ವಿವಾಹ ವಿಳಂಬದಿಂದ ವಿಘ್ನ ನಿವಾರಣೆವರೆಗೆ ಕ್ಷೇತ್ರದರ್ಶನ ಪರಿಹಾರ
ಸಮಸ್ಯೆಗಳು ಮನುಷ್ಯನಿಗೆ ಅಲ್ಲದೆ ಮರಗಳಿಗೆ ಬರುತ್ತವೆಯೆ? ಆದರೆ ಆ ಸಮಸ್ಯೆಗಳಿಂದ ಹೊರಬರಲು ಒಂದು ನಂಬಿಕೆ ಹಾಗೂ ಬೆಂಬಲ ಬೇಕು. ಅದನ್ನು ದೇವರ ರೂಪದಲ್ಲಿ ನಾವು ಕಾಣುತ್ತೇವೆ. ನಮ್ಮ ಕಷ್ಟಗಳನ್ನು ಪರಿಹರಿಸುವಂತೆ ಅಥವಾ ಎಂಥ ಕಷ್ಟ ಬಂದರೂ ಅದನ್ನು ಎದುರಿಸುವ ಚೈತನ್ಯ ನೀಡುವಂತೆ ಕೇಳಿಕೊಳ್ಳುತ್ತೇವೆ. ನಮ್ಮ ಶಕ್ತ್ಯಾನುಸಾರ ಆ ದೇವರಿಗೆ ಸೇವೆಯನ್ನೂ ಮಾಡುತ್ತೇವೆ.
ಇಂದಿನ ಲೇಖನದಲ್ಲಿ ಕೆಲವು ದೇವಾಲಯಗಳ ಪರಿಚಯ ಮಾಡಿಕೊಡುತ್ತಿದ್ದೇನೆ. ಏಕೆಂದರೆ, ಕೆಲವರ ಬಳಿ ಜಾತಕ ಇರುವುದಿಲ್ಲ. ಅವರಿಗೆ ತಮ್ಮ ಜನ್ಮ ಸಮಯ ಮುಂತಾದ ಮಾಹಿತಿ ಗೊತ್ತಿರುವುದಿಲ್ಲ. ತಮ್ಮ ಸಮಸ್ಯೆಗೆ ಏನು ಪರಿಹಾರ ಎಂಬ ಬಗ್ಗೆ ಬಹಳ ತಲೆ ಕೆಡಿಸಿಕೊಂಡಿರುತ್ತಾರೆ. ಅಂಥವರಿಗೆ ಹಾಗೂ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳಿಗೆ ಮಾಡಬಹುದಾದ ಕ್ಷೇತ್ರ ದರ್ಶನದ ಮಾಹಿತಿಯನ್ನು ನೀಡುತ್ತಿದ್ದೇನೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ: ಟಾರೋ ರೀಡಿಂಗ್
ಮುಖ್ಯವಾಗಿ ವಿವಾಹಕ್ಕೆ ಅಡೆ-ತಡೆ ಆಗುತ್ತಿದ್ದಲ್ಲಿ, ಸಂತಾನಕ್ಕೆ ಸಂಬಂಧಿಸಿದಂತೆ ತೊಂದರೆಗಳು ಕಾಣಿಸಿಕೊಂಡಿದ್ದಲ್ಲಿ, ದುಡ್ಡು-ಕಾಸು ಕೈ ಹತ್ತುತ್ತಿಲ್ಲ ಎಂಬ ದುಗುಡ ಇದ್ದರೆ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ ಆಗುತ್ತಿದ್ದರೆ, ವಾಮಾಚಾರದ ಪ್ರಯೋಗ ಆಗಿದೆ ಎಂಬ ಅನುಮಾನಗಳಿದ್ದರೆ, ವಿಘ್ನ ನಿವಾರಣೆ ಆಗಿ ಯತ್ನ ಕಾರ್ಯದಲ್ಲಿ ಸಿದ್ಧಿ ಕಾಣಬೇಕು ಎಂದಿದ್ದರೆ ಇಲ್ಲಿ ಸೂಚಿಸಿರುವ ದೇವಾಲಯಗಳ ದರ್ಶನ ಮಾಡಿ, ಪ್ರಾರ್ಥನೆ ಸಲ್ಲಿಸಿದರೆ ಬಹಳಷ್ಟು ಮಟ್ಟಿಗೆ ಸಮಸ್ಯೆ ನಿವಾರಣೆ ಆಗುತ್ತದೆ.
