ಭದ್ರಾ ಜಲಾಶಯದ ನೀರು ಬಿಡುಗಡೆ ಬಗ್ಗೆ ದಾವಣಗೆರೆ ಜಿಲ್ಲೆ ಉಸ್ತುವಾರಿ ಸಚಿವರು ಹೇಳಿದ್ದು ಹೀಗೆ
ದಾವಣಗೆರೆ, ಜುಲೈ, 31: ದೇವರ ಕೃಪೆಯಿಂದ ಸರಿಯಾದ ಸಮಯದಲ್ಲಿ ಮಳೆಯಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಆಗಸ್ಟ್ ಮೊದಲ ವಾರದಲ್ಲಿ ಕಾಡಾ ಸಮಿತಿ ಸಭೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಸಭೆಯಲ್ಲಿ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡುವ ದಿನಾಂಕ ನಿಗದಿಪಡಿಸಲಾಗುವುದು ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಭದ್ರಾ ಜಲಾಶಯದಲ್ಲಿ ಪ್ರಸ್ತುತ 161.6 ಅಡಿ ನೀರು ಇದ್ದು, ಶೀಘ್ರದಲ್ಲಿಯೇ ನೀರಾವರಿ ಸಲಹಾ ಸಮಿತಿ ರಚಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ಅಲ್ಲದೆ ಮುಂಗಾರು ಆರಂಭದಲ್ಲಿ ಮಳೆ ವಿಳಂಬವಾಯಿತಾದರೂ ನಂತರ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಬಂದು ಜಲಾಶಯಕ್ಕೆ ಉತ್ತಮ ನೀರು ಹರಿದುಬಂದಿದೆ. ವಾಡಿಕೆಯಂತೆ 163 ಅಡಿ ನೀರು ಜಲಾಶಯದಲ್ಲಿದ್ದರೆ ಮಳೆಗಾಲದಲ್ಲಿ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ ಎಂದರು.

ಈಗಾಗಲೇ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆರಂಭಗೊಂಡಿದ್ದು, ನೀರಿನ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಕಾಡಾ ಸಮಿತಿ ಸಭೆ ಕರೆದು ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅನ್ನದಾತರ ಮುಖದಲ್ಲಿ ಮಂದಹಾಸ
ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕ್ಷೀಣಿಸಿದ್ದರೂ ಭದ್ರಾ ಡ್ಯಾಂ ಈಗ 162 ಅಡಿ ದಾಟಿದೆ. ಭರ್ತಿಯಾಗಲು ಇನ್ನೂ 23.8 ಅಡಿ ನೀರು ಬೇಕು. ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿರುವುದು ಕಡಿಮೆಯಾಗಿದ್ದು, ಒಳಹರಿವಿನ ಪ್ರಮಾಣವೂ ಗಣನೀಯವಾಗಿ ಕಡಿಮೆ ಆಗಿದೆ. ಆದರೂ ಕಳೆದ 8 ದಿನಗಳಲ್ಲಿ 20 ಅಡಿಗೂ ಹೆಚ್ಚು ನೀರು ಬಂದಿರುವುದು ರೈತರ ಖುಷಿಗೆ ಕಾರಣವಾಗಿದೆ.

ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಯಿಂದ ಭದ್ರಾ ಡ್ಯಾಂಗೆ 20.6 ಅಡಿ ನೀರು ಹರಿದುಬಂದಿತ್ತು. ಆದರೆ ಕಳೆದ ಮೂರು ದಿನಗಳಿಂದ ಮಳೆ ಕುಂಠಿತಗೊಂಡಿದ್ದರೂ 162ರ ಅಡಿ ದಾಟುವ ಮೂಲಕ ಭದ್ರಾ ಅಚ್ಚುಕಟ್ಟುದಾರರ ಸಂತೋಷಕ್ಕೆ ಕಾರಣವಾಗಿದೆ. 163 ಅಡಿ ನೀರು ಸಂಗ್ರಹವಾದ ಬಳಿಕ ಭದ್ರಾ ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೆ ನೀರು ಹರಿಸುವುದಾಗಿ ದಾವಣಗೆರೆ ಜಿಲ್ಲಾಡಳಿತ ಭರವಸೆ ನೀಡಿತ್ತು. ಇನ್ನು 163 ಅಡಿ ತಲುಪುವ ಸನಿಹದಲ್ಲಿದ್ದು, ಒಳಹರಿವು ಸ್ವಲ್ಪ ಮಟ್ಟಿಗೆ ಹೆಚ್ಚಾದರೆ ಮಂಗಳವಾರವೇ 163 ಅಡಿ ದಾಟಲಿದೆ.
ಭಾನುವಾರ ಬೆಳಿಗ್ಗೆ 8394 ಕ್ಯೂಸೆಕ್ ಒಳಹರಿವಿದ್ದ ನೀರು ಇಂದು ಬೆಳಗ್ಗೆ 6 ಗಂಟೆಯ ಹೊತ್ತಿಗೆ 7550 ಅಡಿಗೆ ಕುಸಿದಿದೆ. ಈ ಮೂಲಕ ಮಂಗಳವಾರವೇ 163 ಅಡಿ ತಲುಪುವ ಸಾಧ್ಯತೆ ಕಡಿಮೆ ಇದೆ. ಇಂದು ಮಳೆ ಜೋರಾದರೆ ಈ ಮಟ್ಟ ಮೀರಲಿದೆ. ಆದರೆ ಕೇವಲ 7550 ಕ್ಯೂಸೆಕ್ ಒಳಹರಿವು ನೀರಿದ್ದು, ಹೆಚ್ಚು ಕಡಿಮೆ 163ರ ಆಸುಪಾಸು ಬರಲಿದೆ. ಈ ಹಿನ್ನೆಲೆಯಲ್ಲಿ ನಾಲೆಯಿಂದ ನೀರು ಬಿಡುಗಡೆ ಮಾಡುವ ಸಮಯವೂ ಹತ್ತಿರವಾಗಲಿದೆ.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಅವರು ಸಹ ಈಗಾಗಲೇ ಕಾಡಾ ಸಭೆಯನ್ನು ಆಗಸ್ಟ್ ಮೊದಲ ವಾರದಲ್ಲಿ ನಡೆಸುವುದಾಗಿ ಹೇಳಿದ್ದಾರೆ. ಅಷ್ಟೊತ್ತಿಗೆ ಡ್ಯಾಂನ ನೀರಿನ ಮಟ್ಟವೂ 163 ದಾಟಿರಲಿದೆ. ಈ ಮೂಲಕ ಆಗಸ್ಟ್ ಎರಡನೇ ವಾರದಲ್ಲಿ ನಾಲೆಗಳಿಗೆ ನೀರು ಹರಿಸಲಾಗುವುದು. ಮಳೆ ಜಾಸ್ತಿಯಾದರೆ ಅದಕ್ಕೂ ಮುನ್ನ ನೀರು ಹರಿಸುವ ಸಾಧ್ಯತೆಯೂ ಹೆಚ್ಚಿದೆ ಎಂದು ಭದ್ರಾ ಡ್ಯಾಂ ಅಥಾರಿಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಳಹರಿವಿನ ಪ್ರಮಾಣ ಎಷ್ಟಿದೆ?
ಭದ್ರಾ ಜಲಾನಯನ ಪ್ರದೇಶದಲ್ಲಿ ಕಳೆದ 5 ದಿನಗಳಿಂದ ಮಳೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಡ್ಯಾಂಗೆ ಬರುತ್ತಿರುವ ನೀರಿನ ಪ್ರಮಾಣವೂ ದಿನಕಳೆದಂತೆ ಕಡಿಮೆಯಾಗುತ್ತಿದೆ. ಭದ್ರಾ ಡ್ಯಾಂ ತುಂಬಲು ಇನ್ನೂ 23.8 ಅಡಿ ನೀರು ಬೇಕು. ಶನಿವಾರ 13 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಒಳಹರಿವು ಇತ್ತ ಇದ್ದರಿಂದ ಸ್ವಲ್ಪ ಮಟ್ಟಿಗೆ ಭದ್ರಾ ಡ್ಯಾಂ ನೀರಿನ ಮಟ್ಟ ಏರಿಕೆಯಾಗಿತ್ತು. ಆದ್ರೆ, 8394 ಕ್ಯೂಸೆಕ್ ಗೆ ಒಳಹರಿವು ಇಳಿದಿದ್ದು, ಮತ್ತೆ ಇಂದು ಒಳಹರಿವಿನ ಪ್ರಮಾಣ 7550 ಕ್ಯೂಸೆಕ್ ಮಾತ್ರ ಇದೆ.
ವರುಣನ ಆರ್ಭಟ ಕಡಿಮೆಯಾದ ಪರಿಣಾಮ ಹಳ್ಳ ಕೊಳ್ಳಗಳು, ಕೆರೆ ಕಟ್ಟೆಗಳಿಗೆ ಹರಿಯುತ್ತಿದ್ದ ನೀರು ಕಡಿಮೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ ಸೇರಿದಂತೆ ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದು ಇಳಿಕೆಯಾಗಿದೆ. ಮತ್ತೊಂದೆಡೆ ಹೊರ ಹರಿವು 189 ಕ್ಯೂಸೆಕ್ ಇದೆ.
ಕಳೆದ ವರ್ಷ ಇಷ್ಟೊತ್ತಿಗೆ ಡ್ಯಾಂ ಬಹುತೇಕ ತುಂಬಿ ತುಳುಕುತಿತ್ತು. ಮಳೆ ಉತ್ತಮವಾಗಿ ಸುರಿದರೆ ಮತ್ತಷ್ಟು ನೀರು ಅಣೆಕಟ್ಟಿಗೆ ಬರುತ್ತದೆ. ಸದ್ಯದ ಮಾಹಿತಿ ಪ್ರಕಾರ ಭದ್ರಾ ಜಲಾನಯನ ಪ್ರದೇಶದಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದೆ. ಆದರೆ ಮಳೆ ಪ್ರಮಾಣ ತುಂಬಾನೇ ಕಡಿಮೆಯಾಗಿದೆ.












Click it and Unblock the Notifications