'ಜೇನುನೊಣಕ್ಕೆ ರಾಜ್ಯ ಕೀಟದ ಸ್ಥಾನಮಾನ ನೀಡುವ ಬಗ್ಗೆ ಕ್ರಮ'
ಬೆಂಗಳೂರು, ಜೂನ್ 18: ಜೇನುನೊಣಗಳು ರೈತರಿಗೆ ಬಹಳ ಲಾಭದಾಯಕ ಕೀಟವಾಗಿವೆ. ಅವುಗಳಿಗೆ ರಾಜ್ಯದ ಕೀಟದ ಸ್ಥಾನಮಾನ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಎಸ್.ಪಿ. ಶೇಷಾದ್ರಿ ತಿಳಿಸಿದ್ದಾರೆ.
'ರಾಷ್ಟ್ರೀಯ ಪ್ರಮುಖ ಕೃಷಿ ಕೀಟ ಸಂಪನ್ಮೂಲಗಳ ದಳ' (NBAIR) ಸಂಸ್ಥೆಯ ನಿರ್ವಹಣಾ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿ, ಜೇನುನೊಣ ವಾಣಿಜ್ಯ ಮಟ್ಟದಲ್ಲಿ ಹೆಸರುವಾಸಿ ಆಗಿರುವ ಕಾರಣ ಹಾಗೂ ಜೇನುನೊಣಗಳ ಪರಾಗ ಸ್ಪರ್ಶ ಕ್ರಿಯೆಯ ನಿಪುಣತೆಯನ್ನು ಪರಿಗಣಿಸಿ, ಜೇನುನೊಣವನ್ನು ಕರ್ನಾಟಕ ರಾಜ್ಯ ಕೀಟ ಎಂದು ಘೋಷಣೆ ಮಾಡಲು ನನ್ನ ನೇತೃತ್ವದಲ್ಲಿ ಜೀವವೈವಿಧ್ಯ ಮಂಡಳಿ ಕ್ರಮ ಕೈಗೊಂಡಿದೆ ಎಂದರು.
ಕರ್ನಾಟಕ ಜೀವವೈವಿಧ್ಯ ಮಂಡಳಿಯ ಸಹಾಯಕ ಸಂಶೋಧಕ (ಪ್ರಾಣಿಶಾಸ್ತ್ರ) ಎಸ್.ಪ್ರೀತಮ್ ಮಾತನಾಡಿ, ಬೆಳೆ ನಾಶ ಮಾಡುವ ಕೀಟಗಳನ್ನು ರಾಸಾಯನಿಕ ಕೀಟನಾಶಕಗಳಿಂದ ನಿಯಂತ್ರಿಸುವ ಬದಲು, ಪ್ರಾಕೃತಿಕವಾಗಿ ಲಭ್ಯವಿರುವ ಕೀಟಹಾರಿ ಪಕ್ಷಿಗಳ ಬಳಕೆಯಿಂದ ನಿಯಂತ್ರಿಸಿ, ಪ್ರಕೃತಿ ಹಾನಿ ತಡೆಯುವುದು ಉತ್ತಮ ಎಂದು ಸಲಹೆ ಮಾಡಿದರು.

ಜೀವ ವೈವಿಧ್ಯ ಮಂಡಳಿಯ ಉನ್ನತ ವಿಜ್ಞಾನಿಗಳು ಹಾಗೂ ಸಂಶೋಧಕರು ಮಾತನಾಡಿ, ಕರ್ನಾಟಕ ರಾಜ್ಯದ ಕೀಟಗಳು ಮತ್ತು ಅವುಗಳಿಂದ ರೈತ ಸಮುದಾಯಕ್ಕೆ ಒದಗುತ್ತಿರುವ ವಿವಿಧ ಸೇವೆಗಳು, ಉಪಯೋಗಗಳು ಹಾಗೂ ಅನುಪಯೋಗಗಳ ಬಗ್ಗೆ ಚರ್ಚೆ ನಡೆಸಿದರು.
ಮುಖ್ಯವಾಗಿ 'ಫಾಲ್ ಆರ್ಮಿ ವರ್ಮ್' ಎಂಬ ಅಪಾಯಕಾರಿ ಕೀಟ ನಿತ್ಯ ಬಳಸುವ ಹಲವಾರು ತರಕಾರಿ ಸಸ್ಯಗಳ ಮೇಲೆ ಪ್ರಹಾರ ಮಾಡುತ್ತಿದ್ದು, ಬೆಳೆಗಾರರಿಗೆ ನಷ್ಟ ಉಂಟು ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಈ ಕೀಟವನ್ನು ತಡೆಗಟ್ಟುವ ಬಗ್ಗೆ ವ್ಯಾಪಕ ಚರ್ಚೆ ನಡೆಯಬೇಕು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications