ದೆಹಲಿಯ ಪ್ರತಿಭಟನಾನಿರತ ರೈತರಿಗೆ ಮೋದಿ ಸಂದೇಶ...
ನವದೆಹಲಿ, ಡಿಸೆಂಬರ್ 25: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, "ರೈತರೊಂದಿಗೆ ಮಾತುಕತೆಗೆ ನಾವು ಸಿದ್ಧ. ಕೃಷಿ ಕಾಯ್ದೆ ಸಂಬಂಧಿ ನಮ್ಮ ವಿರುದ್ಧ ನಿಂತಿರುವವರೊಂದಿಗೆ ಚರ್ಚೆ ನಡೆಸಲು ಸಿದ್ಧವಿದ್ದೇವೆ" ಎಂದು ರೈತರಿಗೆ ಆಹ್ವಾನ ನೀಡಿದ್ದಾರೆ.
ಶುಕ್ರವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನೋತ್ಸವದ ಅಂಗವಾಗಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 18,000 ಕೋಟಿ ರೂ ಬಿಡುಗಡೆ ಮಾಡಿದ ಪ್ರಧಾನಿ ಮೋದಿ ಆರು ರಾಜ್ಯಗಳ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು. ಈ ಸಂದರ್ಭ ದೆಹಲಿಯಲ್ಲಿ ಪ್ರತಿಭಟನೆ ಕೈಗೊಂಡಿರುವ ರೈತರೊಂದಿಗೆ ಮಾತುಕತೆಗೆ ಸಿದ್ಧ ಎಂದಿದ್ದಾರೆ. ಮುಂದೆ ಓದಿ...
"ನಮ್ಮ ವಿರುದ್ಧ ನಿಂತವರೊಂದಿಗೆ ಚರ್ಚೆಗೆ ಸಿದ್ಧ"
ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ಇದುವರೆಗೂ ಸರ್ಕಾರದ ಮೇಲೆ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಅವೆಲ್ಲವನ್ನೂ ಸಹಿಸಿಕೊಂಡಿದ್ದೇವೆ. ನಾವು ರೈತರೊಂದಿಗೆ ಮಾತನಾಡಲು ಸಿದ್ಧ ಎಂದು ನಮ್ರತೆಯಿಂದ ಕೇಳಿಕೊಳ್ಳುತ್ತಿದ್ದೇವೆ. ಕೃಷಿ ಕಾಯ್ದೆ ಸಂಬಂಧಿ ಸರ್ಕಾರದ ವಿರುದ್ಧ ಯಾರಿದ್ದಾರೋ ಅವರೊಂದಿಗೆ ಸರ್ಕಾರ ಮಾತನಾಡಲು ಸಿದ್ಧವಿದೆ. ರೈತರ ಅಭಿವೃದ್ಧಿಯೇ ದೇಶದ ಸಮಗ್ರ ಅಭಿವೃದ್ಧಿಯಾಗಿರುವುದರಿಂದ ಅವರೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ರೈತರ ಖಾತೆಗೆ 18000 ಕೋಟಿ ರೂ ನೇರ ಜಮಾ; ಮೋದಿ
"ರಾಜಕೀಯ ಮಾಡಿ, ಆದರೆ ದಾರಿ ತಪ್ಪಿಸಬೇಡಿ"
ಈ ಸಂದರ್ಭವನ್ನು ಕೆಲವು ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿವೆ. ನೀವು ರಾಜಕೀಯ ಮಾಡಿಕೊಳ್ಳಿ, ನನಗೆ ಸಮಸ್ಯೆಯಿಲ್ಲ. ಆದರೆ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಪ್ರತಿಭಟನಾ ನಿರತ ರೈತರನ್ನು ಗುರಿಯಾಗಿಸಿಕೊಂಡು ವಿರೋಧ ಪಕ್ಷಗಳು ಅವರ ದಾರಿ ತಪ್ಪಿಸುತ್ತಿವೆ ಎಂದು ದೂರಿದರು.
"ಆ ರಾಜಕಾರಣಿ ಜನರ ದಿಕ್ಕು ತಪ್ಪಿಸುತ್ತಿದ್ದಾನೆ"
ಕೆಲವು ರಾಜಕೀಯ ಪಕ್ಷಗಳು ಈ ಮುನ್ನ ಇದೇ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದವು. ಆ ಲಿಖಿತ ಹೇಳಿಕೆಗಳೂ ನಮ್ಮ ಬಳಿ ಇವೆ. ಆದರೆ ಈಗ ತಮ್ಮ ನಿಲುವನ್ನು ಪಕ್ಷಗಳು ಬದಲಿಸಿಕೊಂಡಿವೆ. ಒಬ್ಬ ರಾಜಕಾರಣಿ ಜನರ ದಿಕ್ಕು ತಪ್ಪಿಸುತ್ತಿದ್ದಾನೆ. ಆತನಿಗೆ ಪ್ರಜಾಪ್ರಭುತ್ವದ ಮೇಲೆಯೂ ನಂಬಿಕೆಯಿಲ್ಲ. ಆದರೆ ಇವೆಲ್ಲವನ್ನು ಮೀರಿ, ಚರ್ಚೆ ನಡೆಸಲು ಸಿದ್ಧವಿದ್ದೇವೆ. ಆದರೆ ಚರ್ಚೆ ತರ್ಕಬದ್ಧವಾಗಿರಬೇಕಷ್ಟೆ ಎಂದು ತಿಳಿಸಿದರು.
ಪ್ರತಿಭಟನಾನಿರತ ರೈತರಿಗೆ ಹೊಸ ಆಯ್ಕೆ ಕೊಟ್ಟ ರಕ್ಷಣಾ ಸಚಿವ
"ಇದನ್ನೇ ಪ್ರಜಾಪ್ರಭುತ್ವ ಎನ್ನುವುದು"
"ನಮಗೆ ಎಲ್ಲಾ ತಿಳಿದಿದೆ ಎಂದು ನಾವು ಯಾವತ್ತೂ ಹೇಳಿಕೊಂಡಿಲ್ಲ. ಆಡಳಿತದಲ್ಲಿ ಚರ್ಚೆ ಇರಬೇಕು. ಅದನ್ನೇ ಪ್ರಜಾಪ್ರಭುತ್ವ ಎನ್ನುವುದು. ಮುಕ್ತ ಮನಸ್ಸಿನೊಂದಿಗೆ ನಾವು ಎಲ್ಲಾ ವಿಷಯವನ್ನು ಕೇಳಿಸಿಕೊಳ್ಳುತ್ತೇವೆ, ಚರ್ಚಿಸುತ್ತೇವೆ" ಎಂದು ಹೇಳಿದ್ದಾರೆ. ಈ ಕಾಯ್ದೆಗಳನ್ನು ಮೊದಲು ಜಾರಿಗೆ ತಂದಾಗ ಜನರಿಗೆ ಆತಂಕವಿತ್ತು. ಆದರೆ ಕೆಲವು ವಿರೋಧ ಪಕ್ಷಗಳು ಮಧ್ಯೆ ಬಂದು ಬೇರೆ ಬೇಡಿಕೆಗಳೂ ಹುಟ್ಟಿಕೊಂಡವು ಎಂದು ಹೇಳಿದರು.