ಕೋಲಾರದ ಈ ಸ್ವಾವಲಂಬಿ ಕೃಷಿಕನಿಗೆ ಬಲ ಕೊಟ್ಟ ಜೇನು ಸಾಕಣೆ
ಐಟಿಐ
ಎಲೆಕ್ಟ್ರಿಷಿಯನ್ ನಲ್ಲಿ ಓದು ಮುಗಿಯುತ್ತಿದ್ದಂತೆ ಕೆಲಸಕ್ಕಾಗಿ ಅಲೆದಾಟ ಶುರುವಾಗಿತ್ತು. ಕೆಲಸ ಹುಡುಕಿಕೊಂಡು ಅಲೆಯುತ್ತಿದ್ದರೂ ಸ್ವಾವಲಂಬಿಯಾಗಿ ದುಡಿಯಬೇಕು ಎಂಬ ಹಟವೂ ಒಳಗೊಳಗೇ ಇಣುಕುತ್ತಿತ್ತು. ಕೃಷಿ ಕುಟುಂಬದಲ್ಲೇ ಹುಟ್ಟಿ ಬೆಳೆದ ಇವರಲ್ಲಿ ಹೀಗೊಮ್ಮೆ, ಕೃಷಿಯಲ್ಲೇ ಏಕೆ ಸ್ವಂತವಾಗಿ ಏನನ್ನಾದರೂ ಮಾಡಬಾರದು ಎಂಬ ಆಲೋಚನೆಯೂ ಮಿಂಚಿ ಹೋಯಿತು. ಹೀಗೊಂದು ಆಲೋಚನೆ ಹೊಳೆದದ್ದೇ, ಕೃಷಿ ಹಾದಿ ಹಿಡಿಯಲು ದೃಢ ಮನಸ್ಸು ಮಾಡಿದರು. id="toptextpromo"> id='are-slot-1' class='oiad oi-axt oiadv'>ಮನಸ್ಸು
ಮಾಡಿದ್ದೇನೋ ಆಯಿತು, ಆದರೆ ಕೃಷಿಯಲ್ಲಿ ಮಾಡುವುದಾದರೂ ಏನನ್ನು? ಆಗ ಜೇನು ಕೃಷಿ ಎಂಬುದು ಸಾಕಷ್ಟು ಹೆಸರು ಗಳಿಸಿರಲಿಲ್ಲ. ರೈತರು ಇದನ್ನು ಲಾಭದಾಯಕ ಕೃಷಿ ಎಂದೂ ಪರಿಗಣಿಸಿರಲಿಲ್ಲ. ಆಗ ಕೋಲಾರದ ಈ ಯುವಕ ವಿನಯ್ ಜೇನು ಕೃಷಿ ಮಾಡಿ ಲಾಭ ಮಾಡುತ್ತೇನೆ ಎಂದು ಹೊರಟರು. ಅವರ ಜೇನು ಕೃಷಿ ಹೇಗೆ ಆರಂಭವಾಯಿತು? ಈಗ ಹೇಗೆ ನಡೆಯುತ್ತಿದೆ? ಅವರ "ಹನಿಲೈಫ್' ಕುರಿತ ವರದಿ ಇಲ್ಲಿದೆ... id='are-slot-2' class='oiad oi-axt oiadv'>
ಎಂಟು ವರ್ಷಗಳಿಂದ ಜೇನುಕೃಷಿ
ವಿನಯ್ ಅವರ ಜೇನು ಕೃಷಿಗೆ ಈಗ ಎಂಟು ವರ್ಷ. ಜೇನನ್ನು ಆದಾಯದ ಮೂಲವನ್ನಾಗಿ ಮಾಡಬೇಕೆಂಬ ಹಟದೊಂದಿಗೆ ಜೇನು ಕೃಷಿಯಲ್ಲಿ ತೊಡಗಿಕೊಂಡ ವಿನಯ್ ಕೋಲಾರ ಜಿಲ್ಲೆಯ ತೊಂಡಾಲ ಗ್ರಾಮದವರು. ಕೃಷಿಯನ್ನು ಕಡೆಗಣಿಸುತ್ತಿರುವ ಇಂದಿನ ದಿನಗಳಲ್ಲಿ, ವಿನಯ್ ಜೇನು ಕೃಷಿಯಿಂದಲೇ ಜೀವನ ಕಟ್ಟಿಕೊಂಡಿದ್ದಾರೆ. ತಮ್ಮ ಜಮೀನಿನ ಅರ್ಧ ಎಕರೆಯಲ್ಲಿ ಜೇನು ಸಾಕಾಣಿಕೆ ಆರಂಭಿಸಿ ಕೆ.ಜಿಗಟ್ಟಲೆ ನೈಸರ್ಗಿಕ ಜೇನನ್ನು ತೆಗೆದು ಆದಾಯ ಗಳಿಸುತ್ತಿದ್ದಾರೆ.

