ರಾಯಚೂರಿನಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಎಪಿಎಂಸಿ ಜಾಗ ಬಳಕೆ, ಭುಗಿಲೆದ್ದ ಆಕ್ರೋಶ
ರಾಯಚೂರು, ಸೆಪ್ಟೆಂಬರ್, 15: ಜಿಲ್ಲೆಯಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ವಹಿವಾಟುಗಳಿಗೆ ಮೀಸಲಾಗಿರುವ ಎಪಿಎಂಸಿ ಆವರಣಗಳು ಮತ್ತು ಮಳಿಗೆಗಳು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಆಗುತ್ತಿವೆ. ಇದರಿಂದ ಬೇಸತ್ತ ರೈರ ಮುಖಂಡರು ಎಪಿಎಂಸಿ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.
ರಾಯಚೂರಿನಲ್ಲಿ ರಾಜೇಂದ್ರ ಗಂಜ್ ಎಂದು ಕರೆಯುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕೃಷಿ ಉತ್ಪನ್ನಗಳ ವಹಿವಾಟು ನಡೆಯುತ್ತಿದೆ. ಆದರೆ ಇಡೀ ಆವರಣವು ಚಿಕ್ಕ ಗ್ರಾಮದ ರೀತಿಯಲ್ಲಿದೆ. ವ್ಯಾಪಾರಿ ಮಳಿಗೆಗಳ ಜೊತೆಯಲ್ಲೇ ವಸತಿಗೃಹಗಳನ್ನು ನಿರ್ಮಾಣ ಮಾಡಿಕೊಂಡು ವಾಸಿಸುತ್ತಿದ್ದಾರೆ. ವಸತಿಗೃಹ ಮಾಡಿಕೊಂಡಿರುವುದನ್ನು ಅಧಿಕೃತವಾಗಿ ಅಧಿಕಾರಿಗಳು ಒಪ್ಪಿಕೊಳ್ಳುವುದಿಲ್ಲ. ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿದ್ದಾರೆ. ಕೆಳಮಹಡಿಯಲ್ಲಿ ಮಳಿಗೆಗಳು ಹಾಗೂ ಮೇಲ್ಮಹಡಿಯಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ.
ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಸಂಬಂಧವೇ ಇಲ್ಲದ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ (ಕೆಎಸ್ಬಿಸಿಎಲ್) ದ ಗೋದಾಮುಗಳು ಮತ್ತು ಕಚೇರಿಯು ಎಪಿಎಂಸಿ ಆವರಣದಲ್ಲೇ ಕಾರ್ಯನಿರ್ವಹಿಸುತ್ತಿದೆ. ಕೃಷಿ ಧಾನ್ಯಗಳ ಶೇಖರಣೆ ಸ್ಥಳಗಳಲ್ಲಿ ಮದ್ಯದ ಬಾಟಲಿಗಳನ್ನು ಎಸೆದು ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ಕೃಷಿ ಧಾನ್ಯಗಳನ್ನು ಹೊತ್ತು ತರುವ ರೈತರಿಗೆ ಸಂಬಂಧಿಸಿದ ವಾಹನಗಳು ಅದೇ ದಿನದಂದೇ ಹೊರಗಡೇ ಹೋಗಬೇಕಾಗುತ್ತದೆ. ಆದರೆ ರಾಯಚೂರಿನ ಎಪಿಎಂಸಿ ಆವರಣವು ಲಾರಿಗಳ ಟರ್ಮಿನಲ್ ರೀತಿಯಲ್ಲಿ ಬಳಕೆ ಆಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ರಸಗೊಬ್ಬರ ಮತ್ತು ಪಡಿತರ ಸಾಗಿಸುವುದಕ್ಕೆ ಸರ್ಕಾರದಿಂದ ಶುಲ್ಕ ತೆಗೆದುಕೊಳ್ಳುವ ಲಾರಿಗಳ ಮಾಲೀಕರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಲಾರಿಗಳಿಂದ ನೇರವಾಗಿ ರೈತರಿಗೆ ಯಾವುದೇ ಅನುಕೂಲವಿಲ್ಲ. ಧಾನ್ಯ ಮತ್ತು ರಸಗೊಬ್ಬರ ಪೂರೈಕೆ ಮಾಡುವ ಪರೋಕ್ಷ ಕಾರ್ಯಕ್ಕಾಗಿ ಹಣ ಕೊಡಲಾಗುತ್ತದೆ.

