MK Stalin: ಡಿಎಂಕೆ ಸ್ಟಾಲಿನ್ ಮಹತ್ವದ ನಿರ್ಧಾರ: ಟಿವಿಕೆ ಸರ್ಕಾರ ರಚನೆ ದಾರಿ ಸುಗಮ
ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಹರಸಾಹಸಪಡುತ್ತಿದ್ದ ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ, ನಟ ವಿಜಯ್ ಅವರು ಬಹುಮತ ಪಡೆಯಲು ಡಿಎಂಕೆ ಪಕ್ಷದ ಎಂ.ಕೆ. ಸ್ಟಾಲಿನ್ (MK Stalin) ಅವರೇ ದಾರಿ ಮಾಡಿಕೊಟ್ಟಿದ್ದಾರೆ. 'ಡಿಎಂಕೆ ಮಿತ್ರ ಪಕ್ಷಗಳು ಟಿವಿಕೆ ಬೆಂಬಲ ಮಾಡಲು ಸ್ವತಂತ್ರ'ವೆಂದು ತಿಳಿಸುವ ಮೂಲಕ ಸ್ಟಾಲಿನ್ ಜಾಣ ನಡೆ ಪ್ರದರ್ಶಿಸಿದ್ದಾರೆ. ಇದರ ಬೆನ್ನಲ್ಲೆ ಇಂದು ಗುರುವಾರವೇ ಟಿವಿಕೆ ಸರ್ಕಾರ ರಚನೆಗೆ ರಾಜ್ಯಪಾಲರು ಅನುಮತಿ ನೀಡುವ ಲಕ್ಷಣಗಳು ಕಂಡು ಬಂದಿವೆ.
ತಮಿಳುನಾಡು ಚುನಾವಣೆಯಲ್ಲಿ 107 ಸೀಟು ಗಳಿಸಿದ ಟಿವಿಕೆಗೆ ಬಹುಮತ ಸಾಬೀತು ಮಾಡಿ, ಸರ್ಕಾರ ರಚಿಸಲು ಒಟ್ಟು 118 ಸ್ಥಾನಗಳು ಬೇಕಾಗಿತ್ತು. ಅದರಲ್ಲಿ ಸಿವಿಕೆ, ಸಿಪಿಐ ಮತ್ತು ಕಾಂಗ್ರೆಸ್ ಬೆಂಬಲ ಸೇರಿ ಸಂಖ್ಯಾಬಲ 116ಕ್ಕೆ ಹೆಚ್ಚಾಗಿತ್ತು. ಇನ್ನೆರಡು ಸೀಟುಗಳ ಬೇಕಾಗಿತ್ತು. ಈ ನಡುವೆ ಆಡಳಿತ ಪಕ್ಷ ಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ 'ಮಿತ್ರ ಪಕ್ಷಗಳು ಟಿವಿಕೆಗೆ ಬೆಂಬಲ ಸೂಚಿಸಿದರೆ ನಾನು ಅಡ್ಡಿಪಡಿಸುವುದಿಲ್ಲ' ಎಂದು ಸ್ವತಃ ಸಿಎಂ ಎಂ.ಕೆ. ಸ್ಟಾಲಿನ್ ಅವರೇ ಸ್ಪಷ್ಟಪಡಿಸಿದ್ದಾರೆ.

ಎಡ ಪಕ್ಷಗಳು ವಿಜಯ್ ಬೆಂಬಲಿಸುವುದಾದರೆ ಅಭ್ಯಂತರವಿಲ್ಲ ಎಂದಿರುವ ಸ್ಟಾಲಿನ್ ಅವರು, ನಾವು ಯಾರ ನಿರ್ಧಾರವನ್ನು ಅಡ್ಡಿಪಡಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಮಿತ್ರಪಕ್ಷಗಳ ಒತ್ತಾಯಕ್ಕೆ ಮೃಧು ಧೋರಣೆ ಅನುಸರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಎಂ.ಕೆ.ಸ್ಟಾಲಿನ್ ಹೇಳಿಕೆ ಬಳಿಕ ಡಿಎಂಕೆ ಜೊತೆ ಕೈಜೋಡಿಸಿದ್ದ ಪಕ್ಷಗಳ ಪೈಕಿ ಇಬ್ಬರು ಅಥವಾ ಅದಕ್ಕೂ ಹಚ್ಚಿನ ಸಂಖ್ಯೆ ಶಾಸಕರು ಟಿವಿಕೆಗೆ ಬೆಂಬಲಿಸುವುದು ಬಹುತೇಕ ಖಚಿತವಾಗಿದೆ. ಇದು ಅಧಿಕೃತವಾಗಿ ಘೋಷಣೆ ಆಗುತ್ತಿದ್ದಂತೆ ರಾಜ್ಯಪಾಲರು ವಿಜಯ್ ಅವರಿಗೆ ಸರ್ಕಾರ ರಚನೆಗೆ ಅನುಮತಿ ನೀಡಲಿದ್ದಾರೆ. ಪದಗ್ರಹಣ ನಾಳೆ ಶುಕ್ರವಾರ (ಮೇ 8) ನಡೆಯುವ ಸಾಧ್ಯತೆ ಇದೆ.
