ಎಕರೆಗೆ 20 ಮರಗಳನ್ನು ನೆಡಲೇ ಬೇಕಂತೆ: ಹೊಸ ವಿವಾದ ಸಾಧ್ಯತೆ
ಬೆಂಗಳೂರು, ಸೆಪ್ಟೆಂಬರ್ 6: ರಾಜ್ಯದಲ್ಲಿ ಇನ್ನುಮುಂದೆ ರೈತರು ಪ್ರತಿ ಒಂದು ಎಕರೆಯಲ್ಲಿ ಕನಿಷ್ಠ 20ಮರಗಳನ್ನು ನೆಟ್ಟು ಪೋಷಿಸುವುದನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ನಿರ್ಧಾರ ಭಾರಿ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಒಂದು ಎಕರೆಗೆ ಕನಿಷ್ಠ ಮರಗಳನ್ನು ನೆಟ್ಟರೆ ಅರ್ಧ ಎಕರೆಯಷ್ಟು ಭೂಮಿ ಮರಗಳ ಪಾಲಾಗಲಿದ್ದು ರೈತರು ಕೃಷಿ ಉತ್ಪನ್ನಗಳನ್ನು ಬೆಳೆಯಲು ಕಷ್ಟಕರವಾಗಲಿದೆ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಹೊಸ ಕ್ರಮ ವಿವಾದವನ್ನು ಸೃಷ್ಟಿಸಲಿದೆ ಎನ್ನಲಾಗುತ್ತಿದೆ.ಈ ಕುರಿತು ಗುರುವಾರ ವಿಕಾಸಸೌಧದಲ್ಲಿ ಅರಣ್ಯ ಸಚಿವ ಆರ್ ಶಂಕರ್ ಮಾತನಾಡಿ ಪ್ರತಿ ಎಕರೆಯಲ್ಲಿ 20 ಮರಗಳನ್ನು ನೆಟ್ಟು ಪೋಷಿಸಿದರೆ ರೈತರಿಗೆ ಅನುಕೂಲವಾಗುವುದರ ಜತೆಗೆ ಪರಿಸರ ಸಂರಕ್ಷಣೆ ಮತ್ತು ಹಸಿರೀಕರಣ ದುಪ್ಪಟ್ಟಾಗಲಿದೆ ಎಂದು ಅಭಿಪ್ರಾಯಪಟ್ಟರು.

ಹಾಗೂ ಈಕುರಿತು ತಜ್ಞರೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಜೊತೆ ಪ್ರತಿ ಮರಕ್ಕೆ 200ರೂ. ಪ್ರೋತ್ಸಾಹಧನವನ್ನು ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದರು. ರಾಜ್ಯದಲ್ಲಿ ಹಸಿರು ಪರಿಸರ ಹೆಚ್ಚಿಸುವ ಅಗತ್ಯವಿದ್ದು, ಕೃಷಿ ಜಮೀನಿನಲ್ಲಿ ಮರ ಬೆಳೆಸುವ ಕೃಷಿ ಪ್ರೋತ್ಸಾಹ ಯೋಜನೆ ಜಾರಿಗೊಳಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ಮಾತನಾಡಿದ ಅವರು ಈ ವರದಿಯನ್ನು ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಮನವಿಯಂತೆ ಕ್ರಮ ಕೈಗೊಳ್ಳಲಾಗಿದ್ದು, ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬಿಡಲಾಗಿದೆ ಎಂದು ಹೇಳಿದರು.












Click it and Unblock the Notifications