ಹಾಲಿನ ಪೂರಕ ಉತ್ಪನ್ನಗಳ ಉತ್ಪಾದನೆ; ರೈತರಿಗೆ ಸಚಿವ ಸೋಮಶೇಖರ್ ಸಲಹೆ
ರಾಮನಗರ, ಸೆಪ್ಟೆಂಬರ್ 11: ಹಾಲಿನ ಜೊತೆಗೆ ಹಾಲಿನ ಪೂರಕ ಉತ್ಪನ್ನಗಳನ್ನು ಉತ್ಪಾದಿಸಲು ಹೆಚ್ಚಿನ ಒತ್ತು ನೀಡುವುದರಿಂದ ರೈತರಿಗೆ ಅಧಿಕ ಲಾಭ ದೊರೆತು ಅವರ ಏಳಿಗೆಗೆ ಸಹಾಯಕವಾಗಲಿದೆ ಎಂದು ಸಲಹೆ ನೀಡಿದರು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್.
ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿರುವ ನೂತನ ಹಾಲು ಸಂಸ್ಕರಣಾ ಮತ್ತು ಹಾಲಿನ ಪುಡಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, "ಹೈನುಗಾರಿಕೆ ಉತ್ಪನ್ನಗಳನ್ನು ಹೆಚ್ಚಾಗಿ ಉತ್ಪಾದಿಸುವುದರಿಂದ ರೈತರಿಗೆ ಅಧಿಕ ಆದಾಯ ಸಿಗುತ್ತದೆ. ಹಾಲಿನ ಜೊತೆಗೆ ಅದರ ಉಪ ಉತ್ಪನ್ನಗಳು ಹಾಲು ಉತ್ಪಾದಕರಿಗೆ ಅಧಿಕ ವರಮಾನ ತಂದುಕೊಡುವಲ್ಲಿ ನೆರವಾಗಲಿದೆ. ಇದು ರೈತರ ವೈಯಕ್ತಿಕ ಏಳಿಗೆಗೂ ಸಹಾಯಕ" ಎಂದು ಅಭಿಪ್ರಾಯಪಟ್ಟರು.
ಮುದ್ದೆ ಚರ್ಮ ರೋಗದಿಂದ ಪಶುಗಳನ್ನು ರಕ್ಷಿಸಲು ಸಲಹೆಗಳು
ಹೈನುಗಾರಿಕೆಯಲ್ಲಿ ರಾಜ್ಯ 2ನೇ ಸ್ಥಾನ
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲದಲ್ಲಿ ಒಟ್ಟು 125 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹಾಲು ಸಂಸ್ಕರಣಾ ಮತ್ತು ಹಾಲಿನ ಪುಡಿ ಉತ್ಪಾದಿಸುವ ಘಟಕ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಸದ್ಯಕ್ಕೆ ಇಡೀ ದೇಶದಲ್ಲೇ ಅತ್ಯುತ್ತಮ ಮತ್ತು ನಂಬರ್ ಒನ್ ಹಾಲಿನ ಪುಡಿ ಘಟಕ ಎನಿಸಿದೆ ಎಂದು ಸಚಿವರು ತಿಳಿಸಿದರು.
