ದಾವಣಗೆರೆಯಲ್ಲಿ SDPI ಪ್ರಭಾವ, ಕಾಂಗ್ರೆಸ್ಗೆ ಎಚ್ಚರಿಕೆ ಗಂಟೆ: ಬಿಜೆಪಿ ಸೋಲಿನ ವಿಶ್ಲೇಷಣೆ By Election 2026
ಕರ್ನಾಟಕ ಉಪಚುನಾವಣೆ ಫಲಿತಾಂಶದ ಕುತೂಹಲಕ್ಕೆ ತೆರೆ ಬಿದ್ದಿದೆ. ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಗೆದ್ದು ಬೀಗಿದೆ. ಬಿಜೆಪಿ ಸೋಲುಂಡಿದೆ. ದಾವಣಗೆರೆ ಫಲಿತಾಂಶವು ಕಾಂಗ್ರೆಸ್ಗೆ ಎಚ್ಚರಿಕೆ ಗಂಟೆಯಾಗಿದೆ. ಬಿಜೆಪಿ ಬಾಗಲಕೋಟೆ ಫಲಿತಾಂಶದಿಂದ ಪಾಠ ಕಲಿಯಬೇಕಿದೆ. ಉಪಚುನಾವಣೆಯ ಸೋಲು-ಗೆಲುವು ಭವಿಷ್ಯದ ರಾಜಕೀಯದಲ್ಲಿ ಪರಿಣಾಮ ಬೀರಲಿದೆ. ಅದಕ್ಕು ಮುನ್ನ ಕಾಂಗ್ರೆಸ್ ಗೆಲ್ಲಲು, ಬಿಜೆಪಿ ಸೋಲು ಪ್ರಮುಖ ಕಾರಣವೇನು, ಮುಖ್ಯಾಂಶಗಳು, ಸಂಕ್ಷಿಪ್ತ ವಿಶ್ಲೇಷಣೆ ಇಲ್ಲಿದೆ.
ಕಾಂಗ್ರೆಸ್ ಹಿರಿಯ ನಾಯಕ, ಶಾಸಕ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಮತ್ತು ಕಾಂಗ್ರೆಸ್ ನಾಯಕ ಎಚ್.ವೈ. ಮೇಟಿ ನಿಧನದಿಂದ ಉಪಚುನಾವಣೆ ಅನಿವಾರ್ಯವಾಯಿತು. ಬಿಜೆಪಿಗೆ ಮತ್ತೆರಡು ಕ್ಷೇತ್ರಗಳನ್ನು ತಮ್ಮದಾಗಿಸಿಕೊಳ್ಳುವ ಅವಕಾಶವಿದ್ದರೂ ಪರಾಭವಗೊಂಡಿತು. ಅವು ಮತ್ತೆ ಕಾಂಗ್ರೆಸ್ ತೆಕ್ಕೆಗೆ ಸೇರಿದವು.

ತಂದೆ ಎಚ್.ವೈ ಮೇಟಿ ವಿರುದ್ಧ ಸೋತಿದ್ದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಪುತ್ರ ಉಮೇಶ್ ಮೇಟಿ ವಿರುದ್ಧವು ಪರಾಭವಗೊಂಡರು. 2023ರ ಸೋಲಿನಿಂದ ಎಚ್ಚೆತ್ತುಕೊಂಡಿದ್ದರೆ ಬಾಲಗಕೋಟೆಯಲ್ಲಿ ಗೆಲ್ಲಬಹುದಿತ್ತು. ದಾವಣಗೆರೆಯಲ್ಲಿ ಕೇವಲ 5000 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಗೆದಿದ್ದಾರೆ. ಇಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ (SDPI) ಪ್ರಬಲ ಪಕ್ಷವಾಗಿ ಹೊರ ಹೊಮ್ಮಿದೆ. ಈ ಮೂಲಕ ದಾವಣಗೆರೆಯಲ್ಲಿ ಅಲ್ಪಸಂಖ್ಯಾತ ಮತಗಳ ವಿಭಜನೆ ಆಗಿದ್ದು, ಕಾಂಗ್ರೆಸ್ಗೆ ಎಚ್ಚರಿಕೆ ಸಂದೇಶ ರವಾನಿಸಿದಂತಾಗಿದೆ.
