ರೈತರ ಸಾಲ ಮನ್ನಾ ಬಗ್ಗೆ ಸುಳ್ಳು ಹೇಳುತ್ತಿರುವ ರಾಹುಲ್, ವಾಸ್ತವ ಏನು?
Recommended Video

ರಾಜಸ್ತಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದ ನಂತರ ರಾಹುಲ್ ಗಾಂಧಿ ಅವರು ಮೋದಿ ಸರಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ರೈತರ ಸಾಲದ ಒಂದು ರುಪಾಯಿಯನ್ನು ಕೂಡ ಮೋದಿ ಮನ್ನಾ ಮಾಡಿಲ್ಲ ಎಂಬುದು ಆರೋಪ. ಸಾರ್ವಜನಿಕರ ನೆನಪು ಬಹಳ ಕಡಿಮೆ ಎಂಬ ಮಾತಿನ ಲಾಭ ಪಡೆಯಲು ಅವರೇನಾದರೂ ಯತ್ನಿಸುತ್ತಿದ್ದಾರಾ?
ಹೀಗೊಂದು ಅನುಮಾನ ಬರುತ್ತದೆ. ಏಕೆ ಗೊತ್ತಾ? ತಾವು ಗುರುತರವಾದ ಆರೋಪ ಮಾಡುವ ಮುನ್ನ ಸತ್ಯ ಏನು ಅನ್ನೋದರ ಪರೀಕ್ಷೆ ಅವರು ಮಾಡಬೇಕಿತ್ತು. ಭಾರತದ ಅತಿ ದೊಡ್ಡ ರಾಜ್ಯ ಉತ್ತರಪ್ರದೇಶದಿಂದಲೇ ಆರಂಭಿಸೋಣ. ಮೋದಿ ನೇತೃತ್ವದಲ್ಲಿ ಬಿಜೆಪಿಯು ಅಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿತು.
2017ರಲ್ಲಿ ನಡೆದ ಚುನಾವಣೆಯಲ್ಲಿ 403 ವಿಧಾನಸಭಾ ಸ್ಥಾನಗಳ ಪೈಕಿ 312 ಕ್ಷೇತ್ರಗಳು ಕೇಸರಿ ಪಕ್ಷದ ಪಾಲಾದವು. ಯೋಗಿ ಆದಿತ್ಯನಾಥ್ ಅಲ್ಲಿನ ಮುಖ್ಯಮಂತ್ರಿ ಆದರು. ಅದೇ ವರ್ಷವೇ ಬರಗಾಲ ಪೀಡಿತ ರೈತರಿಗೆ ಸಾಲ ಮನ್ನಾ ಯೋಜನೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು.

ಮೊದಲ ಹಂತದಲ್ಲಿ 32 ಸಾವಿರ ಕೋಟಿ ಮೀಸಲು
ಉತ್ತರಪ್ರದೇಶದಲ್ಲಿ ಮೊದಲ ಹಂತದಲ್ಲಿ 32 ಸಾವಿರ ಕೋಟಿ ರುಪಾಯಿಗೂ ಹೆಚ್ಚು ಮೊತ್ತವನ್ನು ಸಾಲ ಮನ್ನಾ ಮಾಡಲಿಕ್ಕಾಗಿ ಮೀಸಲಿಡಲಾಯಿತು. ರೈತರು ಪಡೆದ ಸಾಲದ ಪ್ರಮಾಣದ ಅನ್ವಯ ಮನ್ನಾ ಮಾಡಲಾಯಿತು. ಸೆಪ್ಟೆಂಬರ್ 2017ರ ವರೆಗೆ 11.93 ಲಕ್ಷಕ್ಕೂ ಹೆಚ್ಚು ರೈತರಿಗೆ ಇದರಿಂದ ಅನುಕೂಲ ಆಯಿತು. ಇನ್ನು ಇತರೆ 11.27 ಲಕ್ಷ ರೈತರು, ಹತ್ತು ಸಾವಿರ ರುಪಾಯಿಗಿಂತ ಹೆಚ್ಚು ಸಾಲ ಇದ್ದವರಿಗೆ ಯೋಜನೆಯಿಂದ ಅನುಕೂಲ ಆಯಿತು. ಇನ್ನು ಮಹಾರಾಷ್ಟ್ರದ ವಿಷಯಕ್ಕೆ ಬಂದರೆ, ಆ ರಾಜ್ಯದಲ್ಲಿ 2014ರಲ್ಲಿ ಬಿಜೆಪಿ ಸರಕಾರ ರಚನೆ ಮಾಡಿತು. ಭೀಕರವಾದ ಹವಾಮಾನ ವೈಪರೀತ್ಯಕ್ಕೆ ಸಿಲುಕಿದ ಅಲ್ಲಿನ ರೈತರ ನೆರವಿಗೆ ದೇವೇಂದ್ರ ಫಡ್ನವೀಸ್ ರ ರಾಜ್ಯ ಸರಕಾರ ಹಾಗೂ ಮೋದಿ ನೇತೃತ್ವದ ಕೇಂದ್ರ ಸರಕಾರ ನಿಂತಿತು.

