ರೈತ ಶಕ್ತಿ: ಡೀಸಲ್ ಸಹಾಯಧನಕ್ಕಾಗಿ ಹೆಸರು ನೋಂದಾಯಿಸಿ
ಬೆಂಗಳೂರು, ಜುಲೈ 26: ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ (2022-23) ಆಯವ್ಯಯದಲ್ಲಿ ಕರ್ನಾಟಕದ ಕೃಷಿ ಉತ್ಪಾದತೆಯನ್ನು ಹೆಚ್ಚಿಸಲು ಹಾಗೂ ಕೃಷಿ ಯಂತ್ರೋಪಕರಣ ಬಳಕೆ ಪ್ರೋತ್ಸಾಹಿಸಲು ಜತೆಗೆ ರೈತರಿಗೆ ಇಂಧನ ವೆಚ್ಚ ಭಾರವನ್ನು ಕಡಿಮೆ ಮಾಡಲು ಸರ್ಕಾರ ಈಗಾಗಲೇ 'ರೈತ ಶಕ್ತಿ' ಯೋಜನೆ ಜಾರಿಗೆ ತಂದಿದೆ.
ಈ 'ರೈತ ಶಕ್ತಿ' ಯೋಜನೆಯಡಿ ಲಭ್ಯವಾಗುವ ಪ್ರತಿ ಎಕರೆಗೆ ರೂ. 250 ಗಳಂತೆ ಗರಿಷ್ಟ 5ಎಕರೆಗೆ ರೂ. 1250 ವರೆಗೆ ಡಿ.ಬಿ.ಟಿ ನೇರ ನಗದು ವರ್ಗಾವಣೆ ಮೂಲಕ ಸಿಗುವ ಡೀಸಲ್ ಸಹಾಯಧನಕ್ಕಾಗಿ ಕೃಷಿ ಇಲಾಖೆ ಆಹ್ವಾನಿಸಿದೆ. ಅದರಂತೆ ರೈತರು ಸಹಾಯಧನ ಪಡೆಯಲು ಫ್ರೂಟ್ಸ್ ವೆಬ್ಸೈಟ್ ನಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಈ ಯೋಜನೆಯಡಿ ಸೌಲಭ್ಯ ಪಡೆಯುವ ಯಾವುದೇ ರೈತರು ಪ್ರತ್ಯೇಕವಾಗಿ ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಫ್ರೂಟ್ಸ್ (ಫಾರ್ಮರ್ಸ್ ರಿಜಿಸ್ಟ್ರೇಷನ್ ಆಂಡ್ ಯುನಿಫೈಡ್ ಬೆನಿಫಿಸಿಯರಿ ಇನ್ಫಾರ್ಮೇಷನ್ ಸಿಸ್ಟಮ್) ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.
ಇದೊಂದು ಏಕೀಕೃತ ಫಲಾನುಭವಿ ಮಾಹಿತಿ ವೆಬ್ ಪೋರ್ಟಲ್ ವ್ಯವಸ್ಥೆ ಯಾಗಿದೆ. ನೋಂದಣಿ ಮಾಡಿಕೊಂಡ ರೈತರ ಹಿಡುವಳಿಯ ಆಧಾರದ ಮೇಲೆ ಪ್ರತಿಯೊಬ್ಬ ರೈತರಿಗೆ ಪ್ರತಿ ಎಕರೆಗೆ ರೂ. 250 ನಂತೆ ಗರಿಷ್ಟ 5 ಎಕರೆಗೆ ರೂ. 1250 ರವರೆಗೆ ಡೀಸೆಲ್ ಸಹಾಯಧನವನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಭೂಮಿ ಪೋರ್ಟಲ್ ಜತೆ ಸಂಯೋಜಿತಗೊಂಡ ಫ್ರೂಟ್ಸ್
ಫ್ರೂಟ್ಸ್ (ಫಾರ್ಮರ್ಸ್ ರಿಜಿಸ್ಟ್ರೇಷನ್ ಆಂಡ್ ಯುನಿಫೈಡ್ ಬೆನಿಫಿಸಿಯರಿ ಇನ್ಫಾರ್ಮೇಷನ್ ಸಿಸ್ಟಮ್) ಇದೊಂದು ರಾಜ್ಯ ಸರ್ಕಾರ ಇ -ಇಲಾಖೆಯ ಪೋರ್ಟಲ್ ಆಗಿದೆ. ಕಂದಾಯ ಇಲಾಖೆಯ 'ಭೂಮಿ' (Bhoomi) ಪೋರ್ಟಲ್ನೊಂದಿಗೆ ಸಂಯೋಜಿಸಲಾಗಿದೆ. ರೈತರ ಭೂ ಹಿಡುವಳಿಯ ವಿವರವನ್ನು ವಿಳಾಸ ಮತ್ತು ಬ್ಯಾಂಕ್ ವಿವರದೊಂದಿಗೆ ನೋಂದಾಯಿಸಿದರೆ ರೈತರಿಗೆ ಗುರುತಿನ ಸಂಖ್ಯೆ(ಫಾರ್ಮರ್ ಐಡಿ) ನೀಡಲಾಗುವುದು.
