'ಸಿತ್ರಾಂಗ್' ಚಂಡಮಾರುತದ ಭೀತಿ: ಅಕ್ಕಿಯ ಬೇಲೆ ಶೇ.5ರಷ್ಟು ಏರಿಕೆ
ಬೆಂಗಳೂರು, ಅಕ್ಟೋಬರ್ 26: ಸಿತ್ರಾಂಗ್ ಚಂಡಮಾರುತದ ಅಬ್ಬರದ ಪರಿಣಾಮವಾಗಿ ಪಶ್ಚಿಮ ಬಂಗಾಳದಲ್ಲಿ ಕಳೆದ ಐದು ದಿನಗಳಲ್ಲಿ ಅಕ್ಕಿ ಬೆಲೆ ಸುಮಾರು ಶೇ.5 ರಷ್ಟು ದಿಢೀರ್ ಏರಿಕೆ ಆಗಿದೆ.
ಸದ್ಯ ಪಶ್ಚಿಮ ಬಂಗಾಳದಲ್ಲಿ ಭತ್ತ ಕೊಯ್ಲು ನಡೆಯುತ್ತಿದೆ. ಈ ವೇಳೆ ಬಂಗಾಳಕೊಲ್ಲಿ ಭಾಗದಿಂದ ಆಗಮಿಸಿದ ಸಿತ್ರಾಂಗ್ ಚಂಡಮಾರುತ ಭೀತಿಯಿಂದ ಬೆಳೆ ನಾಶವಾಗಬಹುದು ಎಂಬ ಕಾರಣಕ್ಕೆ ಅಕ್ಕಿಯ ಬೆಲೆಯಲ್ಲಿ ಶೇ. 5ರಷ್ಟು ಹೆಚ್ಚಾಗಿದೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರದಿಂದ ಹೊಸ ಬೆಳೆ ಬರಲಾರಂಭಿಸುವ ಹೊತ್ತಿಗೆ ಮುಂದಿನ ಎರಡು ವಾರದಲ್ಲಿ ಅಕ್ಕಿಯ ಬೆಲೆ ಶೇ.10ರಷ್ಟು ಇಳಿಕೆ ಆಗುವ ಲಕ್ಷಣಗಳು ಇವೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಸಿತ್ರಾಂಗ್ ಚಂಡಮಾರುತವು ಭಾರತದಲ್ಲಿ ಸಾಕಷ್ಟು ಮಳೆ, ಪ್ರವಾಹದಂತಹ ಅವಘಡಗಳಿಗೆ ಕಾರಣವಾಗಿಲ್ಲ. ಆದರೆ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಮಾತ್ರ ತನ್ನ ಆರ್ಭಟ ಮುಂದುವರಿಸಿದೆ. ಹೀಗಾಗಿ ಅಸ್ಸಾಂ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಮಳೆ ತೀವ್ರಗೊಂಡಿದೆ.
ಈ ಸಿತ್ರಾಂಗ್ ಚಂಡಮಾರುತದ ಅಬ್ಬರ ನಿರಂತರವಾಗಿ ಮುಂದುವರಿಯಲಿದೆ, ಇದರಿಂದ ಕಟಾವಿಗೆ ಬಂದ ಭತ್ತ ಬೆಲೆ ನಾಶವಾಗುತ್ತದೆ ಎಂಬ ಆತಂಕ ರೈತರು, ವ್ಯಾಪಾರಿಗಳಲ್ಲಿ ಕಾಡಿದೆ. ಪರಿಣಾಮ ಅಕ್ಕಿ ಬೆಲೆಗಳು ದಿಢೀರನೆ ಶೇ. 5 ರಷ್ಟು ಹೆಚ್ಚಾಗಿದೆ. ಆದರೆ ಚಂಡಮಾರುತವು ಬೆಳೆಯನ್ನು ಹೆಚ್ಚು ಹಾನಿಗೊಳಿಸಲಿಲ್ಲ ಎಂದು ಅಕ್ಕಿ ಮಾರುಕಟ್ಟೆ ಮತ್ತು ರಫ್ತು ಕಂಪನಿ ಒಂದರೆ ಅಧಿಕಾರಿ ಸೂರಜ್ ಅಗರ್ವಾಲ್ ಹೇಳಿದರು. ದೇಶದ ಇತರರ ಭಾಗಗಳಿಂದ ಅಕ್ಕಿ ಕ್ರಮೇಣವಾಗಿ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಅಕ್ಕಿ ಬೆಲೆ ಇಳಿಕೆಯಾಗುತ್ತದೆ ಎಂದು ಅವರು ಹೇಳಿದರು.
ಅಕ್ಕಿ ಉತ್ಪಾದನೆ ಹಿಂದಿನ ವರ್ಷಕ್ಕಿಂತ ಕಡಿಮೆ
ಪ್ರಸಕ್ತ ವರ್ಷದಲ್ಲಿ ದೇಶದಲ್ಲಿ ಅಕ್ಕಿ ಉತ್ಪಾದನೆಯು ಹಿಂದಿನ (2021) ವರ್ಷಕ್ಕಿಂತ ಕುಂಠಿತಗೊಳ್ಳುವ ನಿರೀಕ್ಷೆ ಇದೆ. ಕೃಷಿ ಸಚಿವಾಲಯವು ಉತ್ಪಾದನೆಯ ಮೊದಲ ಮುಂಗಡ ಅಂದಾಜು ವರದಿ ಬಿಡುಗಡೆ ಮಾಡಿತ್ತು. ಅದರನ್ವಯ ಈ ಋತುವಿನಲ್ಲಿ 104.99 ಮಿಲಿಯನ್ ಟನ್ಗಳಷ್ಟು ಖಾರಿಫ್ ಅಕ್ಕಿ ಉತ್ಪಾದನೆಯನ್ನು ನಿರೀಕ್ಷೆ ಮಾಡಲಾಗಿತ್ತು. ಈ ನಿರೀಕ್ಷಿತ ಪ್ರಮಾಣವು ಕಳೆದ ವರ್ಷಕ್ಕಿಂತ ಶೇ. 6ರಷ್ಟು ಕಡಿಮೆ ಎಂದು ತಿಳಿದು ಬಂದಿದೆ.
ಮುಂಗಾರು ಆರಂಭದಲ್ಲಿ ಮಳೆ ಆಗಿರಲಿಲ್ಲ. ನಂತರದ ದಿನಗಳಲ್ಲಿ ಭತ್ತ ಬೆಳೆಯುವ ಕೆಲವು ರಾಜ್ಯಗಳ ಹೊರತು ಬೇರೆ ರಾಜ್ಯಗಳಲ್ಲಿ ಜೋರು ಮಳೆ ಆಗಿತ್ತು. ಈ ಕಾರಣದಿಂದ ಅಲ್ಪ ಪ್ರಮಾಣದಲ್ಲಿ ಅಕ್ಕಿ ಉತ್ಪಾದನೆ ಕುಂಠಿತಗೊಳ್ಳಲಿದೆ. ಆದರೆ ಅಕ್ಕಿ ಪೂರೈಕೆಯಲ್ಲಿ ತೀವ್ರ ತೊಂದರೆ ಆಗುವುದಿಲ್ಲ. ಸೂಕ್ತ ದಾಸ್ತಾನು ಇದ್ದು, ಸರ್ಕಾರ ಅಗತ್ಯ ಪೂರೈಕೆ ಮಾಡಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.