ಲಾಕ್ ಡೌನ್; ದ್ರಾಕ್ಷಿ ಬೆಳೆದ ಕೊಪ್ಪಳದ ರೈತ ಎಲ್ಲರಿಗೂ ಮಾದರಿ
ಕೊಪ್ಪಳ, ಏಪ್ರಿಲ್ 19 : ಲಾಕ್ ಡೌನ್ನಿಂದಾಗಿ ದೇಶದಾದ್ಯಂತ ರೈತರು ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ವಾಣಿಜ್ಯ ಬೆಳೆಯಾದ ದ್ರಾಕ್ಷಿ ಬೆಳೆದವರು ಬೆಲೆ ಕುಸಿತದಿಂದಾಗಿ ಮತ್ತು ಬೇಡಿಕೆ ಇಲ್ಲದೇ ಆತಂಕಗೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ರೈತ ಭೀಮರಾವ್ ದೇಶಪಾಂಡೆ ಇತರ ರೈತರಿಗೆ ಮಾದರಿಯಾಗಿದ್ದಾರೆ. ತನ್ನ ಬೆಳೆ ಹಾಳಾಗದಂತೆ ಮೌಲ್ಯವರ್ಧನೆ ಮಾಡಿ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ವಿಜ್ಞಾನಿಗಳಿಂದ ಸಲಹೆ ಪಡೆದು ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವಲ್ಲಿ ಇಲಾಖಾ ಯೋಜನೆಗಳನ್ನು ಬಳಕೆ ಮಾಡಿಕೊಂಡು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ತೋಟಗಾರಿಕೆ ಇಲಾಖೆ ಸಹಾಯ ಮಾಡುತ್ತಿದೆ.
ರೈತ ಭೀಮರಾವ್ ದೇಶಪಾಂಡೆ 3 ಎಕರೆ ಜಮೀನಿನಲ್ಲಿ ಸೋನಾಕಾ ಹಾಗೂ ಇತರೆ ತಳಿಯ ದ್ರಾಕ್ಷಿ ಬೆಳೆದಿದ್ದಾರೆ. 2016 ರಲ್ಲಿ ದ್ರಾಕ್ಷಿ ಬೆಳೆಯಲು ಆರಂಭಿಸಿದ ಇವರು ಕಳೆದ ವರ್ಷ 10 ಲಕ್ಷಕ್ಕೂ ಅಧಿಕ ಆದಾಯ ಪಡೆದಿದ್ದರು.

ಲಾಕ್ ಡೌನ್ ಪರಿಣಾಮ
ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ದ್ರಾಕ್ಷಿ ಬೆಳೆ ತಡವಾಗಿ ಕಟಾವಿಗೆ ಬಂದಿತು. ಬೇಡಿಕೆ ಇರದೆ ಬೆಲೆ ಕುಸಿತದಿಂದಾಗಿ ತೀವ್ರ ಸಂಕಷ್ಟ ಉಂಟಾಯಿತು. ಗಾಯದ ಮೇಲೆ ಬರೆ ಎಳೆದಂತೆ ಕೊರೊನಾ ಲಾಕ್ ಡೌನ್ನಿಂದಾಗಿ ದ್ರಾಕ್ಷಿ ಮಾರಾಟವಾಗದೇ ಇವರ ರೈತ ಭೀಮರಾವ್ ದೇಶಪಾಂಡೆ ಕಂಗಾಲಾದರು.

ತೋಟಗಾರಿಕಾ ಇಲಾಖೆಗೆ ಭೇಟಿ
ಭೀಮರಾವ್ ದೇಶಪಾಂಡೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಲಿಂಗನಗೌಡರನ್ನು ಭೇಟಿ ಮಾಡಿದರು. ತಮ್ಮ ಸಮಸ್ಯೆಯನ್ನು ಹೇಳಿ ಸಲಹೆಯನ್ನು ಕೇಳಿದರು. ಒಣದ್ರಾಕ್ಷಿ ಮಾಡುವ ಶೆಡ್ ನಿರ್ಮಿಸಿಕೊಂಡು ಮೌಲ್ಯವರ್ಧನೆ ಮಾಡಿದರೆ ವರ್ಷಾನುಗಟ್ಟಲೆ ಶೇಖರಿಸಿಟ್ಟು ಉತ್ತಮ ಬೆಲೆ ಬಂದಾಗ ಮಾರಾಟ ಮಾಡಿ ಉತ್ತಮ ಲಾಭಗಳಿಸಬಹುದು ಎಂದು ಸಲಹೆ ನೀಡಿದರು. ಈ ಬಗ್ಗೆ ತಿಳಿದುಕೊಂಡು ಕೂಡಲೇ ಕಾರ್ಯಪ್ರವೃತ್ತರಾದರು.

ಹಣ್ಣು ಕಟಾವು ಮಾಡಿದರು
ಹಣಕಾಸಿನ ಅಭಾವವಿದ್ದರೂ ಸಾಲ ಮಾಡಿ ತೋಟಗಾರಿಕೆ ಅಧಿಕಾರಿ ಮಾಬುಸಾಬ ಪಾಟೀಲ್ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಮಣೂಕ ಶೆಡ್ ನಿರ್ಮಾಣ ಮಾಡಿಕೊಂಡು ಏಪ್ರಿಲ್ ಮೊದಲ ವಾರದಲ್ಲಿ ಹಣ್ಣುಗಳನ್ನು ಕಟಾವು ಮಾಡಿದರು. ಸದ್ಯ ಒಣ ದ್ರಾಕ್ಷಿ ಸಿದ್ಧವಾಗಿದ್ದು, ವರ್ಗೀಕರಿಸಿ ಪ್ಯಾಕಿಂಗ್ ಮಾಡಿ ಶೈತ್ಯಾಗಾರದಲ್ಲಿ ಇಟ್ಟಲ್ಲಿ ಉತ್ತಮ ಬೆಲೆ ಬಂದಾಗ ಮಾರಾಟ ಮಾಡಬಹುದು.

ರೈತರು ಹೇಳುವುದೇನು?
ರೈತ ಭೀಮರಾವ್ ದೇಶಪಾಂಡೆ ಈ ಕುರಿತು ಮಾತನಾಡಿದ್ದು, "ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದೇ ನಾನು ಸಂಕಷ್ಟದಲ್ಲಿದ್ದೆ. ಆಗ ಕೊಪ್ಪಳ ತೋಟಗಾರಿಕೆ ಉಪನಿರ್ದೇಶಕರು ಮತ್ತು ಯಲಬುರ್ಗಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಿದಾಗ ಮಣೂಕಾ ಶೆಡ್ ನಿರ್ಮಿಸಿಕೊಂಡು ಒಣ ದ್ರಾಕ್ಷಿ ಮಾಡಲು ಸಲಹೆ ನೀಡಿದರು. ನಾನು ಕಾರ್ಯಪ್ರವೃತ್ತನಾಗಿ ಸುಮಾರು 30 ಟನ್ ದ್ರಾಕ್ಷಿ ಹಣ್ಣುನ್ನು ಒಣ ದ್ರಾಕ್ಷಿ ಮಾಡಲು ತೀರ್ಮಾನಿಸಿದೆ. ಸದ್ಯ 5 ರಿಂದ 6 ಟನ್ ಒಣ ದ್ರಾಕ್ಷಿ ಸಿದ್ದವಾಗಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಬೆಲೆ ದೊರೆಯುವ ನಿರೀಕ್ಷೆಯಲ್ಲಿದ್ದೇನೆ" ಎಂದು ಹೇಳಿದ್ದಾರೆ.












Click it and Unblock the Notifications