ದಾವಣಗೆರೆಯಲ್ಲಿ ಅಲ್ಪಸಂಖ್ಯಾತರು ನೀರ್ಣಾಯಕ, ಬಿಜೆಪಿಗೆ ವರದಾನ
ಕಾಂಗ್ರೆಸ್ ಟಿಕೆಟ್ ಹಂಚಿಕೆ ಮತ್ತು ಅಲ್ಪಸಂಖ್ಯಾತರ ಬಂಡಾಯದಿಂದ ದಾವಣಗೆರೆ ದಕ್ಷಿಣ ಕ್ಷೇತ್ರ ಕೇಂದ್ರಬಿಂದುವಾಯಿತು. ಅಪ್ಪ ಸಚಿವ, ತಾಯಿ ಸಂಸದೆ, ತಾತ ದಶಕಗಳಿಂದ ರಾಜಕೀಯದಲ್ಲಿದ್ದರೂ ಸಹಿತ ಸಮರ್ಥ್ ಶಾಮನೂರಿಗೆ ಕಾಂಗ್ರೆಸ್ ಮಣೆ ಹಾಕಿದ್ದು ಮುಸ್ಲಿಂ ನಾಯಕರು ಮತ್ತು ಮತದಾರರ ಕಣ್ಣು ಕೆಂಪಾಗಿಸಿತು. ಮುಸ್ಲಿಂ ಸಮುದಾಯ ನೆಚ್ಚಿಕೊಳ್ಳುವ ಕಾಂಗ್ರೆಸ್ ಟಿಕೆಟ್ ನೀಡುವಾಗ ತಾರತಮ್ಯ ಮಾಡಿತು. ಇದರಿಂದ ಅಲ್ಪಸಂಖ್ಯಾತರ ಆಕ್ರೋಶದ ಕಟ್ಟೆಯೊಡೆಯಿತು. ಬಂಡಾಯವೆದ್ದ ನಾಯಕರನ್ನೂ ಪುಸಲಾಯಿ ಓಲೈಸಲಾಯಿತು.
ಇದೆಲ್ಲದರ ನಡುವೆ ಮುಸ್ಲಿಂ ಮತಗಳು, ಯುವ ಸಮೂಹ ವಿಭಜನೆಯಾಗಿ ನೇರ ನಿಷ್ಟುರವಾದ ಎಸ್ಡಿಪಿಐನತ್ತ ಮುಖ ಮಾಡಿದವು. ಇದರಿಂದ ಎಸ್ಡಿಪಿಐ 18,000 ಮತ ಪಡೆದು ಮೂರನೇ ದೊಡ್ಡ ಪಕ್ಷವಾಗಿ ಉದಯಿಸಿತು. ಮತಗಳು ಹರಿದು ಹಂಚಿದ್ದರಿಂದ ಬಿಜೆಪಿಗೆ ಕೊಂಚ ಲಾಭವಾಯಿತಾದರೂ ಗೆಲ್ಲಲಿಲ್ಲ. ಸಮರ್ಥ್ ಶಾಮನೂರು ಜಸ್ಟ್ ಪಾಸಾದರು. ಇದು ಮುಸ್ಲಿಂ ಮತ ಬ್ಯಾಂಕ್ ವಿಜಯನೆಯ ಸೂಚನೆಯಾಗಿದೆ. ಕಾಂಗ್ರೆಸ್ ನಡೆ, ನಿರ್ಧಾರಗಳು ಮುಸ್ಲಿಮರ ಒಲವು ಗಳಿಸುವಲ್ಲಿ ವಿಫಲವಾಗಿದ್ದು, ಭವಿಷ್ಯದಲ್ಲಿ ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಟಿಕೆಟ್ ನಿರಾಕರಿಸುವಾಗ ಚಿಂತಿಸುವಂತೆ ಮಾಡಿದೆ.
