ಮೈಸೂರಿನಲ್ಲಿ ಪತಿಯ ಎದುರೇ ಪ್ರಾಣ ಬಿಟ್ಟ ಗರ್ಭಿಣಿ
ಮೈಸೂರಿನಲ್ಲಿ ರೈತರೊಬ್ಬರು, ಪೊಲೀಸ್ ಹೆಡ್ ಕಾನ್ ಸ್ಟೇಬಲ್ ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಈ ಎರಡೂ ಖೇದಕರ ಸುದ್ದಿಯೇ. ಆದರೆ ಕಾರಿನಲ್ಲಿ ಪ್ರಯಾಣಿಸುವಾಗ ಗರ್ಭಿಣಿಯೊಬ್ಬರು ಸಾವನ್ನಪ್ಪಿದ ಸುದ್ದಿ ಹೆಚ್ಚು ಕಾಡುವಂತಿದೆ.
ಮೈಸೂರು, ಮಾರ್ಚ್ 2: ಕಾರೊಂದು ಉರುಳಿದ ಪರಿಣಾಮ ಗರ್ಭಿಣಿಯೊಬ್ಬರು ಪತಿಯ ಎದುರೇ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೃತರನ್ನು ರಾಘವೇಂದ್ರ ನಗರದ ಗಿರಿರಾಜ ಬಡಾವಣೆಯ ನಿವಾಸಿ ಮಧುಸೂದನ್ ಅವರ ಪತ್ನಿ ರೂಪಾ (32) ಎಂದು ಗುರುತಿಸಲಾಗಿದೆ.
ರೂಪಾ ತನ್ನ ಸಹೋದರಿಯ ನಿವೇಶನ ನೋಡಲೆಂದು ಕಾರಿನಲ್ಲಿ ತೆರಳಿದ್ದರು. ವಾಪಸ್ ಬರುವಾಗ ಮಾನಸಿ ನಗರದ ರಿಂಗ್ ರಸ್ತೆಯ ಬಳಿ ಸಣ್ಣ ಗುಂಡಿಯೊಂದಿತ್ತು. ಅದನ್ನು ತಪ್ಪಿಸಲು ಮಧುಸೂದನ್ ಕಾರನ್ನು ಎಡಭಾಗಕ್ಕೆ ತೆಗೆದುಕೊಂಡರು. ನಿಯಂತ್ರಣ ತಪ್ಪಿದ ಕಾರು ಉರುಳಿದೆ.
ಕಾರಿನ ಮುಂಭಾಗ ಎಡಗಡೆ ಕುಳಿತಿದ್ದ ರೂಪಾ ಆಘಾತದಿಂದ ಅಲ್ಲಿಯೇ ಸಾವನ್ನಪ್ಪಿದ್ದಾರೆ. ಆದರೆ ಅವರ ಪತಿ ಅಪಾಯದಿಂದ ಪಾರಾಗಿದ್ದಾರೆ. ಸಿದ್ದಾರ್ಥ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಪತ್ರಕರ್ತ ಚಂದಿರನ್ ಕೊಲೆ ಯತ್ನ ಮತ್ತು ಒಂದು ಮನುಷ್ಯತ್ವದ ಪಾಠ]

ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ
ಸಾಲ ಬಾಧೆಯಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ಮೃತರನ್ನು ಗಂಗನಕುಪ್ಪೆ ಗ್ರಾಮದ ಮಂಜುಗೌಡ (40) ಎಂದು ಗುರುತಿಸಲಾಗಿದೆ.
ಪಿರಿಯಾಪಟ್ಟಣ ಸಿಂಡಿಕೇಟ್ ಬ್ಯಾಂಕ್ ನಲ್ಲಿ 6 ಲಕ್ಷ ರುಪಾಯಿ ಸಾಲ ಮಾಡಿಕೊಂಡಿದ್ದ ಮಂಜುಗೌಡ, ಸಾಲ ತೀರಿಸಲಾಗದೆ ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಅಪರೂಪದ ಕಾಯಿಲೆ ಆತಂಕ, ಒಂದು ಬೆಳಗಿನ ಮನುಷ್ಯತ್ವದ ನಡಿಗೆ]
ಬಸ್ ಡಿಪೊದಲ್ಲಿ ಅಗ್ನಿ ಆಕಸ್ಮಿಕ
ಮೈಸೂರಿನ ಕುವೆಂಪುನಗರ ಬಸ್ ಡಿಪೋದಲ್ಲಿ ಗುರುವಾರ ಮಧ್ಯಾಹ್ನ ಅಗ್ನಿ ಆಕಸ್ಮಿಕ ಸಂಭವಿಸಿದೆ. ಬಸ್ ಡಿಪೋ ಬಳಿ ಮರಗಳಿರುವ ಜಾಗದಲ್ಲಿ ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿತ್ತು. ತಕ್ಷಣ ಸರಸ್ವತಿಪುರಂನ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗೆ ಮಾಹಿತಿ ರವಾನಿಸಲಾಯಿತು.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.[ಮೋರಿಯೇ ಅರಮನೆ, ಎಂಜಲೆಲೆಯೇ ಮೃಷ್ಟಾನ್ನ ಭೋಜನ!]
ಕರ್ತವ್ಯದ ವೇಳೆ ಮುಖ್ಯಪೇದೆ ನೇಣಿಗೆ ಶರಣು
ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮುಖ್ಯ ಪೇದೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಮಧ್ಯಾಹ್ನ ಮೈಸೂರಿನಲ್ಲಿ ಸಂಭವಿಸಿದೆ.
ಮೃತರನ್ನು ಶೇಷಪ್ಪ (51) ಎಂದು ಗುರುತಿಸಲಾಗಿದೆ. ಇವರು ದಕ್ಷಿಣ ವಲಯ ಐಜಿಪಿ ವಿಫುಲ್ ಕುಮಾರ್ ಅವರ ಮನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಿಫುಲ್ ಕುಮಾರ್ ಅವರ ನಿವಾಸದ ತೋಪಿನಲ್ಲಿ ಕರ್ತವ್ಯ ನಿರ್ವಹಿಸುವ ವೇಳೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ.[ಬೀದಿನಾಯಿಗಳನ್ನು ಸಾಕಿ ನೆರೆಹೊರೆಯವರಿಗೆ ತೊಂದರೆಯಿತ್ತ ಮಹಾತಾಯಿ]
ಸ್ಥಳಕ್ಕೆ ಬಂದ ನಜರಬಾದ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಕೆ.ಆರ್.ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಖಿನ್ನತೆಯಿಂದ ಬಳಲುತ್ತಿದ್ದು, ಆತ್ಮಹತ್ಯೆಗೆ ಅದೇ ಕಾರಣವಿರಬೇಕು ಎಂದು ಮೃತರ ಕುಟುಂಬದವರು ತಿಳಿಸಿದ್ದಾರೆ. ಕಳೆದ ವರ್ಷ ಕೂಡ ಶೇಷಪ್ಪ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಮೂಲಗಳು ತಿಳಿಸಿದ್ದು, ನಜರ್ ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications