ವಿವಿ ಮಟ್ಟದಲ್ಲಿ ನಡೆಯುವ ಸಂಶೋಧನಾ ರೈತರಿಗೆ ತಲುಪುವಂತಾಗಲಿ: ಶೋಭಾ ಕರಂದ್ಲಾಜೆ
ಬಳ್ಳಾರಿ, ನವೆಂಬರ್ 15: ''ಆರೋಗ್ಯ ಉತ್ತಮವಾಗಿರಲು ಸಿರಿ ಧಾನ್ಯಗಳನ್ನು ಬಳಸುವಂತೆ ನಮ್ಮ ಪೂರ್ವಜರೇ ಹೇಳಿದ್ದರು. ಆದರೆ, ನಾವು ಪಾಶ್ಚಿಮಾತ್ಯ ಕಡೆ ಸಾಗಿ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಸಿರಿಧಾನ್ಯ ಕಾಳುಗಳನ್ನು ಬಳಸಿ ಆರೋಗ್ಯದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬೇಕೆಂದು'' ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಹಗರಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಗರಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರ ವಸತಿ ನಿಲಯ ನಿರ್ಮಾಣದ ಅಡಿಗಲ್ಲಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುವುದು ಖಚಿತ; ಸಚಿವ ಆನಂದ್ ಸಿಂಗ್ ಭರವಸೆ
ಸ್ವಾತಂತ್ರ್ಯ ಬಂದ ಮೇಲೆ ಸರ್ಕಾರಗಳು ಕೃಷಿಯ ಜೊತೆಗೆ ಕಾರ್ಖಾನೆಗಳ ಅಭಿವೃದ್ಧಿಗೆ ಪ್ರಯತ್ನ ನಡೆಯಿತು. ಆದರೆ ಇಂದು ಸಾವಿರಾರು ಕಾರ್ಖಾನೆಗಳು ಮುಚ್ಚಿಹೋಗಿವೆ. ಕೊರೊನಾ ಸಂದರ್ಭದಲ್ಲಿ ಎಲ್ಲರಿಗೂ ಕೃಷಿ ಮಾಡುವ ರೈತರು ಆರೋಗ್ಯದ ಬಗ್ಗೆ ಪಾಠ ಕಲಿಸಿದರು, ಅಂದು ಸಿರಿಧಾನ್ಯಗಳನ್ನು ನೀಡಿದರು. ನಮ್ಮ ದೇಶಕ್ಕೆ ಮಾತ್ರವಲ್ಲದೆ ವಿದೇಶಕ್ಕೆ ಕೂಡ ಕಳುಹಿಸಿಕೊಟ್ಟಿದ್ದು ಇದು ದೊಡ್ಡ ಪ್ರಯತ್ನ ಎಂದು ಹೇಳಿದರು.
ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಿರ್ಮಾಣ
ಐಸಿಎಆರ್ ಹಗರಿಯ ಕೃಷಿ ಕಾಲೇಜಿನಲ್ಲಿ ಸುಮಾರು 105 ಕೋಟಿ ರೂ.ವೆಚ್ಚದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣವಾಗಲಿದ್ದು, ಇದು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ರೈತರಿಗೆ ತರಬೇತಿ ನೀಡಲು ಅನುಕೂಲವಾಗಲಿದೆ. ಕೇಂದ್ರ ಸರ್ಕಾರವು ರೈತರ ನೆರವಿಗಾಗಿ ಕೃಷಿ ಸಮ್ಮಾನ್ ನಿಧಿ ಯೋಜನೆ, ಬೆಳೆ ವಿಮೆಯಂತಹ ಯೋಜನೆಗಳನ್ನು ಜಾರಿ ತಂದಿದೆ. ಬಳ್ಳಾರಿ ಜಿಲ್ಲೆಗೆ 245 ಕೋಟಿ.ರೂ ಬೆಳೆ ವಿಮಾ ಪರಿಹಾರ ಮೊತ್ತ ನೀಡಿದೆ ಎಂದರು.
