ಮೂರು ಕೃಷಿ ಕಾಯ್ದೆಗಳಿಗೆ ತಾತ್ಕಾಲಿಕ ತಡೆ ನೀಡಿದ ಸುಪ್ರೀಂಕೋರ್ಟ್
ನವದೆಹಲಿ, ಜನವರಿ 12: ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಇದರಿಂದ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕೊಂಚ ನಿರಾಳತೆ ಸಿಕ್ಕಿದೆ. ಆದರೆ ಇದು ಕಾಯ್ದೆಗಳ ಜಾರಿಗೆ ನೀಡಿರುವ ಸಂಪೂರ್ಣ ತಡೆಯಲ್ಲ.
ಕೃಷಿ ಕಾಯ್ದೆಗಳ ವಿರುದ್ಧ ಸಲ್ಲಿಸಲಾದ ಅರ್ಜಿಗಳ ಕುರಿತು ಮಂಗಳವಾರ ವಿಚಾರಣೆ ಮುಂದುವರಿಸಿದ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ, 'ಮುಂದಿನ ಆದೇಶದವರೆಗೂ ನಾವು ಕೃಷಿ ಕಾಯ್ದೆಗಳ ಜಾರಿಯನ್ನು ಅಮಾನತುಗೊಳಿಸುತ್ತೇವೆ' ಎಂದು ಹೇಳಿದರು.
ಕೃಷಿ ಕಾಯ್ದೆಗಳ ಸಿಂಧುತ್ವದ ಬಗ್ಗೆ ನಮಗೆ ಕಳವಳವಿದೆ. ಜತೆಗೆ ಪ್ರತಿಭಟನೆಯಿಂದ ನಾಗರಿಕರ ಜೀವ ಮತ್ತು ಆಸ್ತಿಗಳಿಗೆ ಹಾನಿಯಾಗುವುದರಿಂದ ರಕ್ಷಿಸುವ ಬಗ್ಗೆ ಆತಂಕವಿದೆ. ನಾವು ಇರುವ ಅಧಿಕಾರಕ್ಕೆ ಅನುಗುಣವಾಗಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಕಾಯ್ದೆಯನ್ನು ತಡೆಹಿಡಿಯುವುದು ಮತ್ತು ಸಮಿತಿ ರಚಿಸುವುದು ನಮ್ಮ ಅಧಿಕಾರಗಳಲ್ಲಿ ಒಂದು ಎಂದು ಸಿಜೆಐ ಎಸ್ಎ ಬೊಬ್ಡೆ ಹೇಳಿದರು.
ಈ ಸಮಿತಿ ನಮಗಾಗಿ ಇರಲಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿರೀಕ್ಷೆಯಿರುವ ನೀವೆಲ್ಲರೂ ಈ ಸಮಿತಿ ಮುಂದೆ ಹೋಗಬಹುದು. ಅದು ಯಾವುದೇ ಆದೇಶ ಹೊರಡಿಸುವುದಿಲ್ಲ ಅಥವಾ ನಿಮ್ಮನ್ನು ಶಿಕ್ಷಿಸುವುದಿಲ್ಲ. ಅದು ನಮಗೆ ವರದಿಯನ್ನಷ್ಟೇ ಸಲ್ಲಿಸುತ್ತದೆ ಎಂದರು. ಮುಂದೆ ಓದಿ.
ಇದು ಮಧ್ಯಸ್ಥಿಕ ಸಮಿತಿ ಅಲ್ಲ
ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯು ಎರಡು ಕಡೆಗಳ ನಡುವೆ ಮಧ್ಯಸ್ಥಿಕೆ ಮಾಡುವುದಿಲ್ಲ. ಬದಲಾಗಿ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಪರಿಗಣಿಸಲಿದೆ ಎಂದು ಸಿಜೆಐ ಹೇಳಿದರು.
ನಾವು ಕಾನೂನುಗಳನ್ನು ಅಮಾನತುಗೊಳಿಸಲು ಆಸಕ್ತಿ ಹೊಂದಿದ್ದೇವೆ, ಆದರೆ ಅದು ಅನಿರ್ದಿಷ್ಟಾವಧಿ ಅಥವಾ ಯಾವುದೇ ಉದ್ದೇಶವಿಲ್ಲದೆ ಅಲ್ಲ. ಶರ್ಮಾ ಅವರಿಂದ ನಮಗೆ ಬಂದ ನಕಾರಾತ್ಮಕ ಮಾಹಿತಿಗಳನ್ನು ನಾವು ಬಯಸುವುದಿಲ್ಲ' ಎಂದು ರೈತರ ಪರ ಹಾಜರಾದ ವಕೀಲ ಎಂಎಲ್ ಶರ್ಮಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಭೂಮಿ ಮಾರಾಟ ಮಾಡೊಲ್ಲ
'ನ್ಯಾಯಾಲಯದ ಮುಂದೆ ಸೋಮವಾರ ರೈತರ ವಾದಗಳನ್ನು ಮಂಡಿಸಿಲ್ಲ. ನಾವು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂಬ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಕೆಲವು ರೈತರು ನನಗೆ ಕರೆ ಮಾಡಿದ್ದಾರೆ. ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂಬ ಸಲಹೆಯ ಹೊರತಾದ ಸಮಿತಿ ವರದಿಯನ್ನು ಒಪ್ಪಿಕೊಳ್ಳುವುದಿಲ್ಲ. ಇದುವರೆಗೂ ಪ್ರಧಾನಿ ನಮ್ಮನ್ನು ಭೇಟಿ ಮಾಡಿಲ್ಲ. ನಮ್ಮ ಭೂಮಿಯನ್ನು ಕಂಪೆನಿಗಳಿಗೆ ಮಾರಾಟ ಮಾಡುವುದಿಲ್ಲ' ಎಂದು ಎಂಎಲ್ ಶರ್ಮಾ ಹೇಳಿದರು.
