ಬೆಂಬಲ ಬೆಲೆ ಯೋಜನೆಯಡಿ ಕುಸುಬೆ ಉತ್ಪನ್ನ ಖರೀದಿ, ಜೂ. 29ರ ತನಕ ನೋಂದಣಿ
ಧಾರವಾಡ, ಮೇ 30; ಹಿಂಗಾರು ಅವಧಿಯಲ್ಲಿ ರೈತರು ಬೆಳೆದ ಕುಸುಬೆ ಉತ್ಪನ್ನಗಳ ಖರೀದಿಗಾಗಿ ಧಾರವಾಡ ಜಿಲ್ಲೆಯ ರೈತರಿಗಾಗಿ ಖರೀದಿ ಕೇಂದ್ರ ತೆರೆಯಲಾಗುತ್ತಿದೆ. ರೈತರು ಜೂನ್ 29ರ ತನಕ ಕುಸುಬೆ ಉತ್ಪನ್ನಗಳ ಮಾರಾಟಕ್ಕೆ ಹೆಸರು ನೋಂದಣಿ ಮಾಡಲು ಅವಕಾಶವಿದೆ.
ಧಾರವಾಡ ಜಿಲ್ಲಾಧಿಕಾರಿ, ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿ ಅಧ್ಯಕ್ಷ ಗುರುದತ್ತ ಹೆಗಡೆ ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. 2022-23ನೇ ಸಾಲಿನ ಹಿಂಗಾರು ಹಂಗಾಮಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್. ಎ. ಕ್ಯೂ. ಗುಣಮಟ್ಟದ ಕುಸುಬೆ ಉತ್ಪನ್ನ ಖರೀದಿಸಲು ಜಿಲ್ಲೆಯ ರೈತರಿಗೆ ಖರೀದಿ ಕೇಂದ್ರ ತೆರೆಯಲಾಗಿದೆ.

ಕುಸುಬೆ ಉತ್ಪನ್ನ ನೋಂದಣಿಗೆ ಜೂನ್ 29ರ ವರೆಗೆ ಅವಕಾಶ ನೀಡಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಕುಸುಬೆಕಾಳು ಖರೀದಿಗಾಗಿ ರೈತ ಸಂಪರ್ಕ ಕೇಂದ್ರ ಹಾಗೂ ಎಪಿಎಂಸಿಗಳ ಮೂಲಕ ಈಗಾಗಲೇ ರೈತರಿಗೆ ಮಾಹಿತಿ ನೀಡಲಾಗಿದೆ. ಖರೀದಿ ಕೆಂದ್ರಗಳಲ್ಲಿ ರೈತರು ನೋಂದಣಿ ಮಾಡಬಹುದು. ಖರೀದಿ ಪ್ರಕ್ರಿಯೆಯನ್ನು 90 ದಿನಗಳವರೆಗೆ ಅಂದರೆ ಆಗಸ್ಟ್ 13ರ ವರೆಗೆ ನಿಗದಿ ಮಾಡಲಾಗಿದೆ.
ಬೆಂಬಲ ಬೆಲೆಯ ಮಾಹಿತಿ; ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರ ಕುಸುಬೆ ಉತ್ಪನ್ನಕ್ಕೆ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ಗೆ ರೂ. 5,650 ಇರುತ್ತದೆ. ಆಗಸ್ಟ್ 13, 2023ರ ವರೆಗೆ ಸರಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕುಸುಬೆ ಕಾಳು ಉತ್ಪನ್ನ ಖರೀದಿಸಲಾಗುತ್ತದೆ.

ರೈತರು ಹೆಚ್ಚಿನ ಮಾಹಿತಿಗಾರಿ ಎಣ್ಣೆ ಬೆಳೆಗಾರರ ಸಹಕಾರ ಸಂಘ ನಿ. ಯರಗುಪ್ಪಿ 9901583895, ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘ ನಿ. ತಾ, ಕುಂದಗೋಳ 8792301165, ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘ ನಿ. ಯರಗುಪ್ಪಿ ತಾ, ಕುಂದಗೋಳ 8549095592, ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘ ನಿ. ಹಿರೇಹರಕುಣಿ ತಾ, ಕುಂದಗೋಳ 9844198169 ಸಂಪರ್ಕಿಸಬಹುದು.
ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘ ನಿ. ಶಿರಗುಪ್ಪಿ ತಾ 9538696718, ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘ ನಿ. ತಾ, ನವಲಗುಂದ 9611498476 ಸಂಖ್ಯೆಯ ಮೂಲಕ ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೀಜ, ಗೊಬ್ಬರ ಪೂರೈಕೆಗೆ ಕ್ರಮ; ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮುಂಗಾರು ಆರಂಭವಾಗುವುದರಿಂದ ಅತೀ ಮಳೆ ಆಗಿ ಅತಿವೃಷ್ಟಿ, ಪ್ರವಾಹ ಉಂಟಾದರೆ ಸಮರ್ಥವಾಗಿ ನಿರ್ವಹಿಸಿ, ಸಾರ್ವಜನಿಕರಿಗೆ ಯಾವದೇ ಹಾನಿಯಾಗದಂತೆ ಮುಂಜಾಗ್ರತೆ ವಹಿಸಿ, ಕ್ರಮ ಜರುಗಿಸಲು ಪ್ರತಿ ತಾಲೂಕಿಗೆ ಓರ್ವ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲೆಯ ರೈತರಿಗೆ ಅಗತ್ಯವಿರುವ ಗೊಬ್ಬರ, ಬೀಜ ಮತ್ತು ಕೀಟನಾಶಕ ವಿತರಣೆಗೆ ಸೂಕ್ತ ಕ್ರಮ ವಹಿಸಬೇಕು. ಕೃಷಿ ಅಧಿಕಾರಿಗಳು ಕೃಷಿ ಪರಿಕರ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಮಾರಾಟ ದರ, ದಾಸ್ತಾನು ಪರಿಶೀಲಿಸಬೇಕು. ನಕಲಿ ಬೀಜ, ಗೊಬ್ಬರ ವಿತರಣೆ ಆಗದಂತೆ ಕಟ್ಟೆಚ್ಚರ ವಹಿಸಬೇಕು ಎಂದು ನಿರ್ದೇಶನ ಕೊಟ್ಟಿದ್ದಾರೆ.
ಗೊಬ್ಬರ ಅಥವಾ ಬೀಜದ ಕೃತಕ ಅಭಾವ ಸೃಷಿಯಾಗದಂತೆ ಪ್ರತಿದಿನ ಗೊಬ್ಬರ ಹಾಗೂ ಬೀಜಗಳ ಮಾರಾಟ, ದಾಸ್ತಾನು ಮತ್ತು ಬೇಡಿಕೆ ಪಟ್ಟಿ ಪಡೆದು ಸೂಕ್ತ ಮುಂಜಾಗ್ರತೆ ವಹಿಸಬೇಕು. ಕೃಷಿ ಮಾರಾಟ ಕೇಂದ್ರಗಳಿಗೆ ವಿಚಕ್ಷಣ ಅಧಿಕಾರಿಗಳ ತಂಡ ನಿರಂತರವಾಗಿ ಭೇಟಿ ನೀಡುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.












Click it and Unblock the Notifications