ಮ್ಯಾಂಡಸ್ ಅಬ್ಬರ; ರಾಗಿ ಬೆಳೆದ ರೈತರಿಗೆ ಜಿಲ್ಲಾಡಳಿತದಿಂದ ಸಿಹಿಸುದ್ದಿ
ಬೆಂಗಳೂರು, ಡಿಸೆಂಬರ್ 14; ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮ್ಯಾಂಡಸ್ ಚಂಡಮಾರುತದ ಅಬ್ಬರದಿಂದ ಬಿಟ್ಟುಬಿಡದೆ ಮಳೆಯಾಗುತ್ತಿದೆ. ಇದರಿಂದಾಗಿ ರಾಗಿ ಬೆಳೆಗಾರರಲ್ಲಿ ಆತಂಕ ಹೆಚ್ಚಾಗಿದೆ.
ಜಿಲ್ಲಾಡಳಿತ ರೈತರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಡಿಸೆಂಬರ್ 15ರಿಂದ ರಾಗಿ ಖರೀದಿಗೆ ಸಂಬಧ ರೈತರ ನೋಂದಣಿ ಕಾರ್ಯ ಪ್ರಾರಂಭವಾಗಲಿದೆ.
2023ರ ಜನವರಿ 1ರಿಂದ ಜಿಲ್ಲೆಯ 5 ಸ್ಥಳಗಳಲ್ಲಿ ರಾಗಿ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ಲತಾ ಹೇಳಿದ್ದಾರೆ. ಕೇಂದ್ರ ಸರ್ಕಾರವು 2022-23 ನೇ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ಗೆ 3,578 ರೂ. ದರದಲ್ಲಿ ರಾಗಿ ಖರೀದಿಸಲಿದೆ.

ಜಿಲ್ಲಾಧಿಕಾರಿಗಳು ಜಿಲ್ಲಾಡಳಿತ ಭವನದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕುರಿತ ಕಾರ್ಯಪಡೆಯ ಸಭೆ ನಡೆಸಿದರು. ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದಾದ್ಯಂತ 5 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಗುರಿ ನಿಗದಿಗೊಳಿಸಲಾಗಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ ಮತ್ತು ಹೊಸಕೋಟೆ ತಾಲ್ಲೂಕುಗಳಲ್ಲಿ ತಲಾ 1 ಹಾಗೂ ದೊಡ್ಡಬಳ್ಳಾಪುರದ ಸಾಸಲು ಹೋಬಳಿಯಲ್ಲಿ 1 ಹೆಚ್ಚುವರಿ ರಾಗಿ ಸಂಗ್ರಹಣಾ ಕೇಂದ್ರ ತೆರೆಯಲಾಗುತ್ತದೆ. ಅಗತ್ಯ ಬಿದ್ದರೆ ಖರೀದಿ ಕೇಂದ್ರಗಳ ಸಂಖ್ಯೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಎಷ್ಟು ಖರೀದಿ ಮಾಡಬಹುದು?: ಉತ್ಪಾದನೆಗೆ ಅನುಗುಣವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್ನಂತೆ ಗರಿಷ್ಟ 20 ಕ್ವಿಂಟಾಲ್ ರಾಗಿ ಖರೀದಿಸಲು ಅವಕಾಶವಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಸಂಸ್ಥೆಯನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ.
ಡಿಸೆಂಬರ್ 15ರಿಂದ ರೈತರ ನೋಂದಣಿ ಕಾರ್ಯ ಆರಂಭವಾಗಲಿದೆ. 2023ರ ಜನೆವರಿ 1ರಿಂದ ಮಾರ್ಚ್ 31ರವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ. ರಾಗಿ ಖರೀದಿ ಕುರಿತು ಕರಪತ್ರಗಳನ್ನು ವಿತರಣೆ ಮಾಡಬೇಕು, ರೈತಸಂಪರ್ಕ ಕೇಂದ್ರ, ಗ್ರಾಮ ಪಂಚಾಯಿತಿ ಸೇರಿದಂತೆ ರೈತರು ಸೇರುವ ಸ್ಥಳಗಳಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ರಾಘವೇಂದ್ರ ಮಾತನಾಡಿ, "ರೈತರಿಂದ ಬರುವ ರಾಗಿಯನ್ನು ಕೆಎಫ್ಸಿಎಸ್ಸಿ ವತಿಯಿಂದ ಉಚಿತವಾಗಿ ನೀಡಲಾಗುವ ಗೋಣಿ ಚೀಲದಲ್ಲಿ ತುಂಬಿಕೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.
ಚಂಡಮಾರುತದಿಂದ ಬೆಳೆ ಹಾನಿ; ಮ್ಯಾಂಡಸ್ ಚಂಡಮಾರುತದ ಅಬ್ಬರದಿಂದ ಸುರಿಯುತ್ತಿರುವ ಮಳೆ ರಾಗಿ ಕೊಯ್ಲಿಗೆ ಅಡ್ಡಿಪಡಿಸಿದೆ. ರೈತರು ಮಳೆ ಮುಂದುವರೆದರೆ ಬೆಳೆನಷ್ಟ ಆಗುವ ಭೀತಿಯಲ್ಲಿದ್ದಾರೆ. ಮಳೆಯಿಂದಾಗಿ ರಾಗಿ ತೆನೆಯಲ್ಲಿ ತೇವಾಂಶ ಹೆಚ್ಚಾಗಿ ಮೊಳಕೆ ಒಡೆಯುತ್ತಿದೆ. ಬೆಳೆ ಕೈಗೆ ಬರುವ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ಸಂಕಷ್ಟ ತಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೈತರು ಎಂಎಲ್25 ತಳಿ ಬೆಳೆದಿದ್ದಾರೆ. ಕಡಿಮೆ ಅವಧಿಯಲ್ಲಿ ಬೆಳೆಯುವ ರಾಗಿ ತಳಿಗಳು ಕೊಯ್ಲಿಗೆ ಬಂದಿದೆ. ಹಲವು ಬೆಳೆಗಾರರು ಕೊಯ್ಲು ಮಾಡಿ
ಹೊಲದಲ್ಲಿಯೇ ಬೆಳೆ ಬಿಟ್ಟಿದ್ದಾರೆ. ಮಳೆಯಿಂದ ಹೊಲದಲ್ಲಿ ತೇವಾಂಶ ಹೆಚ್ಚಾಗಿ ರಾಗಿ ಮೊಳಕೆ ಬರುತ್ತಿದೆ.
ಹಲವು ದಿನಗಳಿಂದ ಬಿಸಿಲು ಇದ್ದ ಹಿನ್ನಲೆಯಲ್ಲಿ ರೈತರು ರಾಗಿ ಕಟಾವು ಮಾಡಲು ಆರಂಭಿಸಿದ್ದರು. ಆದರೆ ಚಂಡಮಾರುತದ ಪ್ರಭಾವದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಕಾರ್ಮಿಕರು ಕೆಲಸ ಮಾಡಲು ಸಹ ಅಡ್ಡಿಪಡಿಸಿದೆ. ರಾಗಿ ತೆನೆ ಕಟಾವು ಮಾಡಲು ಜಿಲ್ಲೆಗೆ ಯಂತ್ರಗಳು ಆಗಮಿಸಿವೆ. ಅವುಗಳು ಸಹ ಕಾರ್ಯಾಚರಣೆ ಮಾಡದಂತೆ ನಿಲ್ಲಿಸಲಾಗಿದೆ.











Click it and Unblock the Notifications