ಕೊಡಗಿನ ಭತ್ತದ ಬೆಳೆಗಾರರನ್ನು ಕಂಗೆಡಿಸಿದ ಮಳೆ
ಮಡಿಕೇರಿ, ಡಿಸೆಂಬರ್ 15: ವಾರ್ಧಾ ಚಂಡಮಾರುತದ ಪರಿಣಾಮ ಸುರಿದ ಅಕಾಲಿಕ ಮಳೆಗೆ ಕೊಡಗಿನಲ್ಲಿ ಭತ್ತ ಬೆಳೆದಿದ್ದ ಬೆಳೆಗಾರರು ಕಂಗಾಲಾಗಿದ್ದು ನಷ್ಟ ಅನುಭವಿಸುವಂತಾಗಿದೆ. ಕೈಗೆ ಬಂದ ಭತ್ತ ಮನೆಗೆ ಸೇರದಂತಾಗಿದೆ.
ಬಿಸಿಲಿದ್ದುದರಿಂದ ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆ ಕೊಯ್ದು ಗದ್ದೆಯಲ್ಲಿಟ್ಟಿದ್ದರು. ಚಂಡಮಾರುತದ ಪರಿಣಾಮವಾಗಿ ಬಂದ ಮಳೆಯಿಂದಾಗಿ ಕೊಯ್ದು ಹಾಕಿದ್ದ ಬೆಳೆ ಮಳೆ ನೀರಿನಲ್ಲಿ ಸಂಪೂರ್ಣ ತೊಯ್ದು ಹೋಗಿರುವುದರಿಂದ ಭತ್ತ ಉದುರುತ್ತಿದ್ದು, ಕೆಲವೆಡೆ ತೇಲುವಂತಾಗಿದ್ದು, ಇತರೆಡೆ ಮೊಳಕೆ ಬರುತ್ತಿದೆ.[ಕೃಷಿ ಸಚಿವ ಕೃಷ್ಣಬೈರೇಗೌಡ ಭತ್ತ ನಾಟಿ ಮಾಡಿದ್ದೆಲ್ಲಿ?]

ಜಿಲ್ಲೆಯಾದ್ಯಂತ ವಿವಿಧ ಬಗೆಯ ಭತ್ತದ ಬೆಳೆಗಳನ್ನು ಬೆಳೆಯುತ್ತಿದ್ದು ಕೆಲವೆಡೆ ಕೊಯ್ಲಿಗೆ ಬಂದಿದ್ದರೆ ಮತ್ತೆ ಕೆಲವೆಡೆ ತೆನೆಯೊಡೆಯುತ್ತಿದೆ. ಈ ಬಾರಿ ಮುಂಗಾರು ಸಮರ್ಪಕವಾಗಿ ಆಗದ ಕಾರಣದಿಂದ ಎಲ್ಲೆಡೆ ಭತ್ತದ ಕೃಷಿ ಮಾಡಿಲ್ಲ. ನೀರಿನ ಅನುಕೂಲ ಇರುವ ಸ್ಥಳದಲ್ಲಿ ಮಾತ್ರ ಭತ್ತವನ್ನು ಬೆಳೆದಿದ್ದಾರೆ. ಆದರೆ ಪೈರು ಬೆಳೆದು ತೆನೆಯೊಡೆದು ಕೊಯ್ಲುಗೆ ಬರುವ ಸಂದರ್ಭದಲ್ಲೇ ಮಳೆ ಬಂದಿರುವುದು ಇಲ್ಲಿನ ಬೆಳೆಗಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುವಂತೆ ಮಾಡಿದೆ.[ನೀವು ತಿನ್ನುವ ಅಕ್ಕಿ ಯಾವುದರಿಂದ ಮಾಡಿದ್ದು!?]

ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೆಲವೆಡೆ ನೀರಿಲ್ಲದೆ ಬೆಳೆ ಒಣಗಿ ಹಾಳಾಗಿದ್ದರೆ, ಮತ್ತೊಂದೆಡೆ ಚೆಟ್ಟಳ್ಳಿಯ ಶ್ರೀಮಂಗಲ ಗ್ರಾಮದಲ್ಲಿ ಕೊಯ್ಲು ಮಾಡಿದ್ದ ಬೆಳೆ ಮಳೆ ನೀರಿನಿಂದ ಹಾನಿಗೊಳಗಾಗಿದೆ. ಇಲ್ಲಿನ ಅಯ್ಯಂಡ್ರ ಎಸ್.ನಾಣಯ್ಯ(ಮಿಟ್ಟು) ಅವರು ಕೊಯ್ಲು ಮಾಡಿ ಗದ್ದೆಯಲ್ಲಿ ಹಾಕಿದ್ದ ಬೆಳೆ ಗದ್ದೆಯಲ್ಲಿ ನೀರು ತುಂಬಿದ್ದರಿಂದ ಹಾಳಾಗಿದೆ. ಭತ್ತವೆಲ್ಲ ನೀರಿನಲ್ಲಿ ತೇಲುತ್ತಿದ್ದು ಬಿಸಿಲಿನಲ್ಲಿ ಒಣಗಿಸಿ ಮನೆಗೆ ಸಾಗಿಸುವುದು ಕಷ್ಟಸಾಧ್ಯವಾಗುತ್ತಿದೆ ಎನ್ನುತ್ತಾರೆ.[ಮಂಡ್ಯ : ನ್ಯಾಯಬೆಲೆ ಅಂಗಡಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ?]

ಸದ್ಯ ಬಿಸಿಲು ಕಾಣಿಸಿಕೊಂಡಿರುವುದರಿಂದ ರೈತರು ನೆಮ್ಮದಿಯುಸಿರು ಬಿಟ್ಟಿದ್ದು, ಈಗಾಗಲೇ ಕೊಯ್ಲು ಮಾಡಿರುವ ಭತ್ತವನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಬೇಕಾದರೆ ಇನ್ನೆರಡು ದಿನ ಬೇಕಾಗಿದೆ. ಹಾಗಾಗಿ ಜನ ಬಿಸಿಲು ಬರಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.
ಮಳೆಯ ಕೊರತೆ, ಕಾಡಾನೆಯ ಹಾವಳಿ ಇದೆಲ್ಲವನ್ನು ಮೀರಿ ಭತ್ತವನ್ನು ಬೆಳೆಗಾರರು ಬೆಳೆದಿದ್ದರು. ಆದರೆ ವಾರ್ಧಾ ಚಂಡಮಾರುತ ಭತ್ತ ಬೆಳೆದಿದ್ದ ಬೆಳೆಗಾರರಿಗೆ ನಷ್ಟ ಮಾಡಿದ್ದಂತು ಸತ್ಯ.












Click it and Unblock the Notifications