ಕಬ್ಬಿಗೆ ಸೂಕ್ತ ದರ ನಿಗದಿ ಮಾಡದಿದ್ದರೆ ಅ.5ಕ್ಕೆ ವಿಧಾನಸೌಧ ಮುತ್ತಿಗೆ: ಕುರುಬೂರು ಶಾಂತಕುಮಾರ್
ದಾವಣಗೆರೆ, ಸೆಪ್ಟೆಂಬರ್ 23: ಕಬ್ಬಿನ ಬೆಲೆ ನಿಗದಿ ವಿಚಾರದಲ್ಲಿ ದ್ರೋಹ ಬಗೆಯಲಾಗುತ್ತಿದೆ. ಕಬ್ಬು ಬೆಳೆಗಾರರು ಭಿಕ್ಷೆ ಕೇಳುತ್ತಿಲ್ಲ. ಒಂದು ಕ್ವಿಂಟಾಲ್ಗೆ ಕೇವಲ 50 ರೂಪಾಯಿ ಹೆಚ್ಚಳ ಮಾಡಿದ್ದು, ಯಾವುದಕ್ಕೂ ಸಾಕಾಗುವುದಿಲ್ಲ. ಸೂಕ್ತ ಧಾರಣೆ ನೀಡದಿದ್ದರೆ ಅಕ್ಟೋಬರ್ 5ರಂದು ಬೆಂಗಳೂರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಬ್ಬಿನ ಎಥೆನಾಲ್ ಲಾಭದಲ್ಲಿ ರೈತರಿಗೆ ಲಾಭ ಹಂಚಿಕೆ ಮಾಡುತ್ತಿಲ್ಲ. ಎಫ್ಆರ್ಪಿ ದರ ಪುನರ್ ಪರಿಶೀಲಿಸಬೇಕು. ಕೇಂದ್ರ ಸರ್ಕಾರ ಸಕ್ಕರೆ ಕಂಪನಿಗಳ ಒತ್ತಡಕ್ಕೆ ಮಣಿದು ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡುತ್ತಿದೆ. ವರ್ಷಕ್ಕೆ ಮೂರು ನಾಲ್ಕು ಬಾರಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಸುವ ಕೇಂದ್ರ ಸರ್ಕಾರ, ಎರಡು ವರ್ಷಗಳಿಂದಲೂ ಕಬ್ಬಿನ ದರ ನಿಗದಿ ಮಾಡಿಲ್ಲ. ಈಗ ಕೇವಲ ಕ್ವಿಂಟಾಲ್ಗೆ 50 ರೂ. ಏರಿಕೆ ಮಾಡಿ ಆವೈಜ್ಞಾನಿಕ ಬೆಲೆ ನಿಗದಿ ಮಾಡಿದೆ. ಕೂಡಲೇ ಪುನರ್ ಪರಿಶೀಲಿಸಬೇಕು ಎಂದರು.
ಸೆಪ್ಟೆಂಬರ್ 27ರಂದು ಭಾರತ ಬಂದ್: ಏನಿರುತ್ತೆ? ಏನಿರಲ್ಲ?
ಟನ್ ಕಬ್ಬು ಬೆಳೆಯಲು ಉತ್ಪಾದನಾ ವೆಚ್ಚ 3200 ರೂ.