ಪ್ರಣಾಳಿಕೆಯಲ್ಲಿ ಸಾಲ ಮನ್ನಾ ಬಗ್ಗೆ ತಿಳಿಸಿರಲಿಲ್ಲ
ಛತ್ರಪತಿ ಶಿವಾಜಿ ಮಹಾರಾಜ್ ಶೆಟ್ಕರಿ ಸನ್ಮಾನ್ ಯೋಜನಾ ಜಾರಿಗೆ ತಂದಿತು. 2017ರ ಮಧ್ಯಭಾಗದಲ್ಲಿ ಈ ಯೋಜನೆ ಜಾರಿಗೆ ಬಂದಿತು. ಇದನ್ನೇನು ಪ್ರಣಾಳಿಕೆಯಲ್ಲಿ ತಿಳಿಸಿರಲಿಲ್ಲ. ಆದರೂ ರೈತರ ಸ್ಥಿತಿಗೆ ಸ್ಪಂದಿಸಿದ ಬಗೆ ಇದಾಗಿತ್ತು. ಬಿಜೆಪಿ ಸರಕಾರಕ್ಕೆ ರೈತರ ಬಗ್ಗೆ ಇರುವ ಅಕ್ಕರಾಸ್ಥೆಯನ್ನು ಇದು ತೋರಿಸುತ್ತದೆ. ಈ ಯೋಜನೆ ಅಡಿಯಲ್ಲಿ ಸಾಲ ಮನ್ನಾಕ್ಕಾಗಿ 34 ಸಾವಿರ ಕೋಟಿ ಒಗ್ಗೂಡಿಸಿತು. ಈ ವರೆಗೆ 16,300 ಕೋಟಿ ಸಾಲ ಮನ್ನಾಕ್ಕಾಗಿ ಖರ್ಚು ಮಾಡಲಾಗಿದೆ. ಮರಾಠವಾಡ ಭಾಗದಲ್ಲಿ ಈ ಯೋಜನೆ ಅಡಿ 2.7 ಲಕ್ಷ ರೈತರು ಆನ್ ಲೈನ್ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ಮಹಾರಾಷ್ಟ್ರದಾದ್ಯಂತ 58 ಲಕ್ಷ ರೈತರು ಈ ಯೋಜನೆ ಅಡಿಗೆ ಬರುತ್ತಾರೆ.