ಕಾರ್ಪೋರೇಟ್ ಸಂಸ್ಥೆಯೇ ನಷ್ಟ ಕೇಳುತ್ತದೆ
ರೈತರ ಜಮೀನನ್ನು ಕಂಪೆನಿಗಳಿಗೆ ಮಾರಾಟ ಮಾಡಲಾಗುತ್ತದೆ ಎಂದು ಯಾರು ಹೇಳಿದರು ಎಂದು ಸಿಜೆಐ ಪ್ರಶ್ನಿಸಿದರು. 'ಒಮ್ಮೆ ಒಬ್ಬ ರೈತ ಯಾವುದೇ ಕಾರ್ಪೋರೇಟ್ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡರೆ ಉತ್ಪನ್ನದ ಗುಣಮಟ್ಟವನ್ನು ನಿರ್ಧರಿಸಲಾಗುತ್ತದೆ. ಆ ನಿಗದಿತ ಗುಣಮಟ್ಟದಲ್ಲಿ ಉತ್ಪಾದನೆ ಸಾಧ್ಯವಾಗದೆ ಹೋದರೆ ಕಂಪೆನಿಯು ಹಾನಿ ಭರ್ತಿ ಮಾಡಿಕೊಳ್ಳುವಂತೆ ಸೂಚಿಸುತ್ತದೆ' ಎಂದು ಶರ್ಮಾ ಪ್ರತಿಕ್ರಿಯಿಸಿದರು.
ರೈತರಿಗೆ ಸಂತಸವಿದೆ ಎಂದ ಕೇಂದ್ರ
ರೈತರು ಕೃಷಿ ಕಾಯ್ದೆಗಳ ಬಗ್ಗೆ ಸಂತಸ ಹೊಂದಿದ್ದಾರೆ. ರೈತರಲ್ಲದ ವ್ಯಕ್ತಿಗಳು ಇಲ್ಲಿ ತಪ್ಪು ಕಲ್ಪನೆಯನ್ನು ಮೂಡಿಸಿವೆ ಎಂದು ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿತ್ತು. ಸುಪ್ರೀಂಕೋರ್ಟ್ ರಚಿಸಿರುವ ಸಮಿತಿ ಮುಂದೆ ಹಾಜರಾಗಲು ರೈತ ಒಕ್ಕೂಟಗಳು ನಿರಾಕರಿಸಿವೆ ಎಂದು ಹಿರಿಯ ವಕೀಲ ದುಷ್ಯಂತ್ ದಾವೆ ತಿಳಿಸಿದ್ದಾರೆ.
ಟ್ರ್ಯಾಕ್ಟರ್ ಮೆರವಣಿಗೆಗೆ ಅನುಮತಿ ಕೇಳಿ
ಈ ನಡುವೆ ಗಣರಾಜ್ಯ ದಿನದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಜಾಥಾ ನಡೆಸುವ ರೈತ ಸಂಘಟನೆಗಳ ಉದ್ದೇಶದ ವಿರುದ್ದ ದೆಹಲಿ ಪೊಲೀಸರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. 'ಪ್ರತಿಭಟನೆಯ ಹಕ್ಕು ದೇಶದ ಘನತೆಯನ್ನು ಜಾಗತಿಕವಾಗಿ ಕೆಡಿಸುವುದನ್ನು ಒಳಗೊಂಡಿಲ್ಲ' ಎಂದು ಹೇಳಿದ್ದಾರೆ. ಗಣರಾಜ್ಯೋತ್ಸವ ಆಚರಣೆಯನ್ನು ಹಾಳುಮಾಡುವ ಉದ್ದೇಶಿತ ಟ್ರ್ಯಾಕ್ಟರ್ ಮೆರವಣಿಗೆಗೆ ತಡೆ ನೀಡುವಂತೆ ಮನವಿ ಮಾಡಲಾಗಿದೆ. ಇದನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್, ರಾಮಲೀಲಾ ಮೈದಾನ ಅಥವಾ ಇತರೆ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲು ರೈತರು ದೆಹಲಿ ಪೊಲೀಸ್ ಆಯುಕ್ತರ ಬಳಿ ರೈತರು ಅನುಮತಿ ಕೋರಬಹುದು ಎಂದು ಹೇಳಿದೆ.