ಗೆದ್ದರೂ ಕಾಂಗ್ರೆಸ್ಗೆ ಆದ ಹಿನ್ನಡೆ ಏನು?
* ತಳಮಟ್ಟದಿಂದ ಸಂಘಟನೆಗೆ ಮುಂದಾಗದ ಕಾಂಗ್ರೆಸ್ ತನಗೆ ಅಲ್ಪಸಂಖ್ಯಾತರು ಮತಗಳಿವೆ ಎಂದು ನೆಚ್ಚಿಕೊಂಡಿತ್ತು. ಮುಸ್ಲಿಂ ನಾಯಕರಿಗೆ ಟಿಕೆಟ್ ನೀಡದೇ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದರಿಂದ ಉಪಚುನಾವಣೆಯಲ್ಲಿ ಬರಬೇಕಿದ್ದ ಇನ್ನಷ್ಟು ಮುಸ್ಲಿಂ ಮತಗಳು ಎಸ್ಡಿಪಿಐ ಪಾಲಾದವು.
* ಮತಗಳಿಕೆಗೆ ಮಾತ್ರವೇ ಅಲ್ಪಸಂಖ್ಯಾತರನ್ನು ಬಯಸುವ ಕಾಂಗ್ರೆಸ್ ಟಿಕೆಟ್ ನೀಡುವಾಗ ಕಡೆಗಣಿಸಿದ್ದಕ್ಕೆ ಮುಸ್ಲಿಮರಿಂದ ಅಸಮಾಧಾನ ಸ್ಪೋಟಕ್ಕೆ ಕಾರಣವಾಯಿತು.
* ಕಾಂಗ್ರೆಸ್ ದೂಷಿಸಲು ಕಾರಣಗಳಿದ್ದವು, ಪ್ರತಿಯಾಗಿ ಬಿಜೆಪಿ ಬೆಂಬಲಿಸಲು ಸೈದ್ಧಾಂತಿಕವಾಗಿ ಒಪ್ಪದ ಮುಸ್ಲಿಮರಿಗೆ ತಮ್ಮ ಪರ ಎಸ್ಡಿಪಿಐ ಇದೆ ಎಂಬ ಅಚಲ ವಿಶ್ವಾಸ ಹುಟ್ಟಿತು. ಇದು ಕಾಂಗ್ರೆಸ್ಗೆ ಪ್ರಮುಖ ಹಿನ್ನಡೆ ಎನ್ನಬಹುದು.
* ಕ್ಷೇತ್ರದ ಮುಸ್ಲಿಂ ಬಂಡಾಯ ಅಭ್ಯರ್ಥಿಗಳ ಪರ ಒಲವು ತೋರಿದ ನಾಯಕರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಸಿಎಂ, ಡಿಸಿಎಂ ಎಚ್ಚರಿಕೆ ನೀಡಿದ್ದು ಕಾಂಗ್ರೆಸ್ಗೆ ಮುಳುವಾಯಿತು. ಮುಂದಿನ ದಿನಗಳಲ್ಲಿ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದ್ದು, ಅಹಿಂದ ಮತ ಒಡೆದರೆ ಅದು ಬಿಜೆಪಿಗೆ ವರದಾನವಾಗಲಿದೆ.
* ಎಸ್ಡಿಪಿಐ ಗಟ್ಟಿಯಾದಷ್ಟು ಕಾಂಗ್ರೆಸ್ ಮತಗಳು ಒಡೆಯುತ್ತವೆ. ಇದು ಬಿಜೆಪಿಗೂ ವರದಾನವಾಗುತ್ತದೆ. ಮತ್ತೊಂದೆಡೆ ಕಾಂಗ್ರೆಸ್ ಗೆಲುವಿಗೂ ತೊಡಕಾಗುತ್ತದೆ. ಭವಿಷ್ಯದಲ್ಲಿ ಬಿಜೆಪಿ ಎದುರಿಸುವ ಜೊತೆಗೆ ಎಸ್ಡಿಪಿಐ ಎದುರಿಸುವ ಅನಿವಾರ್ಯತೆ ಎದುರಾಗಬಹುದು.
