Get Updates
Get notified of breaking news, exclusive insights, and must-see stories!

5 ವರ್ಷಗಳಲ್ಲಿ ನೀರಾವರಿ ಯೋಜನೆಗಳ ಸಾಕಾರ; ತಪ್ಪಿದರೆ ಜೆಡಿಎಸ್ ಪಕ್ಷ ವಿಸರ್ಜಿಸುವೆ: ಎಚ್‌ಡಿಕೆ

ಬೆಂಗಳೂರು, ಏಪ್ರಿಲ್ 5: "ಜೆಡಿಎಸ್ ಪಕ್ಷಕ್ಕೆ 5 ವರ್ಷಗಳ ಪೂರ್ಣ ಪ್ರಮಾಣದ ಸರಕಾರ ಕೊಡಿ. ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣ ಮಾಡುತ್ತೇನೆ. ಈ ಮಾತಿಗೆ ತಪ್ಪಿದರೆ ಜೆಡಿಎಸ್ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ," ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ರೈತರ ಸಮಸ್ಯೆ, ಪರಿಹಾರಗಳ ಕುರಿತು ಬೆಂಗಳೂರಿನಲ್ಲಿ ಇಂದು ಹಸಿರು ಸೇನೆ ಏರ್ಪಡಿಸಿದ್ದ "ಉಳುವ ಯೋಗಿಯ ನೋಡಲ್ಲಿ' ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದರು.

"ಈ ಒಂದು ಬಾರಿ ನಮ್ಮ ಪಕ್ಷಕ್ಕೆ ಅವಕಾಶ ಕೊಡಿ. ಯಾವುದೇ ಅನ್ಯ ಪಕ್ಷದ ಹಂಗಿಲ್ಲದೆ ಐದು ವರ್ಷಗಳ ಸಂಪೂರ್ಣ ಅವಧಿಗೆ ನಮ್ಮನ್ನು ಆಯ್ಕೆ ಮಾಡಿ. ಇಡೀ ರಾಜ್ಯದಲ್ಲಿ ಬಾಕಿ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡುತ್ತೇನೆ. ಅದಕ್ಕೆ ನಮ್ಮ ಪಕ್ಷ ಬದ್ಧವಾಗಿದೆ," ಎಂದರು.

The Completion of Irrigation Projects In 5 Years If The JDS Comes To Power Says HD Kumaraswamy

ದಲಿತ ಮುಖ್ಯಮಂತ್ರಿ
"ಒಬ್ಬರು ಸ್ವಾಮೀಜಿ ನನಗೆ ಸವಾಲು ಹಾಕಿದ್ದಾರೆ. ದಲಿತರನ್ನೋ ಅಥವಾ ಮುಸಲ್ಮಾನರನ್ನೋ ಮುಖ್ಯಮಂತ್ರಿ ಮಾಡುತ್ತಿರಾ? ಎಂದು ನನ್ನನ್ನು ಕೇಳಿದ್ದಾರೆ. ಅವರಿಗೆ ಗೊತ್ತಿರಲಿ, ನಾನು ಈಗಾಗಲೇ ಸಿಎಂ ಆಗಿದ್ದೇನೆ. ಅಂತಹ ಸಂದರ್ಭ ಬಂದರೆ ದಲಿತರನ್ನೇ ನಮ್ಮ ಪಕ್ಷದಿಂದ ‌ಮುಖ್ಯಮಂತ್ರಿ ಮಾಡುತ್ತೇನೆ," ಎಂದು ಅವರು ಹೇಳಿದರು.

"ನಮ್ಮ ಕುಟುಂಬದವರೇ ಅಧಿಕಾರದಲ್ಲಿ ಇರಬೇಕು ಅಂತೇನಿಲ್ಲ. ಇಡೀ ರಾಜ್ಯವೇ ನಮ್ಮ ಕುಟುಂಬ ಇದ್ದಂತೆ. ಪ್ರಧಾನಮಂತ್ರಿ ಸ್ಥಾನವನ್ನೇ ದೇವೇಗೌಡರು ಬಿಟ್ಟು ಬಂದರು. ಬಿಜೆಪಿ ಬೆಂಬಲ ನೀಡಲು ಮುಂದಕ್ಕೆ ಬಂದರೂ ಅವರು ಪಡೆಯಲಿಲ್ಲ. ಅಂತಹ ಹಿನ್ನೆಲೆ ಹಿಂದಿರುವ ನಮ್ಮ ಕುಟುಂಬ ಸಿಎಂ ಸ್ಥಾನ ಇಟ್ಟುಕೊಂಡು ಕೂರಬೇಕಾ?," ಎಂದು ಕುಮಾರಸ್ವಾಮಿ ಹೇಳಿದರು.

