ಒಣಗಿದ ಕೆಆರ್ಎಸ್, ಆತಂಕದಲ್ಲಿ ಮಂಡ್ಯದ ಅನ್ನದಾತ
ಮೈಸೂರು, ಏಪ್ರಿಲ್ 20 : ಕೃಷ್ಣರಾಜ ಸಾಗರ ಜಲಾಶಯದಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ನೀರಿನ ಮಟ್ಟ 80.82 (ಗರಿಷ್ಠ 124.80) ಅಡಿಗೆ ಕುಸಿದಿದೆ. ಪರಿಣಾಮ ಈ ಬಾರಿ ರೈತರ ಜಮೀನಿಗೆ ಕೆಆರ್ಎಸ್ ನೀರು ಹರಿಸುವುದು ಸಾಧ್ಯವಿಲ್ಲದಾಗಿದೆ.
ಪ್ರತಿವರ್ಷ ಬೇಸಿಗೆ ಬೆಳೆಯಾಗಿ ಕಬ್ಬು, ಭತ್ತ ಬೆಳೆಯುತ್ತಿದ್ದ ಮಂಡ್ಯದ ರೈತ, ಈ ಬಾರಿ ಆಕಾಶವನ್ನು ದಿಟ್ಟಿಸುವಂತಾಗಿದೆ. ಮಾಡಿದ ಸಾಲಕ್ಕೆ ಬಡ್ಡಿ ಬೆಳೆಯುತ್ತಿದ್ದು, ಬೆಳೆ ಬೆಳೆದು ಒಂದಷ್ಟು ಆರ್ಥಿಕ ಸಮಸ್ಯೆಯನ್ನು ನೀಗಿಸಿಕೊಳ್ಳಬಹುದೆಂದು ನಂಬಿದ್ದವರಿಗೆ ನಿರಾಸೆಯಾಗಿದೆ.
ಮತ್ತೊಂದೆಡೆ ಕಬ್ಬು ಕಟಾವಿಗೆ ಬಂದಿದ್ದರೂ ಮೈಷುಗರ್ ಕಾರ್ಖಾನೆ ಆರಂಭವಾಗದ ಕಾರಣ ರೈತರು ಆತಂಕಕ್ಕೀಡಾಗಿದ್ದಾರೆ. ಕೆಆರ್ಎಸ್ ನೀರನ್ನು ನಂಬಿ ಕೃಷಿ ಮಾಡುತ್ತಿದ್ದ ರೈತರು ಈ ಬಾರಿ ಭತ್ತ, ಕಬ್ಬು ಬೆಳೆಯಲು ಸಾಧ್ಯವಾಗದ ಕಾರಣ ಪರ್ಯಾಯ ಬೆಳೆಯತ್ತ ಮುಖಮಾಡಿದ್ದಾರೆ. [ಕೆಆರ್ ಎಸ್ ಹಿನ್ನೀರಿನಲ್ಲಿ ಗತ ವರ್ಷಗಳ ದೇವಾಲಯಗಳು ಪ್ರತ್ಯಕ್ಷ!]

ಕೆಲವರು ಬೋರ್ವೆಲ್ ಬಳಸಿ ಕೃಷಿ ಕೈಗೊಂಡಿದ್ದಾರೆ. ಈಗಾಗಲೇ ಮಂಡ್ಯ ಜಿಲ್ಲೆಯ ನೂರಾರು ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಾರಿಯ ಬರಗಾಲ ಇನ್ನೆಷ್ಟು ಮಂದಿಯ ಜೀವವನ್ನು ಬಲಿ ಪಡೆಯಲಿದೆಯೋ ಎಂಬ ಆತಂಕ ಆರಂಭವಾಗಿದೆ.
ಸಾಲ ಮಾಡಿಕೊಂಡಿರುವ ರೈತನ ಸ್ಥಿತಿ ಕೇಳುವವರೇ ಇಲ್ಲದಾಗಿದೆ. ಮಳೆ ಬಂದು ಬೆಳೆ ಬೆಳೆದು ಸಾಲ ತೀರಿಸಬಹುದೆಂದು ನಂಬಿದ್ದ ರೈತನಲ್ಲಿ ಆ ಭರವಸೆ ಹುಸಿಯಾಗಿದೆ. [ಬಿರು ಬೇಸಿಗೆ, ಆಟದ ಮೈದಾನವಾದ ಕೆಆರ್ ಎಸ್ ಜಲಾಶಯ!]
ವಾಣಿಜ್ಯ ಬೆಳೆಯಾದ ಕಬ್ಬನ್ನು ಬೆಳೆಯುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸಬಹುದೆಂದು ನಂಬಿದ್ದ ರೈತರು ಲಕ್ಷಾಂತರ ರೂ ಸಾಲಮಾಡಿ ಕಬ್ಬು ಬೆಳೆಯುತ್ತಾ ಬಂದಿದ್ದರೂ, ಸಾಲ ಮಾತ್ರ ತೀರುತ್ತಲೇ ಇಲ್ಲ. ನೀರಿನಾಶ್ರಯದ ಬೆಳೆಗಳನ್ನೇ ಬೆಳೆಯುತ್ತಿದ್ದ ರೈತರು ಅದರ ಬದಲಿಗೆ ಇತರೆ ಆಹಾರ ಬೆಳೆಗಳನ್ನು ಬೆಳೆಯುತ್ತ ಮನಸ್ಸು ಮಾಡುವುದು ಅನಿವಾರ್ಯವಾಗಿದೆ.
ಕೃಷಿಯನ್ನೇ ನಂಬಿ ಬದುಕುವ ರೈತರು ಧೃತಿಗೆಡದೆ ನೀರನ್ನು ಹೆಚ್ಚು ಆಶ್ರಯಿಸದ ಬೆಳೆಗಳನ್ನು ಬೆಳೆಯಬೇಕಾಗಿದೆ. ಸರ್ಕಾರ ಕೂಡ ರೈತರ ನೆರವಿಗೆ ಧಾವಿಸಬೇಕಿದೆ. ಸರಕಾರ ಕೂಡಲೆ ರೈತರ ನೆರವಿಗೆ ಧಾವಿಸದಿದ್ದರೆ ಮುಂದಾಗುವ ಅನಾಹುತಕ್ಕೆ ಸರಕಾರವೂ ಪರೋಕ್ಷವಾಗಿ ಕಾರಣವಾಗುತ್ತದೆ.











Click it and Unblock the Notifications