ಉಡುಪಿಯಲ್ಲಿ ಖಾಸಗಿ ಯಂತ್ರದವರದ್ದೇ ಮಾಫಿಯಾ; ಭತ್ತ ಕಟಾವಿಗೆ ಭಾರೀ ಬಾಡಿಗೆ ದರ
ಉಡುಪಿ, ಅಕ್ಟೋಬರ್ 25: ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಭತ್ತ ಕ್ರಾಂತಿ ನಡೆದು ನೂರಾರು ಕೃಷಿಕರು ಹಡೀಲು ಬಿದ್ದ ಗದ್ದೆಯಲ್ಲಿ ಭತ್ತದ ಕೃಷಿ ಮಾಡಿದ್ದಾರೆ. ಕಷ್ಟಪಟ್ಟು ಬೆಳೆದ ಬೆಳೆ ಸೊಂಪಾಗಿ ಬೆಳೆದು ಒಳ್ಳೆಯ ಫಸಲು ಬಂದಿದೆ. ಆದರೆ ಇದೀಗ ರೈತರಿಗೆ ಭತ್ತದ ಕಟಾವು ಮಾಡುವುದೆ ದೊಡ್ಡ ತಲೆನೋವಾಗಿದೆ.
ಉಡುಪಿ ಜಿಲ್ಲಾಡಳಿತ ಕಟಾವು ಯಂತ್ರಕ್ಕೆ ದರ ನಿಗದಿ ಮಾಡಿದರೂ, ಖಾಸಗಿಯವರು ಮಾತ್ರ ಕ್ಯಾರೇ ಅಂತಿಲ್ಲ, ಕಟಾವು ಮಾಡಬೇಕಾದರೆ ಹೆಚ್ಚಿನ ದರ ಕೊಡಿ ಅಂತ ಕಡ್ಡಿ ಮುರಿದ ಹಾಗೆ ಹೇಳುತ್ತಿದ್ದಾರೆ. ಇದರಿಂದ ಬೆಳೆದ ಭತ್ತವನ್ನು ಕೊಯಿಲು ಮಾಡುವುದು ಹೇಗೆ ಅನ್ನೊದು ಅನ್ನದಾತನ ಗೋಳಾಗಿದೆ.
ರೈತ ದೇಶದ ಬೆನ್ನೆಲುಬು, ಆದರೆ ರೈತನ ಸಮಸ್ಯೆ ಮಾತ್ರ ಮುಗಿಯದ ಗೋಳು. ಮಳೆ ಬಂದರೂ ಸಮಸ್ಯೆ, ಬಾರದೇ ಇದ್ದರೂ ದೊಡ್ಡ ಸಮಸ್ಯೆ. ಇದರ ನಡುವೆ ಉಡುಪಿ ಜಿಲ್ಲೆಯಲ್ಲಿ ಸದ್ಯ ಭತ್ತ ಬೆಳೆಯುವ ರೈತರಿಗೆ ಬೆಳೆದ ಭತ್ತವನ್ನು ಕಟಾವು ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಭತ್ತ ಕಟಾವು ಮಾಡುವುದಕ್ಕೆ ಕೂಲಿಯಾಳುಗಳು ಸಿಗತ್ತಿಲ್ಲ.

ಹೀಗಾಗಿ ಅನಿವಾರ್ಯವಾಗಿ ಜಿಲ್ಲೆಯ ರೈತರು ಭತ್ತ ಕಟಾವು ಮಾಡುವ ಯಂತ್ರವನ್ನು ಬಳಕೆ ಮಾಡುತ್ತಿದ್ದಾರೆ. ಜಿಲ್ಲೆಯ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ 8 ಕಟಾವು ಯಂತ್ರಗಳು ಲಭ್ಯವಿದ್ದು ಇದು ಸಾಕಾಗುತ್ತಿಲ್ಲ. ಹೀಗಾಗಿ ಹೊರ ರಾಜ್ಯದಿಂದ ಬರುವ ಖಾಸಗಿ ಕಟಾವು ಯಂತ್ರಗಳನ್ನು ಅವಲಂಬಿಸುವ ಅನಿವಾರ್ಯತೆ ಇದೆ. ಆದರೆ ಖಾಸಗಿ ಯಂತ್ರಗಳು ದರದಲ್ಲಿ ಬಾರಿ ಏರಿಕೆ ಮಾಡಿದೆ.
ಇದಕ್ಕಾಗಿ ಉಡುಪಿ ಜಿಲ್ಲಾಡಳಿತ 1800 ರೂಪಾಯಿಯನ್ನು ಖಾಸಗಿ ಯಂತ್ರಗಳಿಗೆ ದರ ನಿಗದಿ ಮಾಡಿದ್ದು, ಆದರೆ ಖಾಸಗಿ ಕಟಾವು ಯಂತ್ರದವರು ಮಾತ್ರ ಜಿಲ್ಲಾಡಳಿತದ ನಿಗದಿತ ದರ ನಿಗದಿ ಧಿಕ್ಕರಿಸಿ 2500ದಿಂದ 3300 ರವರೆಗೂ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ರೈತರದ್ದಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಹಲವು ಕಡೆಗಳಲ್ಲಿ ಬೆಳೆ ಹಾನಿಯಾಗಿದೆ. ಉಳಿದ ಅಲ್ಪಸ್ವಲ್ಪ ಬೆಳೆಯನ್ನಾದರೂ ಕೊಯಿಲು ಮಾಡುವ ಅಂತ ಅನ್ನದಾತ ಅಂದುಕೊಂಡರೆ ದರ ಏರಿಕೆಯೇ ದೊಡ್ಡ ತಲೆನೋವಾಗಿದೆ. ದೊಡ್ಡ ಮೊತ್ತದ ದರವನ್ನು ನೀಡಿ ಕಟಾವು ಮಾಡಿದರೆ, ಲಾಭ ಬಿಡಿ ಅಸಲು ಕೂಡ ಆಗಲ್ಲ ಅನ್ನುವುದು ರೈತನ ಗೋಳು. ಮಧ್ಯವರ್ತಿಗಳ ಹಾವಳಿಯಿಂದಲೇ ಈ ರೀತಿಯ ಬೆಲೆ ಏರಿಕೆ ಆಗಿದೆ ಎನ್ನುವ ಆರೋಪ ಕೂಡಾ ಕೃಷಿಕರದ್ದಾಗಿದೆ.

