50 ರೈತರಿಗೆ ಇಸ್ರೇಲ್ ಪ್ರವಾಸ ಭಾಗ್ಯ ಕಲ್ಪಿಸಿದ ಮಾಜಿ MLC ರಘು ಆಚಾರ್
ಚಿತ್ರದುರ್ಗ, ಅಕ್ಟೋಬರ್ 3: ಆಧುನಿಕ ಕೃಷಿ ತಂತ್ರಜ್ಞಾನಗಳ ಅಧ್ಯಯನಕ್ಕಾಗಿ 'ಸುವರ್ಣ ರೈತ ಚಿತ್ರದುರ್ಗ ಟು ಇಸ್ರೇಲ್' ಎಂಬ ಟ್ಯಾಗ್ನೊಂದಿಗೆ 50 ರೈತರನ್ನು ಇಸ್ರೇಲ್ ದೇಶಕ್ಕೆ ಕಳುಹಿಸಲು ಮಾಜಿ ವಿಧಾನಪರಿಷತ್ ಸದಸ್ಯ ರಘು ಆಚಾರ್ ಸಿದ್ದತೆ ನಡೆಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯೋಜನೆಯ ಕುರಿತು ಮಾಹಿತಿ ನೀಡಿದರು. " ಇಸ್ರೇಲ್ ಮಾದರಿ ವಿಶ್ವ ಕೃಷಿಯಲ್ಲೇ ಅತ್ಯಂತ ಯಶಸ್ವಿಯಾಗಿ ಪ್ರಯೋಗವಾಗಿದೆ. ತನ್ನ ಸೀಮಿತ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಹೆಚ್ಚಿನ ಕೃಷಿ ಉತ್ಪಾದನೆ ಹಾಗೂ ತಾಜಾ ಉತ್ಪನ್ನಗಳ ರಫ್ತಿಗೆ ಇಸ್ರೇಲ್ ಹೆಸರಾಗಿದೆ. ಸುಧಾರಿತ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿಶಿಷ್ಟವಾದ ಕೃಷಿ ಪದ್ಧತಿಯನ್ನು ಇಸ್ರೇಲ್ ಅಳವಡಿಸಿಕೊಂಡಿದೆ'' ಎಂದರು.
ದೇಶಕ್ಕೆ ಭೂತಾನ್ ಅಡಿಕೆ ಆಮದಿಗೆ ಆಂತಕ ವ್ಯಕ್ತಪಡಿಸಿದ ಕೋಟೆ ನಾಡಿನ ರೈತರು !
''ಸಾಕಷ್ಟು ಶುಷ್ಕ ಮತ್ತು ಅರೆ ಶುಷ್ಕ ಪ್ರದೇಶಗಳನ್ನು ಹೊಂದಿರುವ ಚಿತ್ರದುರ್ಗಕ್ಕೆ ಇಸ್ರೇಲ್ ಮಾದರಿಯ ವ್ಯವಸಾಯ ತಂತ್ರಜ್ಞಾನ ಅತ್ಯಂತ ಉಪಯುಕ್ತವಾಗಿದೆ. ಸಾಂಪ್ರದಾಯಿಕವಾಗಿ, ಈ ಪ್ರದೇಶಗಳು ಕಡಿಮೆ ಬೆಳೆ ಇಳುವರಿ ಹಾಗೂ ಆಹಾರ ಪದಾರ್ಥ ಉತ್ಪಾದನೆಯಲ್ಲಿ ಗುಣಮಟ್ಟದ ಕೊರತೆ ಎದುರಿಸುತ್ತಿದೆ. ಆದರೆ ನಮ್ಮ ಹೆಚ್ಚುತ್ತಿರುವ ಜನಸಂಖ್ಯೆಯ ಆಹಾರ ಅವಲಂಬನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೃಷಿ ಪದ್ಧತಿಯಲ್ಲಿ ಹೆಚ್ಚಿನ ಪ್ರಯೋಗಗಳ ಮೂಲಕ ಇಳುವರಿ ಹಾಗೂ ಗುಣಮಟ್ಟ ಹೆಚ್ಚಿಸಬೇಕಾದ ಅನಿವಾರ್ಯತೆಯಿದೆ'' ಎಂದು ವಿವರಿಸಿದರು.
