ತೋಟಗಾರಿಕಾ ಇಲಾಖೆ ಸಹಕಾರ; ರೈತ ಬಂಗಾರೇಶ್ ಬದುಕು ಬಂಗಾರ
ಶಿವಮೊಗ್ಗ, ಮೇ 16; ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆದು ರೈತರು ತಮ್ಮ ಬದುಕು ಕಟ್ಟಿಕೊಳ್ಳಬಹುದು. ಅದಕ್ಕಾಗಿ ಮೊದಲು ಯಾವ ಯೋಜನೆಗಳು ಲಭ್ಯವಿದೆ? ಎಂದು ಸಮೀಪದ ಇಲಾಖೆಗಳ ಕಚೇರಿಯಿಂದ ಮಾಹಿತಿ ಪಡೆಯಬೇಕು.
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಕಸಬಾ ಹೋಬಳಿಯ ಮಾವಲಿ ಗ್ರಾಮದ ರೈತ ಬಂಗಾರೇಶ್ ಕೆ. ವಿ. ಅಡಿಕೆ ಸಂಸ್ಕರಣಾ ಘಟಕ ನಿರ್ಮಿಸಿಕೊಳ್ಳುವ ಮೂಲಕ ತಮ್ಮ ಬದುಕನ್ನು ಸುಂದರವಾಗಿಸಿಕೊಂಡಿದ್ದಾರೆ.
ಅಡಿಕೆ ಕೃಷಿಯಲ್ಲಿ ಯಶಸ್ಸಿನ ಹೆಜ್ಜೆ ಇಟ್ಟಿರುವ ಬಂಗಾರೇಶ್ ತೋಟಗಾರಿಕೆ ಇಲಾಖೆಯಿಂದ ಸೂಕ್ತವಾದ ಮಾಹಿತಿ ಪಡೆದು ಅಡಿಕೆ ಸಂಸ್ಕರಣಾ ಘಟಕ ನಿರ್ಮಿಸಿದರು. ಈ ಘಟಕ ನಿರ್ಮಾಣಕ್ಕೆ 2020-2021ನೇ ಸಾಲಿನ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಸಹಾಯಧನ ಸಿಕ್ಕಿದೆ.

ಹಲವು ಯೋಜನೆಗಳ ಬಗ್ಗೆ ಅರಿವಿಲ್ಲದೇ ರೈತರು ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಾರೆ. ಆದರೆ ಬಂಗಾರೇಶ್ ತೋಟಗಾರಿಕೆ ಇಲಾಖೆಯಿಂದ ಸೂಕ್ತವಾದ ಮಾಹಿತಿ ಪಡೆದು ಅಡಿಕೆ ಸಂಸ್ಕರಣಾ ಘಟಕ ನಿರ್ಮಿಸಿಕೊಂಡು ಬದುಕು ಬಂಗಾರವಾಗಿಸಿಕೊಂಡಿದ್ದಾರೆ.
ಸೊರಬ ತಾಲೂಕಿಗೆ ಮಾದರಿ ರೈತ; ಬಂಗಾರೇಶ್ ಸೊರಬ ತಾಲ್ಲೂಕಿಗೆ ಈಗ ಮಾದರಿ ರೈತರಾಗಿದ್ದಾರೆ. ಕೃಷಿಯಲ್ಲಿ ತಾವು ಯಶಸ್ಸುಗಳಿಸಿರುವುದು ಮಾತ್ರವಲ್ಲ ಸ್ಥಳೀಯರಿಗೆ ಉದ್ಯೋಗ ನೀಡಿ ಅವರ ಜೀವನಕ್ಕೂ ಆಧಾರವಾಗಿದ್ದಾರೆ.
ತೋಟಗಾರಿಕೆ ಇಲಾಖೆಯ ನೆರವಿನಿಂದ ಮಧ್ಯವರ್ತಿಗಳ ಸಹಾಯವಿಲ್ಲದೇ ಸ್ವಾವಲಂಬಿ ಬದುಕು ರೂಪಿಕೊಂಡಿದ್ದಾರೆ. ಅಡಿಕೆ ಕೃಷಿಯಲ್ಲಿನ ಆದಾಯ ದ್ವಿಗುಣವಾಗಿದೆ. ಈ ಮೊದಲು ಬೆಳೆದಂತಹ ಅಡಿಕೆ ಫಸಲನ್ನು ಗುತ್ತಿಗೆ ಅಥವಾ ಖೇಣಿ ರೂಪದಲ್ಲಿ ಪ್ರತಿ ಎಕರೆಗೆ ರೂ. 2.5 ಲಕ್ಷಕ್ಕೆ ನೀಡುತ್ತಿದ್ದರು. ಇದರಿಂದ ನಷ್ಟವಾಗುತ್ತಿತ್ತು.