ರೈತರಿಗೆ ಸಹಾಯಧನ ನೇರ ವರ್ಗಾವಣೆ
ಕೃಷಿ ಮತ್ತು ಸಂಬಂಧಿತ ಇಲಾಖೆಯ ಫಲಾನುಭವಿ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ಫ್ರೂಟ್ಸ್ ತಂತ್ರಾಶವನ್ನು ಬಳಸಲಾಗುವುದು. ಯೋಜನೆಯ ಸವಲತ್ತುಗಳನ್ನು ನೇರವಾಗಿ ಫಲಾನುಭವಿಗಳಿಗೆ ವರ್ಗಾವಣೆ ಮಾಡುವ ಸಂದರ್ಭಗಳಲ್ಲಿ ತಂತ್ರಾಂಶದ ಮೂಲಕ ನೇರ ನಗದು ವರ್ಗಾವಯಿಸಲಾಗುವುದು ಎಂದು ಅವರು ವಿವರಿಸಿದರು.
ಈಗಾಗಲೇ ರಾಜ್ಯದ ಸಾಕಷ್ಟು ರೈತರು ಫ್ರೂಟ್ಸ್ ವೆಬ್ಸೈಟ್ನಲ್ಲಿ ಕೆಲವು ಸರ್ವೆ ನಂಬರ್/ ಭೂ ಹಿಡುವಳಿಯೊಂದಿಗೆ ನೋಂದಾಯಿಸಿಕೊಂಡಿದ್ದಾರೆ. ಪ್ರತಿ ಎಕರೆಗೆ ರೂ. 250ದಿಂದ ಗರಿಷ್ಟ 5ಎಕರೆಗೆ ರೂ. 1250ರವರೆಗೆ ಡೀಸೆಲ್ ಸಹಾಯಧನವನ್ನು ಎಕರೆವಾರು ನೀಡುವುದರಿಂದ ರೈತರ ಉಳಿದ ಎಲ್ಲಾ ಸರ್ವೆ ನಂಬರ್/ ಭೂ ಹಿಡುವಳಿಗಳನ್ನು 2022ರ ಆಗಸ್ಟ್ 20ರೊಳಗೆ ರೊಳಗೆ ವೆಬ್ಸೈಟ್ನಲ್ಲಿ ಸೇರಿಸಲಾಗುವುದು ಎಂದರು.
ಕೃಷಿ ಇಲಾಖೆ ಕಚೇರಿಗಳಲ್ಲಿ ನೋಂದಣಿಗೆ ಅವಕಾಶ
ಫ್ರೂಟ್ಸ್ ನಲ್ಲಿ ನೋಂದಣಿ ಆಗದಿದ್ದರೆ ರೈತರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಜಮೀನಿನ ಖಾತೆ ಇಲ್ಲವೇ ಪಹಣಿ ವಿವರ ಮತ್ತು ಜಾತಿ ಪ್ರಮಾಣ ಪತ್ರದೊಂದಿಗೆ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಚೇರಿಗಳಲ್ಲಿ ತಮ್ಮ ಎಲ್ಲಾ ಸರ್ವೆ ನಂಬರ್/ ಭೂ ಹಿಡುವಳಿಗಳನ್ನು ಸೇರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸರ್ಕಾರದ ಯೋಜನೆ ಪಡೆಯಲು ನೋಂದಣಿ ಅಗತ್ಯ
ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ಬೆಳೆ ನಷ್ಟ ಪರಿಹಾರ ವಿತರಿಸಲು, ಬೆಂಬಲ ಬೆಲೆ ಯೋಜನೆಯಲ್ಲಿ ಕೃಷಿ ಉತ್ಪನ್ನ ಖರೀದಿಸಲು, ಬ್ಯಾಂಕ್ಗಳಿಂದ ಸಾಲ ಸೌಲಭ್ಯ ಪಡೆಯಲು, ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಇತರೆ ಇಲಾಖೆಗಳಲ್ಲಿ ಸವಲತ್ತುಗಳನ್ನು ಪಡೆಯಲು ಫ್ರೂಟ್ಸ್ ನಲ್ಲಿ ನೋಂದಣಿ ಅಗತ್ಯವಾಗಿದೆ. ಈ ಕುರಿತು ರಾಜ್ಯದ ರೈತರು ಸಹಕರಿಸಬೇಕು. ನಿಗದಿತ ಕಾಲದಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಕೇಷಿ ಇಲಾಖೆ ಜಂಟಿ ನಿರ್ದೇಶಕರು ಮನವಿ ಮಾಡಿದ್ದಾರೆ.
Recommended Video