ಗೆಲುವು-ಸೋಲಿನ ಮತಗಳು
* ಸಮರ್ಥ್ ಶಾಮನೂರು- 68619 ಮತ (ಗೆಲುವು)
* ಶ್ರೀನಿವಾಸದಾಸ ಕರಿಯಪ್ಪ-63746 ಮತ (ಸೋಲು)
* ಎಸ್ಡಿಪಿಐ: 18484 ಮತ (ಮೂರನೇ ದೊಡ್ಡ ಪಕ್ಷ)
* ಕಾಂಗ್ರೆಸ್ ಗೆಲುವಿನ ಅಂತರ: ಕೇವಲ 5000 ಮತ
ಬಾಗಲಕೋಟೆಯಲ್ಲಿ ಬಿಜೆಪಿ ಸೋತಿದ್ದೇಕೆ?
ಬಾಗಲಕೋಟೆಯಲ್ಲಿ ಆಪ್ತ ಎಚ್.ವೈ.ಮೇಟಿ ಪುತ್ರನನ್ನು ಗೆಲ್ಲಿಸಿಕೊಂಡು ಬರುವಲ್ಲಿ ಸಿಎಂ ಸಿದ್ದರಾಮಯ್ಯ ರೂಪಿಸಿದ ರಣತಂತ್ರ ಕೈ ಹಿಡಿದಿದೆ. ಆಡಳಿತ ಪಕ್ಷಗಳ ತಂತ್ರಗಾರಿಕೆ ಭೇದಿಸುವಲ್ಲಿ, ಕಠಿಣ ಪರಿಶ್ರಮ ಹಾಕುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಎಚ್.ವೈ ಮೇಟಿ ನಿಧನ ಬಳಿಕ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಆಕ್ಟಿವ್ ಆಗಿದ್ದರು. ಅಹಿಂದ ಮತಗಳನ್ನು ಸೆಳೆಯುವಲ್ಲಿ ನಿರತರಾದರು. ಉಪಚುನಾವಣೆ ಘೋಷಣೆ ಬಳಿಕ ಆರ್.ಬಿ.ತಿಮ್ಮಾಪುರ ಜಾರಕಿಹೊಳಿ ಜೊತೆಗೆ ನಿಂತದ್ದು ಕಾಂಗ್ರೆಸ್ಗೆ ವರದಾನವಾಯಿತು. ಇನ್ನೂಂದೆ ಉಮೇಶ್ ಮೇಟಿ ಪರ ಕರ್ನಾಟಕ ಮಾತ್ರವಲ್ಲದೇ ದೆಹಲಿಮಟ್ಟದ ನಾಯಕರು ಪ್ರಚಾರ ನಡೆಸಿದ್ದು ಪ್ಲಸ್ ಆಯಿತು.
ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು 2023ರ ಸೋಲಿನಿಂದ ಪಾಠ ಕಲಿಯದೇ ಕ್ಷೇತ್ರದಲ್ಲಿ ಪ್ರಮುಖವಾಗಿರುವ ಮುಸ್ಲಿಂ ಮತಗಳು ಬೇಡವೆಂದು ಬಹಿರಂಗವಾಗಿ ಹೇಳಿದರು. ಚುನಾವಣೆ ಹೊತ್ತಲ್ಲಿ ಮಾತ್ರವೇ ಬಿಜೆಪಿ ಜನರ ಮುಂದೆ ಕಾಣಿಸಿತು. ಹಿಂದಿನ ಮೂರು ಉಪ ಚುಣಾವಣೆಯಲ್ಲಿನ ಸೋಲಿನ ಹೊರತಾಗಿ ರಣತಂತ್ರ ರೂಪಿಸುವಲ್ಲಿ ಸೋತಿತು. ಆಡಳಿತ ಪಕ್ಷದ ಪರವಾದ ಜನರ ಒಲವು ಇದೆಲ್ಲವು ಬಿಜೆಪಿ ಸೋಲಿಗೆ ಕಾರಣವಾದವು.
