ಮಡಿಕೇರಿಯಲ್ಲಿ ಕಣ್ಮನ ಸೆಳೆಯುತ್ತಿದೆ ಫಲಪುಷ್ಪ ಪ್ರದರ್ಶನ
ಮಡಿಕೇರಿಯ ರಾಜಸೀಟು ಉದ್ಯಾನವನದಲ್ಲಿ ಆಯೋಜನೆ ಮಾಡಿರುವ ಫಲಪುಷ್ಪ ಪ್ರದರ್ಶನ ಕಣ್ಮನ ಸೆಳೆಯುತ್ತಿದೆ.
ಮಡಿಕೇರಿ, ಫೆಬ್ರವರಿ 05; ವೈನ್ಕಪ್ ಒಳಗೊಂಡ ಚಿತ್ರಗಳು, ಹೆಸರು ಕಾಳು ಮತ್ತು ಬಿಳಿ ಎಳ್ಳು ಮೂಲಕ ನಿರ್ಮಾಣ ಮಾಡಿರುವ ಸೈನಿಕ, ಕೊಡವ ಉಡುಪಿನಲ್ಲಿ ಸ್ವಾಗತಿಸುವ ಚಿತ್ರಗಳು ಹೀಗೆ ಮಡಿಕೇರಿಯ ರಾಜಸೀಟು ಉದ್ಯಾನವನದಲ್ಲಿ ಮತ್ತೊಮ್ಮೆ ಫಲಪುಷ್ಪ ಪ್ರದರ್ಶನ ಜನರನ್ನು ಸೆಳೆಯುತ್ತಿದೆ.
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ತೋಟಗಾರಿಕೆ ಇಲಾಖೆ ವತಿಯಿಂದ 2023ನೇ ಸಾಲಿನ ಫಲಪುಷ್ಪ ಪ್ರದರ್ಶನ ಆರಂಭಗೊಂಡಿದೆ. ಫೆಬ್ರವರಿ 6ರ ತನಕ ರಾಜಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಗಾಂಧಿ ಮೈದಾನದಲ್ಲಿ ವ್ಯಾಪಾರ ಮೇಳ, ವೈನ್ ಮೇಳವನ್ನು ಸಹ ಆಯೋಜನೆ ಮಾಡಲಾಗಿದ್ದು, ನೂರಾರು ಜನರು ಆಗಮಿಸುತ್ತಿದ್ದಾರೆ.
ಬೆಂಗಳೂರು ಲಾಲ್ಬಾಗ್ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ: ಈ ಬಾರಿ ದಾಖಲೆ ಆದಾಯ- ಎಷ್ಟು ಗೊತ್ತೇ?
15 ರಿಂದ 20 ಜಾತಿಯ ಹೂವುಗಳಾದ ಪೇಟೂನಿಯ, ಕ್ಯಾನ, ಸಾಲ್ವಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಕ್ಯಾಲಾಂಡೂಲಾ, ಪ್ಲಾಕ್ಸ್, ವಿಂಕಾ ರೋಸಿಯಾ, ಡೇಲಿಯಾ, ಅಲಿಸಂ ಮತ್ತಿತರ ಹೂವುಗಳನ್ನು ಫಲಪುಷ್ಪ ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಇದರ ಜೊತೆಗೆ ವಿವಿಧ ವ್ಯಾಪಾರ ಮಳಿಗೆಗಳನ್ನು ಸ್ಥಾಪನೆ ಮಾಡಲಾಗಿದೆ.
Gavi Siddeshwara Jatra: ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸಳೆದ ಕಲಾಕೃತಿಗಳು, ಇಲ್ಲಿದೆ ವಿವರ
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಆದ್ದರಿಂದ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಅಭಿಯಾನ ನಡೆಯುತ್ತಿದೆ. ಫಲಪುಷ್ಪಗಳ ಕಲಾಕೃತಿಯಲ್ಲಿ ಮತಯಂತ್ರ ಸೇರಿದಂತೆ ವಿವಿಧ ಕಲಾಕೃತಿ ರಚನೆ ಮಾಡಲಾಗಿದೆ. ಇದು ಜನರನ್ನು ಕೈ ಬೀಸಿ ಕರೆಯುತ್ತಿದೆ.
ಮೈಸೂರು ಅರಮನೆಯಲ್ಲಿ ಫಲಪುಷ್ಪ ಪ್ರದರ್ಶನ: ಮೊದಲ ದಿನವೇ ಸಾವಿರಾರು ಪ್ರವಾಸಿಗರ ದಂಡು
ಫಲಪುಷ್ಪ ಪ್ರದರ್ಶನದ ವಿಶೇಷತೆಗಳು
ಪ್ರಧಾನಮಂತ್ರಿ ನರೇಂದ್ರ ಮೋದಿ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್, ವೀರಸೇನಾನಿ ಜನರಲ್ ಕೆ. ಎಸ್. ತಿಮ್ಮಯ್ಯ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ, ರಾಷ್ಟ್ರಕವಿ ಕುವೆಂಪು, ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್ ಚಂದ್ರಬೋಸ್, ಭಗತ್ಸಿಂಗ್, ಪುನಿತ್ ರಾಜ್ಕುಮಾರ್ ಸೇರಿದಂತೆ ವಿವಿಧ ಗಣ್ಯರ ಕಲಾಕೃತಿಯನ್ನು ತರಕಾರಿ/ ಹಣ್ಣುಗಳಲ್ಲಿ ಕೆತ್ತನೆ ಮಾಡಲಾಗಿದೆ.
