2017ರ ಅಕ್ಷಯ ತೃತೀಯಾಕ್ಕೆ ಯಾವುದು ಶುಭ-ಯಾವುದು ಅಶುಭ?
ಈ ವರ್ಷದ ಅಕ್ಷಯ ತೃತೀಯಾ ಶುಭಕರವಲ್ಲ ಇತ್ಯಾದಿಯಾಗಿ ಸಾಕಷ್ಟು ಪ್ರಚಾರ ಪಡೆಯುತ್ತಿದೆ. ಈ ಬಗ್ಗೆ ಜ್ಯೋತಿಷಿಗಳಾದ ಕಬಿಯಾಡಿ ಜಯರಾಮ ಆಚಾರ್ಯ ಅವರು ಕರಾರುವಾಕ್ ಆಗಿ ವಿವರಣೆ ನೀಡಿದ ಲೇಖನ ಇಲ್ಲಿದೆ
ಈ ವರ್ಷದ ಅಕ್ಷಯ ತೃತೀಯಾ ಏಪ್ರಿಲ್ 29ನೇ ತಾರೀಕು ಶನಿವಾರ ಬರಲಿದೆ. ಆ ದಿನ ದರಿದ್ರ ಯೋಗವಿದೆ, ಶನಿ ಚೋರ ಕಾರಕ. ಆ ದಿನ ಚಿನ್ನ ಖರೀದಿಸಿದರೆ ಕಳವಾಗುತ್ತದೆ.ಎಂಬಿತ್ಯಾದಿ ಅಶಾಸ್ತ್ರೀಯ ಅಪದ್ಧ ಕಂತೆಗಳನ್ನು ಅರೆಬರೆ ಜ್ಯೋತಿಷ್ಯ ತಿಳಿದ ....ಶಿಖಾಮಣಿಗಳು ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ಪ್ರಚುರ ಪಡಿಸುತ್ತಿದ್ದಾರೆ.
ಯುಗಾದಿ, ಅಕ್ಷಯ ತೃತೀಯಾ, ವಿಜಯದಶಮಿ ಮತ್ತು ಬಲಿ ಪಾಡ್ಯದ ಅರ್ಧ ದಿನ ಈ ಮೂರೂವರೆ ದಿನಗಳು ಅತ್ಯಂತ ಶುಭ ಮುಹೂರ್ತದ ದಿನಗಳು ಎನಿಸಿದ್ದು, ಆ ದಿನಗಳಿಗೆ ವಾರ, ನಕ್ಷತ್ರ, ಯೋಗ, ಕರಣಗಳ ದೋಷವಿರುವುದಿಲ್ಲ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯು ಅಕ್ಷಯ ತೃತೀಯಾ ಎಂದೆನಿಸಿದೆ.[ವಿವಾಹ, ಸಂತಾನ ದೋಷ ನಿವಾರಣೆಗೆ ಮುಗ್ವಾ ಸುಬ್ರಹ್ಮಣ್ಯ ದರ್ಶನ]
ಅಪರಾಹ್ನ 1 ಯಾಮ ವ್ಯಾಪಿನಿಯಾದ ತಿಥಿಯಿರುವ ದಿನವನ್ನು ಯಾವುದೇ ತಿಥಿಯ ಆಚರಣೆಗೆ ಬಳಸುವುದು ಒಂದು ಕ್ರಮ. ಸೂರ್ಯೋದಯದ ಹೊತ್ತಿಗಿರುವ ತಿಥಿಯನ್ನು ಆ ದಿನದ ಸಾಮಾನ್ಯ ತಿಥಿಯಾಗಿ ಸ್ವೀಕರಿಸುವುದು ಇನ್ನೊಂದು ಕ್ರಮ. ಎರಡೂ ಶಾಸ್ತ್ರಸಮ್ಮತವೇ.
