ಕಾಂಗ್ರೆಸ್ ಗೆ ಹೆದರಿ ಉ.ಪ್ರದಲ್ಲಿ ರೈತರ ಸಾಲ ಮನ್ನಾ: ರಾಹುಲ್ ಗಾಂಧಿ
ಬಂಸ್ವಾರ (ರಾಜಸ್ತಾನ), ಜುಲೈ 19: ಜಿಎಸ್ ಟಿಗಾಗಿ ರಾತ್ರಿ ಹನ್ನೆರಡು ಗಂಟೆಯಲ್ಲಿ ಸಂಸತ್ ಭವನದ ಬಾಗಿಲು ತೆರೆಯುತ್ತಾರೆ. ಆದರೆ ರೈತರಿಗಾಗಿ ಒಂದು ನಿಮಿಷ ಮಾತನಾಡುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರಕಾರದ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ ಹಾಗೂ ಪಂಜಾಬ್ ನಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಸಾಲ ಮನ್ನಾ ಮಾಡಿದೆ. ಉತ್ತರಪ್ರದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಕಾಂಗ್ರೆಸ್ ಗೆ ಹೆದರಿ ರೈತರ ಸಾಲ ಮನ್ನಾ ಮಾಡಿತು ಎಂದು ಅವರು ಹೇಳಿದ್ದಾರೆ.

ಜಿಎಸ್ ಟಿ ಜಾರಿ ಆಗಿದ್ದರಿಂದ ದೊಡ್ಡ ದೊಡ್ಡ ವರ್ತಕರಿಗೆ ಏನೂ ಸಮಸ್ಯೆ ಇಲ್ಲ. ಅವರು ಹತ್ತು ಮಂದಿ ಅಕೌಂಟೆಂಟ್ ಗಳನ್ನು ನೇಮಿಸಿಕೊಳ್ಳಬಲ್ಲರು, ಹಲವು ನಮೂನೆ ಅರ್ಜಿಗಳನ್ನು ತುಂಬಬಲ್ಲರು. ಆದರೆ ಸಣ್ಣ ವ್ಯಾಪಾರಿಗಳು ಹಾಗೂ ವರ್ತಕರ ಪಾಡೇನು ಎಂದು ಅವರು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನಿಮ್ಮ ಮೇಲೆ ಪೂರ್ತಿ ತೆರಿಗೆ ಇಲಾಖೆಯನ್ನೇ ಎತ್ತಿಹಾಕಿದ್ದಾರೆ. ಆತುರಾತುರವಾಗಿ ಜಿಎಸ್ ಟಿ ಜಾರಿ ಮಾಡಬೇಡಿ ಎಂದು ಸರಕಾರಕ್ಕೆ ನಾವು ಸಲಹೆ ಮಾಡಿದೆವು. ಆದರೆ ಅವರು ಕೇಳಲಿಲ್ಲ. ಉತ್ತರ ಪ್ರದೇಶದ ರೀತಿಯಲ್ಲೇ ರಾಜಸ್ತಾನದಲ್ಲೂ ಒತ್ತಡ ತಂದು, ಕಾಂಗ್ರೆಸ್ ಪಕ್ಷವು ಸರಕಾರದಿಂದ ಸಾಲ ಮನ್ನಾ ಮಾಡಿಸುತ್ತದೆ ಎಂದು ಹೇಳಿದರು.












Click it and Unblock the Notifications