ ಮಾಡಲೇಬೇಕೆಂದರೆ ಮನೆಯಲ್ಲಿಯೇ ಮಾಡಿ.
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)