ಈ ಬಾರಿ ದೃಗ್ಗಣಿತ ರೀತ್ಯಾ ಏಪ್ರಿಲ್ 28ರ ಶುಕ್ರವಾರ ಸೂರ್ಯೋದಯವಾದ 4 ತಾಸು 18 ನಿಮಿಷದ (ಹತ್ತೂ ಮುಕ್ಕಾಲು ಘಳಿಗೆ=ಬೆಂಗಳೂರಿನಲ್ಲಿ ಬೆಳಗ್ಗೆ 10.25, ಉಡುಪಿಯಲ್ಲಿ ಬೆಳಗ್ಗೆ 10.32) ಬಳಿಕ ತೃತೀಯಾ ತಿಥಿ ಪ್ರಾರಂಭವಾಗುತ್ತದೆ.[ಶಿವನಿಗೆ ಯಾವ ಅಭಿಷೇಕ ಮಾಡಿದರೆ ಯಾವ ಫಲ?]
ಏಪ್ರಿಲ್ 29ರ ಶನಿವಾರ ಸೂರ್ಯೋದಯಾತ್ 48 ನಿಮಿಷ (2 ಘಳಿಗೆ= ಬೆಂಗಳೂರಿನಲ್ಲಿ ಬೆಳಗ್ಗೆ 6.53, ಉಡುಪಿಯಲ್ಲಿ ಬೆಳಗ್ಗೆ 7.00) ವರೆಗೆ ಇರುತ್ತದೆ. ಇದು ನಿಜವಾದ ಅಕ್ಷಯ ತೃತೀಯಾ ಸಮಯ.
ಏಪ್ರಿಲ್ 28ರ ಶುಕ್ರವಾರದಂದು ಸೂರ್ಯೋದಯಕ್ಕೆ ದ್ವಿತೀಯಾ(ಭದ್ರಾ) ತಿಥಿಯಿರುವುದರಿಂದ ವಾರವರ ಯೋಗ ಹಾಗೂ ಶನಿವಾರ ರೋಹಿಣಿ ನಕ್ಷತ್ರವಿರುವುದರಿಂದ ಅಮೃತ(ಶುಭ) ಸಿದ್ಧಿ ಯೋಗಗಳಿವೆ. ಅಂದರೆ ಈಗ ಸುಖಾಸುಮ್ಮನೆ ಹಬ್ಬಿಸುತ್ತಿರುವಂತೆ ದರಿದ್ರಯೋಗವೇನಿಲ್ಲ.[ದ್ವಾದಶ ರಾಶಿಗಳ ಮೇಲೆ ವಕ್ರೀ ಶನಿಯ ಪರಿಣಾಮ ಏನು?]
ಎಲ್ಲ ಶನಿವಾರಗಳಂದು ಗೃಹ ಪ್ರವೇಶ, ಸ್ಥಿರವಾಗಿ ಉಳಿಸಬಹುದಾದ ಉಪಯೋಗಿ ವಸ್ತುಗಳ, ಸ್ಥಿರಾಸ್ತಿಗಳ ಖರೀದಿ ಇವನ್ನೆಲ್ಲ ಮಾಡಬಹುದು. ಅದೇ ದಿನ ಅಕ್ಷಯ ತೃತೀಯಾ ತಿಥಿಯೂ ಬಂದರೆ ಏನನ್ನೂ ಖರೀದಿಸಬಹುದು. ಮತ್ತು ಮದುವೆ- ಉಪನಯನ ಹೊರತಾಗಿ ಎಲ್ಲ ಶುಭ ಕಾರ್ಯಗಳನ್ನು ಮಾಡಬಹುದು.
ಶನಿ ಚೋರಕಾರಕನಾದುದರಿಂದ ಶನಿವಾರದ ಖರೀದಿ ಮಾಡಿದ ವಸ್ತುಗಳು ಕಳವಾಗುತ್ತವೆ ಎಂದಾದರೆ, ಶನಿ ಆಯುಷ್ಯಕಾರಕನೂ ಹೌದಾದ್ದರಿಂದ ಶನಿವಾರ ಹುಟ್ಟಿದವರೆಲ್ಲ ಅಲ್ಪಾಯುಗಳಾಗಬೇಕಾದೀತು. ಇವೆಲ್ಲ ಬಾಲಿಶ ಅಶಾಸ್ತ್ರೀಯ ವಾದಗಳು.