ಮಂಡ್ಯ : ಕಬ್ಬಿನ ಗದ್ದೆಗೆ ಬೆಂಕಿ ಹಾಕಿ ಸಾವಿಗೆ ಶರಣಾದ ರೈತ
ಮಂಡ್ಯ, ಜೂ.25 : ಕಾರ್ಖನೆಯಿಂದ ಬರಬೇಕಾದ ಬಾಕಿ ಹಣ ಬಾರದ ಹಿನ್ನಲೆಯಲ್ಲಿ ಕಬ್ಬು ಬೆಳೆಗಾರನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಕಬ್ಬಿನ ಬೆಳೆಗೆ ಬೆಂಕಿ ಹಾಕಿರುವ ರೈತ, ಅದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡಿರುವ ರೈತನನ್ನು ನಿಂಗೇಗೌಡ (50) ಎಂದು ಗುರುತಿಸಲಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಗಾಣದಹೊಸೂರಿನ ನಿವಾಸಿಯಾಗಿರುವ ನಿಂಗೇಗೌಡ ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಾಂಡವಪುರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. [ಬೆಳಗಾವಿ ಅಧಿವೇಶನ, ಕಬ್ಬು ಬೆಳೆಗಾರರ ಹೋರಾಟ]

ನಿಂಗೇಗೌಡರ ಕುಟುಂಬಕ್ಕೆ ಅವರೊಬ್ಬರೇ ಆಧಾರವಾಗಿದ್ದರು. ನಿಂಗೇಗೌಡರ ಪುತ್ರ ವಿಕಲಚೇತನರಾಗಿದ್ದು, ಕೆಲಸ ಮಾಡುವ ಶಕ್ತಿಯನ್ನು ಹೊಂದಿಲ್ಲ. ಸುಮಾರು 4 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದ ನಿಂಗೇಗೌಡರು ಸಾಲ ಮಾಡಿದ್ದರು. ಕಾರ್ಖನೆಯ ಬಾಕಿ ಪಾವತಿಯಾಗದ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ಮಾಡಿರಲಿಲ್ಲ. [ಕಬ್ಬುಬೆಳೆಗಾರರ ಪರವಾಗಿ ಎಚ್ಡಿಕೆ ಪಾದಯಾತ್ರೆ]
ಸಾಲ ಕೊಟ್ಟವರು ಹಣವನ್ನು ವಾಪಸ್ ನೀಡುವಂತೆ ನಿಂಗೇಗೌಡರನ್ನು ಒತ್ತಾಯಿಸುತ್ತಿದ್ದರು. ಸಾಲ ಮರುಪಾವತಿ ಮಾಡಲಾಗದೇ ಸಂಕಷ್ಟಕ್ಕೆ ಸಿಲುಕಿದ ನಿಂಗೇಗೌಡರು ಗುರುವಾರ ಬೆಳಗ್ಗೆ ಹೊಲಕ್ಕೆ ತೆರಳಿ, ಬೆಳೆದುನಿಂತಿದ್ದ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿ, ಅದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
'ಮುಖ್ಯಮಂತ್ರಿಗಳು ದೇಶಾಂತರ ಹೋಗಲಿ' : 'ಕಬ್ಬುಬೆಳೆಗಾರರ ಸಮಸ್ಯೆ ಬಗೆಹರಿಸಲು ಸಾಧ್ಯವಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟು ದೇಶಾಂತರ ಹೋಗಲಿ, ಮಂಡ್ಯದಲ್ಲಿನ ರೈತನ ಆತ್ಮಹತ್ಯೆಗೆ ಸರ್ಕಾರವೇ ನೇರಹೊಣೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಕಬ್ಬು ಬೆಳಗಾರರ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯಲು ಅವರು ಗುರುವಾರ ಧಾರವಾಡದಿಂದ ಬೆಳಗಾವಿಗೆ ಪಾದಯಾತ್ರೆ ಹೊರಟಿದ್ದಾರೆ.
ಕಬ್ಬು ಬೆಳೆಗಾರರಿಗೆ 2013-14 ನೇ ಸಾಲಿನ ಬಾಕಿ ಹಣವನ್ನು ಕೂಡಲೇ ಪಾವತಿಸಿ, ಇಲ್ಲವಾದಲ್ಲಿ ಕಠಿಣ ಕ್ರಮ ಎದುರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಬುಧವಾರ ಎಚ್ಚರಿಕೆ ನೀಡಿದ್ದರು. ಆದರೆ, ಗುರುವಾರ ಬಾಕಿ ಪಾವತಿಯಾಗಿಲ್ಲ ಎಂದು ರೈತ ಸಾವಿಗೆ ಶರಣಾಗಿದ್ದಾನೆ.
ಬೆಳಗಾವಿಯಲ್ಲಿ ರೈತ ಆತ್ಮಹತ್ಯೆ : ಜೂನ್ 8 ರಂದು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರನೊಬ್ಬ ಸಾಲ ತೀರಿಸಲಾಗದೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದರು. ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಹೊರ ವಲಯದಲ್ಲಿನ ತಮ್ಮ ಜಮೀನಿನಲ್ಲಿ ರೈತ ಗುರುನಾಥ ಮಲ್ಲಪ್ಪ ಚಾಪಗಾವಿ (50) ಆತ್ಮಹತ್ಯೆಗೆ ಶರಣಾಗಿದ್ದರು. ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ 43 ಟನ್ ಕಬ್ಬು ಪೂರೈಸಿದ್ದ ಮಲ್ಲಪ್ಪ ಅವರಿಗೆ ಹಣ ಪಾವತಿಯಾಗಿರಲಿಲ್ಲ.












Click it and Unblock the Notifications