ಮೂರು ತಿಂಗಳು ಕಷ್ಟಪಟ್ಟು ಸಾಗುವಳಿ ಮಾಡಿ ಉತ್ತಮ ಫಸಲು ಬಂದರೂ ಕೊಯ್ಲಿನ ಸಂದರ್ಭದಲ್ಲಿ ಸಮಸ್ಯೆಯಾದರೆ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಆಗುತ್ತದೆ. ಉಳುಮೆಯಿಂದ ನಾಟಿ ಮಾಡಿ, ಕಟಾವು ಮಾಡುವವರೆಗೂ ರೈತರು ನಂಬಿಕೊಂಡಿರುವುದು ಯಂತ್ರಗಳನ್ನೇ. ಹೀಗಾಗಿ ಪರಿಸ್ಥಿತಿಯ ಲಾಭ ಪಡೆದ ಖಾಸಗಿ ಯಂತ್ರದವರು ಈಗ ಬಾಡಿಗೆ ದುಪ್ಪಟ್ಟು ಮಾಡಿರುವುದು ಕೃಷಿಕರನ್ನು ಕಂಗೆಡಿಸಿದೆ.
ಸಾಮಾನ್ಯವಾಗಿ ದಾವಣಗೆರೆ, ಶಿವಮೊಗ್ಗ, ಸಕಲೇಶಪುರ ಭಾಗದಲ್ಲಿ ಭತ್ತ ಕಟಾವು ಪ್ರಕ್ರಿಯೆ ನವೆಂಬರ್, ಡಿಸೆಂಬರ್ನಲ್ಲಿ ನಡೆಯುತ್ತದೆ. ಹೀಗಾಗಿ ಆ ಭಾಗದಲ್ಲಿರುವ ಕೃಷಿ ಯಂತ್ರಧಾರೆಯ ಯಂತ್ರಗಳನ್ನು ಕರಾವಳಿ ಭಾಗಕ್ಕೆ ತರಿಸಿಕೊಳ್ಳಬಹುದು. ಇದರಿಂದ ಯಂತ್ರಕ್ಕೆ ದುಪ್ಪಟ್ಟು ಬಾಡಿಗೆ ದರವನ್ನು ಹಾಕುವುದನ್ನು ತಪ್ಪಿಸಬಹುದಾಗಿದೆ.
ಒಟ್ಟಿನಲ್ಲಿ ಪ್ರಸ್ತುತ ಈ ಸನ್ನಿವೇಶದ ಪ್ರಯೋಜನ ಪಡೆದು ಖಾಸಗಿ ಕಂಬೈನ್ಡ್ ಹಾರ್ವೆಸ್ಟರ್ ಮಾಲೀಕರು ಸ್ಥಳೀಯ ಮಧ್ಯವರ್ತಿಗಳೊಂದಿಗೆ ಸೇರಿ ರೈತರಿಂದ ಹೆಚ್ಚಿನ ಬಾಡಿಗೆ ದರವನ್ನು ಪಡೆಯುತ್ತಿರುವ ಬಗ್ಗೆ ರೈತ ಸಂಘಟನೆಗಳು ಹಾಗೂ ರೈತರಿಂದ ನಿರಂತರವಾಗಿ ಜಿಲ್ಲಾಡಳಿತಕ್ಕೆ ದೂರುಗಳು ಬರುತ್ತಿವೆ. ಹೀಗಾಗಿ ಜಿಲ್ಲಾಡಳಿತ ಈ ಬಗ್ಗೆ ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತದೆ ಅನ್ನುವುದರ ಮೇಲೆ ರೈತರ ಕೃಷಿ ಭವಿಷ್ಯ ನಿಂತಿದೆ.












Click it and Unblock the Notifications