ಬರ ಪೀಡಿತ ತಾಲೂಕುಗಳ ರೈತರು ಫ್ರೂಟ್ ಐಡಿ ಕಡ್ಡಾಯವಾಗಿ ಮಾಡಿಸಿ
ಚಿಕ್ಕಮಗಳೂರು, ಡಿಸೆಂಬರ್ 19; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬರಪರಿಸ್ಥಿತಿ ಉಂಟಾಗಿದೆ. ಸರ್ಕಾರ ರೈತರಿಗೆ ಬರ ಪರಿಹಾರವನ್ನು ನೀಡುತ್ತದೆ. ಆದರೆ ಇದಕ್ಕಾಗಿ ರೈತರು ಫ್ರೂಟ್ ಐಡಿ ಪಡೆಯುವುದು ಕಡ್ಡಾಯವಾಗಿದೆ.
ಬರ ಘೋಷಣೆಯಾಗಿರುವ ತಾಲ್ಲೂಕುಗಳಲ್ಲಿ ಫ್ರೂಟ್ಸ್ ಮೂಲಕ ರೈತರ ನೋಂದಣಿಯನ್ನು ಶೇ 95ರಷ್ಟು ಮಾಡಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಗಳವಾರ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸಮಗ್ರ ಅಭಿವೃದ್ಧಿ ಪರಿಶೀಲನೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. Farmer Registration and Unified beneficiary InformaTion System (FRUITS) ಐಡಿ ಮಾಡಿಸಲು ಅಧಿಕಾರಿಗಳು ಗಮನಹರಿಸಬೇಕು ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಡೂರು, ಅಜ್ಜಂಪುರ, ಚಿಕ್ಕಮಗಳೂರು ತಾಲ್ಲೂಕುಗಳಲ್ಲಿ ರೈತರ ನೋಂದಣಿ ಶೇ 71ರಷ್ಟು ಮಾತ್ರ ಆಗಿದ್ದು, ಉಳಿದಂತೆ ರೈತರ ನೋಂದಣಿಯಾಗದಿರುವುದು ಕಂಡು ಬಂದಿದೆ.
ಆಯಾಯ ತಾಲ್ಲೂಕುಗಳ ತಹಸೀಲ್ದಾರ್ಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜಂಟಿ ಸಭೆ ನಡೆಸಿ. ಪ್ರತಿ ಹಳ್ಳಿಗಳ ಮನೆ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು 20 ದಿನದೊಳಗೆ ಫ್ರೂಟ್ಸ್ ಐಡಿಯಲ್ಲಿ ನೋಂದಾಯಿಸದ ರೈತರನ್ನು ನೋಂದಾಯಿಸಲು ಕ್ರಮ ವಹಿಸಬೇಕು ಎಂದರು.
ಬರ ಪರಿಹಾರ ಕಾರ್ಯಗಳು; ಚಿಕ್ಕಮಗಳೂರು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯ ಎಲ್ಲ ಗ್ರಾಮಗಳಲ್ಲಿರುವ ವಸತಿ ರಹಿತ, ಅರ್ಹ ಫಲಾನುಭವಿಗಳನ್ನು ಗುರುತಿಸಿ, ಮೇಲಾಧಿಕಾರಿಗಳಿಗೆ ತಿಳಿಸಿ ಎಂದರು.
ಜಿಲ್ಲೆಯಲ್ಲಿ ಬರ ಪೀಡಿತ ಪ್ರದೇಶಗಳಲ್ಲಿ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಎಲ್ಲಾ ತಾಲ್ಲೂಕು ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ನೀಡಲಾಗಿದೆ.
ಜಿಲ್ಲಾ ಮಟ್ಟದ ಅಧಿಕಾರಿಗಳು ಇವುಗಳ ಮೇಲುಸ್ತುವಾರಿಯಲ್ಲಿ ಜನರಿಗೆ ಏನು ತೊಂದರೆಯಾಗದಂತೆ ನಿಗಾ ವಹಿಸಬೇಕು. ಈ ಬಾರಿ ಹಿಂಗಾರು ಹಂಗಾಮಿನಲ್ಲಿ ರಸಗೊಬ್ಬರ, ಬಿತ್ತನೆ ಬೀಜಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಮಳೆ ಕೊರತೆಯಿಂದಾಗಿ ರೈತರಿಗೆ ನಷ್ಟವಾಗಿದ್ದು, ಬೆಳೆ ವಿಮೆ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಫ್ರೂಟ್ಸ್ ಐಡಿ ಮಾಡಿಸುವುದು ಹೇಗೆ?; ಕರ್ನಾಟಕ ಸರ್ಕಾರವು FRUITS ತಂತ್ರಾಂಶದಲ್ಲಿ ರೈತರ ಮಾಹಿತಿಯನ್ನು ದಾಖಲೀಕರಿಸುತ್ತಿದ್ದು, ನಿಮ್ಮ ಆಧಾರ್ ಬಳಸಿ ಐಡಿಯನ್ನು ಸೃಜನೆ ಮಾಡಲಾಗುತ್ತಿದೆ. ಸದರಿ ಐಡಿಯನ್ನು ಸರ್ಕಾರದ ಇಲಾಖೆಗಳಾದ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಸಹಕಾರ, ಪಶು ವೈದ್ಯಕೀಯ ಮತ್ತು ಬ್ಯಾಂಕುಗಳಲ್ಲಿ ಬಳಸಿಕೊಂಡು ಸವಲತ್ತುಗಳನ್ನು ನೀಡಲಾಗುತ್ತಿದೆ.
ಬರ ಪರಿಹಾರ, ಬೆಳೆ ವಿಮೆ ಮತ್ತು ಬ್ಯಾಂಕ್ ಸಾಲ ಹಾಗೂ ಮತ್ತಿತರ ಯೋಜನೆಗಳಿಗೂ ಈ ಐಡಿಯನ್ನು ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ತಾವು ನಿಮ್ಮ ಹತ್ತಿರದ ನಾಡ ಕಛೇರಿ, ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಿ ಐಡಿಯನ್ನು ಪಡೆಯಬಹುದಾಗಿದೆ.
ಐಡಿ ಪಡೆಯಲು ಅಗತ್ಯವಿರುವ ದಾಖಲಾತಿಗಳು
* ಆಧಾರ್ ಕಾರ್ಡ್
* ಬ್ಯಾಂಕ್' ಪಾಸ್ ಪುಸ್ತಕ
* ರೈತರ ಹೆಸರಿನಲ್ಲಿರುವ ಎಲ್ಲಾ ಪಹಣಿಗಳು
* ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ
ಈಗಾಗಲೇ ಐಡಿಯನ್ನು ಪಡೆದಿರುವ ರೈತರು ತಮ್ಮ ಎಲ್ಲಾ ಪಹಣಿಗಳು ಸದರಿ ಐಡಿಯೊಂದಿಗೆ ಜೋಡಣೆಯಾಗಿದೆಯೇ? ಎಂದು ಪರೀಕ್ಷಿಸಿಕೊಳ್ಳಲು ಸಹ ಕರೆ ನೀಡಲಾಗಿದೆ.












Click it and Unblock the Notifications