ದೇಶದಲ್ಲಿ ಕರ್ನಾಟಕ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿ ಹಾಲು ಉತ್ಪಾದನೆಯಾಗುತ್ತಿದೆ. ಇಲ್ಲಿರುವ ಘಟಕವು ಹಾಲನ್ನು ಪೌಡರ್ ಆಗಿ ಪರಿವರ್ತಿಸುವ ದೊಡ್ಡ ಘಟಕವಾಗಿದೆ. ರಾಜ್ಯದಲ್ಲೇ ಅಧಿಕ ಪ್ರಮಾಣದಲ್ಲಿ ಹಾಲಿನ ಪುಡಿಯನ್ನು ಇಲ್ಲಿ ಉತ್ಪಾದಿಸಲಾಗುತ್ತಿದೆ. ಈ ಘಟಕದಲ್ಲಿ ಉತ್ಪಾದನೆಯಾಗುವ ಹಾಲಿನ ಪುಡಿಗೆ ಪ್ರೀಮಿಯಂ ಬೆಲೆ ಇದೆ ಎಂದು ಮಾಹಿತಿ ನೀಡಿದರು.ಹೊರ ರಾಜ್ಯಕ್ಕಿಲ್ಲ ಹಾಲು
ಇತರೆ ಹಾಲು ಒಕ್ಕೂಟಗಳಲ್ಲಿ ಸಂಗ್ರಹವಾಗುವ ಅಧಿಕ ಹಾಲನ್ನು ಇಲ್ಲಿಗೆ ಕಳುಹಿಸಿಕೊಟ್ಟಲ್ಲಿ ಈ ಘಟಕದಲ್ಲಿ ಹಾಲಿನ ಪುಡಿಯನ್ನಾಗಿ ಪರಿವರ್ತಿಸಿಕೊಡಲಾಗುವುದು. ನಿಗದಿತ ದರದಂತೆ ಪುಡಿಯನ್ನಾಗಿ ಪರಿವರ್ತಿಸಿ ಕೊಡಲಾಗುತ್ತದೆ ಎಂದರು.
ಕೋವಿಡ್-19 ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ಹಾಲಿನ ಸರಬರಾಜು ಸ್ಥಗಿತಗೊಂಡಿದೆ. ಅಲ್ಲದೆ, ಸಣ್ಣ ಪುಟ್ಟ ಕಾಫಿ - ಟೀ ಅಂಗಡಿಗಳು ಸಹ ಮುಚ್ಚಿವೆ. ಹೀಗಾಗಿ ರಾಜ್ಯದಲ್ಲಿ ಉತ್ಪಾದನೆಯಾಗುವ ಹಾಲನ್ನು ಪೌಡರ್ ಆಗಿ ಪರಿವರ್ತಿಸಿ ಶೇಖರಿಸಿ ಇಟ್ಟುಕೊಳ್ಳಲಾಗುತ್ತಿದೆ. ಸದ್ಯಕ್ಕೆ ಹಾಲಿನ ಪುಡಿ ದಾಸ್ತಾನಿನ ಪ್ರಮಾಣ ಅಧಿಕವಾಗಿದೆ. ಒಟ್ಟಾರೆ ಸುಮಾರು 28 ಲಕ್ಷ ಮೆಟ್ರಿಕ್ ಟನ್ ನಷ್ಟು ದಾಸ್ತಾನು ಇರುವುದಾಗಿ ತಿಳಿಸಿದರು.
ಕರ್ನಾಟಕದ ಜಾನುವಾರುಗಳಿಗೆ ತಗುಲಿದ ಹೊಸ ವೈರಸ್: ರೈತರು ಕಂಗಾಲು
ಕೋವಿಡ್-19 ಸಮಯದಲ್ಲೂ ಹಾಲು ಖರೀದಿ
ಕೋವಿಡ್ ಸಂದರ್ಭದಲ್ಲಿ ರಾಜ್ಯದ 8.5 ಲಕ್ಷ ಹೈನುಗಾರರಿಂದ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಸುಮಾರು 79 ಕೋಟಿ ರೂ. ವೆಚ್ಚದಲ್ಲಿ ಹಾಲನ್ನು ಖರೀದಿಸಿದೆ. ಹೀಗೆ ಖರೀದಿಸಿರುವ ಹಾಲನ್ನು ರಾಜ್ಯದಲ್ಲಿ ನಗರಸಭೆ ಮತ್ತು ಪುರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉಚಿತವಾಗಿ ಹಂಚಲಾಗಿದೆ ಎಂದರು.
ಹಾಲು ಉತ್ಪಾದಕರಿಗೆ ಸಹಾಯಧನ
ಹಾಲು ಉತ್ಪಾದಕರಿಗೆ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ 5 ರೂ.ಗಳ ಪ್ರೋತ್ಸಾಹ ಧನವನ್ನು ಕಡಿತ ಮಾಡುವ ಚಿಂತನೆ ಇಲ್ಲ. ಯಾವುದೇ ಕಾರಣಕ್ಕೂ ರೈತರಿಗೆ ನೀಡುವ ಸಹಾಯ ಧನದಲ್ಲಿ ಕಡಿತ ಮಾಡಲಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.