ಸೇವಂತಿಗೆ ಬೆಳೆದು ಲಾಭದ ಸಿಹಿ ಸವಿದ ಹಾಸನದ ರೈತ
ಹಾಸನ, ಆಗಸ್ಟ್ 31 : ಹಾಸನ ಜಿಲ್ಲೆಯ ರೈತರೊಬ್ಬರು ಸೇವಂತಿಗೆ ಮತ್ತು ಹಳದಿ ಸೇವಂತಿಗೆ ಬೆಳೆ ಬೆಳೆದು ಲಾಭದ ಸಿಹಿ ಸವಿದಿದ್ದಾರೆ. ತೊಂಡೆ, ಕ್ಯಾರೆಟ್, ಶುಂಠಿ, ಮೆಣಸಿನಕಾಯಿ ಬೆಳೆದು ಹೆಚ್ಚಿನ ಲಾಭ ಕಾಣದ ರೈತ ಹೂವಿನ ಬೆಳೆಯಲ್ಲಿ ಲಾಭ ಪಡೆದಿದ್ದಾರೆ.
ಇವರು ದೊರೆಸ್ವಾಮಿ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಬಿ.ಸಮುದ್ರವಳ್ಳಿ ಗ್ರಾಮದ ನಿವಾಸಿ. ತಮ್ಮ 5 ಎಕರೆ ಜಮೀನಿನಲ್ಲಿ 4047 ಚದರ ಮೀಟರ್ ಪಾಲಿ ಹೌಸ್ ನಿರ್ಮಾಣ ಮತ್ತು ಮಳೆ ನೀರು ಕೊಯ್ಲು ವಿನ್ಯಾಸವನ್ನು ಅಳವಡಿಸಿಕೊಂಡು ಬೆಳೆ ಬೆಳೆದಿದ್ದಾರೆ.
ಮಳೆ ನೀರನ್ನು ಕೃಷಿ ಹೊಂಡದಲ್ಲಿ ಸಂಗ್ರಹಿಸಿ ಸೇವಂತಿಗೆ ಬೆಳೆಯನ್ನು ಪಾಲಿ ಹೌಸ್ನಲ್ಲಿ ಮತ್ತು ಹಳದಿ ಸೇವಂತಿಗೆಯನ್ನು ಬೆಳೆದು ಹೆಚ್ಚಿನ ಆದಾಯಗಳಿಸುವಲ್ಲಿ ಯಶಸ್ವಿಯಾಗಿ ಇತರರಿಗೆ ಮಾದರಿಯಾಗಿದ್ದಾರೆ.
ದೊರೆಸ್ವಾಮಿಯವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಹನಿ ನೀರಾವರಿ ವ್ಯವಸ್ಥೆಯಲ್ಲಿ ಮೊದಲು ತೊಂಡೆಕಾಯಿ ಬೆಳೆಯುತ್ತಿದ್ದರು.