ಇದಕ್ಕೆ ಪರಿಹಾರ ಪಡೆಯಲು ಸೊರಬದಲ್ಲಿರುವ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಅಡಿಕೆ ಸಂಸ್ಕರಣಾ ಘಟಕ ಸ್ಥಾಪಿಸುವುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದುಕೊಂಡು ಇಲಾಖೆಯಿಂದ ರೂ. 7.24 ಲಕ್ಷ ಸಹಾಯಧನ ಪಡೆದುಕೊಂಡು ತಮ್ಮ ಸ್ವಂತ ಜಮೀನಿನಲ್ಲೇ ಸಂಸ್ಕರಣಾ ಘಟಕ ಸ್ಥಾಪಿಸಿದರು.
ಬಂಗಾರೇಶ್ ಪ್ರಸ್ತುತ ಅಡಿಕೆಯ ಪ್ರತಿ ಎಕರೆಗೆ ರೂ. 4.5 ಲಕ್ಷದಷ್ಟು ಆದಾಯ ಪಡೆಯುತ್ತಿದ್ದಾರೆ. ಈ ಘಟಕ ನಿರ್ಮಾಣದಿಂದ ಅಡಿಕೆ ಫಸಲಿಗೆ ಸಂಬಂಧಿಸಿದ ಎಲ್ಲ ಕೆಲಸ ಕಾರ್ಯಗಳು ಒಂದೇ ಸೂರಿನಡಿಯಲ್ಲಿ ನಿರ್ವಹಣೆ ಆಗುತ್ತಿದೆ. ಅಡಿಕೆ ಜೊತೆಗೆ ತೋಟದಲ್ಲಿ ಕಾಳುಮೆಣಸು ಮತ್ತು ಕೋಕೋಗಳನ್ನು ಬೆಳೆಯುತ್ತಿದ್ದಾರೆ.
ರೈತ ಬಂಗಾರೇಶ್ ಹೊರಗಿನಿಂದ ಗೊಬ್ಬರವನ್ನು ಖರೀದಿ ಮಾಡುವುದು ನಿಲ್ಲಿಸಿ, ತಮ್ಮಲ್ಲೇ ಇರುವ ಅಡಿಕೆ ಸಂಸ್ಕರಣಾ ಘಟಕದಿಂದ ಸಿಗುವ ಅಡಿಕೆ ಸಿಪ್ಪೆಯನ್ನು ಬಳಸಿಕೊಂಡು ಗೊಬ್ಬರವನ್ನು ತಯಾರಿಸುವ ಯೋಜನೆಯನ್ನು ಕೂಡ ಹಾಕಿಕೊಂಡಿದ್ದಾರೆ.
ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಆದಾಯದಲ್ಲಿ ಪ್ರಗತಿ ಸಾಧಿಸುವ ಮೂಲಕ ಅಡಿಕೆ ಕೃಷಿಯಲ್ಲಿ ಯಶಸ್ಸನ್ನು ಸಾಧಿಸಿರುವ ಬಂಗಾರೇಶ್ ಇತರ ರೈತರಿಗೆ ಮಾದರಿಯಾಗಿದ್ದಾರೆ.
ರೈತ ಬಂಗಾರೇಶ್ ಮಾತನಾಡಿ, "ತೋಟಗಾರಿಕೆ ಇಲಾಖೆ ನೆರವಿನಿಂದ ಅಡಿಕೆ ಸಂಸ್ಕರಣಾ ಘಟಕವನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಯಿತು. ನನ್ನ ಆದಾಯದ ಸ್ಥಿತಿ ಉತ್ತಮವಾಗಿದ್ದು, ಸಾಕಷ್ಟು ರೈತರು ಅಡಿಕೆ ಸಂಸ್ಕರಣಾ ಘಟಕದ ಬಗ್ಗೆ ಮಾಹಿತಿ ಪಡೆದುಕೊಳ್ಳುವುದಕ್ಕಾಗಿ ನನ್ನ ಬಳಿ ಬರುತ್ತಿದ್ದಾರೆ. ಈ ಯೋಜನೆಯಿಂದ ನನಗೆ ತುಂಬಾ ಉಪಯೋಗವಾಗಿದ್ದು ಸಂತಸ ತಂದಿದೆ" ಎಂದು ಹೇಳಿದ್ದಾರೆ.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಕಾಶ್ ಮಾತನಾಡಿ, "ಅಡಿಕೆ ಬೆಳೆಯ ಜೊತೆಗೆ ಮಿಶ್ರ ಬೆಳೆಗಳಾದ ಕಾಳುಮೆಣಸು, ಕೋಕೋ ಏಲಕ್ಕಿ ಮುಂತಾದ ಬೆಳೆಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ನೀಡಲಾಗುತ್ತದೆ. ಬಂಗಾರೇಶ್ ಅವರಿಗೆ 2020-21 ನೇ ಸಾಲಿನಲ್ಲಿ ಶೇ.40 ಸಹಾಯಧನ ಅಂದರೆ ರೂ.7.24ಲಕ್ಷ ಒದಗಿಸಿರುವುದರಿಂದ ಅವರು ಅಡಿಕೆ ಸಂಸ್ಕರಣಾ ಘಟಕವನ್ನು ನಿರ್ಮಿಸಿಕೊಂಡು ತೋಟಗಾರಿಕೆಯಲ್ಲಿ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗಿದೆ" ಎಂದರು.
ವರದಿ
ಭರತ್ಎಂ. ಎಸ್.
ಅಪ್ರೆಂಟಿಸ್ ವಾರ್ತಾ ಇಲಾಖೆ












Click it and Unblock the Notifications