ಕೃಷಿ ಸಾಧಕಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸುಮಂಗಲಾ ವಿಧಿವಶ
ಚಿತ್ರದುರ್ಗ, ಜೂನ್ 24; 2020ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹಾಗೂ ಕೃಷಿ ಸಾಧಕಿ ಸುಮಂಗಲಾ ವೀರಭದ್ರಪ್ಪ (69) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಸುಮಂಗಲಾ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಿ. ಜಿ. ಕೆರೆಯ ನಿವಾಸಿಯಾಗಿದ್ದರು. ಎಸ್. ವಿ. ಸುಮಂಗಲಾ ಮತ್ತು ಎಸ್. ವಿ. ವೀರಭದ್ರಪ್ಪ 'ವಸುಂಧರ ಕೃಷಿ ಕ್ಷೇತ್ರ' ಎಂಬ ತೋಟವನ್ನು ಹೊಂದಿದ್ದಾರೆ.
ಸುಮಂಗಲಾ (69) ಸದಾ ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಬೇರೆ ಜಿಲ್ಲೆಗಳ ರೈತರಿಗೂ ಮಾದರಿಯಾಗಿದ್ದರು. ರಾಜ್ಯದಲ್ಲೇ ಮೊದಲು ಟ್ರಾಕ್ಟರ್ ಕಲಿಕೆಯ ಪರವಾನಗಿ ಪಡೆದ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದಾಗಿತ್ತು. 'ವಸುಂಧರ ಕೃಷಿ ಕ್ಷೇತ್ರ' ಎಂದೇ ಹೆಸರು ಪಡೆದಿರುವ ಇವರ ತೋಟದಲ್ಲಿ ನಾನಾ ಬಗೆಯ ಸಸ್ಯರಾಶಿ ತುಂಬಿ ತುಳುಕುತ್ತಿದ್ದವು. ಇದಕ್ಕಾಗಿ ಅಪಾರ ಶ್ರಮವನ್ನು ಅವರು ಹಾಕಿದ್ದರು. ತೆಂಗು, ಅಡಿಕೆ, ಶ್ರೀಗಂಧ ಸೇರಿದಂತೆ ಮತ್ತಿತರರ ಮರಗಳನ್ನು ತೋಟದಲ್ಲಿ ಕಾಣಬಹುದಾಗಿದೆ.
ಕಳೆದ ಮೂವತ್ತು ವರ್ಷಗಳ ಹಿಂದೆ ಮಹಿಳೆಯರನ್ನು ಸೇರಿಸಿ ಸ್ವ ಸಹಾಯ ಸಂಘ ರಚಿಸಿದ್ದರು. ಕೃಷಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಗೋಬರ್ ಗ್ಯಾಸ್ ಅಳವಡಿಕೆ ಮಾಡಿದ್ದರು. ಎರೆಹುಳು, ಹಿಪ್ಪು ನೇರಳ ಹೆಚ್ಚು ಪ್ರಮಾಣದಲ್ಲಿ ಬೆಳೆದಿದ್ದಾರೆ. ಹಸು, ಕುರಿ, ಮೇಕೆ, ಹಂದಿ, ಹಸುಗಳನ್ನು ಸಾಕಿದ್ದಾರೆ. 300 ಕ್ಕೂ ಹೆಚ್ಚು ಬನ್ನೂರು ಕುರಿಗಳನ್ನು ಇಂದಿಗೂ ಸಾಕಾಣಿಕೆ ಮಾಡಿಕೊಂಡು ಬಂದಿದ್ದರು.

ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಸಿಬ್ಬಂದಿ 'ವಸುಂಧರ ಕೃಷಿ ಕ್ಷೇತ್ರ'ಕ್ಕೆ ಭೇಟಿ ಮಾಹಿತಿ ಸಂಗ್ರಹ ಮಾಡಿಕೊಂಡು ಹೋಗಿದ್ದಾರೆ. ಇವರು ಕೃಷಿ ಕ್ಷೇತ್ರಕ್ಕೆ ಸೀಮಿತವಾಗದೇ ಇತರ ರೈತಪರ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಹಿಳೆಯರಿಗೆ ಮಾದರಿಯಾದರು.60ಕ್ಕೂ ಹೆಚ್ಚು ಸ್ಥಳೀಯ ಕೃಷಿ ಕಾರ್ಮಿಕರಿಗೆ ಕೆಲಸ ನೀಡಿದ್ದಾರೆ. ಕಳೆದ 40 ವರ್ಷಗಳಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ವಿಶೇಷ.
ಸುಮಂಗಲಮ್ಮ ವೀರಭದ್ರಪ್ಪ ಕೃಷಿ ಕ್ಷೇತ್ರದಲ್ಲಿ ಮಾಡಿರುವ ಕಾರ್ಯಕ್ಕೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಎಲ್. ಎಮ್. ಪಟೇಲ್ ಸಂಸ್ಥೆಯಿಂದ 2010ನೇ ಸಾಲಿನ 'ಅತ್ಯುತ್ತಮ ರೇಷ್ಮೆ ಬೆಳೆಗಾರ' ರಾಷ್ಟ್ರೀಯ ಪ್ರಶಸ್ತಿ, 1995-96ನೇ ಸಾಲಿನ ರೇಷ್ಮೆ ಬೆಳೆ ಅಭಿವೃದ್ಧಿಯಲ್ಲಿ ಉತ್ತಮ ಮಹಿಳಾ ಉದ್ಯಮಶೀಲತೆ ರಾಷ್ಟ್ರೀಯ ಪ್ರಶಸ್ತಿ, ಕೇಂದ್ರೀಯ ರೇಷ್ಮೆ ಮಂಡಳಿ ಪ್ರಶಸ್ತಿಯೂ ಲಭಿಸಿದೆ.
75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃಷಿ ಸಮುದಾಯಕ್ಕೆ ಉತ್ತಮ ಪ್ರೇರಕರಾಗಿ ಆಯ್ಕೆಯಾಗಿದ್ದರು. 2007-08ನೇ ಸಾಲಿನ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ( ನಬಾರ್ಡ್) ಸಂಸ್ಥೆಯಿಂದ ರೈತರ ಒಕ್ಕೂಟದ ಅಭಿವೃದ್ಧಿಗೆ ಉತ್ತಮ ಸಾಧನೆ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಸುಮಂಗಲಮ್ಮ ವೀರಭದ್ರಪ್ಪ ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಸುಮಂಗಲಮ್ಮ ವೀರಭದ್ರಪ್ಪ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.












Click it and Unblock the Notifications