ವಿವಾಹ ಸಿದ್ಧಿಗಾಗಿ ಈ ಸೇವೆಗಳಲ್ಲಿ ಒಂದನ್ನು ಮಾಡಬಹುದು
ಮೊದಲನೆಯದಾಗಿ ವಿವಾಹಕ್ಕೆ ಸಂಬಂಧಿಸಿದಂತೆ ಅಡೆತಡೆಗಳು ಆಗುತ್ತಿದ್ದಲ್ಲಿ ಶುಕ್ರವಾರದಂದು ಮಂಗಳೂರಿನ ಮಂಗಳಾದೇವಿ ದೇವಾಲಯದಲ್ಲಿ ಸ್ವಯಂವರ ಪಾರ್ವತಿ ಪೂಜೆ ಮಾಡಿಸಿದರೆ ಸುಲಭ ವಿವಾಹ ಸಿದ್ಧಿ ಆಗುತ್ತದೆ. ಅದೇ ರೀತಿ ಪೊಳಲಿ ರಾಜೇಶ್ವರಿ ದೇವಸ್ಥಾನ, ಹೆರ್ಗದ ದುರ್ಗಾಪರಮೇಶ್ವರಿ ದೇಗುಲ ದರ್ಶನ, ಕೊಲ್ಲೂರು ಮೂಕಾಂಬಿಕೆಗೆ ತಾಳಿ (ಯಥಾಶಕ್ತಿಯ ಪ್ರಮಾಣ) ಸಮರ್ಪಣೆ, ಪುಷ್ಪರಥ ಸೇವೆ ಈ ಪೈಕಿ ಯಾವುದಾದರೂ ಸೇವೆಯನ್ನು ಶ್ರದ್ಧೆಯಿಂದ ಮಾಡಿದರೆ ವಿವಾಹ ಸಿದ್ಧಿ ಆಗುತ್ತದೆ.
ಸಂತಾನ ವಿಳಂಬಕ್ಕೆ ಮಾಡಿಕೊಳ್ಳಬಹುದಾದ ಪರಿಹಾರ
ಸಂತಾನದ ವಿಚಾರದಲ್ಲಿ ವಿಳಂಬ ಆಗುತ್ತಿರುವ ಆರೋಗ್ಯವಂತ ದಂಪತಿ ನಂಜನಗೂಡಿನ ಸಂತಾನಗೋಪಾಲಕೃಷ್ಣ ದೇಗುಲದ ದರ್ಶನ ಹಾಗೂ ಪೂಜೆ ಮಾಡಿದರೆ ದೋಷ ನಿವಾರಣೆ ಆಗುತ್ತದೆ. ಅದೇ ರೀತಿ ಉಡುಪಿಯ ಶ್ರೀಕೃಷ್ಣ ದೇವರಿಗೆ ರಥೋತ್ಸವ ಅಥವಾ ಮಹಾಪೂಜೆ ಮಾಡಿಸಬಹುದು. ಇನ್ನು ನಾಗದೋಷಗಳಿದ್ದಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿವಾರಣೆ ಮಾಡಿಕೊಳ್ಳಬೇಕು.
