ಒಣಗಿದ ಕಾಳುಮೆಣಸು ಬಳ್ಳಿಗಳು:ಮಾರಲು, ಸಂಗ್ರಹಿಸಲು ಆಗದೆ ಕಷ್ಟ ಅನುಭವಿಸುತ್ತಿರುವ ರೈತ
ಮೈಸೂರು, ಜನವರಿ 25:ಕೊಡಗು ಜಿಲ್ಲೆಯ ರೈತರಿಗೆ ಆಧಾರವಾಗಿದ್ದ ಕಾಳುಮೆಣಸು ರೈತರ ಕೈ ಸುಡುತ್ತಿದೆ.ಒಂದೆಡೆ ಬೆಲೆ ಕುಸಿತದಿಂದ ಕಂಗಾಲಾಗಿದ್ದರೆ ಮತ್ತೊಂದೆಡೆ ತೋಟಗಳಲ್ಲಿನ ಬಳ್ಳಿಗಳು ಒಣಗುತ್ತಿವೆ.
ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಹೋಬಳಿ ವ್ಯಾಪ್ತಿಯ ಬಹುತೇಕ ತೋಟಗಳಲ್ಲಿನ ಕಾಳುಮೆಣಸಿನ ಬಳ್ಳಿಗಳಿಗೆ, ಬುಡಕ್ಕೆ ಶೀಘ್ರ ಸೊರಗು ರೋಗ ತಗುಲಿದೆ. ಸೊರಗು ರೋಗಕ್ಕೆ ತುತ್ತಾದ ಬಳ್ಳಿಗಳಲ್ಲಿನ ಎಲೆಗಳು ಹಾಗೂ ಫಸಲು ಉದುರುತ್ತಿವೆ.
ಕಳೆದ ಬೇಸಿಗೆಯಲ್ಲಿ ಸಕಾಲದಲ್ಲಿ ಮಳೆಯಾಗಿದ್ದರಿಂದ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಮುಂಗಾರು ಭಾರಿ ಹೊಡೆತ ನೀಡಿತು. ಇದರಿಂದ ಕಂಗೆಟ್ಟ ರೈತರಿಗೆ ಬೆಲೆ ಇಳಿಕೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ.

ಬಳ್ಳಿಯ ಬುಡದಲ್ಲಿ ಕಾಣಿಸಿಕೊಳ್ಳುವ ಸೊರಗು ರೋಗ ನಿಧಾನವಾಗಿ ಬಳ್ಳಿಯನ್ನೇ ಬಲಿಪಡೆಯುತ್ತಿದೆ. ಮಳೆಗಾಲದ ಆರಂಭದಲ್ಲಿ ಸಮೃದ್ಧವಾಗಿ ಬೆಳೆದು ನಿಂತ ಮೆಣಸಿನ ಬಳ್ಳಿ ನಿರೀಕ್ಷೆಗೂ ಮೀರಿ ಫಸಲು ನೀಡುವಂತೆ ಗೋಚರವಾದರೂ ಕೆಲವು ದಿನಗಳ ಬಳಿಕ ಎಲೆಗಳೆಲ್ಲ ಕೊಳೆತು ಉದುರುತ್ತವೆ. ಇಳುವರಿಯೂ ನೆಲಕಚ್ಚುತ್ತದೆ ಎನ್ನುತ್ತಾರೆ ಪುಲಿಕೋಟು ಗ್ರಾಮದ ಕಾಫಿ ಬೆಳೆಗಾರ ರಾಜಣ್ಣ.
ಹೋಬಳಿ ವ್ಯಾಪ್ತಿಯ ಹಲವು ತೋಟಗಳಲ್ಲಿ ಸೊರಗಿ ನಿಂತಿರುವ ಮೆಣಸಿನ ಬಳ್ಳಿಗಳು ರೋಗ ವ್ಯಾಪಕವಾಗಿ ಉಲ್ಬಣಿಸುತ್ತಿರುವುದನ್ನು ಸೂಚಿಸುತ್ತಿದೆ. ಜಂತು ಹುಳುವಿನಿಂದ ಸೊರಗು ರೋಗ ಬರುವುದಾದರೂ ಅಲ್ಲಿ ಗಿಡಗಳು ನಿಧಾನವಾಗಿ ಸೊರಗುತ್ತವೆ. ಈ ರೋಗಕ್ಕೆ ತುತ್ತಾದ ಬಳ್ಳಿಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರಿ ಒಣಗಿ ಹೋಗುತ್ತವೆ. ರಭಸದ ಮಳೆಯಿಂದ ಸೊರಗು ರೋಗ ಕಾಣಿಸಿಕೊಂಡು ತೋಟಗಳ ಉದ್ದಕ್ಕೂ ವ್ಯಾಪಿಸುತ್ತಿರುವುದು ಬೆಳೆಗಾರರ ಚಿಂತೆಗೆ ಕಾರಣವಾಗಿದೆ.
ಕಾಳುಮೆಣಸಿನ ಎಲೆ ಕೊಳೆರೋಗವನ್ನು ಹತೋಟಿಗೆ ತರಲು ಶೇ1 ರಷ್ಟು ಬೋರ್ಡೋ ದ್ರಾವಣವನ್ನು ಕಾಳುಮೆಣಸಿನ ಬಳ್ಳಿಗಳಿಗೆ ಸಿಂಪಡಿಸಬೇಕು. ಎರಡು ಕೆ.ಜಿ. ಮೈಲುತುತ್ತು, ಎರಡು ಕೆ.ಜಿ. ಸುಣ್ಣವನ್ನು 200 ಲೀಟರ್ ನೀರಿಗೆ ಮಿಶ್ರಣ ಮಾಡಿ ಸುರಿಯಬೇಕು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಲಹೆ ನೀಡುತ್ತಾರೆ.

ನಾಲ್ಕುನಾಡು ವ್ಯಾಪ್ತಿಯಲ್ಲಿನ ಕಾಫಿ ತೋಟಗಳಲ್ಲಿ ಕಾಳುಮೆಣಸಿನ ಬಳ್ಳಿಗಳಿಗೆ ಸೊರಗು ರೋಗ ವ್ಯಾಪಿಸುತ್ತಿದೆ. ರೋಗ ಉಲ್ಬಣಿಸುವುದನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಬಿಸಿಲು ಕಾಣಿಸಿಕೊಂಡರೆ ಔಷಧಿ ಸಿಂಪಡಣೆ ಮಾಡಿ ರೋಗ ನಿಯಂತ್ರಣಕ್ಕೆ ತರಲು ಪ್ರಯತ್ನಿಸಬಹುದು. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆ ಔಷಧಿ ಸಿಂಪಡಣೆಗೆ ಅಡ್ಡಿಯಾಗಿದೆ ಎನ್ನುತ್ತಾರೆ ರಾಜಣ್ಣ.
ಈ ವರ್ಷ ಇಳುವರಿ ಇಳಿಮುಖಗೊಂಡಿದೆ. ಬಳ್ಳಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರೊಂದಿದೆ ಅಪಾರ ಪ್ರಮಾಣದ ಮೆಣಸನ್ನು ಬೆಳೆಗಾರರು ದಾಸ್ತಾನು ಇರಿಸಿದ್ದು, ಬೆಲೆ ಕುಸಿತದಿಂದ ಅತ್ತ ಮಾರಲೂ ಆಗದೇ ಇತ್ತ ಸಂಗ್ರಹಿಸಿಡಲೂ ಸಾಧ್ಯವಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬುದು ಇಲ್ಲಿನ ಕೃಷಿಕರ ಮಾತು.












Click it and Unblock the Notifications