ಅದೇ ರೀತಿಯಾಗಿ ಯಾವ ರೈತರಿಗೆ ಕೃಷಿಯಲ್ಲಿ ಯಾಂತ್ರೀಕರಣಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಇದಕ್ಕಾಗಿ ಹೋಬಳಿಗೊಂದರಂತೆ ಸರ್ಕಾರದಿಂದ ಬಾಡಿಗೆ ಕೃಷಿ ಯಂತ್ರಗಳನ್ನು ಕೊಡಲಾಗುತ್ತಿದೆ, ಇದರಿಂದ ಮಾನವ ಸಂಪನ್ಮೂಲದ ಕೊರತೆ ಹಾಗೂ ಕಾರ್ಮಿಕರ ಸಮಸ್ಯೆಯ ನಿವಾರಣೆಯಾಗಲಿದ್ದು, ರೈತರಿಗೆ ಉಪಯೋಗವಾಗುತ್ತಿದೆ. 2013-14ರಲ್ಲಿ ದೇಶದ ಕೃಷಿ ಬಜೆಟ್ 23 ಸಾವಿರ ಕೋಟಿ ರೂ. ಇತ್ತು. ಆದರೆ, ಈಗ ರೂ. 1.32 ಲಕ್ಷ ಕೋಟಿ ಇದೆ. ಈಗೆ ಕಳೆದ ಆರೇಳು ವರ್ಷಗಳಲ್ಲಿ ಕೃಷಿ ಬಜೆಟ್ ಹೆಚ್ಚಳವಾಗಿದೆ ಎಂದು ತಿಳಿಸಿದರು.
ಕೃಷಿ ಬಗೆಗಿನ ಸಂಶೋಧನೆ ರೈತರಿಗೆ ತಲುಪಲಿ
ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆಯುವ ಸಂಶೋಧನಾ ರೈತರಿಗೆ ತಲುಪಬೇಕು, ಅಂತಹ ಕೆಲಸ ವಿಜ್ಞಾನಿಗಳಿಂದಾಗಬೇಕು. ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ವಿವಿ ಒಂದೇ ಸ್ಥಳದಲ್ಲಿ ಇರಬೇಕು. ನೂರನೇ ಸ್ವಾತಂತ್ರ್ಯ ಆಚರಣೆ ಮಾಡುವ ವೇಳೆಗೆ ಭಾರತವು ಅಭಿವೃದ್ಧಿಯಲ್ಲಿ ಒಂದು ಅಥವಾ ಎರಡನೇ ಸ್ಥಾನದಲ್ಲಿ ಇರಬೇಕು ಎಂಬುದೇ ಪ್ರಧಾನಿ ಮಂತ್ರಿಗಳ ಅಶಯವಾಗಿದೆ ಎಂದು ಹೇಳಿದರು.
ಬಜೆಟ್ನಲ್ಲಿ ಕೃಷಿ ಕಾಲೇಜು ನಿರ್ಮಿಸಿ ಬೇಡಿಕೆ ಈಡೇರಿಸಲಾಗಿದೆ
ಕೃಷಿ ವಿಜ್ಞಾನ ಕೇಂದ್ರಕ್ಕೆ ಹಲವು ವರ್ಷಗಳಿಂದ ಕೃಷಿ ಕಾಲೇಜು ಬೇಡಿಕೆ ಇತ್ತು. ಇತ್ತೀಚೆಗೆ ರಾಜ್ಯ ಸರಕಾರ ಮಂಡಿಸಿದ ಬಜೆಟ್ನಲ್ಲಿ ಘೋಷಣೆ ಮಾಡಿ ಈ ಭಾಗದ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಹೇಳಿದರು.
