ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ: ಫೆ.18ರಂದು ದೇಶಾದ್ಯಂತ ರೈಲು ತಡೆಗೆ ರೈತರ ನಿರ್ಧಾರ
ನವದೆಹಲಿ, ಫೆಬ್ರವರಿ 10: ಸಂಯುಕ್ತ ಕಿಸಾನ್ ಮೋರ್ಚಾ ಒಕ್ಕೂಟವು ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯ ಭಾಗವಾಗಿ ಫೆಬ್ರವರಿ 18ರಂದು ನಾಲ್ಕು ಗಂಟೆ ಕಾಲ ದೇಶದಾದ್ಯಂತ ರೈಲು ತಡೆ ಚಳವಳಿ ನಡೆಸಲು ನಿರ್ಧರಿಸಿದೆ.
ಬುಧವಾರ ಸಭೆ ನಡೆಸಿದ ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯರು ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಿದರು.
ದೇಶಾದ್ಯಂತ ಫೆಬ್ರವರಿ 18ರಂದು ಮಧ್ಯಾಹ್ನ 12 ಗಂಟೆಯಿಂದ ಸಂಜೆ 4ರವರೆಗೂ 'ರೈಲು ರೊಕೋ' ನಡೆಸಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ. ಪ್ರತಿಭಟನೆಯ ಭಾಗವಾಗಿ ಫೆಬ್ರವರಿ 12ರಿಂದ ರಾಜಸ್ಥಾನದಲ್ಲಿನ ಎಲ್ಲ ಟೋಲ್ ಪ್ಲಾಜಾಗಳನ್ನು ಸುಂಕಮುಕ್ತಗೊಳಿಸಲು ಪ್ರತಿಭಟನಾನಿರತ ರೈತರು ತೀರ್ಮಾನಿಸಿದ್ದಾರೆ.

ಫೆಬ್ರವರಿ 14ರಂದು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ತ್ಯಾಗವನ್ನು ಗೌರವಿಸಲು ದೇಶಾದ್ಯಂತ ಮೇಣದಬತ್ತಿ ಮೆರವಣಿಗೆ ಮತ್ತು 'ಮಾಶಾಲ್ ಜುಲೂಸ್' ನಡೆಸಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಜಾಟ್ ನಾಯಕ ಸರ್ ಛೋಟು ರಾಮ್ ಅವರ ಜನ್ಮ ದಿನೋತ್ಸವವಾದ ಫೆಬ್ರವರಿ 16ರಂದು ಒಗ್ಗಟ್ಟು ಪ್ರದರ್ಶಿಸಲು ಪ್ರತಿಭಟನಾನಿರತ ರೈತರು ನಿರ್ಧಾರ ತೆಗೆದುಕೊಂಡಿದ್ದಾರೆ.












Click it and Unblock the Notifications