ಗಗನಕ್ಕೇರಿದ ತರಕಾರಿಗಳ ಬೆಲೆ; ಧಾರವಾಡ ಜಿಲ್ಲೆಯಲ್ಲಿ ತರಕಾರಿಗಳ ಬೆಲೆ ಎಷ್ಟಿದೆ?
ಧಾರವಾಡ, ಸೆಪ್ಟೆಂಬರ್, 14: ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಮಳೆರಾಯ ಅಬ್ಬರಿಸುತ್ತಲೇ ಇದ್ದಾನೆ. ಮಳೆ, ಶೀತ ಗಾಳಿ ಹೆಚ್ಚಾದ ಪರಿಣಾಮ ಮಾರುಕಟ್ಟೆಗೆ ತರಕಾರಿಗಳೇ ಸರಬರಾಜಾಗುತ್ತಿಲ್ಲ. ಇದರಿಂದ ಇದ್ದ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ತರಕಾರಿ ಸರಬರಾಜು ಕಡಿಮೆ ಆಗಿದೆ. ಭಾರಿ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿ ಜಮೀನುಗಳಲ್ಲಿಯೇ ತರಕಾರಿ ಕೊಳೆಯುತ್ತಿದೆ. ಹೀಗಾಗಿ ಬೇರೆ ಬೇರೆ ಜಿಲ್ಲೆಗಳಿಂದಲೂ ತರಕಾರಿ ಸರಿಯಾಗಿ ಸರಬರಾಜಾಗುತ್ತಿಲ್ಲ. ಆದ ಕಾರಣ ಇದೀಗ ತರಕಾರಿ ಬೆಲೆ ಏರಿಕೆ ಆಗಿದೆ. ಕೆಲವೆಡೆ ಬೆಳೆಗಳಿಗೆ ರೋಗಗಳು ತಗುಲಿ ನಾಶವಾದರೆ, ಮತ್ತೊಂದೆಡೆ ಬೆಳೆಗಳು ಮಳೆ ನೀರಿನಲ್ಲಿ ಜಲಾವೃತವಾಗಿವೆ.
ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹೊಸದಾಗಿ ತರಕಾರಿ ಬೆಳೆ ನಾಟಿ ಮಾಡಲು ಸಾಧ್ಯ ಆಗುತ್ತಿಲ್ಲ. ಹೀಗಾಗಿ ಮಾರುಕಟ್ಟೆಗೆ ಅಗತ್ಯವಾದಷ್ಟು ತರಕಾರಿ ಸರಬರಾಜಾಗುತ್ತಿಲ್ಲ. ಇದರಿಂದ ತರಕಾರಿ ಬೆಲೆ ಏರಿಕೆ ಆಗಿದೆ. ರೈತರಿಗೆ ಹೆಚ್ಚಿನ ಪ್ರಯೋಜನವಾಗದೇ, ಹೆಚ್ಚು ನಷ್ಟ ಅನುಭವಿಸುವಂತಾಗಿದೆ. ಬೆಳೆದ ಬೆಳೆಯೆಲ್ಲ ನೀರುಪಾಲಾಗಿದ್ದು, ಹೆಚ್ಚಿನ ಬೆಲೆ ಸಿಕ್ಕರೂ ಕೂಡ ಲಾಭ ಮಾತ್ರ ಮರೀಚಿಕೆ ಆಗಿದೆ. ರೈತರು ಇರುವ ಬೆಳೆಯನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಹೊರೆ ಆಗುತ್ತಿದೆ.

ಗಗನಕ್ಕೇರಿದ ತರಕಾರಿ ಬೆಲೆ
ಹೆಚ್ಚಿನ ಹಣ ಕೊಟ್ಟರೂ ಕೂಡ, ಮಾರುಕಟ್ಟೆಯಲ್ಲಿ ಗುಣಮಟ್ಟದ ತರಕಾರಿ ಸಿಗುತ್ತಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಕಡಿಮೆ ಗುಣಮಟ್ಟದ ತರಕಾರಿಯನ್ನು ಅತಿ ಹೆಚ್ಚು ಹಣ ಕೊಟ್ಟು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಗ್ರಾಹಕರು ತರಕಾರಿ ಖರಿದಿಸಲು ಹಿಂದುಮುಂದು ನೋಡುತ್ತಿದ್ದಾರೆ. ಮತ್ತೊಂದೆಡೆ ಮಳೆ ನಡುವೆಯೂ ತರಕಾರಿಗಳನ್ನು ಮಾರುಕಟ್ಟೆಗೆ ತರುತ್ತಿರುವ ರೈತರಿಗೂ ಹೆಚ್ಚಿನ ಲಾಭ ಸಿಗದೆ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ.