ಜಾನುವಾರುಗಳನ್ನು ಹೆಚ್ಚಾಗಿ ಮೇಯಿಸುವಿಕೆಯಿಂದ ಮಣ್ಣಿನ ಅವನತಿಯಾಗುತ್ತದೆ ಎನ್ನಲಾಗುತ್ತದೆ. ಆದರೆ ಸರಿಯಾದ ಪ್ರಾಣಿ ಪ್ರಭೇದಗಳ ಸಮರ್ಪಕ ನಿರ್ವಹಣೆಯಿಂದ ಸಸ್ಯ ವೈವಿಧ್ಯತೆ ವೃದ್ಧಿಯಾಗುತ್ತದೆ. ಪಶುಸಂಗೋಪನೆಯಿಂದ ಹುಲ್ಲಿನ ಉಳುಮೆ ಕ್ರಮಗಳನ್ನು ಉತ್ತೇಜಿಸಲಾಗುತ್ತದೆ. ಇದರಿಂದ ಬೀಜ ಮೊಳಕೆಯೊಡೆಯುವ ಪ್ರಕ್ರಿಯೆ ಸುಧಾರಿಸುತ್ತದೆ. ಇಸ್ರೇಲ್ ತನ್ನ ಸುಧಾರಿತ ಪಶುಸಂಗೋಪನೆಯಿಂದ ಮಹತ್ವದ ಬೆಳವಣಿಕೆ ಸಾಧಿಸಿದೆ. ಇಸ್ರೇಲ್ ತನ್ನ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕೆಲವು ವರ್ಷಗಳ ಹಿಂದೆ ಯೋಚಿಸಲಾಗದ ಉತ್ಪಾದನೆಯನ್ನು ಈಗ ಸಾಧಿಸಿ ತೋರಿಸಿದೆ.
ಸಾವಯವ ಕೃಷಿಯಲ್ಲಿ ಖುಷಿಕಂಡ ಮಸ್ಕಿ ತಾಲೂಕಿನ ಅಮೀನಗಡ ಸಹೋದರರು
ಅಲ್ಲದೆ ಇಸ್ರೇಲ್ ಆಹಾರ ವೈವಿಧ್ಯತೆ ಮತ್ತು ಭದ್ರತೆಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಹೀಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಕೃಷಿ ನಡೆಸುವ ವಿಧಾನ ನಮ್ಮ ಚಿತ್ರದುರ್ಗದ ಶುಷ್ಕ ಮತ್ತು ಅರೆ-ಶುಷ್ಕ ವಾತಾವರಣಕ್ಕೆ ಸೂಕ್ತವಾಗಿ ಹೊಂದಕೆಯಾಗುತ್ತದೆ. ಮುಂಬರುವ ದಿನಗಳಲ್ಲಿ ಇಸ್ರೇಲ್ ಮಾದರಿಯ ಕೃಷಿ ಪದ್ಧತಿಯನ್ನು ಚಿತ್ರದುರ್ಗದಲ್ಲಿಯೂ ಸಹ ಕಾರ್ಯಗತಗೊಳಿಸಬಹುದಾಗಿದೆ. ಇಸ್ರೇಲ್ ಕೃಷಿ ಅಧ್ಯಯನ ಮತ್ತು ತರಬೇತಿ ಪ್ರವಾಸದ ನೀಲನಕ್ಷೆ ಸಿದ್ದಪಡಿಸಲಾಗಿದ್ದು, ಶೀಘ್ರದಲ್ಲಿ ರೈತರ ಮೊದಲ ತಂಡ ಇಸ್ರೇಲ್ಗೆ ತೆರಳಲಿದೆ ಎಂದರು.
ಇದೇ ಸಂದರ್ಭದಲ್ಲಿ ಇಸ್ರೇಲ್ ತಂತ್ರಜ್ಞರನ್ನು ಸಂಪರ್ಕಿಸಿರುವ ಕುರಿತು ಮಾಹಿತಿ ಹಂಚಿಕೊಂಡರು. "ನಾವು ಇಸ್ರೇಲ್ನ ಟೆಲ್ ಅವಿವ್ ವಿಶ್ವವಿದ್ಯಾಲಯದ ಕೃಷಿ ಮತ್ತು ನೀರು ನಿರ್ವಹಣೆಯ ಪ್ರಾಧ್ಯಾಪಕ ಪ್ರೊ.ರಾಮ್ ಫಿಶ್ಮನ್ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರು ಕೃಷಿಯಲ್ಲಿ ಆಧುನಿಕ ಮತ್ತು ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸಲು ನಮ್ಮೊಂದಿಗೆ ಸಹಕರಿಸಲು ಸಂತೋಷದಿಂದ ಸಮ್ಮತಿಸಿದ್ದಾರೆ. ನಮ್ಮ ರೈತರ ನಿಯೋಗವು ಕೃಷಿ ಶಿಕ್ಷಣ, ಸಂಶೋಧನೆ ಮತ್ತು ನೀತಿ ತಜ್ಞರನ್ನು ಭೇಟಿ ಮಾಡಿ ಸಮಗ್ರವಾಗಿ ಅಧ್ಯಯನ ನಡೆಸಲಿದೆ" ಎಂದು ಹೇಳಿದರು.