ಕಾಂಗ್ರೆಸ್ ಕೈ ಹಿಡಿದ ಅಂಶಗಳಿವು
* ಎಚ್.ವೈ. ಮೇಟಿ ನಿಧನ ಬೆನ್ನಲ್ಲೆ ಕಾಂಗ್ರೆಸ್ ಬಾಗಲಕೋಟೆಯಲ್ಲಿ ಸಕ್ರಿಯವಾಯಿತು. ಸಿಎಂ ಸೂಚನೆ ಮೇರೆಗೆ ಸಚಿವ ಸತೀಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಓಡಾಟ ನಡೆಸಿದರು. ಅಹಿಂದ ಮತಗಳನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾದರು.
* ಪ್ರಭಾವಿ ದಿ.ಎಚ್.ವೈ. ಮೇಟಿ ಜನರಿಗೆ ಮೊದಲಿನಿಂದಲೂ ಹತ್ತಿರವಾಗಿದ್ದರು. ಹೀಗಾಗಿ ಕ್ಷೇತ್ರದಲ್ಲಿ ಮೇಟಿ ಕುಟುಂಬದ ವರ್ಚಸ್ಸು ಇತ್ತು. ಅವರ ನಿಧನಾನಂತರ ಮಕ್ಕಳ ಮೇಲಿನ ಅನುಕಂಪ, ಸಹಾನುಭೂತಿ ಕಾಂಗ್ರೆಸ್ ಕೈ ಹಿಡಿಯಿತು.
* ಆಪ್ತನ ಪುತ್ರ ಉಮೇಶ್ ಮೇಟಿ ಪರ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಒಂದು ವಾರ ಕಾಲ ಕ್ಷೇತ್ರದಲ್ಲಿದ್ದುಕೊಂಡು ಪ್ರಚಾರ ನಡೆಸಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಆನೆ ಬಲ ಬಂದಂತಾಗಿತ್ತು.
* ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಗೃಹ ಸಚಿವ ಜಿ.ಪರಮೇಶ್ವರ, ಸಿಎಂ ಪುತ್ರ ಯತೀಂದ್ರ, ಸಚಿವರು, ಶಾಸಕರು ನಿರಂತರ ಪ್ರಚಾರ ನಡೆಸಿ ಮತದಾರರನ್ನು ಆಕರ್ಷಿಸುವಲ್ಲಿ ಸಫಲರಾದರು.
* ಕಾಂಗ್ರೆಸ್ ತಂದ 'ಶಕ್ತಿ' ಮತ್ತು 'ಗೃಹ ಲಕ್ಷ್ಮೀ' ಯೋಜನೆಗಳು ಮಹಿಳೆಯರನ್ನು ಇತರ ಪಕ್ಷಗಳತ್ತ ನೋಡದಂತೆ ಮಾಡಿತು. ಕ್ಷೇತ್ರದಲ್ಲಿ ನೀರ್ಣಾಯಕವಾದ ಮಹಿಳಾ ಮತಗಳನ್ನು ಸರ್ಕಾರ ಪರ ಒಲವು ಹೊಂದಿತ್ತು ಬಿಜಿಪಿ ಪರಾಭವಕ್ಕೆ ಮಹತ್ವದ ಕಾರಣವಾಯಿತು.
ಸೋಲು-ಗೆಲುವಿನ ಮತಗಳು
* ಉಮೇಶ್ ಮೇಟಿ: 98919 ಮತ (ಗೆಲುವು)
* ವೀರಣ್ಣ ಚರಂತಿಮಠ: 76587 ಮತ (ಸೋಲು)
* ಮತಗಳ ಅಂತರ: 22,867
* ನೋಟಾ ಮತ: 1458














Click it and Unblock the Notifications