ಎಪಿಎಂಸಿ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ
ಎಪಿಎಂಸಿ ನಿಯಮಾವಳಿಗಳ ಪ್ರಕಾರ ಮಳಿಗೆಗಳನ್ನು ಮತ್ತು ಆವರಣವನ್ನು ನಿರ್ವಹಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ರೈತ ಮುಖಂಡರು ಆರೋಪಿಸುತ್ತಿದ್ದಾರೆ. ರಾಯಚೂರಿನ ಎಪಿಎಂಸಿಯನ್ನು 1934ರಲ್ಲಿ ಸ್ಥಾಪಿಸಲಾಗಿದ್ದು, ರೈತರಿಗೆ ಅನುಕೂಲ ಆಗುವಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿ ಮಾಡಲಾಗಿತ್ತು. ಆದರೆ ಅವುಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಹೀಗಾಗಿ ಮಳೆಗಾಲದಲ್ಲಿ ರೈತರ ಬೆಳೆದ ಧಾನ್ಯಗಳು ನೀರುಪಾಲಾಗುತ್ತಿವೆ.
ಮಾನ್ವಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷಿಗೆ ಸಂಬಂಧಿಸಿದ ವಾಣಿಜ್ಯ ಮಳಿಗೆಗಳು ಹಾಗೂ ಗೋದಾಮುಗಳಲ್ಲಿ ನಿಯಮ ಉಲ್ಲಂಘಿಸಲಾಗಿದೆ. ಅಲ್ಲಿ ಸರ್ಕಾರಿ ಕಚೇರಿಗಳು ಹಾಗೂ ಇತರೆ ಮಾರಾಟದ ಅಂಗಡಿಗಳಿಗೆ ಬಾಡಿಗೆ ನೀಡಿರುವುದು ಅಧಿಕಾರಿಗಳ ಆಡಳಿತ ವೈಫಲ್ಯಕ್ಕೆ ಸಾಕ್ಷಿ ಆಗಿದೆ.

ಎಪಿಎಂಸಿ ಆವರಣದಲ್ಲಿಅತಿಥಿ ಗೃಹಗಳ ನಿರ್ಮಾಣ
ಎಪಿಎಂಸಿ ಆವರಣದಲ್ಲಿ ಸುಮಾರು 70ಕ್ಕೂ ಅಧಿಕ ಗೋದಾಮು ಹಾಗೂ ಮಳಿಗೆಗಳು ಇವೆ. ಎಪಿಎಂಸಿ ನಿಯಮಗಳ ಅನ್ವಯ ಗೋದಾಮು ಹೊಂದಿರುವ ಈ ಕಟ್ಟಡಗಳ ಮೊದಲ ಮಹಡಿಯಲ್ಲಿ ಅತಿಥಿ ಗೃಹಗಳನ್ನು ನಿರ್ಮಿಸಲಾಗಿದೆ. ಲೀಜ್ ಕಮ್ ಸೇಲ್ ಒಪ್ಪಂದದ ಆಧಾರದಲ್ಲಿ ಕಟ್ಟಡಗಳ ನಿರ್ಮಾಣದ ಹಕ್ಕು ಪಡೆದಿದ್ದ ಸ್ಥಳೀಯ ವರ್ತಕರು, ಉದ್ಯಮಿಗಳು, ಶ್ರೀಮಂತ ಕೃಷಿಕರು 10 ವರ್ಷಗಳ ಅವಧಿಯ ನಂತರ ಸ್ವಂತ ಮಾಲೀಕತ್ವ ಹೊಂದುವ ಹಾಗೆ, ಎಪಿಎಂಸಿಯಿಂದ ಪತ್ರವನ್ನು ಪಡೆದಿದ್ದಾರೆ.

ಅತಿಥಿ ಗೃಹಗಳು ಈಗ ಬಾಡಿಗೆ ಮನೆಗಳು
ಈ ಕಟ್ಟಡಗಳ ಕೆಲವು ಮಳಿಗೆಗಳಲ್ಲಿ ಮಾತ್ರ ಕೃಷಿ ಉತ್ಪನ್ನಗಳ ವ್ಯಾಪಾರ, ವಹಿವಾಟು ನಡೆಯುತ್ತಿವೆ. ಅನೇಕ ಮಳಿಗೆಗಳನ್ನು ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟ, ಖಾಸಗಿ ಸಾರಿಗೆ ಏಜೆನ್ಸಿಗಳು, ಕಿರಾಣಿ ವಸ್ತುಗಳ ಸಗಟು ಮಾರಾಟ ಏಜೆನ್ಸಿಗಳಿಗೆ ವ್ಯಾಪಾರಕ್ಕಾಗಿ ಬಾಡಿಗೆ ನೀಡಲಾಗಿದೆ. ಮಳಿಗೆಗಳ ಮೇಲ್ಮಹಡಿಯಲ್ಲಿರುವ ಅತಿಥಿ ಗೃಹಗಳನ್ನು ಬಾಡಿಗೆ ಮನೆಗಳನ್ನಾಗಿ ನೀಡಲಾಗಿದೆ. ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ನಿರೀಕ್ಷಕರ ಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಘಟಕ ವ್ಯವಸ್ಥಾಪಕರ ಕಚೇರಿಗಳಿಗೆ ಕೂಡ ಇಲ್ಲಿನ ಕಟ್ಟಡಗಳನ್ನು ಬಾಡಿಗೆ ಪಡೆಯಲಾಗಿದೆ. ಇಲ್ಲಿ ಕೃಷಿಗೆ ಸಂಬಂಧಿತ ವ್ಯಾಪಾರ ವಹಿವಾಟು ನಡೆಸಲು ಮಾತ್ರ ಅನುಮತಿ ಪಡೆದಿದ್ದು, ಇದೀಗ ಇತರೆ ಉದ್ದೇಶಗಳಿಗೆ ಕಟ್ಟಡಗಳನ್ನು ಬಾಡಿಗೆ ನೀಡಿದ್ದಾರೆ. ಈ ಕುರಿತು ಎಪಿಎಂಸಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಸಂಘ ಸಂಸ್ಥೆಗಳ ಮುಖಂಡರು ಒತ್ತಾಯಿಸಿದ್ದಾರೆ.

