ನವದೆಹಲಿ, ಏಪ್ರಿಲ್ 19: ಕೊರೊನಾ ಸೋಂಕಿಗೆ ರೆಮ್ಡೆಸಿವಿರ್ ಔಷಧ ಪರಿಣಾಮಕಾರಿ ಎನ್ನುತ್ತಿದ್ದಂತೆಯೇ ದೇಶದಲ್ಲಿ ಈ ಔಷಧಿಗೆ ಬೇಡಿಕೆ ಹೆಚ್ಚಾಗಿದೆ. ಹಲವು ರಾಜ್ಯಗಳಿಂದ ರೆಮ್ಡೆಸಿವಿರ್ಗೆ ಬೇಡಿಕೆ ಬಂದಿದ್ದು, ಅದನ್ನು ಪೂರೈಸಲು ಔಷಧ ಉತ್ಪಾದನೆಯನ್ನೂ ಅಧಿಕಗೊಳಿಸಲಾಗಿದೆ.
ಆದರೆ ಈ ರೆಮ್ಡೆಸಿವಿರ್ ಔಷಧ ಜೀವರಕ್ಷಕ ಔಷಧಿಯಲ್ಲ ಹಾಗೂ ಇದು ಸೋಂಕಿನಿಂದ ಸಂಭವಿಸುತ್ತಿರುವ ಸಾವಿನ ಪ್ರಮಾಣವನ್ನು ತಗ್ಗಿಸುವುದಿಲ್ಲ ಎಂದು ಕೇಂದ್ರ ಸ್ಪಷ್ಟನೆ ನೀಡಿದೆ.
ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ಮಾತ್ರ ಈ ಔಷಧವನ್ನು ನೀಡಲಾಗುತ್ತಿದೆ. ಉಸಿರಾಟದಲ್ಲಿ ಸಮಸ್ಯೆ ಕಂಡುಬಂದ ರೋಗಿಗಳಿಗೆ ಹೆಚ್ಚಾಗಿ ಇದನ್ನು ನೀಡಲಾಗುತ್ತಿದೆ ಎಂದು ತಿಳಿಸಿದೆ.
Advertisement
Advertisement
ಕೊರೊನಾಗೆ ರೆಮ್ಡೆಸಿವಿರ್ ಔಷಧಿಯನ್ನು ಹೆಚ್ಚೆಚ್ಚು ಬಳಸುತ್ತಿದ್ದು, ಈ ಬೆನ್ನಲ್ಲೇ ರೆಮ್ಡೆಸಿವಿರ್ ಸಾವಿನ ಸಂಖ್ಯೆಯನ್ನು ತಗ್ಗಿಸುವುದಾಗಿ ವಿಶ್ವದಲ್ಲಿನ ಯಾವುದೇ ಅಧ್ಯಯನ ಸಾಬೀತುಪಡಿಸಿಲ್ಲ ಎಂದು ಹೇಳಿದೆ.
"ಸೋಂಕು ಕಾಣಿಸಿಕೊಂಡ ಆರಂಭಿಕ ಹಂತದಲ್ಲಿ ಮಾತ್ರ ಈ ಔಷಧ ನೀಡಲಾಗುತ್ತದೆ. ಉಸಿರಾಟ ಸಮಸ್ಯೆ ಹಾಗೂ ಶ್ವಾಸಕೋಶಕ್ಕೆ ಹಾನಿಯಾಗಿದ್ದರೆ ಇದನ್ನು ನೀಡಲಾಗುತ್ತದೆ. ಬ್ರಿಟನ್ ಕೂಡ ಪ್ಯಾರಾಸಿಟಮಾಲ್, ಹೈಡ್ರೇಷನ್ ಹಾಗೂ ಮಲ್ಟಿ ವಿಟಮಿನ್ ಗಳಿರುವ ಔಷಧಿಗಳನ್ನು ಮಾತ್ರ ನೀಡುತ್ತಿದೆ" ಎಂದು ನವದೆಹಲಿಯ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.
ರೆಮ್ಡೆಸಿವಿರ್ ಸೋಂಕಿಗೆ ಮ್ಯಾಜಿಕ್ ಬುಲೆಟ್ ಅಲ್ಲ. ಇದನ್ನು ಜನರೇ ಸ್ವತಃ ಬಳಸುವಂತೆಯೂ ಇಲ್ಲ ಎಂದಿದ್ದಾರೆ.