ಮೊದಲ ಸಂಪುಟ ಸಭೆಯಲ್ಲಿಯೇ ರೈತರಿಗೆ ಗಿಫ್ಟ್ ಕೊಟ್ಟ ಕೇಂದ್ರ ಸರ್ಕಾರ
ನವದೆಹಲಿ, ಜೂನ್ 1: ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಎರಡನೆಯ ಅವಧಿಗೆ ಆಯ್ಕೆಯಾದ ಬಳಿಕ ನಡೆಸಿದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ರೈತರಿಗೆ ಮತ್ತೊಂದು ಉಡುಗೊರೆ ನೀಡಿದೆ.
ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ರೈತರಿಗೆ ವಾರ್ಷಿಕ 6,000 ರೂ. ನೀಡುವುದನ್ನು ಎಲ್ಲ ರೈತರಿಗೂ ವಿಸ್ತರಿಸಲಾಗಿದೆ. ಇದರಲ್ಲಿ ಸಿರಿವಂತ ಕೃಷಿಕರೂ ಸೇರಿಕೊಳ್ಳಲಿದ್ದಾರೆ ಹಾಗೂ ಭೂರಹಿತ ಕೃಷಿಕರನ್ನೂ ಈ ಯೋಜನೆ ಒಳಗೊಳ್ಳಲಿದೆ.
ಈ ಮೊದಲು ಕಿಸಾನ್ ಯೋಜನೆಯು ಎರಡು ಹೆಕ್ಟೇರ್ವರೆಗೆ ಭೂಮಿಯುಳ್ಳ ರೈತರಿಗೆ ಮಾತ್ರ ಅನ್ವಯವಾಗುತ್ತಿತ್ತು. ಈಗ ಅದನ್ನು ದೇಶದ ಎಲ್ಲ ರೈತರಿಗೂ ವಿಸ್ತರಿಸಿರುವುದು ಮೋದಿ ಸರ್ಕಾರದ ಸಂಪುಟದ ಪ್ರಥಮ ನಿರ್ಧಾರಗಳಲ್ಲಿ ಒಂದಾಗಿದೆ.
ಪ್ರಧಾನಿಯಾದ ಬಳಿಕ ಮೊದಲ ಮಹತ್ವದ ನಿರ್ಧಾರ ಪ್ರಕಟಿಸಿದ ಮೋದಿ
ಪಿಎಂ-ಕಿಸಾನ್ ಯೋಜನೆಯನ್ನು ಸಾರ್ವತ್ರೀಕರಣಗೊಳಿಸುವ ನಿರ್ಧಾರವು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ, ಸಂಕಷ್ಟದಲ್ಲಿರುವ ರೈತರಿಗೆ ಸಹಾಯಹಸ್ತ ಚಾಚಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂಬ ಭರವಸೆ ನೀಡುವ ಪ್ರಯತ್ನವಾಗಿದೆ.
15 ಕೋಟಿ ರೈತರಿಗೆ ವಿಸ್ತರಣೆ
ಈ ಮೂಲಕ ಪ್ರಧಾನಮಂತ್ರಿ ಕಿಸಾನ್ ಯೋಜನೆಯು ದೇಶದ ಸುಮಾರು 15 ಕೋಟಿ ರೈತರಿಗೆ ತಲುಪಲಿದೆ. ದೇಶದ ಪ್ರತಿಯೊಬ್ಬ ರೈತರೂ ವಾರ್ಷಿಕ 6 ಸಾವಿರ ರೂಪಾಯಿಯನ್ನು ಪಿಎಂ-ಕಿಸಾನ್ ಯೋಜನೆಯಡಿ ಪಡೆದುಕೊಳ್ಳಲಿದ್ದಾರೆ. ಇದಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ರೈತರಿಗೆ ಬಂಪರ್: ಪ್ರಧಾನಮಂತ್ರಿ-ಕಿಸಾನ್ ಯೋಜನೆ ಇನ್ನಷ್ಟು ವಿಸ್ತರಣೆ
ಸಣ್ಣ ರೈತರಿಗೆ ಪಿಂಚಣಿ ಯೋಜನೆ
ಇದರ ಜತೆಗೆ ಎಲ್ಲ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಪಿಂಚಣಿ ಯೋಜನೆ ಜಾರಿ ಮಾಡಲು ಹಾಗೂ 1 ಲಕ್ಷ ರೂ.ವರೆಗೆ ಬಡ್ಡಿರಹಿತ ಅಲ್ಪಾವಧಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲಗಳನ್ನು ನೀಡಲು ಉದ್ದೇಶಿಸಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಪೆನ್ಷನ್ ಯೋಜನಾ ಅಡಿ 18ರಿಂದ 40 ವರ್ಷದವರೆಗಿನ ನೋಂದಾಯಿತ ಸಣ್ಣ ಹಾಗೂ ಅತಿ ಸಣ್ಣ ರೈತರು 60 ವರ್ಷ ಕ್ರಮಿಸಿದ ಬಳಿಕ ಕನಿಷ್ಠ 3 ಸಾವಿರ ರೂ. ನಿಗದಿತ ಪಿಂಚಣಿ ಪಡೆದುಕೊಳ್ಳುವ ಯೋಜನೆ ಇದಾಗಿದೆ.