5 ವರ್ಷ ಕಳೆದರೂ ಮೂಲಸೌಕರ್ಯಗಳಿಲ್ಲ
ದೇವದುರ್ಗ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಎಪಿಎಂಸಿ ಮಾರುಕಟ್ಟೆಯು ಮೂಲಸೌಕರ್ಯ ಇಲ್ಲದೆ ಸುಮಾರು ಐದು ವರ್ಷ ಕಳೆಯುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇವದುರ್ಗ ಎಪಿಎಂಸಿಯನ್ನು ರಾಯಚೂರು ಎಪಿಎಂಸಿ ಮಾರುಕಟ್ಟೆಯಲ್ಲಿ ವಿಲೀನ ಮಾಡಲಾಗಿತ್ತು. 2018ರಿಂದ ಆಗಸ್ಟ್ 2022ರವರೆಗೆ ಯಾವುದೇ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ಹತ್ತು ವರ್ಷದ ಹಿಂದೆ ನಿರ್ಮಾಣ ಆಗಿರುವ ಎಪಿಎಂಸಿಯ ಸುಮಾರು 20ಕ್ಕೂ ಹೆಚ್ಚು ಮಳೆಗೆಗಳು ಹರಾಜು ಪ್ರಕ್ರಿಯೆ ಇಲ್ಲದೆ, ಎಪಿಎಂಸಿಗೆ ಬರುವ ಆದಾಯವು ಕುಂಠಿತ ಆಗಿತ್ತು.
ಶಾಸಕ ಕೆ.ಶಿವನಗೌಡ ನಾಯಕ ಪ್ರಯತ್ನದ ಫಲವಾಗಿ, ದೇವದುರ್ಗ ಎಪಿಎಂಸಿಯನ್ನು ರಾಯಚೂರು ಎಪಿಎಂಸಿಯಿಂದ ಮತ್ತೆ ಪ್ರತ್ಯೇಕವಾಗಿಸಲಾಗಿದೆ. 2022ರ ಜುಲೈ ತಿಂಗಳಿನಲ್ಲಿ ನೂತನ ಆಡಳಿತ ಮಂಡಳಿ ನೇಮಿಸಲಾಗಿದೆ. ಆಡಳಿತ ಮಂಡಳಿಯವರು ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಿ ಆದಾಯದ ಮೂಲಗಳನ್ನು ಹೆಚ್ಚಿಸುತ್ತಿದ್ದಾರೆ. ಎಪಿಎಂಸಿ ಜಾಗದಲ್ಲಿ ಅಕ್ರಮವಾಗಿ ಅಂಗಡಿ ಮುಂಗಟ್ಟುಗಳನ್ನು ತೆರೆವುಗೊಳಿಸಿದ್ದು, ಎಪಿಎಂಸಿ ಜಾಗದಲ್ಲಿರುವ ವರ್ತಕರಿಗೆ ಬಾಡಿಗೆ ಹಣವನ್ನು ನಿಗದಿಪಡಿಸಿದ್ದಾರೆ. 'ಸಾಮಾನ್ಯ ಸಭೆ ನಡೆಸಿ ಮೂಲಸೌಕರ್ಯಗಳಿಗೆ ಸರ್ಕಾರಕ್ಕೆ 15 ಕೋಟಿ ರೂಪಾಯಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಎಪಿಎಂಸಿಯಲ್ಲಿ 50 ಲಕ್ಷ ರೂಪಾಯಿ ಹಣ ಇದ್ದು, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು' ಎಂದು ಎಪಿಎಂಸಿ ನೂತನ ಅಧ್ಯಕ್ಷ ಪ್ರಕಾಶ್ ಪಾಟೀಲ ಜೇರಬಂಡಿ ತಿಳಿಸಿದರು.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications