ರೈತರಿಗೆ ಶ್ರಾವಣ ಮಾಸದ ಕೊಡುಗೆ ಕೊಟ್ಟ ಶಿವಮೊಗ್ಗ ಹಾಲು ಒಕ್ಕೂಟ
ಶಿವಮೊಗ್ಗ, ಆಗಸ್ಟ್ 08; ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಶಿಮುಲ್) ರೈತರಿಗೆ ಶ್ರಾವಣ ಮಾಸದ ಕೊಡುಗೆ ನೀಡಿದೆ. ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಕೆಜಿ ಗೆ 1 ರೂ. ಹೆಚ್ಚಿಸಿದೆ.
ಶಿಮುಲ್ ಅಧ್ಯಕ್ಷ ಶ್ರೀಪಾದರಾವ್ ಈ ಕುರಿತು ಮಾಹಿತಿ ನೀಡಿದರು. "ಶ್ರಾವಣ ಮಾಸದ ಕೊಡುಗೆಯಾಗಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಕೆ.ಜಿ ಗೆ ರೂ.1 ಹೆಚ್ಚಿಸಲಾಗುವುದು" ಎಂದು ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟವು ತನ್ನ ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ಹಾಲು ಖರೀದಿ ದರವನ್ನು ಕಾಲ ಕಾಲಕ್ಕೆ ಪರಿಷ್ಕರಿಸುತ್ತಾ ಬಂದಿದೆ" ಎಂದರು.

"ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ಪ್ರಗತಿಯಾಗಿದ್ದು, ಆಗಸ್ಟ್ 11ರಿಂದ ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳಾದ ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಕೆಜಿ ಗೆ ರೂ.1 ಹೆಚ್ಚಿಸಲಾಗುವುದು" ಎಂದು ಹೇಳಿದರು.
ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ; ರೈತರಿಂದ ಖರೀದಿ ಮಾಡುವ ಹಾಲಿನ ದರ ಏರಿಕೆ ಕುರಿತು ಆಗಸ್ಟ್ 2ರಂದು ನಡೆದ ಒಕ್ಕೂಟದ 421ನೇ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.
ಒಕ್ಕೂಟದಿಂದ ಸಂಘಗಳಿಗೆ ಹಾಲಿ ನೀಡುತ್ತಿರುವ ದರ ಪ್ರತಿ ಕೆಜಿ ಹಾಲಿಗೆ (ಶೇ. 4.0 ಎಸ್ಎನ್ಎಫ್ 8.50%) 29.02 ಆಗಿದ್ದು ಆಗಸ್ಟ್ 11 ರಿಂದ ನೀಡುವ ದರ ರೂ. 30.06/- ಆಗಲಿದೆ. ಸಂಘದಿಂದ ಉತ್ಪಾದರಿಗೆ ಹಾಲಿ ನೀಡುತ್ತಿರುವ ದರ (ಶೇ. 4.0 ಎಸ್ಎನ್ಎಫ್ 8.50%) ಪ್ರತಿ ಲೀಟರ್ ಹಾಲಿಗೆ ರೂ. 27.16 ಆಗಿದ್ದು ಆಗಸ್ಟ್ 11 ರಿಂದ ನೀಡುವ ದರ ರೂ.28.20 ಆಗಿರುತ್ತದೆ.