ಸರ್ಕಾರದ ಕೃಷಿ ಇಲಾಖೆಯ ಪ್ರಕಾರ ಟನ್ ಕಬ್ಬು ಬೆಳೆಯಲು ಉತ್ಪಾದನಾ ವೆಚ್ಚ 3200, ಇದಕ್ಕೆ ಲಾಭ ಸೇರಿಸಿ ದರ ನಿಗದಿಪಡಿಸಬೇಕು. ಉತ್ತರ ಪ್ರದೇಶದಲ್ಲಿ ಶೇಕಡಾ 9 ಇಳುವರಿ ಬರುವ ಕಬ್ಬಿಗೆ 3200 ದರ ನಿಗದಿ ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಇಳುವರಿ ಇರುವ ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತ್ ಬಂದ್ಗೆ ಬೆಂಬಲ
ಕಬ್ಬು ಬೆಳೆಗಾರರಿಗೆ ಸಕ್ಕರೆ ಇಳುವರಿಯಲ್ಲಿ ಮೋಸ, ತೂಕದಲ್ಲಿ ಮೋಸ, ಹಣ ಪಾವತಿ ವಿಳಂಬ , ದರ ನಿಗದಿಯಲ್ಲಿಯೂ ಮೋಸವಾಗುತ್ತಿದೆ. ಎಥೆನಾಲ್ ಉತ್ಪಾದನೆಯಿಂದ ಬರುವ ಲಾಭವನ್ನು ರೈತರಿಗೆ ಹಂಚಿಕೆ ಮಾಡುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರಗಳು ಸಕ್ಕರೆ ಕಂಪನಿಯ ಮಾಲೀಕರ ಹಂಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಣ, ರೈತರ ನಿರಂತರ ಶೋಷಣೆ ಆಗುತ್ತಿದೆ. ರಾಜ್ಯದ ಜನರಿಗೆ ಕೇಂದ್ರ ಸರ್ಕಾರ ಪದೇಪದೇ ದ್ರೋಹ ಮಾಡುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ರೈತರ ಸಹನೆ ಕೆಣಕಬಾರದು. ಅನ್ನದಾತರು ಸಿಡಿದೆದ್ದರೆ ಪರಿಣಾಮ ನೆಟ್ಟಗಿರದು. ಕೇಂದ್ರದ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿ ಕರೆ ನೀಡಲಾಗಿರುವ ಭಾರತ್ ಬಂದ್ ಬೆಂಬಲಿಸಿ ಸೆಪ್ಟೆಂಬರ್ 27ರಂದು ರಾಜ್ಯದಲ್ಲಿ ಕರ್ನಾಟಕ ಬಂದ್ ನಡೆಸಲು ಕರ್ನಾಟಕ ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದೆ ಎಂದು ತಿಳಿಸಿದರು.
ಮೂರು ಕೃಷಿ ಕಾಯ್ದೆಗಳು ರೈತರ ಮರಣಶಾಸನ
ಕೇಂದ್ರ ಸರ್ಕಾರ ರೈತರಿಗೆ ಮಾರಣಾಂತಿಕವಾಗುವ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ರೈತರ ಮರಣಶಾಸನ ಬರೆದಿದೆ. ರೈತರ ರಕ್ಷಣೆಗೆ ಬೇಕಾಗುವ ಕನಿಷ್ಠ ಬೆಂಬಲ ಬೆಲೆ ಶಾಸನಬದ್ಧ ಖಾತರಿ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿದ್ದರೂ, ಕಳೆದ 10 ತಿಂಗಳಿನಿಂದ ನಿರ್ಲಕ್ಷ್ಯತನ ತಾಳುತ್ತಿದೆ. ರೈತ ಹೋರಾಟಗಾರರ ಜೊತೆ ಕೇಂದ್ರ ಸರ್ಕಾರ 12 ಸಭೆ ನಡೆಸಿ ಯಾವುದೇ ಕ್ರಮ ಜಾರಿಯಾಗಿಲ್ಲ, ಕೇಂದ್ರ ಸರ್ಕಾರ ನಾಟಕೀಯ ವರ್ತನೆ ತೋರುತ್ತಿದೆ.
