ಎರೆಹುಳು ಗೊಬ್ಬರದ ಮಹತ್ವ ಮತ್ತು ಬಳಸುವ ವಿಧಾನ
ಕೋಲಾರ, ಜನವರಿ 19 : ಎರೆಹುಳುವನ್ನು ರೈತರ ಮಿತ್ರ, ರೈತ ಬಂಧು ಎಂದು ಕರೆಯಲಾಗುತ್ತದೆ. ರೈತನಂತೆ ಭೂಮಿಯಲ್ಲಿ ನಿರಂತರವಾಗಿ ಕೆಲಸ ಮಾಡುವ ಹುಳುಗಳು ನೈಸರ್ಗಿವಾಗಿ ಪೋಷಕಾಂಶ ಯುಕ್ತ ಗೊಬ್ಬರವನ್ನು ರೈತರಿಗೆ ಒದಗಿಸುತ್ತವೆ.
ಎರೆಹುಳು ಗೊಬ್ಬರ ರೈತರಿಗೆ ಸಹಾಯಕವಾಗಿದೆ. ಎಲ್ಲಾ ಸಾವಯವ ಬೆಳೆಗಳ ಕಸಕಡ್ಡಿ ಮಿಗಿಲು ಪದಾರ್ಥಗಳನ್ನು ಬಳಸಿಕೊಂಡು ಎರೆಹುಳದ ಸಹಾಯದಿಂದ ಒಳ್ಳೆಯ ಗೊಬ್ಬರ ತಯಾರಿಸಬಹುದು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಈ ಗೊಬ್ಬರ ಉಪಯುಕ್ತವಾಗಿದೆ.
ಎರೆಹುಳದ ಗೊಬ್ಬರವನ್ನು ಬೆಳೆಯ ಯಾವುದೇ ಸಮಯದಲ್ಲಿ ಕೃಷಿ, ತೋಟಗಾರಿಕೆ, ಹೂವುಗಳು ಮತ್ತು ತರಕಾರಿಯಲ್ಲಿ ಉಪಯೋಗ ಮಾಡಬಹುದು. ಸುಲಭವಾಗಿ ಗೊಬ್ಬರ ತಯಾರಿ ಮತ್ತು ಅದನ್ನು ಬಳಕೆ ಮಾಡುವ ವಿಧಾನ ಇಲ್ಲಿದೆ.

ಕೃಷಿ/ತೋಟಗಾರಿಕೆ ಬೆಳೆಗಳಿಗೆ ಉಪಯೋಗಿಸುವ ಕ್ರಮ : ಎರೆಹುಳದ ಗೊಬ್ಬರವನ್ನು ಬೆಳೆದು 12-15 ಸೆಂ.ಮೀ. ಎತ್ತರದಲ್ಲಿದ್ದಾಗ ಭೂಮಿಯ ಮೇಲ್ಗಡೆ ಹರಡಬೇಕು ಮತ್ತು ಸಾಧ್ಯವಿದ್ದರೆ ನೀರನ್ನು ಹರಿಸಬೇಕು. ಹೂವಿನ ಹಾಗೂ ತರಕಾರಿ ಮತ್ತು ಹಣ್ಣಿನ ಗಿಡಗಳಿಗೆ ಎರೆಹುಳದ ಗೊಬ್ಬರವನ್ನು ಗಿಡದ ಸುತ್ತು ಹಾಕಿ ಮಣ್ಣಿನಿಂದ ಮುಚ್ಚಬೇಕು ಮತ್ತು ನೀರನ್ನು ಕೊಡಬೇಕು.
ಉಪಯೋಗ: ಈ ಗೊಬ್ಬರ ಅತಿ ಮುಖ್ಯವಾದ ಪೋಷಕಾಂಶ ಹೊಂದಿರುತ್ತದೆ (1-1.5% ಸಾರಜನಕ, 0.8% ರಂಜಕ, 0.7% ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುತ್ತದೆ). ಬೆಳೆಯ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಇಳುವರಿಯನ್ನು ಕೊಡುತ್ತದೆ.
ಹಣ್ಣು ಹಾಗೂ ತರಕಾರಿ ಮತ್ತು ಹೂವಿನ ಬೆಳೆಯ ಯೋಗ್ಯತೆಯನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ. ಮಣ್ಣಿನಲ್ಲಿ ಸಾವಯವ ಅಂಶವನ್ನು ಹೆಚ್ಚಿಸುತ್ತದೆ. ಮಣ್ಣಿನಲ್ಲಿ ತೇವಾಂಶವನ್ನು ಹಿಡಿದುಕೊಳ್ಳುವ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ.
ಕಡಿಮೆ ಖರ್ಚಿನಲ್ಲಿ ಸುಲಭ ರೀತಿಯಲ್ಲಿ ತಯಾರಿಸಲಾಗುವುದು. ಮಣ್ಣನ್ನು ಸವಳು ಮತ್ತು ಆಮ್ಲ ಗುಣಧರ್ಮಕ್ಕೆ ಬದಲಾವಣೆಯಾಗುವುದನ್ನು ಕಡಿಮೆ ಮಾಡುತ್ತದೆ. ಮಣ್ಣಿ ಸವಕಳಿಯನ್ನು ಕಡಿಮೆ ಮಾಡುತ್ತದೆ. ಕೀಟಗಳ ಹಾವಳಿಯಿಂದ ರಕ್ಷಣೆ ಒದಗಿಸುತ್ತದೆ.
ರೈತರಿಗೆ ಲಾಭಗಳು: ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ. ಕಡಿಮೆ ನೀರಿನಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಕೀಟಗಳ ಬಾಧೆಯಿಂದ ರಕ್ಷಣೆ ಹಾಗೂ ಬೆಳೆಗಳಿಗೆ ನಷ್ಟವನ್ನು ಕಡಿಮೆ ಮಾಡುತ್ತದೆ. ಬೆಳೆಗಳ ಉತ್ಪನ್ನಗಳು ಅತೀ ಉತ್ತಮ ಹಾಗೂ ಯೋಗ್ಯವಾಗಿದ್ದು ಹೆಚ್ಚಿನ ರುಚಿ ಹೊಂದಿರುತ್ತವೆ. ಬೆಳೆಗಳು ಉತ್ತಮವಾಗಿದ್ದು ಹೆಚ್ಚಿನ ಬೆಲೆ ಪಡೆಯುತ್ತವೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 7829512236 ಅಥವಾ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಹಾರ್ಟಿಕ್ಲಿನಿಕ್, ಕೋಲಾರ ಇವರನ್ನು ಸಂಪರ್ಕಿಸಬಹುದಾಗಿದೆ.












Click it and Unblock the Notifications