Agriculture Loan: ಕೃಷಿ ಸಾಲ, ರೈತರಿಗೆ ಬಂಪರ್ ಕೊಡುಗೆ ಕೊಟ್ಟ ಆರ್ಬಿಐ
ನವದೆಹಲಿ, ಡಿಸೆಂಬರ್ 16: ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೊಸ ಘೋಷಣೆಯನ್ನು ಮಾಡಿದೆ. ಕೃಷಿ ಸಾಲದ ಮೇಲಿನ ಮಿತಿಯನ್ನು ಏರಿಕೆ ಮಾಡಲಾಗಿದ್ದು, 2025ರ ಜನವರಿ 1 ರಿಂದ ರೈತರು ಈ ಹೊಸ ಘೋಷಣೆಯ ಸಹಾಯವನ್ನು ಪಡೆಯಬಹುದು. ಆರ್ಬಿಐನ ಈ ಘೋಷಣೆಯಿಂದ ದೇಶದ ಸುಮಾರು ಶೇ 86ರಷ್ಟು ಸಣ್ಣ ರೈತರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.
ಆರ್ಬಿಐನ ಹೊಸ ಗೌರ್ನರ್ ಆಗಿ ಅಧಿಕಾರವಹಿಸಿಕೊಂಡ ಸಂಜಯ್ ಮಲ್ಹೋತ್ರಾ ಅವರು ಮಾಡಿದ ಮೊದಲ ಘೋಷಣೆ ಇದಾಗಿದೆ. ರೈತರಿಗೆ ಸುಲಭವಾಗಿ ಹೆಚ್ಚು ಮೊತ್ತದ ಕೃಷಿ ಸಾಲ ಲಭ್ಯವಾಗುವಂತೆ ಮಾಡುವ ಮೂಲಕ ಕೃಷಿ ಕ್ಷೇತ್ರದ ಉತ್ತೇಜನಕ್ಕೆ ಒತ್ತು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಹೊಸ ಘೋಷಣೆ ವಿವರಗಳು: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಡವು ರಹಿತ ಕೃಷಿ ಸಾಲದ ಮಿತಿಯನ್ನು 1.6 ಲಕ್ಷ ರೂ.ಗಳಿಂದ 2 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಿದೆ. ಈ ಹೊಸ ಘೋಷಣೆ 2025ರ ಜನವರಿ 1 ರಿಂದ ಜಾರಿಗೆ ಬರಲಿದೆ ಎಂದು ಆರ್ಬಿಐ ಹೇಳಿದೆ.
ಈ ಘೋಷಣೆಯಿಂದಾಗಿ ರೈತರಿಗೆ ಅನುಕೂಲವಾಗಲಿದ್ದು, ಕಡಿಮೆ ಮೊತ್ತದ ಸಾಲಕ್ಕೆ ಮನೆ, ಜಮೀನು ಅಡವಿಡುವ ಪ್ರಶ್ನೆಯೇ ಬರುವುದಿಲ್ಲ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈ ಘೋಷಣೆಯಿಂದ ಸಹಾಯಕವಾಗಲಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗಿದೆ.
ದೇಶದ ರೈತರಿಗೆ ಅನುಕೂಲ ಮಾಡಿಕೊಡಲು ಕಾಲ ಕಾಲಕ್ಕೆ ಕೃಷಿ ಸಾಲದ ಮೇಲಿನ ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡಲಾಗುತ್ತದೆ. ಅಡವು ರಹಿತ ಕೃಷಿ ಸಾಲದ ಮಿತಿ ಏರಿಕೆಯಿಂದಾಗಿ ದೇಶದ ಶೇ 86ರಷ್ಟು ಸಣ್ಣ ರೈತರಿಗೆ ಅನುಕೂಲವಾಗಲಿದೆ ಎಂದು ಆರ್ಬಿಐ ಹೇಳಿದೆ.