ವಿವಿಧ ಅಲಂಕಾರಿಕ ಗಿಡಗಳಾದ ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡಣೆ ಹಾಗೂ ಅಂಥೋರಿಯಂ ಹೂವಿನ ಪ್ರದರ್ಶನ ಮಡಿಕೇರಿಯ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿದೆ.
ಹೂವಿನಲ್ಲಿ ಮತದಾನದ ಜಾಗೃತಿ
ಚುನಾವಣೆ ಮತದಾನದ ಮಹತ್ವ ಕುರಿತು ಜಾಗೃತಿ ಅಭಿಯಾನ ಮಾಡಲಾಗುತ್ತಿದೆ. 18 ವರ್ಷ ಪೂರ್ಣಗೊಂಡಿರುವವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿ, ಹೆಸರು ಸೇರ್ಪಡೆ ಮಾಡಿರುವವರು ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ, ಹೀಗೆ ಪ್ರತಿಯೊಂದು ಕಲಾಕೃತಿಗಳು ನೋಡುಗರನ್ನು ಮತ್ತೊಮ್ಮೆ ವೀಕ್ಷಣೆ ಮಾಡುವಂತೆ ಮಾಡುತ್ತದೆ.
ಶಾಸಕ ಎಂ. ಪಿ. ಅಪ್ಪಚ್ಚುರಂಜನ್ ಫಲಪುಷ್ಪ ಪ್ರದರ್ಶನವನ್ನು ವೀಕ್ಷಣೆ ಮಾಡಿದರು. ವರ್ಷದಿಂದ ವರ್ಷಕ್ಕೆ ಅತ್ಯುತ್ತಮವಾಗಿ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ರಾಜಾಸೀಟು ಉದ್ಯಾನವನ ಫಲಪುಷ್ಪ ಪ್ರದರ್ಶನವು ಕಣ್ಮನ ಸೆಳೆಯುತ್ತಿದ್ದು, ಪ್ರವಾಸಿಗರಲ್ಲಿ ಒಂದು ರೀತಿ ಸಂತಸ ತರುತ್ತದೆ. ನಾಡಿನ ಪ್ರವಾಸಿಗರು ರಾಜಸೀಟು ಉದ್ಯಾನವನದ ಫಲಪುಷ್ಪ ಪ್ರದರ್ಶನ ವೀಕ್ಷಿಸುವಂತಾಗಬೇಕು ಎಂದರು.
ವಸ್ತು ಪ್ರದರ್ಶನ ಮಳಿಗೆಗಳು
ಗಾಂಧಿ ಮೈದಾನದಲ್ಲಿ 60ಕ್ಕೂ ಹೆಚ್ಚು ವಸ್ತು ಪ್ರದರ್ಶನ ಮಳಿಗೆಯನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ತೋಟಗಾರಿಕೆ, ಪಶುಪಾಲನೆ, ಕೃಷಿ, ಆಯುಷ್, ಕಾಫಿ ಮಂಡಳಿ, ಕೈಗಾರಿಕೆ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ, ಕಾರ್ಮಿಕ ಹೀಗೆ ಹಲವು ಇಲಾಖೆಗಳು ವಸ್ತುಪ್ರದರ್ಶನ ಏರ್ಪಡಿಸಿವೆ.
ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆ ಕೊಡಗಿನ ಹಿಂದಿನ ರಾಜರ ಕಾಲದ ನಾಲ್ಕುನಾಡು ಅರಮನೆಯ ಕಲಾಕೃತಿಯನ್ನು 18 ಅಡಿ ಎತ್ತರದಲ್ಲಿ 13 ಅಡಿ ಉದ್ದ 35 ಅಡಿ ಅಗಲದಲ್ಲಿ ವಿವಿಧ ಹೂವುಗಳಿಂದ ನಿರ್ಮಾಣ ಮಾಡಲಾಗಿದೆ.
ವೈನ್ ಮೇಳಕ್ಕೆ ಚಾಲನೆ
ಫಲಪುಷ್ಪ ಪ್ರದರ್ಶನ ಪ್ರಯುಕ್ತ ನಗರದ ಗಾಂಧಿ ಮೈದಾನದಲ್ಲಿ ವೈನ್ಮೇಳವನ್ನು ಆಯೋಜಿಸಲಾಗಿದೆ. ಕೊಡಗಿನ ಹೋಮ್ ಮೇಡ್ ವೈನ್ಗಳು ಹಾಗೂ ಕರ್ನಾಟಕ ದ್ರಾಕ್ಷರಸ ಮಂಡಳಿ ವತಿಯಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ವೈನ್ ತಯಾರಿಸುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ಇದೆ. ರಾಜಸೀಟು ಉದ್ಯಾನವನದಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ಮತ್ತು ಗಾಂಧಿ ಮೈದಾನದಲ್ಲಿ ಏರ್ಪಡಿಸಲಾಗಿರುವ ವಸ್ತು ಪ್ರದರ್ಶನ ಗಮನ ಸೆಳೆಯುತ್ತವೆ. ನೂರಾರು ಜನರು ಆಗಮಿಸುತ್ತಿದ್ದಾರೆ.