ಮೊದಲ ಬಾರಿಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಂದ ತಾಂತ್ರಿಕ ಮಾಹಿತಿ ಪಡೆದು, ಮಳೆ ನೀರು ಕೊಯ್ಲು ವಿನ್ಯಾಸವನ್ನೊಳಗೊಂಡ ಹಸಿರುಮನೆ ಹಾಗೂ ಕೃಷಿ ಹೊಂಡ ಮಾಡಿ ಹಸಿರು ಮನೆಯಲ್ಲಿ ಬಿಳಿ ಸೇವಂತಿಗೆ ಬೆಳೆದು ಹೆಚ್ಚಿನ ಇಳುವರಿ ಪಡೆಯುತ್ತಿದ್ದಾರೆ.
ರೈತರು ಚೆಂಡು ಹೂವನ್ನು ಬೆಳೆದು ತೋಟಗಾರಿಕೆ ಇಲಾಖೆ ವತಿಯಿಂದ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ಪ್ರೋತ್ಸಾಹಧನ ಹಾಗೂ ತಾಂತ್ರಿಕ ಮಾರ್ಗದರ್ಶನ ಪಡೆದಿದ್ದಾರೆ. ಮಳೆ ನೀರು ಕೊಯ್ಲಿನಿಂದ ನೀರಿನ ಸಮರ್ಪಕ ಬಳಕೆ, ಹನಿ ನೀರಾವರಿ ಮೂಲಕ ರಸಾವರಿ ಹಾಗೂ ಕೂಲಿ ಆಳುಗಳ ಖರ್ಚು ಕಡಿಮೆ ಮಾಡಲು ಹಾಗೂ ಪಾಲಿಥಿನ್ ಹೊದಿಕೆ ಬಳಕೆಯಿಂದ ಒಳ್ಳೆಯ ಗುಣಮಟ್ಟದ ಬೆಳೆಯನ್ನು ಹೆಚ್ಚಿನ ಇಳುವರಿ ಜೊತೆ ಪಡೆಯುತ್ತಿದ್ದಾರೆ.
ದೊರೆಸ್ವಾಮಿ ಹಸಿರು ಮನೆ ನಿರ್ಮಾಣ ಜೊತೆಗೆ ಮಳೆ ನೀರು ಕೊಯ್ಲು ಹಾಗೂ ಕೃಷಿ ಹೊಂಡ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯ 'ಕೃಷಿ ಭಾಗ್ಯ' ಯೋಜನೆಯಡಿ 2016-17 ನೇ ಸಾಲಿನಲ್ಲಿ 19.2 ಲಕ್ಷ ರೂ. ಸಹಾಯಧನವನ್ನು ಪಡೆದಿದ್ದಾರೆ.

'ಕಟ್ ಫ್ಲವರ್ ಪ್ರದೇಶ ವಿಸ್ತರಣೆ' ಯೋಜನೆಯಡಿ 2018-19 ನೇ ಸಾಲಿನಲ್ಲಿ 16000 ರೂ.ಗಳನ್ನು ಪಡೆದಿದ್ದಾರೆ. ಸಮಗ್ರ ತೋಟಗಾರಿಕೆ ಅಭಿವೃದ್ದಿ ಮಿಷನ್ ಯೋಜನೆಯಡಿ 'ಬಿಡಿ ಹೊ ಪ್ರದೇಶ ವಿಸ್ತರಣೆ' ಕಾರ್ಯಕ್ರಮದಡಿ 2019-20ನೇ ಸಾಲಿನಲ್ಲಿ 9000 ರೂ.ಗಳನ್ನು ಪಡೆದು ಯಶಸ್ವಿಯಾಗಿ ಸೇವಂತಿಗೆ ಹಾಗೂ ಚೆಂಡು ಹೂ ಬೆಳೆ ಬೆಳೆದಿದ್ದಾರೆ.
ಈ ಹಿಂದೆ ತೊಂಡೆ, ಕ್ಯಾರೆಟ್, ಶುಂಠಿ, ಮೆಣಸಿನಕಾಯಿ ಮತ್ತು ಸುಗಂಧರಾಜ ಬೆಳೆಗಳನ್ನು ಬೆಳೆಯುತ್ತಿದ್ದರು. ವೈಜ್ಞಾನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡಿರಲಿಲ್ಲ. ಆದಾಯ ಬಂದರು ಖರ್ಚು ತುಂಬ ಇರುತ್ತಿದರಿಂದ ನಿವ್ವಳ ಆದಾಯ ಪಡೆಯಲು ಸಾಧ್ಯವಾಗುತಿರಲಿಲ್ಲ.
ತೋಟಗಾರಿಕೆ ಇಲಾಖೆ ಮಾರ್ಗದರ್ಶನ ಪಡೆದು, ನೀರಿನ ವ್ಯವಸ್ಥೆಗೆ ಪಾಲಿಹೌಸ್ನಲ್ಲಿ ಮಳೆ ನೀರಿನ ಕೊಯ್ಲು ಮಾಡಿ ಕೃಷಿಹೊಂಡದಲ್ಲಿ ಸಂಗ್ರಹಿಸಿ ಹನಿ ನೀರಾವರಿಯನ್ನು ಅಳವಡಿಸಿಕೊಂಡಿದ್ದರು. ಇದರಿಂದ ಬೇಸಿಗೆಯಲ್ಲೂ ಬೇಕಾಗುವಷ್ಟು ನೀರನ್ನು ಪಡೆದರು.












Click it and Unblock the Notifications