ಟವಿಕೆ ಬೆಂಬಲಿಸಲು ಅಡ್ಡಿ ಮಾಡಲ್ಲ: ಸ್ಟಾಲಿನ್ ಹೀಗಂದಿದ್ದೇಕೆ?
ಈಗಾಗಲೇ ಡಿಎಂಕೆ ಜೊತೆಗಿನ ಮೈತ್ರಿಯಿಂದ ಕಾಂಗ್ರೆಸ್ 23 ವರ್ಷದ ಸ್ನೇಹ ಸಂಬಂಧವನ್ನು ಮುರಿದು ಹೊರ ಬಂದಿದೆ. ಟಿವಿಕೆಗೆ ಬಹಿರಂಗವಾಗಿ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದೆ. ಇದೀಗ ಡಿಎಂಕೆ ಮಿತ್ರಗಳು ಹೊರ ಬರಲು ಅವಕಾಶ ಸಿಕ್ಕಂತಾಗಿದೆ. ಹೇಗೂ ಡಿಎಂಕೆ ಪಕ್ಷ ಸೋತಿದೆ. ಆಡಳಿತ ವಿರೋಧಿ ಅಲೆ ಎದುರಿಸಿದೆ. ಹೀಗಿದ್ದಾಗ ತಮ್ಮ ಶಾಸಕರಿಗೆ ಒತ್ತಡ ಹೇರಿ ಪಕ್ಷದೊಳಗೆ ಇರುವಂತೆ ತಾಕೀತು ಮಾಡುವ ಬದಲು ಅವರಿಷ್ಟದಂತೆ ಬಿಟ್ಟರೆ ಜನರಿಂದ ಒಂದಷ್ಟು ಸಹಾನುಭೂತಿ ಪಡೆಯುವ ಆಲೋಚನೆಯಲ್ಲಿ ಎಂ.ಕೆ.ಸ್ಟಾಲಿನ್ ಅವರು ಡಿಎಂಕೆ ಮಿತ್ರ ಪಕ್ಷಗಳು ಯಾರನ್ನಾದರೂ ಬೆಂಬಲಿಸಲು ಸ್ವತಂತ್ರರೆಂದು ಘೋಷಿಸಿದ್ದಾರೆಂದು ರಾಜ್ಯದ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಬಿಜೆಪಿಗೆ ವಿಜಯ್ ಸಿಎಂ ಆಗುವುದು ಇಷ್ಟವಿಲ್ಲ
ಟಿವಿಕೆ ಬೆಂಬಲಿತ ಕಾಂಗ್ರೆಸ್ ಬಿಜೆಪಿ ವಿರುದ್ಧ ಹರಿಹಾಯ್ದಿದೆ. ಬಿಜೆಪಿ ನಾಯಕರಿಗೆ ತಮಿಳುನಾಡಿನಲ್ಲಿ ವಿಜಯ್ ಅವರು ಮುಖ್ಯಮಂತ್ರಿ ಆಗುವುದನ್ನು ಸಹಿಸಲಾಗುತ್ತಿಲ್ಲ. ಹೀಗಾಗಿಯೇ ಬಿಜೆಪಿ ರಾಜ್ಯಪಾಲರ ಮುಖೇನ ವಿಜಯ್ ಅವರು ಸಿಎಂ ಆಗುವುದನ್ನು ತಪ್ಪಿಸಲು ಮುಂದಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.













Click it and Unblock the Notifications