ಪಿಂಚಣಿ ಯೋಜನೆ ವರ್ಗಾವಣೆ
ಈ ಪಿಂಚಣಿ ಯೋಜನೆಗೆ ಅರ್ಹರಾದ ರೈತರು ಪಾವತಿಸಲು ಸಾಧ್ಯವಾದ ಮೊತ್ತಕ್ಕೆ ಸಮನಾದ ಮೊತ್ತದ ಪಿಂಚಣಿ ಮೊತ್ತವನ್ನು ಕೇಂದ್ರ ಸರ್ಕಾರ ನೀಡಲಿದೆ. ಈ ಪಿಂಚಣಿ ಪಡೆಯುತ್ತಿರುವ ರೈತ ಮೃತಪಟ್ಟರೆ, ಅವರ ಪತ್ನಿ ಅಥವಾ ಪತಿಗೆ ಪಿಂಚಣಿ ಯೋಜನೆ ವರ್ಗಾವಣೆಯಾಗಲಿದೆ. ಅವರು ಮೊದಲೇ ಈ ಯೋಜನೆಯ ಫಲಾನುಭವಿ ಅಲ್ಲದಿದ್ದರೆ ಇದು ಅನ್ವಯವಾಗಲಿದ್ದು, ಶೇ 50ರಷ್ಟು ಪಿಂಚಣಿ ಅವರಿಗೆ ದೊರಕಲಿದೆ.
ಕೊಟ್ಟ ಮಾತಿನಂತೆ ಮೋದಿ ಇಟ್ಟ ಮೊದಲ ಹೆಜ್ಜೆ 'ಜಲ್ ಶಕ್ತಿ' ಸಚಿವಾಲಯ ಸೃಷ್ಟಿ
26.5 ಕೋಟಿ ರೈತರಿಗೆ ಅನುಕೂಲ
ಈ ಎರಡು ಯೋಜನೆಗಳಿಂದ 26.5 ಕೋಟಿ ರೈತರಿಗೆ ಅನುಕೂಲವಾಗಲಿದೆ ಹಾಗೂ 2 ಕೋಟಿ ಅಧಿಕ ರೈತರನ್ನು ಸೇರಿಸಿಕೊಂಡು ಒಟ್ಟು 14.5 ಕೋಟಿ ಫಲಾನುಭವಿಗಳಾಗುತ್ತಾರೆ ಎಂದರು. 'ಈ ಯೋಜನೆಯ ಫಲಾನುಭವಿಗಳಾಗಲು ಅರ್ಹರಾದ ರೈತರ ವಿವರಗಳನ್ನು ರಾಜ್ಯಗಳಿಂದ ಪಡೆಯಲಾಗುತ್ತಿದೆ. ಮೊದಲ ಕಂತಿನಲ್ಲಿ 3.11 ಕೋಟಿ ರೈತರಿಗೆ ಹಾಗೂ ಎರಡನೇ ಕಂತಿನಲ್ಲಿ 2.66 ಕೋಟಿ ರೈತರಿಗೆ ಸೌಲಭ್ಯ ಸಿಗಲಿದೆ' ಎಂದು ಹೇಳಿದರು.