ದುಡ್ಡು ಕಾಸು ಕೈ ಹತ್ತುತ್ತಿಲ್ಲ ಎಂಬ ಸಮಸ್ಯೆಗೆ ಕ್ಷೇತ್ರ ದರ್ಶನ
ಇನ್ನು ದುಡ್ಡು ಕಾಸು ಕೈ ಹತ್ತುತ್ತಿಲ್ಲ ಎಂಬ ಕೊರಗಿನಲ್ಲಿ ಇರುವವರು ಕೊಲ್ಲೂರು ಮೂಕಾಂಬಿಕೆಗೆ ಸರ್ವಸೇವೆಯನ್ನು ಮಾಡಿ, ಪ್ರಾರ್ಥನೆ ಸಲ್ಲಿಸಬಹುದು. ಇನ್ನು ಪೊಳಲಿ ರಾಜೇಶ್ವರಿ ಹಾಗೂ ಹೆರ್ಗದ ದುರ್ಗಾಪರಮೇಶ್ವರಿಗೆ ಪ್ರಾರ್ಥನೆ ಮಾಡಿದರೂ ಸಮಸ್ಯೆಗಳು ನಿವಾರಣೆ ಆಗುತ್ತವೆ.
ವಾಮಾಚಾರ ದೋಷ ನಿವೃತ್ತಿ ಮಾರ್ಗ
ವಾಮಾಚಾರದಂಥ ದೋಷ ನಿವೃತ್ತಿಗೆ ಉಡುಪಿ ಸಮೀಪದ ಅಂಬಲಪಾಡಿ ಮಹಾ ಕಾಳಿ ಮತ್ತು ಕಾಪುವಿನ ಮಾರಿಯಮ್ಮ ದೇಗುಲ ದರ್ಶನ ಹೆಚ್ಚು ಪರಿಣಾಮಕಾರಿ. ಅಲ್ಲಿ ಹೂವಿನ ಪೂಜೆ ಅಥವಾ ದರ್ಶನೆಯಲ್ಲಿ ಅಭಯ ಪಡೆದು ಬಂದರೆ ರಕ್ಷಣೆ ಸಿಗುತ್ತದೆ.
ವ್ಯಾಪಾರದಲ್ಲಿ ಯಶಸ್ಸು ಸಿದ್ಧಿಗೆ ಕಟೀಲಿನ ದುರ್ಗಾಪರಮೇಶ್ವರಿ ಅನುಗ್ರಹ
ವ್ಯಾಪಾರದಲ್ಲಿ ಹಿನ್ನಡೆ ಆಗುತ್ತಿದ್ದರೆ ಕಟೀಲಿನ ದುರ್ಗಾಪರಮೇಶ್ವರಿಗೆ (ಭ್ರಮರಾಂಬಿಕಾ ದೇವಿ) ಶುಕ್ರವಾರದಂದು ಹೂವಿನ ಪೂಜೆ, ಚಂಡಿಕಾ ಹವನ ಅಥವಾ ಮಹಾ ಪೂಜೆ ಈ ಪೈಕಿ ಯಾವುದನ್ನೇ ಮಾಡಿಸಿದರೂ ಅನುಕೂಲ ಒದಗಿ ಬರುತ್ತದೆ. ಆದರೆ ನಿಮ್ಮ ಹಣಕಾಸಿನ ಸ್ಥಿತಿ ನೋಡಿಕೊಂಡು ನಿರ್ಧಾರ ಮಾಡಿ.
ವಿಘ್ನ ನಿವಾರಣೆಗೆ ಇಲ್ಲಿದೆ ಪರಿಹಾರ
ಪ್ರಯತ್ನಿಸುತ್ತಿರುವ ಕಾರ್ಯಗಳಿಗೆ ಪದೇ ಪದೇ ತೊಂದರೆ ಅಥವಾ ವಿಘ್ನಗಳು ಎದುರಾಗುತ್ತಿದ್ದಲ್ಲಿ ಕಾರ್ಯ ಸಿದ್ಧಿಯ ಸಲುವಾಗಿ ಹಟ್ಟಿಯಂಗಡಿ ಗಣಪತಿ, ಆನೆಗುಡ್ಡೆ ಗಣಪತಿ, ಶೆರವು ಮಹಾಗಣಪತಿ, ಪೆರ್ಣಂಕಿಲ ಗಣಪತಿಗೆ ಸೇವೆ ಸಲ್ಲಿಸಬಹುದು. ಅಂದ ಹಾಗೆ ಪೆರ್ಣಂಕಿಲ ಗಣಪತಿಗೆ ಕೊಳಗದ ಅಪ್ಪದ ಸೇವೆ ಬಹಳ ವಿಶೇಷ.