ರಘುರಾಮ್ ರಾಜನ್ ರ ಸಲಹೆ ಧಿಕ್ಕರಿಸುತ್ತಿರುವ ರಾಹುಲ್
ಇದರ ಜತೆಗೆ ರೈತರ ಸಾಲ ಮನ್ನಾಗೆ ಮಾತ್ರ ನರೇಂದ್ರ ಮೋದಿ ಸೀಮಿತವಾಗಿಲ್ಲ. ರೈತರ ಮೇಲೆ ಹೊರೆ ಇಳಿಸುವ ಸಲುವಾಗಿ, ಕೃಷಿ ಸುಧಾರಣೆಗೆ ಹಲವು ಸುಧಾರಣೆ ಜಾರಿಗೆ ತಂದಿದ್ದಾರೆ. ಇನ್ನೊಂದು ಮಾತು. ಕಾಂಗ್ರೆಸ್ ಬಹುವಾಗಿ ಒಪ್ಪುವ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ರಘುರಾಮ್ ರಾಜನ್, ಕೃಷಿ ಸಾಲ ಮನ್ನಾವನ್ನು ನಿಲ್ಲಿಸಬೇಕು ಎಂದಿದ್ದಾರೆ. ಆ ಸಲಹೆಯನ್ನು ಕೂಡ ಯಾಕೋ ರಾಹುಲ್ ಗಾಂಧಿ ಮೀರುತ್ತಿದ್ದಾರೆ. ಸ್ವತಃ ನರೇಂದ್ರ ಮೋದಿಗೆ ಗೊತ್ತಿದೆ: ಕೃಷಿ ಸಾಲ ಮನ್ನಾವೊಂದರಿಂದ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಸಾಧ್ಯವಿಲ್ಲ. ಆ ಕಾರಣಕ್ಕೆ ಸ್ವಾಮಿನಾಥನ್ ಸಮಿತಿ ವರದಿ ಶಿಫಾರಸು ಮಾಡಿರುವಂತೆ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಮುಂದಾಗಿದ್ದಾರೆ. ಫಸಲ್ ಬಿಮಾ ಯೋಜನೆ ಎಂಬ ವಿಮಾ ಯೋಜನೆ ಪರಿಚಯಿಸಿದ್ದಾರೆ. ಮಣ್ಣು ಆರೋಗ್ಯ ಕಾರ್ಡ್ ಯೋಜನೆ ಜಾರಿಗೆ ತಂದಿದ್ದಾರೆ.

ಸುಳ್ಳು ಹೇಳುತ್ತಿದ್ದಾರೆ ಅಂತಲೇ ಅರ್ಥ
ಯಾವಾಗೆಲ್ಲ ರಾಹುಲ್ ಗಾಂಧಿ ಅವರು ಮೋದಿ ಅವರ ಮೇಲೆ ಆರೋಪ ಮಾಡುತ್ತಾರೋ, ರೈತರ ಒಂದು ರುಪಾಯಿಯನ್ನು ಕೂಡ ಮನ್ನಾ ಮಾಡಿಲ್ಲ ಅನ್ನುತ್ತಾರೋ ಆಗೆಲ್ಲ ಅವರು ಸುಳ್ಳು ಹೇಳುತ್ತಿದ್ದಾರೆ ಅಂತಲೇ ಅರ್ಥ. ಈಗಾಗಲೇ ಸಂಕಷ್ಟದಲ್ಲಿರುವ ರೈತರನ್ನು ಇನ್ನಷ್ಟು ಗೊಂದಲಕ್ಕೆ ಸಿಲುಕಿಸಿ ಅದರಿಂದ ರಾಜಕೀಯ ಲಾಭ ಮಾಡಿಕೊಳ್ಳುವ ಅಗತ್ಯ ಇದೆಯಾ? ಸಾಲ ಮನ್ನಾದ ಹಿಂದೆ ಇರುವ ಅರ್ಥಶಾಸ್ತ್ರದ ಲೆಕ್ಕಾಚಾರ ಖಂಡಿತಾ ಪ್ರಶ್ನಾರ್ಹವೇ. ರಾಜಕೀಯದ ಸಲುವಾಗಿ ವಾಸ್ತವದಲ್ಲಿ ಯಾವುದೇ ಉತ್ತಮ ಉದ್ದೇಶ ಇಲ್ಲದ ಹಾಗೂ ಸುಳ್ಳು ಆರೋಪಗಳನ್ನು ಮಾಡುತ್ತಾ ಮುಂದುವರಿಯುವುದು ಎಷ್ಟು ಸರಿ?












Click it and Unblock the Notifications