50ಕ್ಕೂ ಹೆಚ್ಚು ಜೇನು ಕುಟುಂಬ ಸಾಕಣೆ
ಈಗ ನೈಸರ್ಗಿಕ ಜೇನಿಗೆ ಬೆಲೆ ಹಾಗೂ ಬೇಡಿಕೆಯೂ ಹೆಚ್ಚಾಗಿದೆ. ಜೇನು ತುಪ್ಪದಲ್ಲಿ ಔಷಧೀಯ ಗುಣಗಳಿವೆ ಎಂಬ ಅಂಶವೂ ಬೇಡಿಕೆ ಹೆಚ್ಚಲು ಕಾರಣವಾಗಿದೆ. ಈ ಬೇಡಿಕೆಯನ್ನು ಮನಗಂಡ ವಿನಯ್, ಸ್ಥಳೀಯ ರೈತರ ಸಹಾಯದೊಂದಿಗೆ ಕೃಷಿ ವಿಜ್ಞಾನಿಗಳ ಸಲಹೆ ಪಡೆದು 20ಕ್ಕೂ ಹೆಚ್ಚು ಜೇನು ಪಟ್ಟಿಗೆಗೆಳ ಮೂಲಕ, 50ಕ್ಕೂ ಹೆಚ್ಚು ಜೇನಿನ ಕುಟುಂಬಗಳನ್ನು ಪೋಷಣೆ ಮಾಡುತ್ತಿದ್ದಾರೆ. ಮೊದಲಿಗೆ ಕಾಡಿನಿಂದ ಜೇನು ಸಂಗ್ರಹಿಸಿ ನಂತರ ಬಾಕ್ಸ್ ಗಳ ಮೂಲಕ ಸಾಕಾಣಿಕೆ ಮಾಡುತ್ತಿದ್ದಾರೆ. ಕೆಜಿಗಟ್ಟಲೆ ಜೇನು ಉತ್ಪಾದಿಸಿ, ನೂರಾರು ಕೆಜಿ ಜೇನು ತುಪ್ಪವನ್ನು ವಾರ್ಷಿಕ ಮಾರಾಟ ಮಾಡಿ ವಾರ್ಷಿಕ 5 ರಿಂದ 6 ಲಕ್ಷದಷ್ಟು ಆದಾಯ ಗಳಿಸಿ ಯಶಸ್ವಿ ಕೃಷಿಕ ಎನಿಸಿಕೊಂಡಿದ್ದಾರೆ.

ವಾರಕ್ಕೊಮ್ಮೆ ಪರೀಕ್ಷೆ ಕಡ್ಡಾಯ
ಜೇನು ಸಾಕಾಣಿಕೆ ಅಷ್ಟು ಸರಳ ಕೆಲಸವಲ್ಲ. ಇದನ್ನು ಅರಿತಿದ್ದ ವಿನಯ್ ಅವರು, ಸುಲಭವಾಗಿ ಜೇನು ಸಂಗ್ರಹಿಸುವಂತಹ ಹುತ್ತ ಜೇನು, ತುಡುವೆ, ಮಿಸೆರಿ, ಕೊಲ್ಜೇನು ಸಾಕಾಣಿಕೆ ಮಾಡಿ ಅದರಿಂದ ಜೇನು ಉತ್ಪತ್ತಿ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಜೇನು ಸಂಗ್ರಹವಾಗುವುದು ಕಡಿಮೆ. ಅದರಲ್ಲೂ ಜೇನು ಕೃಷಿಗೂ ಮುನ್ನ ಅದಕ್ಕೆ ಬೇಕಾದ ವಾತಾವರಣ ಸೃಷ್ಟಿ ಮಾಡಬೇಕು. ಸುತ್ತಮುತ್ತ ಹೂಗಿಡಗಳು, ಮಕರಂದ ಇರುವಂತಹ ಬೆಳೆಗಳಿದ್ದರೆ ಜೇನು ಸಂಗ್ರಹಿಸುವುದು ಸುಲಭ. ಇನ್ನು ಮಾಲಿನ್ಯ ರಹಿತ ವಾತಾವರಣದ ಜೊತೆಗೆ ಜೇನು ಹೀರುವ ಕೀಟಗಳಿಂದಲೂ ರಕ್ಷಣೆ ಮಾಡಬೇಕು. ಹಾಗಾಗಿ ವಾರಕ್ಕೊಮ್ಮೆ ಪರೀಕ್ಷೆ ಕಡ್ಡಾಯ. ಇವೆಲ್ಲವನ್ನೂ ಚಾಚೂ ತಪ್ಪದೆ ಪಾಲಿಸುತ್ತಾ ಬಂದಿದ್ದಾರೆ ವಿನಯ್.

"ಯೋಜನೆಯಿದ್ದರೆ ಕೈ ಹಿಡಿವ ಕೃಷಿ"
ವಿನಯ್ ಜೇನು ಕೃಷಿಗೆ ಮನಸೋತ ಸಾಕಷ್ಟು ಪ್ರಗತಿಪರ ರೈತರು, ಆಸಕ್ತರು ಜೇನು ಕೃಷಿ ಕೈಗೊಳ್ಳಲು ಮುಂದಾಗಿದ್ದಾರೆ. ಯಾರ ನೆರವೂ ಇಲ್ಲದೆ, ಎಲ್ಲರ ಗಮನ ಸೆಳೆಯುವಂತೆ ಕೃಷಿ ಮಾಡುತ್ತಾ ಇತರರಿಗೂ ಮಾದರಿಯಾಗಿದ್ದಾರೆ ವಿನಯ್. "ಕೃಷಿಯೊಂದಿಗೆ ಜೇನು ಸಾಕಾಣಿಕೆಯನ್ನೂ ಕೈಗೊಂಡರೆ, ಹೆಚ್ಚುವರಿ ಆದಾಯವನ್ನೂ ಪಡೆಯಬಹುದು. ಆದರೆ ವ್ಯವಸ್ಥಿತವಾಗಿ, ಸೂಕ್ತ ಯೋಜನೆಯೊಂದಿಗೆ ಜೇನು ಕೃಷಿ ಕೈಗೊಳ್ಳಬೇಕು" ಎಂದು ಸಲಹೆ ನೀಡಿದರು.












Click it and Unblock the Notifications