ಹಾಲಿನ ಮಾರಾಟವನ್ನು ಅಂತರ ರಾಜ್ಯ ಮಟ್ಟದಲ್ಲಿ ವಿಸ್ತರಿಸುವ ಯೋಜನೆಯಿದ್ದು ದೆಹಲಿ ಮತ್ತು ಮಹಾರಾಷ್ಟ್ರಗಳಿಗೆ 1 ಲಕ್ಷ ಲೀಟರ್ ಹಾಲು ಸರಬರಾಜು ಮಾಡುವ ಕುರಿತು ಇದೇ ಆಗಸ್ಟ್ 12 ರಂದು ಸಭೆ ನಡೆಯಲಿದೆ.
ಪ್ರಸ್ತುತ ಒಕ್ಕೂಟದ ವ್ಯಾಪ್ತಿಯಲ್ಲಿ 1347 ಸಹಕಾರ ಸಂಘಗಳು ಇದ್ದು ಪ್ರತಿ ದಿನ 7 ಲಕ್ಷ ಲೀಟಲ್ ಹಾಲು ಉತ್ಪಾದನೆಯಾಗುತ್ತಿದೆ. 60 ಸಾವಿರ ಹಸುಗಳ ವಿಮೆ ಗುರಿ ಹೊಂದಲಾಗಿದೆ. ಶಿವಮೊಗ್ಗ ಹಾಲಿನ ಡೇರಿ ಆವರಣದಲ್ಲಿ ಆಧುನಿಕ ಪ್ಯಾಕಿಂಗ್ ಯಂತ್ರೋಪಕರಣ ಅಳವಡಿಸುವ ಹಾಗೂ ಕಚ್ಚಾ ಹಾಲಿನ ಪ್ರಯೋಗಾಲಯ ಆಧುನೀಕರಣಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ.
ದಾವಣಗೆರೆ ಡೇರಿಯಲ್ಲಿ ದಿನವಹಿ 1.50 ಲಕ್ಷ ಲೀ. ಹಾಲು ಮತ್ತು 0.50 ಲಕ್ಷ ಕೆ.ಜಿ ಮೊಸರು ಉತ್ಪಾದನೆಗೆ ಅನುಕೂಲವಾಗುವಂತೆ ರೂ.15.00 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲು ಯೋಜನೆ ರೂಪಿಸಲಾಗಿದೆ. ತಡಗಣಿ ಶೀತಲೀಕರಣ ಕೇಂದ್ರದಲ್ಲಿ ಹಾಲಿನ ತಣಿಸುವಿಕೆ ಸಾಮರ್ಥ್ಯವನ್ನು ಹೆಚ್ಚಿಸಲು ನೂತನ 20.0 ಕೆ.ಎ.ಪಿ.ಹೆಚ್ ಸಾಮರ್ಥ್ಯದ ಚಿಲ್ಲರ್ ಹಾಗೂ ಸ್ಟೋರೇಜ್ ಟ್ಯಾಂಕ್ಗಳನ್ನು ಅಳವಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ.
ಹೊನ್ನಾಳಿ ಶೀತಲೀಕರಣ ಕೇಂದ್ರದಲ್ಲಿ ನೂತನ 20.0 ಕೆ.ಎಲ್.ಪಿ.ಹೆಚ್ ಸಾಮರ್ಥ್ಯದ ಚಿಲ್ಲರ್ ಅಳವಡಿಸುವ ಪ್ರಕ್ರಿಯೆ ಕೂಡ ಜಾರಿಯಲ್ಲಿದೆ ಹಾಗೂ ಹೊಸದುರ್ಗ ಪಟ್ಟಣದಲ್ಲಿ ನೂತನ ನಿವೇಶನ ಖರೀದಿಸಿ 60 ಕೆ.ಎಲ್ ಸಾಮರ್ಥ್ಯದ ಚಿಲ್ಲರ್ ಅಳವಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ.
ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಎಲ್ಲ ಸಂಘಗಳಲ್ಲಿ ಮತ್ತು ಉತ್ಪಾದರ ಮನೆಗಳಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಬೇಕೆಂದು ಅಧ್ಯಕ್ಷ ಶ್ರೀಪಾದರಾವ್ ಮನವಿ ಮಾಡಿದ್ದಾರೆ.
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಶಿಮುಲ್) ರೈತರಿಗೆ ಶ್ರಾವಣ ಮಾಸದ ಕೊಡುಗೆ ನೀಡಿದೆ. ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಕೆಜಿ ಗೆ 1 ರೂ. ಹೆಚ್ಚಿಸಿದೆ. ಶಿಮುಲ್ ಅಧ್ಯಕ್ಷ ಶ್ರೀಪಾದರಾವ್ ಈ ಕುರಿತು ಮಾಹಿತಿ ನೀಡಿದರು. "ಶ್ರಾವಣ ಮಾಸದ ಕೊಡುಗೆಯಾಗಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಕೆ.ಜಿ ಗೆ ರೂ.1 ಹೆಚ್ಚಿಸಲಾಗುವುದು" ಎಂದು ಹೇಳಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟವು ತನ್ನ ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ಹಾಲು ಖರೀದಿ ದರವನ್ನು ಕಾಲ ಕಾಲಕ್ಕೆ ಪರಿಷ್ಕರಿಸುತ್ತಾ ಬಂದಿದೆ" ಎಂದರು.












Click it and Unblock the Notifications