"ನಾನು ಯಾವಾಗಲೋ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವ ಉದ್ದೇಶ ಮಾಡಿದ್ದೆ. ಎರಡನೇ ಬಾರಿ ಸಿಎಂ ಆಗುವ ಸಂದರ್ಭದಲ್ಲಿಯೇ ರಾಜಕಾರಣದಿಂದ ನಿವೃತ್ತಿ ತೆಗೆದುಕೊಳ್ಳಲು ಬಯಸಿದ್ದೆ. ಆದರೆ ಜನರ ಕಷ್ಟದ ಪರಿಸ್ಥಿತಿ ನೋಡಿ ಇನ್ನೂ ರಾಜಕೀಯದಲ್ಲಿ ಇದ್ದೇನೆ. ಕೊರೊನಾ ಸಮಯದಲ್ಲಿ ನಾನು ಫೀಲ್ಡ್‌ಗೆ ಇಳಿಯಲಿಲ್ಲ. ಜನರಿಗಾಗಿ ನಾನು ಸುಮ್ಮನಿದ್ದೆ, ಆದರೆ ಈಗ ಫೀಲ್ಡ್‌ಗೆ ಇಳಿದಿದ್ದೇನೆ," ಎಂದರು.

The Completion of Irrigation Projects In 5 Years If The JDS Comes To Power Says HD Kumaraswamy

ರೈತ ಮುಖಂಡರಿಗೆ 10 ಕಡೆ ಟಿಕೆಟ್
ರೈತ ಸಂಘಟನೆಗಳು ನೇರ ರಾಜಕಾರಣಕ್ಕೆ ಬರಬೇಕು ಎಂದು ಮುಕ್ತ ಕರೆ ನೀಡಿದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಆಸಕ್ತಿ ಇರುವ ರೈತ ಮುಖಂಡರಿಗೆ ನಮ್ಮ ಪಕ್ಷದಿಂದ ಹತ್ತು ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ನೀಡಲಿದೆ ಎಂದು ಘೋಷಣೆ ಮಾಡಿದರು.

ನೀವು ಸ್ವಾತಂತ್ರ್ಯ ಉದ್ಯಾನವನದಲ್ಲಿ ಕೂರಬೇಕಾದವರಲ್ಲ, ವಿಧಾನಸಭೆಯ ಮೂರನೇ ಮಹಡಿಯಲ್ಲಿ ಕೂರಬೇಕಾದವರು. ನಿಮ್ಮಲ್ಲಿ ಅನೇಕರಿಗೆ ಶಕ್ತಿ ಇದೆ. ನಿಮ್ಮ ಜತೆ ನಾನು ಇದ್ದೇನೆ. ನಿಮಗೆ ಎಲ್ಲ ರೀತಿಯ ಶಕ್ತಿ ತುಂಬುವೆ ಎಂದು ಮಾಜಿ ಮುಖ್ಯಮಂತ್ರಿ ಭರವಸೆ ನೀಡಿದರು.

The Completion of Irrigation Projects In 5 Years If The JDS Comes To Power Says HD Kumaraswamy

ಹನುಮ ಜಯಂತಿ ದಿನ ಜಲಧಾರೆ ಆರಂಭ
ರಾಜ್ಯವು ಕಳೆದ 75 ವರ್ಷಗಳಿಂದ ಎದುರಿಸುವ ನೀರಾವರಿ ಅನ್ಯಾಯವನ್ನು ಸರಿ ಮಾಡುವ ಸಲುವಾಗಿ ಜೆಡಿಎಸ್ ಪಕ್ಷವು "ಜನತಾ ಜಲಧಾರೆ' ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಏಪ್ರಿಲ್ 16ರಂದು ಹನುಮ ಜಯಂತಿ ದಿನದಂದು ಚಾಲನೆ ನೀಡಲಾಗುವುದು ಎಂದು ಇದೇ ವೇಳೆ ಕುಮಾರಸ್ವಾಮಿ ಘೋಷಣೆ ಮಾಡಿದರು.

ನಮ್ಮ ರಾಜ್ಯದಲ್ಲಿ ಸಾಕಷ್ಟು ನೀರಿದೆ. ಆದರೆ ಪಕ್ಕದ ರಾಜ್ಯಗಳಲ್ಲಿ ಇಷ್ಟು ನೀರಿನ ಲಭ್ಯತೆ ಇಲ್ಲ. ಆದರೂ ನಾವು ನಮ್ಮಲ್ಲಿ ಇರುವ ಜಲ ಸಂಪತ್ತನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಪ್ರತಿ ಭಾಗಕ್ಕೂ ಜಲ ಸಮಾನತೆ ಬೇಕು. ಇಡೀ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಐದು ವರ್ಷಗಳಲ್ಲಿ ಕಾರ್ಯಗತ ಮಾಡುವ ಬಗ್ಗೆ ಆ ಕಾರ್ಯಕ್ರಮದಲ್ಲಿ ಸಂಕಲ್ಪ ಮಾಡುತ್ತೇವೆ ಎಂದು ತಿಳಿಸಿದರು.

ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ರೈತರು, ರೈತ ಮುಖಂಡರು ಸಕ್ರಿಯವಾಗಿ ಭಾಗಿಯಾಗಬೇಕು ಎಂದು ಅವರು ಮನವಿ ಮಾಡಿದರು. ಜೆಡಿಎಸ್ ಪಕ್ಷ ಯಾವುದೇ ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಹೋರಾಟ ನಡೆಸುವುದಿಲ್ಲ. ಬದಲಿಗೆ ಅಭಿವೃದ್ಧಿ ವಿಷಯಗಳನ್ನು ಮುನ್ನೆಲೆಗೆ ತಂದು ಜನರ ಮುಂದೆ ಹೋಗುತ್ತೇವೆ ಎಂದರು.