ಈಗಾಗಲೇ ಬ್ಯಾಂಕುಗಳಿಗೆ ಆರ್ಬಿಐ ಕೃಷಿ ಸಾಲದ ವಿಚಾರದಲ್ಲಿ ಮಾರ್ಗಸೂಚಿ ಪರಿಷ್ಕರಣೆ ಮಾಡಿರುವ ಕುರಿತು ವ್ಯಾಪಕ ಪ್ರಚಾರ ನೀಡಬೇಕು. ದೇಶದ ಪ್ರತಿ ರೈತರಿಗೆ ಈ ಮಾಹಿತಿ ತಲುಪಬೇಕು. ಹೊಸ ಘೋಷಣೆಯ ಉಪಯೋಗವನ್ನು ಎಲ್ಲರೂ ಪಡೆಯುವಂತಾಗಬೇಕು ಎಂದು ಸೂಚನೆ ನೀಡಿದೆ.
ಮುಂದಿನ ದಿನಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲಿನ ಸಾಲದ ಮಿತಿಯನ್ನು ಸಹ ಏರಿಕೆ ಮಾಡುವ ಕುರಿತು ಆರ್ಬಿಐ ಸುಳಿವು ನೀಡಿದೆ. ಈ ಮೂಲಕ ಕೃಷಿ ವಲಯದ ಮೇಲಿನ ಹೂಡಿಕೆಯನ್ನು ಸಹ ಉತ್ತೇಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಅಲ್ಲದೇ ಮಾರ್ಪಡಿಸಿದ ಬಡ್ಡಿ ಸಹಾಯಧನ ಯೋಜನೆಯಡಿ ರೈತರಿಗೆ 3 ಲಕ್ಷದ ತನಕ ಶೇ 4ರ ಬಡ್ಡಿದರದಲ್ಲಿ ಸಾಲ ಸಿಗಲಿದೆ. ಕೃಷಿಗೆ ಉತ್ತೇಜನ ನೀಡಿದರೆ ಗ್ರಾಮೀಣ ಪ್ರದೇಶದಲ್ಲಿ ಜನರ ಜೀವನ ಮಟ್ಟ ಉತ್ತಮವಾಗಲಿದೆ, ಇದಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರ್ಬಿಐ ಹೇಳಿದೆ.
2022ರಲ್ಲಿ ಕೇಂದ್ರ ಸರ್ಕಾರ ರೈತರಿಗೆ ಅಗ್ಗದ ದರದಲ್ಲಿ ತೊಂದರೆಯಿಲ್ಲದ ಸಾಲದ ಲಭ್ಯತೆ ಖಚಿತಪಡಿಸಿಕೊಳ್ಳಲು ಆದ್ಯತೆಯನ್ನು ನೀಡಿತು. ಇದರ ಭಾಗವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಯೋಜನೆ ಪರಿಚಯಿಸಿತು. ಸಾಲದ ಮೇಲೆ ಕೃಷಿ ಉತ್ಪನ್ನಗಳನ್ನು ಖರೀದಿಸಲು ರೈತರನ್ನು ಸಶಕ್ತರನ್ನಾಗಿ ಮಾಡಲಾಯಿತು.
ರೈತರು ಬ್ಯಾಂಕುಗಳಿಗೆ ಕನಿಷ್ಠ ಬಡ್ಡಿದರ ಪಾವತಿಯನ್ನು ಖಚಿತಪಡಿಸಲು ಸರ್ಕಾರವು ಬಡ್ಡಿ ಸಹಾಯಧನ ಯೋಜನೆ (ಐಎಸ್ಎಸ್) ಪರಿಚಯಿಸಿತು. ಬಳಿಕ ಅದನ್ನು ಮಾರ್ಪಡಿಸಿದ್ದು, ಬಡ್ಡಿ ಸಬ್ಸಿಡಿ ಯೋಜನೆ (ಎಂಐಎಸ್) ಎಂದು ಮರುನಾಮಕರಣ ಮಾಡಿತು. ಈ ಮೂಲಕ ರೈತರಿಗೆ ಸಬ್ಸಿಡಿ ಸಹಿತ ಬಡ್ಡಿ ದರಗಳಲ್ಲಿ ಅಲ್ಪಾವಧಿ ಸಾಲವನ್ನು ನೀಡಲಾಗುತ್ತಿದೆ.












Click it and Unblock the Notifications