ಯಾವ್ಯಾವ ತರಕಾರಿ ಬೆಲೆ ಎಷ್ಟಿದೆ?
ಟೊಮ್ಯಾಟೋ ಬೆಲೆ ಏರಿಕೆ ಜೊತೆಗೆ ಇತರ ತರಕಾರಿಗಳ ಬೆಲೆ ದುಬಾರಿ ಆಗಿವೆ. ಕೆ.ಜಿ. ಬೀನ್ಸ್ 60 ರೂಪಾಯಿ ದಾಟಿದೆ. ಬದನೆಕಾಯಿ 80 ರೂಪಾಯಿ, ಟೊಮ್ಯಾಟೋ, 80-100 ರೂಪಾಯಿಗೆ ಏರಿಕೆ ಆಗಿದೆ. ಜವಳಿಕಾಯಿ (ಗೋರಿಕಾಯಿ) 80 ರೂಪಾಯಿ, ಹೀರೆಕಾಯಿ 80 ರೂಪಾಯಿ., ಬೆಂಡೆಕಾಯಿ 60 ರೂಪಾಯಿ, ಈರುಳ್ಳಿ 20-30 ರೂಪಾಯಿ ಇದ್ದರೆ, ಸೌತೆಕಾಯಿ-80ರೂಪಾಯಿ ಇದೆ. ಇನ್ನು ಒಂದು ಕಟ್ಟು ಕೋತಂಬರಿ ಸೊಪ್ಪಿಗೆ(ಕಟ್ಟು) 10ರೂಪಾಯಿ, ಪಾಲಕ್ 10 ರೂಪಾಯಿ, ಒಂದು ಲಿಂಬೆ ಹಣ್ಣನ್ನು 10 ರೂಪಾಯಿಗೆ ಮಾರಲಾಗುತ್ತಿದೆ. ಮಳೆ ಹೀಗೆ ಮುಂದುವರೆದರೆ ತರಕಾರಿ ಬೆಲೆ ಮತ್ತಷ್ಟು ಏರಲಿದೆ ಎನ್ನುನ ಆತಂಕ ಗ್ರಾಹಕರದ್ದಾಗಿದೆ.

ಜಿಲ್ಲೆಯಲ್ಲಿ ಮೋಡ ಕವಿದ ವಾತವರಣ
ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ಮೂರು ವಾರಗಳು ಕಳೆದರೂ ಸೂರ್ಯನ ದರ್ಶನವೇ ಆಗಿಲ್ಲ. ಇನ್ನು ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಲೇ ಇದ್ದಾನೆ. ಹೀಗೆ ಮಳೆ ಮುಂದುವರೆದರೆ ಮತ್ತಷ್ಟು ಪ್ರಮಾಣದಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳಿಗೆ ಸಮಸ್ಯೆ ಆಗಲಿದೆ ಎಂದು ವ್ಯಾಪಾರಿಗಳು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ರೈತನ ಕಣ್ಣಲ್ಲಿ ಕಣ್ಣೀರು ತರಿಸಿದ ಈರುಳ್ಳಿ
ಧಾರಕಾರ ಮಳೆಯಿಂದ ತೇವಾಂಶ ಹೆಚ್ಚಿ ಈರುಳ್ಳಿ ಕೊಳೆಯುತ್ತಿವೆ. ತಾಡಪಾಲನ್ನು ಹೊದಿಸಿದರೂ ಕೂಡ ಗಾಳಿ ಆಡದೆ ಈರುಳ್ಳಿಗಳು ಕೊಳೆಯುತ್ತಿವೆ. ಹೀಗಾಗಿ ಈರುಳ್ಳಿ ಬೆಳೆದ ರೈತರು ಏನು ಮಾಡುವುದು ಎನ್ನುವ ಚಿಂತೆಯಲ್ಲಿದ್ದಾರೆ. ಈರುಳ್ಳಿ ಸಂಗ್ರಹಿಸಿದ ಕೂಡಲೇ ಅವುಗಳನ್ನು ದೊಡ್ಡ, ಮಧ್ಯಮ, ಚಿಕ್ಕ ಗಡ್ಡೆಗಳನ್ನಾಗಿ ಬೇರ್ಪಡಿಸಿ ಮಾರುಕಟ್ಟೆಗೆ ಸಾಗಿಸಬೇಕು. ಆದರೆ ಮೂರ್ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆ ಸ್ವಲ್ಪವೂ ಬಿಡುವು ಕೊಡುತ್ತಿಲ್ಲ. ಕೆಲವೆಡೆ ಈರುಳ್ಳಿ ಹಾಕಿದಲ್ಲಿಯೇ ಕೆಡುತ್ತಿವೆ. ಕೈಗೆ ಬಂದ ಬೆಳೆ ತಿಪ್ಪೆ ಪಾಲಾಗುತ್ತಿದೆ ಎಂದು ರೈತರು ಕಣ್ಣೀರಿಡುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಗುಣಮಟ್ಟದ ತರಕಾರಿ ಬರುತ್ತಿಲ್ಲ. ಜೊತೆಗೆ ಬೇಡಿಕೆಗೆ ಅನುಗುಣವಾಗಿ ತರಕಾರಿ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಆಗಿದೆ. ಗ್ರಾಹಕರು ಸಹ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಲು ಹಿಂದುಮುಂದು ನೋಡುತ್ತಿದ್ದಾರೆ. ಇದು ಜನ ಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಆಗುತ್ತಿದ್ದು, ಇದರ ಕಡೆ ಸರ್ಕಾರ ಗಮನ ಕೊಡಬೇಕು ಎಂದು ನೊಂದಿರುವ ನಗರ ವಾಸಿಗಳ ಆಗ್ರಹವಾಗಿದೆ.












Click it and Unblock the Notifications