ಬಿಜೆಪಿ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು
ಬಿಜೆಪಿ ದಿನಕ್ಕೊಂದು ಭಾವನಾತ್ಮಕ ವಿಷಯವನ್ನು ಇಟ್ಟುಕೊಂಡು ಜನರನ್ನು ಒಡೆಯುತ್ತದೆ. ಬಿಜೆಪಿ ಅದೇನು ಮೋಡಿ ಮಾಡಿದೆಯೋ ಜನರಿಗೆ. ಇನ್ನು ಐದು ವರ್ಷ ಇದೇ ಪರಿಸ್ಥಿತಿ ಮುಂದುವರೆದರೆ ಶ್ರೀಲಂಕಾದಲ್ಲಿ ಸೃಷ್ಟಿ ಆಗಿರುವ ದುಸ್ಥಿತಿಯೇ ಇಲ್ಲೂ ತಲೆ ಎತ್ತಲಿದೆ. ಈಗಲಾದರೂ ಜನರು ಎಚ್ಚೆತ್ತುಕೊಳ್ಳಬೇಕು ಎಂದು ರೈತರಲ್ಲಿ ಕುಮಾರಸ್ವಾಮಿ ಮನವಿ ಮಾಡಿದರು.

ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದೆ
ಮುಖ್ಯಮಂತ್ರಿಯಾಗಿ ನಾನು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿರುವೆ. ನಾನು ಸಿಎಂ ಆಗಿದ್ದಾಗ ಎಂದೂ‌ ಕೋಮು ಗಲಭೆ ಆಗಿಲ್ಲ. ಬಿಜೆಪಿ ಸುಮ್ಮನಿತ್ತು. ಯಾವ ರೈತ ಸಂಘಟನೆಗಳೂ ಬೀದಿಗೆ ಇಳಿದು ಹೋರಾಟ ಮಾಡಲಿಲ್ಲ. ನಾನು ಎರಡು ಬಾರಿ ಸಿಎಂ ಆಗಿದ್ದಾಗಲೂ ಯಾವುದೇ ಪ್ರತಿಭಟನೆಗಳು ಆಗಲಿಲ್ಲ. ಜತೆಗೆ, ನಾನು ಸಿಎಂ ಆಗಿದ್ದಾಗ ಮಾಡಿದ್ದ ಒಳ್ಳೆಯ ಕೆಲಸ ಗಳಿಗೆ ಪ್ರಚಾರವೇ ಸಿಗಲಿಲ್ಲ. ರೈತರಿಗಾಗಿ ಅನೇಕ ಕಾರ್ಯಕ್ರಮ ಕೊಟ್ಟಿದ್ದೆ. ನಾನು ಸಿಎಂ ಆದಾಗ ಅನೇಕ ಕಾರ್ಯಕ್ರಮ ಕೊಟ್ಟೆ. ಆದರೆ ಬಿಜೆಪಿ ಸರ್ಕಾರ ಏನೂ ಮುಂದುವರೆಸಲಿಲ್ಲ, ಎಲ್ಲ ಅಲ್ಲಿಗೆ ನಿಂತಿವೆ. ಋಣ ಮುಕ್ತ ಕಾಯ್ದೆ ತರಲು ಮುಂದಾದೆ. ಬಿಜೆಪಿ ಸರ್ಕಾರ ಬಂತು, ಅದು ಅಲ್ಲಿಗೆ ನಿಂತಿತು ಎಂದು ವಾಗ್ದಾಳಿ ನಡೆಸಿದರು.

ರೈತಪರ ಹೋರಾಟಗಾರ ಪಚ್ಚೆ ನಂಜುಂಡಸ್ವಾಮಿ ಅವರು ಸಂವಾದವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ರಾಜ್ಯ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಪ್ರಕಾಶ್ ಕಮ್ಮರಡಿ, ತಳಿ ಮತ್ತು ಬೀಜ ಸಂರಕ್ಷಣಾ ತಜ್ಞ ಜಿ. ಕೃಷ್ಣ ಪ್ರಸಾದ್, ರೈತಪರ ಹೋರಾಟಗಾರ ಡಾ.ಎಚ್.ವಿ. ವಾಸು ಅವರು ವಿಷಯ ಮಂಡನೆ ಮಾಡಿ 2023ಕ್ಕೆ ಕುಮಾರಸ್ವಾಮಿ ಅವರು ಸಿಎಂ ಆಗುವ ಅಗತ್ಯವನ್ನು ಪ್ರತಿಪಾದಿಸಿದರು.

Recommended Video

      Kumaraswamy ಅವರು ಮಸೀದಿಗಳ ಧ್ವನಿವರ್ಧಕಗಳ ಬಗ್ಗೆ ತಕರಾರು ಏಕೆ? ಎಂದಿದ್ದಾರೆ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+