ಪ್ರಜಾ ಸರ್ಕಾರ ಎಂಬುದನ್ನು ಮರೆತು ಕಂಪನಿಗಳ ಸರ್ಕಾರದ ರೀತಿಯಲ್ಲಿ ವರ್ತಿಸುತ್ತಿದ್ದು, ರೈತರನ್ನು, ಕೃಷಿ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲು ಮುಂದಾಗುತ್ತಿದೆ. ಕೇಂದ್ರ ಸರ್ಕಾರವನ್ನು ಎಚ್ಚರಿಸಲು ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಇದೇ 27ರಂದು ಭಾರತ್ ಬಂದ್ಗೆ ಕರೆ ನೀಡಿದೆ. ಈ ಕರೆಯನ್ನು ಬೆಂಬಲಿಸಿ ಕರ್ನಾಟಕದಲ್ಲಿಯೂ ನೂರಾರು ರೈತ, ಜನಪರ, ಕಾರ್ಮಿಕ, ದಲಿತ, ವ್ಯಾಪಾರಿ ಸಂಘಟನೆಗಳು ಕರ್ನಾಟಕ ಬಂದ್ ನಡೆಸಲು ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.Recommended Video
ಬೆಲೆಗಳನ್ನು ಏರಿಸಿ ಸಾಮಾನ್ಯರಿಗೆ ಗದಾಪ್ರಹಾರ
ಜನಸಾಮಾನ್ಯರಿಗೆ ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಮತ್ತಿತರ ಬೆಲೆಗಳನ್ನು ಏರಿಸಿ ಗದಾ ಪ್ರಹಾರ ಮಾಡಿದೆ. ಅದಕ್ಕಾಗಿ ಎಲ್ಲ ವರ್ಗದ ಜನರು ಕರ್ನಾಟಕ ಬಂದ್ಗೆ ಸಹಕಾರ ನೀಡಬೇಕು ಎಂದು ಕುರುಬೂರು ಶಾಂತಕುಮಾರ್ ಮನವಿ ಮಾಡಿದ್ದಾರೆ.
ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆಗಳ ನಡುವೆ ಕಾನೂನುಬದ್ಧ ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿ ಮಾಡಲು ಜಿಲ್ಲಾಧಿಕಾರಿ ಕೂಡಲೇ ಕ್ರಮ ಕೈಗೊಳ್ಳಬೇಕು. ಕಬ್ಬು ಕಟಾವು ವಿಳಂಬ, ನಷ್ಟ ರೈತರಿಗೆ ತಪ್ಪುತ್ತದೆ. ಕಬ್ಬನ್ನು ಫಸಲ್ ಭೀಮಾ ಬೆಳೆ ವಿಮೆ ವ್ಯಾಪ್ತಿಗೆ ತರಬೇಕು. ಅತಿವೃಷ್ಟಿ ಬೆಳೆ ನಷ್ಟವಾಗಿರುವ ರೈತರಿಗೆ ಕೂಡಲೇ ನಷ್ಟ ಪರಿಹಾರ ನೀಡಬೇಕು. ರೈತರು ಹಳ್ಳಿಗಳಲ್ಲಿ ಸ್ವಯಂಪ್ರೇರಿತವಾಗಿ ರಸ್ತೆ ಮೇಲೆ ಎತ್ತಿನಗಾಡಿ, ಎಮ್ಮೆ ಕರು, ದನ ಬಿಟ್ಟು ಪ್ರತಿಭಟನೆ ನಡೆಸುವ ಮೂಲಕ ಬಂದ್ ಬೆಂಬಲಿಸಲಿದ್ದಾರೆ. ಈ ಮೂಲಕ ರೈತರ ಶಕ್ತಿಯನ್ನು ಕೇಂದ್ರ ಸರ್ಕಾರಕ್ಕೆ ತೋರಿಸಬೇಕು. ರಾಜ್ಯದಲ್ಲಿ ಎಲ್ಲ ಜನಪರ ರೈತ ಸಂಘಟನೆಗಳು ಕರ್ನಾಟಕ ಬಂದ್ ಯಶಸ್ವಿಯಾಗಲು ಸಹಕರಿಸಬೇಕು ಎಂದು ಮನವಿ ಮಾಡಿದರು.