ಜನರು ಆರೋಗ್ಯವಾಗಿರಲು ಸಿರಿಧಾನ್ಯಗಳ ಆಹಾರ ಪದ್ಧತಿಯನ್ನು ಬಳಸಬೇಕು. ಸಿರಿಧಾನ್ಯ ಬೆಳೆಯುವ ರೈತರಿಗೆ ಸರಕಾರ ಆರು ಸಾವಿರ ರೂ.ನೀಡಲಾಗುತ್ತಿದೆ. ಈ ಭಾಗದಲ್ಲಿ ಮಳೆಯಧಾರಿತ ಪ್ರದೇಶವಾಗಿದ್ದು, ಮುಂಚೆಯಿಂದಲೂ ಸಿರಿಧಾನ್ಯ ಬೆಳೆಯುತ್ತಿದ್ದಾರೆ. ಆಗ ಸಜ್ಜೆ, ನವಣೆ ಊಟ ಮಾಡಿದರೆ ಬಡವರು ಎನ್ನುತ್ತಿದ್ದರು. ಈಗ ವೈದ್ಯರೇ ಸಜ್ಜೆ, ನವಣೆ, ರಾಗಿ ಹಾಗೂ ಇತರೆ ಸಿರಿಧಾನ್ಯ ಊಟ ಮಾಡಿ ಎಂದು ಹೇಳುತ್ತಿದ್ದಾರೆ. ಇದು ಪೂರ್ವಜರಿಗೆ ಸಿರಿಧಾನ್ಯ ಬಗ್ಗೆ ಮಾಹಿತಿಯಿತ್ತು ತಿಳಿದಿತ್ತು ಎನ್ನುವುದನ್ನು ಖಚಿತಪಡಿಸುತ್ತದೆ ಎಂದರು.
ಕೃಷಿ ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಅನುಕೂಲ
ಬಳ್ಳಾರಿ ಗ್ರಾಮೀಣ ಶಾಸಕರಾದ ನಾಗೇಂದ್ರ ಮಾತನಾಡಿ, ''ನಮ್ಮ ಕೃಷಿ ಪದ್ಧತಿಯು ಪ್ರಪಂಚವು ಭಾರತದತ್ತ ನೋಡುವಂತೆ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿದೆ. ಬಳ್ಳಾರಿ ಮತ್ತು ಆಂಧ್ರ ಗಡಿ ಭಾಗದಲ್ಲಿರುವ ಈ ಕೃಷಿ ವಿಜ್ಞಾನ ಕೇಂದ್ರವು 550 ಎಕರೆ ಜಮೀನು ವ್ಯಾಪ್ತಿಯಲ್ಲಿದೆ. ಸಂಶೋಧನೆ ಮಾಡಲು ಅತಿ ಹೆಚ್ಚು ವಿಶಾಲವಾದ ಜಾಗ ಹೊಂದಿದ್ದು, ಈ ಭಾಗದ ಕೃಷಿ ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಉಪಯುಕ್ತವಾಗಿದೆ'' ಎಂದರು.
''ಹಗರಿ ಕೃಷಿ ವಿದ್ಯಾಲಯಕ್ಕೆ ಕೆಕೆಆರ್ಡಿಬಿ ಅನುದಾನದಲ್ಲಿ 20ಕೋಟಿ ರೂ. ಅನುದಾನ ಮಂಜೂರಾಗಲಿದೆ. ಅದರಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ಸಂಶೋಧನಾ ಕೇಂದ್ರದ ಕಟ್ಟಡ, 11 ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಲ್ಯಾಬ್ ಹಾಗೂ ಸುಮಾರು 1.25ಲಕ್ಷ ವೆಚ್ಚದಲ್ಲಿ ಕೃಷಿಕರ ವಿಕಾಸ ಕೇಂದ್ರ ನಿರ್ಮಾಣವಾಗಲಿವೆ'' ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪೋಷಕಾಂಶ ಭದ್ರತೆಗಾಗಿ ಸಿರಿಧಾನ್ಯಗಳು ಮತ್ತು 'ಒಂದು ಜಿಲ್ಲೆ ಒಂದು ಉತ್ಪನ್ನ' ಯೋಜನೆಯ ಪಾತ್ರದ ಕುರಿತು ವಿಚಾರಣಾ ಸಂಕಿರಣ ನಡೆಯಿತು. ಸಂಸದರಾದ ಕರಡಿ ಸಂಗಣ್ಣ, ಶಾಸಕ ಜಿ.ಸೋಮಶೇಖರ ರೆಡ್ಡಿ, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗುತ್ತಿಗನೂರು ವಿರುಪಾಕ್ಷಗೌಡ, ಕೃಷಿ ವಿಜ್ಞಾನಿಗಳು, ವಿವಿ ಅಧಿಕಾರಿಗಳು ಹಾಗೂ ರೈತರು ಸೇರಿದಂತೆ ಹಲವರಿದ್ದರು.